ಉಡುಪಿ : “ನಾನೊಬ್ಬ ಭಾವುಕ ಕಲಾವಿದ. ಭಾವನಾರಹಿತ ಸಂಗೀತ ಶುಷ್ಕ! ಸಂಗೀತಗಾರರೆಲ್ಲಾ ಭಾವುಕರಾಗಿರಲೇಬೇಕು..! ಭಾವುಕತೆಯಿಂದ ಭಕ್ತಿ ಹೊಮ್ಮುತ್ತದೆ. ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಭಕ್ತಿಪೂರಿತ ಗಾಯನವೇ ವಿಶಿಷ್ಟ ಮೆರುಗು ನೀಡುವುದಲ್ಲದೆ ಮುಕ್ತಿಗೂ ಸಾಧನವಾಗುತ್ತದೆ ! ಭಕ್ತಿರಹಿತ ಸಂಗೀತ ಭಗವಾನ್ಶ್ರೀಕೃಷ್ಣ ಸ್ವೀಕರಿಸಲಾರ” ಎಂದು ರಾಜ್ಯದ ಅಗ್ರಮಾನ್ಯ ಸಂಗೀತಗಾರ – ಗುರು ಗಾನಕಲಾಭೂಷಣ ಡಾ. ಆರ್.ಕೆ. ಪದ್ಮನಾಭ ದಾಸರು ಉದ್ಘೋಷಿಸಿದರು.
ಉಡುಪಿಯ ಗುಂಡಿಬೈಲಿನ ಅಭಿರಾಮಧಾಮ ಸಂಕೀರ್ತನ ಮಂದಿರದಲ್ಲಿ ದಿನಾಂಕ 27, 28 29 ಮಾರ್ಚ್ 2026ರಂದು ಮೂರು ದಿನಗಳ ಕಾಲ ಜರುಗಿದ ‘ಅಭಿರಾಮ ಗಾನ ಹಬ್ಬ- 2026’ ಯುವಸಂಗೀತ ಸಮ್ಮೇಳನದ ದಿಗ್ದರ್ಶಿ ಆರ್ಕೆಪಿ ಗುರುಗಳಿಗೆ ‘ಅಭಿರಾಮ ಗಾನ-ಗುರು ಶ್ರೇಷ್ಠ’ರೆಂದು ತಮ್ಮ ಸಂಗೀತ ಯಾತ್ರೆಯ 126ನೇ ಪ್ರಶಸ್ತಿಯಿತ್ತು ಗೌರವಿಸಲಾಯ್ತು. ಈ ಸಂಬಂಧ ಸ್ವರ ಸಾಮ್ರಾಟ್ವಿದ್ವಾನ್. ಅಭಿರಾಮ್ಭರತವಂಶಿ ರಾಜ್ಯ ಪುರಸ್ಕಾರವನ್ನು, ರಾರಾಜಿಸುವ ಉಡುಪಿಯ ಕಡೆಗೋಲು ಕೃಷ್ಣನ ಸ್ಮರಣಿಕೆಯನ್ನು, ಅರ್ಧಲಕ್ಷ ನಗದು, ಬಹು ಅರ್ಥವತ್ತಾದ ಭಿನ್ನವತ್ತಳೆಯನ್ನು ಪಠಿಸಿ ನೇರಳೆ ಬಣ್ಣದ ಹೊಳೆವ ಜರತಾರಿ ಶಲ್ಯ-ಪೇಟಗಳಲ್ಲಿ ಕಂಗೊಳಿಸಿದ ನಮ್ಮ ಸಂಗೀತದ ಮೇರು ವ್ಯಕ್ತಿತ್ವ ಸಂಗೀತ ವಿದ್ಯಾನಿಧಿ ಡಾ. ಆರ್ಕೆಪಿಯವರು ಮನದಾಳದ ಮಾತುಗಳಿಗೆ ದನಿಯಾದರು.

