ಪುತ್ತೂರು : ವಿವೇಕಾನಂದ ಸ್ನಾತಕೋತ್ತರ ಅಧ್ಯಯನ ಕೇಂದ್ರ, ವಿವೇಕಾನಂದ ಸಂಶೋಧನಾ ಕೇಂದ್ರ, ಐಕ್ಯೂಎಸಿ ಮತ್ತು ವಿವೇಕಾನಂದ ಕಾಲೇಜ್ ಆಫ್ ಫಾರ್ಮಾಸ್ಯುಟಿಕಲ್ ಸೈನ್ಸಸ್ ಇದರ ಸಹಯೋಗದಲ್ಲಿ ದಿನಾಂಕ 12 ಜೂನ್ 2026ರಂದು ‘ವಿವೇಕ ಸ್ಮೃತಿ’ ಸರಣಿ ಉಪನ್ಯಾಸ ಕಾರ್ಯಕ್ರಮದ 29ನೆಯ ಸಂಚಿಕೆ ಪ್ರಸ್ತುತಗೊಂಡಿತು.
ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ. ಅಜಕ್ಕಳ ಗಿರೀಶ ಭಟ್ ಇವರು ಮಾತನಾಡಿ “ರಾಷ್ಟ್ರ ಎನ್ನುವಾಗ ಅಲ್ಲಿ ನಾಗರೀಕತೆಯ ಪರಂಪರೆ ಹಾಗೂ ಸಾಂಸ್ಕೃತಿಕ ಪ್ರಕಾರಗಳು ಪ್ರಮುಖವಾಗುತ್ತದೆ. ರಾಷ್ಟ್ರೀಯ ಪ್ರಜ್ಞೆ ಎಂದರೆ ನಮ್ಮ ದೇಶದೊಳಗಿನ ಪರಿಸರ, ಸಂಸ್ಕೃತಿ ಹಾಗೂ ಎಲ್ಲಾ ಅಂಶಗಳ ಬಗೆಗೆ ಅಭಿಮಾನವನ್ನು ಮೈಗೂಡಿಸಿಕೊಳ್ಳುವುದಾಗಿದೆ. ಸ್ವಾಮಿ ವಿವೇಕಾನಂದರು ದೇಶದ ಒಳಿತಿಗಾಗಿ ಯಾರನ್ನೂ ಬೇಧ ಭಾವ ಮಾಡದೇ ಎಲ್ಲರೂ ನನ್ನವರೆಂಬ ಭಾವನೆಯನ್ನು ಬೆಳೆಸಿಕೊಳ್ಳಬೇಕು. ರಾಷ್ಟ್ರೀಯ ಪ್ರಜ್ಞೆಯು ಸ್ವತಂತ್ರವಾದ ಪರಿಕಲ್ಪನೆಯಾಗಿದೆ. ಸುಶಿಕ್ಷಿತ ಸಮಾಜರೂಪುಗೊಂಡರೂ ದೇಶದ ಕುರಿತು ಅಭಿಮಾನ ಹೊಂದುವುದು ಅತ್ಯಂತ ಮುಖ್ಯ” ಎಂದು ತಿಳಿಸಿದರು.
ವಿವೇಕಾನಂದ ಕಾಲೇಜ್ ಆಫ್ ಫಾರ್ಮಾಸ್ಯುಟಿಕಲ್ ಸೈನ್ಸಸ್ ಇದರ ಆಡಳಿತ ಮಂಡಳಿಯ ಸಂಚಾಲಕ ಗೋವಿಂದ ಪ್ರಕಾಶ್ ಸಾಯ ಅಧ್ಯಕ್ಷೀಯ ನುಡಿಗಳನ್ನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ವಿವೇಕಾನಂದ ಮಹಾವಿದ್ಯಾಲಯದ (ಸ್ವಾಯತ್ತ) ಪ್ರಾಂಶುಪಾಲ ಪ್ರೊ. ಶ್ರೀಕೃಷ್ಣ ಗಣರಾಜ ಭಟ್, ವಿವೇಕಾನಂದ ಫಾರ್ಮಸ್ಯುಟಿಕಲ್ ಕಾಲೇಜಿನ ಪ್ರಾಂಶುಪಾಲ ಡಾ. ಗುರುರಾಜ್ ಎಮ್. ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿವೇಕಾನಂದ ಸಂಶೋಧನಾ ಕೇಂದ್ರದ ನಿರ್ದೇಶಕಿ ಡಾ.ವಿಜಯ ಸರಸ್ವತಿ ಬಿ. ಸ್ವಾಗತಿಸಿ, ಭಾರತೀಯ ಸಂಸ್ಕೃತಿ ಮತ್ತು ಲಲಿತ ಕಲೆಗಳ ಅಧ್ಯಯನ ಕೇಂದ್ರದ ಸಂಯೋಜಕಿ ಡಾ. ವಿದ್ಯಾಎಸ್ ವಂದಿಸಿ, ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕ ಮಧುಕುಮಾರ್ ನಿರ್ವಹಿಸಿದರು.
