ಮಂಗಳೂರು : ಚಾಮರ ಫೌಂಡೇಶನ್ (ರಿ.) ಮತ್ತು ಆದರ್ಶ ಫ್ರೆಂಡ್ಸ್ ಅಸೋಸಿಯೇಶನ್ (ರಿ.) ಸಂಸ್ಥೆಯು ಯತೀಶ್ ವೈ. ಶೆಟ್ಟಿ ಇವರ ಪ್ರೀತಿಯ ನೆನಪಿನಲ್ಲಿ ಆಯೋಜಿಸಿದ್ದ ಮಕ್ಕಳ ರಂಗಶಿಬಿರ 2026 ಏಳು ದಿನಗಳ ಕಾಲ ಮಕ್ಕಳಲ್ಲಿ ರಂಗಭೂಮಿಯ ಮಾಂತ್ರಿಕತೆಯನ್ನು ಬಿತ್ತಿ, ಅವರ ಸೃಜನಶೀಲತೆ, ಆತ್ಮವಿಶ್ವಾಸ ಮತ್ತು ಕಲಾ ಪ್ರತಿಭೆಯನ್ನು ಬೆಳೆಸುವ ಅದ್ಭುತ ಅನುಭವವನ್ನು ನೀಡಿದೆ.
ಇದು ಕೇವಲ ಶಿಬಿರವಲ್ಲ, ಮಕ್ಕಳ ಮನಸ್ಸಿನಲ್ಲಿ ಕನಸುಗಳನ್ನು ರಂಗರೂಪಕ್ಕೆ ತರುವ ಪ್ರಯಾಣವಾಗಿತ್ತು. ಪ್ರತಿದಿನವೂ ಹೊಸ ಅನುಭವ, ಹೊಸ ಕಲಿಕೆ ಮತ್ತು ಅಪಾರ ಉತ್ಸಾಹದೊಂದಿಗೆ ಮುಂದುವರೆದ ಈ ಶಿಬಿರವು ಮಕ್ಕಳನ್ನು ರಂಗಕಲೆಯ ಪ್ರಪಂಚಕ್ಕೆ ಕರೆದೊಯ್ದಿದೆ.
ಶಿಬಿರದ ಸೊಗಸುಗಳು..

ಶಿಬಿರದ ಮೊದಲ ದಿನಗಳಿಂದಲೇ ಪ್ರಸಿದ್ಧ ರಂಗ ನಿರ್ದೇಶಕ ಶ್ರೀ ಜಗನ್ ಪವಾರ್ ಉದ್ಘಾಟಿಸಿ, ಮೊದಲ ರಂಗ ತರಬೇತಿ ನೀಡಿದರು.
ಎರಡನೇ ದಿನ ಮಕ್ಕಳು ಸಂಗೀತದ ಸುರಗಳಲ್ಲಿ ತಲ್ಲೀನರಾದರು. ಪ್ರತಿಭಾವಂತ ಗಾಯಕ ಮತ್ತು ಸಂಘಟಕ ನಾದಮಣಿ ನಲ್ಕೂರ್ ಅವರು ನೀಡಿದ ತರಗತಿಗಳು ಮಕ್ಕಳ ಧ್ವನಿಯನ್ನು ರಂಗಭೂಮಿಗೆ ಸಿದ್ಧಗೊಳಿಸಿದವು. ಪತ್ರಕರ್ತ ದಿನೇಶ್ ಶೆಟ್ಟಿ ಕಟ್ಟಿಂಜ ಇವರು ಭೇಟಿ ನೀಡಿ ಮಕ್ಕಳನ್ನು ಪ್ರೋತ್ಸಾಹಿಸಿದರು.
ಮೂರನೇ ದಿನ ಕಥೆ ಬರೆಯುವಿಕೆ, ಸಂಗೀತ ಮತ್ತು Improvisation ಗೆ ಮೀಸಲಾಗಿತ್ತು. ಮಕ್ಕಳು ಸ್ವಂತ ಕಥೆಗಳನ್ನು ರಚಿಸುತ್ತಾ, ಸುರಗಳಲ್ಲಿ ತೇಲುತ್ತಾ, ತಮ್ಮ ಸೃಜನಶೀಲತೆಯನ್ನು ಸ್ವತಂತ್ರವಾಗಿ ಹೊರಹಾಕುತ್ತಾ ರಂಗಭೂಮಿಯ ನಿಜವಾದ ಆನಂದವನ್ನು ಅನುಭವಿಸಿದರು.