ಅವರ ಪರಮಶಿಷ್ಯ ಅಭಿರಾಮ ಭರತವಂಶಿ (24) ಸರಿಸುಮಾರು 14 ವರ್ಷಗಳ ಕಾಲ ಸಂಗೀತದ ಹಲವಾರು ಸೋಪಾನಗಳನ್ನೇರಿ ದೂರದ ಪೂನಾದಲ್ಲಿ 2020ರಲ್ಲಿ ನಡೆದ ಜಾಗತಿಕ ಮಟ್ಟದ ಭಜನ್ ಸಾಮ್ರಾಟ್ ಸ್ಫರ್ಧೆಯಲ್ಲಿ ವಿಜಯಿಯಾಗಿ ಸ್ವರಸಾಮ್ರಾಟ್ ಬಿರುದು ಸಂಪಾದಿಸಿ 2021ರಲ್ಲಿ ಕೋವಿಡ್ನ್ಯೂಮೋನಿಯಕ್ಕೆ ಬಲಿಯಾಗಿ ಪರಲೋಕ ಯಾತ್ರೆಗೈದ 5 ವರ್ಷಗಳು ಸಂದ ಸಂಸ್ಮರಣೆಗೆ ಈ ವಿಶಿಷ್ಟ ಯುವ ಸಂಗೀತ ಸಮ್ಮೇಳನ ಆಯೋಜಿಸಲಾಗಿತ್ತು. ತಮ್ಮ ಸುಪುತ್ರನನ್ನು ಕಳೆದುಕೊಂಡ ಬಳಿಕ ತಮ್ಮೆಲ್ಲಾ ಆಸ್ತಿ-ಪಾಸ್ತಿಗಳ ಮಾರಿ ನವಕೋಟಿ ನಾರಾಯಣ 550 ವರ್ಷಗಳ ಹಿಂದೆ ಸಂತ ಪುರಂದರದಾಸರಾದಂತೆ ಇಂದಿನ ನಮ್ಮ ಕಣ್ಣೆದುರಿಗಿನ ಅಭಿನವ ಪುರಂದರದಾಸರಂತೆ ನಮ್ಮೆಲ್ಲರಿಗೆ ಭಾಸವಾಗುತ್ತಿದ್ದಾರೆ. ಅಭಿರಾಮ ಧಾಮದ ಸಂಸ್ಥಾಪಕ ಡಾ. ಸುದರ್ಶನ ಭಾರತೀಯ ಎಂದು ಆರ್ಕೆಪಿ ಬಣ್ಣಿಸಿದರು. ಇದೇ ಸಂದರ್ಭದಲ್ಲಿ ಗುರು ಪದ್ಮನಾಭದಾಸರು ಪ್ರಕಟಿಸಿ ಮುಂದಿನ ಅಕ್ಟೋಬರ್ನಲ್ಲಿ ಲೋಕಾರ್ಪಣೆಗೊಳ್ಳಲಿರುವ ಕರ್ನಾಟಕ ಸಂಗೀತದ ತ್ರಿಮೂರ್ತಿಗಳಲ್ಲೊಬ್ಬರೂ, ಮಹಾನ್ವಾಗ್ಗೇಯಕಾರರೂ ಆದ ಶ್ರೀ ಮುತ್ತುಸ್ವಾಮಿ ದೀಕ್ಷಿತರ 200 ಕೃತಿಗಳ ಅಪೂರ್ವ ಉದ್ಗ್ರಂಥವನ್ನು ವಿದ್ವಾನ್ ಅಭಿರಾಮ ಭರತವಂಶಿಗೆ ಸಮರ್ಪಣೆ ಮಾಡುವ ಘೋಷಣೆಯನ್ನೂ ಮಾಡಿ ನೆರೆದ ಸಭಿಕರ ಹರ್ಷೋದ್ಗಾರಕ್ಕೆ ಕಾರಣರಾದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಉಡುಪಿಯ ರಾಗ-ಧನ ಸಂಸ್ಥೆಯ ಮುಖ್ಯಸ್ಥರಾದ, ಮಣಿಪಾಲದ ಕಸ್ತೂರಭಾ ಮೆಡಿಕಲ್ ಕಾಲೇಜಿನ ಮಕ್ಕಳ ತಜ್ಞ ಡಾ . ಶ್ರೀ ಕಿರಣ್ ಹೆಬ್ಬಾರ್ ಮಾತನಾಡುತ್ತಾ “ಪದ್ಮನಾಭ ದಾಸರಂಥಾ ಮಹಾನ್ ಸಾಧಕರು ತನ್ನ ಶಿಷ್ಯೋತ್ತಮನ ಸ್ಮರಣಾರ್ಥ ಆರಂಭಿಸಿರುವ ʼಅಭಿರಾಮ ಗಾನ ಹಬ್ಬʼ ಪ್ರತೀ ವರ್ಷ ನಡೆಯಲಿ” ಎಂದು ಹಾರೈಸಿದರು. ಮೂರು ದಿನಗಳ ಅಭಿರಾಮ ಗಾನ ಹಬ್ಬದಲ್ಲಿ ಮೊದಲ ದಿನ ಶ್ರೀ ವಾದಿರಾಜ ಗುರುಸಾರ್ವಭೌಮರ ಏಳು ಕೃತಿಗಳನ್ನು ಗುರುಗಳು 50ಕ್ಕೂ ಮೀರಿದ ಸಂಗೀತಾಭಿಮಾನಿಗಳಿಗೆ ಕಲಿಸಿಕೊಟ್ಟರು. ಆನಂತರದ ಎರಡು ದಿನಗಳಲ್ಲಿ 21 ಯುವಸಂಗೀತಗಾರರ ಸಮ್ಮೇಳನೋಪಾದಿಯಲ್ಲಿ ಪ್ರಸ್ತುತಿಗಳು ನೂರಾರು ರಸಿಕರನ್ನು ರಂಜಿಸುತ್ತಾ ಅನಿರ್ವಚನೀಯವಾದ ಆನಂದವನ್ನು ನೀಡಿದವೆಂದು ಸಭಿಕರ ಅಂಬೋಣ! ಕೊನೆಯಲ್ಲಿ ಮಹಾಗುರುಗಳು ನಡೆಸಿಕೊಟ್ಟ ವಿಶೇಷ ಸಂವಾದದಲ್ಲಿ ಹತ್ತಾರು ಸಭಿಕರು ತಮ್ಮ ತಮ್ಮ ಪ್ರಶ್ನೆಗಳಿಗೆ ಪರಿಹಾರ ಪಡೆದುಕೊಂಡರು. ಒಟ್ಟಾರೆ ಈ ಬಾರಿಯ ಪ್ರಪ್ರಥಮ ‘ಅಭಿರಾಮ ಗಾನ ಹಬ್ಬ’ ಬಹು ರೂಪಗಳಲ್ಲಿ ಯಶಸ್ವಿಯಾಯಿತು.

