ಮಂಗಳೂರು : ಕಲಾಸಂಗಮ ಚಾರಿಟೇಬಲ್ ಟ್ರಸ್ಟ್ (ರಿ.) ಇದರ 15ನೇ ವಾರ್ಷಿಕೋತ್ಸವ ಸಂಭ್ರಮಾಚರಣೆಯ ಪ್ರಯುಕ್ತ ಸನ್ಮಾನ ಹಾಗೂ ಯಕ್ಷಗಾನ ಪ್ರದರ್ಶನವು ಕನ್ನಡ ಹಾಗೂ ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ದಿನಾಂಕ 14 ಜೂನ್ 2026ರಂದು ಸಂಜೆ 4-30 ಗಂಟೆಗೆ ಮಂಗಳೂರಿನಲ್ಲಿರುವ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ನಡೆಯಿತು. ಇದೇ ಸಂದರ್ಭದಲ್ಲಿ ಹಿರಿಯ ಪ್ರಸಿದ್ಧ ಯಕ್ಷಗಾನ ಕಲಾವಿದರಾದ ಶ್ರೀ ಕೆ. ಶಿವರಾಮ ಜೋಗಿ ಬಿ.ಸಿ. ರೋಡ್ ಇವರನ್ನು ಸನ್ಮಾನಿಸಲಾಯಿತು.
ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರವರು ನೆರವೇರಿಸಿ ಮಾತನಾಡುತ್ತಾ, “ಈಗಿನ ಯುವಕರು ಅಥವಾ ಮಕ್ಕಳು ಯಕ್ಷಗಾನವನ್ನು ನೋಡಲಿಕ್ಕೆ ಬರುವುದು ಕಡಿಮೆಯಾಗಿದೆ. ಹೆತ್ತವರು ತಮ್ಮ ಮಕ್ಕಳನ್ನು ಇಂತಹ ಕಾರ್ಯಕ್ರಮಗಳಿಗೆ ಅಂದರೆ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಯಕ್ಷಗಾನಕ್ಕೆ ಕರೆದುಕೊಂಡು ಬರುವ ಅಭ್ಯಾಸವನ್ನು ಮಾಡಬೇಕು” ಎಂದು ಹೇಳಿದರು.

ಸಭಾಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ಎಸ್.ಎಸ್. ನಾಯಕ, ಹಿರಿಯ ಚಾರ್ಟರ್ಡ್ ಅಕೌಂಟೆಂಟ್ ಮಂಗಳೂರು ಇವರು ಮಾತನಾಡುತ್ತಾ “ಪುರಾಣದ ಕಥೆಗಳು ನಮಗೆ ಆದರ್ಶವಾಗಿದೆ. ಎಲ್ಲರೂ ಭಗವದ್ಗೀತೆಯ ಸಾರವನ್ನು ತಿಳಿದುಕೊಳ್ಳಬೇಕು. ದಿನಕ್ಕೊಮ್ಮೆಯಾದರೂ ಭಗವದ್ಗೀತೆಯ ಒಂದು ಶ್ಲೋಕವನ್ನು ಆದರೂ ಓದಬೇಕು” ಎಂದು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀಯುತ ದಿನೇಶ್ ಪೈ ಅವರು ಮಾತನಾಡುತ್ತಾ “ಕಲಾಸಂಗಮ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷರಾದ ಶ್ರೀ ಕೇಶವ ಹೆಗಡೆಯವರು ಸತತವಾಗಿ 15 ವರ್ಷಗಳ ಕಾಲ ಕಾರ್ಯಕ್ರಮವನ್ನು ಸಂಘಟಿಸುತ್ತಿರುವುದು ಶ್ಲಾಘನೀಯವಾದ ಕೆಲಸ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸನ್ಮಾನವನ್ನು ಸ್ವೀಕರಿಸಿದ ಶ್ರೀ ಶಿವರಾಮ ಜೋಗಿ ಅವರು ಮಾತನಾಡುತ್ತಾ “ಕೇಶವ ಹೆಗಡೆಯವರು ನಮ್ಮ ಮನೆಗೆ ಬಂದು, ನಿಮಗೆ ಸನ್ಮಾನವನ್ನು ಮಾಡುತ್ತೇವೆ ಎಂದು ಹೇಳಿದಾಗ ನನಗೆ ತುಂಬಾ ಆಶ್ಚರ್ಯವಾಯಿತು ಮತ್ತು ನಾನು ಅದಕ್ಕೆ ಒಪ್ಪಿ ಬಂದಿದ್ದೇನೆ. ಯಕ್ಷಗಾನ ಸಂಘಟನೆ ಮಾಡುವುದು ಸುಲಭದ ಕೆಲಸವಲ್ಲ. ಕೇಶವ ಹೆಗಡೆಯವರು ಅತ್ಯಂತ ಶ್ರದ್ಧೆಯಿಂದ ಪರಿಶ್ರಮದಿಂದ ಈ ಕೆಲಸವನ್ನು ಮಾಡುತ್ತಿದ್ದಾರೆ ಅವರಿಗೆ ಶುಭವಾಗಲಿ” ಎಂದು ಹಾರೈಸಿದರು.