ನಾಲ್ಕನೇ ದಿನ ದಕ್ಷಿಣ ಕನ್ನಡದ ಖ್ಯಾತ MC ಕಾರ್ತಿಕ್ ಕುಂಜೂರ್ ಅವರು ಶಿಬಿರಕ್ಕೆ ಬಂದು ಕೇವಲ MCing ಮಾತ್ರವಲ್ಲದೆ, ಮಕ್ಕಳ ಜೊತೆಗೆ ತಾವೂ ಒಂದಾಗಿ ಕಲಿಯುತ್ತಾ, ಅವರೊಂದಿಗೆ ಆಟವಾಡುತ್ತಾ, ಅಪಾರ ಶಕ್ತಿ ಮತ್ತು ಉತ್ಸಾಹ ಹಂಚಿಕೊಂಡರು. ಇದು ಮಕ್ಕಳಿಗೆ ಬಹಳ ಪ್ರೇರಣಾದಾಯಕವಾಯಿತು.
ಐದನೇ ದಿನ ಮೇಕಪ್ ಮತ್ತು ಸ್ಟೇಜ್ ಪ್ರೆಸೆನ್ಸ್ ತರಗತಿಗಳು ನಡೆದವು. ಮಕ್ಕಳು ವೃತ್ತಿಪರ ಮೇಕಪ್ ಕಲಿತು, ಸ್ಟೇಜ್ಗೆ ಹೇಗೆ ಸರಿಯಾಗಿ ಅಪ್ರೋಚ್ ಮಾಡಬೇಕು, ಫೇಷಿಯಲ್ ಎಕ್ಸ್ಪ್ರೆಶನ್, ಬಾಡಿ ಲ್ಯಾಂಗ್ವೇಜ್ ಮತ್ತು ಆತ್ಮವಿಶ್ವಾಸದೊಂದಿಗೆ ರಂಗವನ್ನು ಆಕ್ರಮಿಸಬೇಕು ಎಂಬುದನ್ನು ಕೈಗೆಟುಕುವಂತೆ ಕಲಿತರು.

ಆರನೇ ದಿನ ಮತ್ತು ಏಳನೇ ದಿನಗಳಲ್ಲಿ ಎಲ್ಲಾ ಕಲಿಕೆಗಳನ್ನು ಒಂದುಗೂಡಿಸಿ ಮಕ್ಕಳು ತಮ್ಮ ಪ್ರತಿಭೆಯನ್ನು ಪರಿಪೂರ್ಣಗೊಳಿಸಿದರು.
ಅಂತ್ಯದಲ್ಲಿ ಮಕ್ಕಳ ರಂಗ ಪ್ರಯೋಗ ತಯಾರಿ ನಡೆಯಲಿರುವುದು. ಶಿಬಿರದ ಕೊನೆಯ ದಿನ ಅಂದರೆ ಮೇ 23, 2026ರಂದು ಮಕ್ಕಳು ತಮ್ಮ ಏಳು ದಿನಗಳ ಕಲಿಕೆಯ ಫಲವನ್ನು ಪ್ರದರ್ಶಿಸುವ ರಂಗ ಪ್ರಯೋಗ ನಡೆಯಲಿದೆ.
ಈ ವಿಶೇಷ – ರಂಗ ಪ್ರಯೋಗವು ಅದರ್ಶ ಫ್ರೆಂಡ್ಸ್ ಅಸೋಸಿಯೇಷನ್ ನ ಮುಕ್ತ ಮೈದಾನದಲ್ಲಿ (ಆದರ್ಶನಗರ, ಚಿಲಿಂಬಿ, ಮಂಗಳೂರು) ನಡೆಯಲಿದೆ. ಈ ಏಳು ದಿನಗಳ ಶಿಬಿರವು ಮಕ್ಕಳಲ್ಲಿ ರಂಗಭೂಮಿಯ ಬಗ್ಗೆ ಪ್ರೀತಿ ಮೂಡಿಸಿದ್ದಷ್ಟೇ ಅಲ್ಲ, ಅವರಲ್ಲಿ ಹೊಸ ಆತ್ಮವಿಶ್ವಾಸ, ಸಹಕಾರ ಮತ್ತು ಕಲಾ ದೃಷ್ಟಿಯನ್ನು ಬೆಳೆಸಿದೆ.
ಚಾಮರಾ ಸಂಸ್ಥೆ ಹಾಗೂ ಆದರ್ಶ್ ಫ್ರೆಂಡ್ಸ್ ಅಸೋಸಿಯೇಷನ್ ನ ಈ ಪ್ರಯತ್ನಕ್ಕೆ ಸಹಕರಿಸಿದ ಎಲ್ಲಾ ಗುರುಗಳು, ಅತಿಥಿಗಳು ಮತ್ತು ಪೋಷಕರಿಗೆ ಹೃದಯಪೂರ್ವಕ ಧನ್ಯವಾದಗಳು. ರಂಗಭೂಮಿಯ ಬೀಜ ಬಿತ್ತಿದ ಮಕ್ಕಳು ನಾಳೆ ರಂಗದ ಮೇಲೆ ಹೂವಾಗಿ ಅರಳುವರು – ಇದೇ ಈ ಶಿಬಿರದ ಸಾರ.