ಸಭಾ ಕಾರ್ಯಕ್ರಮದಲ್ಲಿ ಬೆಟ್ಟಂಪಾಡಿ ಸುಂದರ್ ಶೆಟ್ಟಿ ಮತ್ತು ಮಂಗಳೂರಿನ ಖ್ಯಾತ ಸಂಗೀತ ನಿರ್ದೇಶಕರಾದ ಶ್ರೀ ಚರಣ ಕುಮಾರ್ ಇವರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಅತಿಥಿ ಗಣ್ಯರನ್ನು ಸ್ವಾಗತಿಸಿ, ಕಲಾಸಂಗಮ ಚಾರಿಟೇಬಲ್ ಟ್ರಸ್ಟ್ ನಡೆದು ಬಂದ ದಾರಿಯ ಬಗ್ಗೆ ಮತ್ತು ಕಾರ್ಯ ಚಟುವಟಿಕೆಗಳ ಬಗ್ಗೆ ವಿಸ್ತಾರವಾಗಿ ಇದರ ಅಧ್ಯಕ್ಷರಾದ ಶ್ರೀ ಕೇಶವ ಹೆಗಡೆ ಮಂಗಳೂರು ಇವರು ತಿಳಿಸಿದರು. ಇದೇ ಸಂದರ್ಭದಲ್ಲಿ ಬಡಗುತ್ತಿಟ್ಟಿನ ಬಣ್ಣದ ವೇಷದಾರಿಯಾಗಿದ್ದ ಸಕ್ಕಟ್ಟು ಲಕ್ಷ್ಮೀನಾರಾಯಣ ಇವರ ಜನ್ಮ ಶತಾಬ್ದಿಯ ಪ್ರಯುಕ್ತ ಅವರ ನೆನಪಿಗೋಸ್ಕರ ಅವರ ಮಕ್ಕಳನ್ನು ಕಲಾಸಂಗಮ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಸುಧಾಕರ್ ಪೇಜಾವರ ಮಾಡಿದರು. ಕೊನೆಯಲ್ಲಿ ಶ್ರೀ ರವಿ ಅಲೆವುರಾಯ ಇವರು ವಂದನಾರ್ಪಣೆಗೈದರು. ಅನಂತರದಲ್ಲಿ ಬಡಗುಟ್ಟಿನ ಹವ್ಯಾಸಿ ಕಲಾವಿದರಿಂದ ವಿಶೇಷವಾಗಿ ಕೇಶವ ಹೆಗಡೆ ಮಂಗಳೂರು ಇವರ ಸಂಯೋಜನೆ ಮತ್ತು ಹೊಸ ಪರಿಕಲ್ಪನೆಯಲ್ಲಿ ರೂಪುಗೊಂಡ ‘ಅಂಗದ ಸಂಧಾನ’ ಎಂಬ ಪೌರಾಣಿಕ ಪ್ರಸಂಗವನ್ನು ಯಶಸ್ವಿಯಾಗಿ ಪ್ರದರ್ಶಿಸಲಾಯಿತು.
