ಮೈಸೂರು : ಕಲಾಮಂದಿರದ ಆವರಣದಲ್ಲಿರುವ ಕಿರು ರಂಗಮಂದಿರದಲ್ಲಿ ದಿನಾಂಕ 27 ಜೂನ್ 2026ರ ಶನಿವಾರ ಸಂಜೆ ನಡೆದ ಏಕವ್ಯಕ್ತಿ ನಾಟಕೋತ್ಸವದ ಎರಡನೇ ದಿನದ ಕಾರ್ಯಕ್ರಮವು ಕಲಾರಸಿಕರ ಮನಸ್ಸನ್ನು ಆಳವಾಗಿ ಸ್ಪರ್ಶಿಸಿತು. ಕರ್ನಾಟಕ ಏಕೀಕರಣ ಟ್ರಸ್ಟ್ (ರಿ), ಮೈಸೂರು ಹಾಗೂ ಸ್ವಾತಂತ್ರ್ಯ ಮತ್ತು ಕರ್ನಾಟಕ ಏಕೀಕರಣ ಹೋರಾಟಗಾರರಾದ ಡಾ. ಸಿದ್ದನಾಥ ಬಳ್ಳಾರಿ ಅವರ ಸ್ಮರಣಾರ್ಥ ಆಯೋಜಿಸಿದ್ದ ಈ ನಾಟಕೋತ್ಸವವು ಅರ್ಥಪೂರ್ಣ ರಂಗಪ್ರಯೋಗಕ್ಕೆ ಸಾಕ್ಷಿಯಾಯಿತು.
ಕಾರ್ಯಕ್ರಮವನ್ನು ಉಪನ್ಯಾಸಕರಾದ ಶಿವಮಲ್ಲು ಕುನ್ನೂರು, ಕಾಳೀಪ್ರಸಾದ್, ಡಾ. ಸುಜಾತ ಅಕ್ಕಿ, ರಂಗಕರ್ಮಿ ಎನ್.ಎಸ್. ಗೋಪಿನಾಥ್ ಹಾಗೂ ರಂಗ ನಿರ್ದೇಶಕ ಅರಸೀಕೆರೆ ಯೋಗಾನಂದ ಇವರು ಜಂಟಿಯಾಗಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಡಾ. ಸುಜಾತ ಅಕ್ಕಿ ಅವರು, “ಕರ್ನಾಟಕ ಏಕೀಕರಣಕ್ಕಾಗಿ ತಮ್ಮ ಬದುಕನ್ನೇ ಸಮರ್ಪಿಸಿದ ಮಹನೀಯರನ್ನು ಸ್ಮರಿಸಿ, ಅವರ ತ್ಯಾಗ ಮತ್ತು ಹೋರಾಟದ ಮೌಲ್ಯಗಳನ್ನು ಇಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ” ಎಂದು ಅಭಿಪ್ರಾಯಪಟ್ಟರು.

ಬಳಿಕ ಪ್ರದರ್ಶನಗೊಂಡ ‘ಅಕ್ಕ ನಾಗಲಾಂಬಿಕೆ’ ಏಕವ್ಯಕ್ತಿ ನಾಟಕವು ಪ್ರೇಕ್ಷಕರ ಮನಸ್ಸನ್ನು ಭಾವಪರವಶಗೊಳಿಸಿತು. ಬಸವಣ್ಣನವರ ಅಕ್ಕನಾದ ಅಕ್ಕ ನಾಗಲಾಂಬಿಕೆಯ ಜೀವನ, 12ನೇ ಶತಮಾನದಲ್ಲಿ ಬಸವಾದಿ ಶರಣರು ಕಟ್ಟಿದ ಸಮಸಮಾಜದ ಕನಸನ್ನು ಸಾಕಾರಗೊಳಿಸುವಲ್ಲಿ ಅವರು ವಹಿಸಿದ ಮಹತ್ತರ ಪಾತ್ರವನ್ನು ನಾಟಕವು ಪರಿಣಾಮಕಾರಿಯಾಗಿ ಅನಾವರಣಗೊಳಿಸಿತು.
ನಾಟಕದಲ್ಲಿ ಡಾ. ದಿವ್ಯ ಬಿ.ಎಸ್. ಇವರು ಅಕ್ಕ ನಾಗಲಾಂಬಿಕೆಯ ಪಾತ್ರಕ್ಕೆ ಜೀವ ತುಂಬುವುದರ ಜೊತೆಗೆ ಬಸವಣ್ಣ, ಚನ್ನಬಸವಣ್ಣ, ತಂದೆ-ತಾಯಿ ಸೇರಿದಂತೆ ವಿವಿಧ ಪಾತ್ರಗಳನ್ನು ಅತ್ಯಂತ ಸಹಜವಾಗಿ, ಮನೋಜ್ಞವಾಗಿ ಹಾಗೂ ಭಾವಪೂರ್ಣವಾಗಿ ಅಭಿನಯಿಸಿ ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ಗಳಿಸಿದರು. ಇದು ಅವರ ಮೊದಲ ರಂಗಪ್ರವೇಶವಾಗಿದ್ದರೂ, ನುರಿತ ಕಲಾವಿದೆಯೊಬ್ಬರ ಪ್ರೌಢ ಅಭಿನಯವನ್ನು ನೆನಪಿಸುವಷ್ಟು ಪ್ರಭಾವಶಾಲಿಯಾಗಿ ಪ್ರತಿಯೊಂದು ಪಾತ್ರಕ್ಕೂ ಜೀವ ತುಂಬಿದರು. ಅವರ ಅಭಿನಯದ ತೀವ್ರತೆ ಮತ್ತು ಭಾವಾಭಿವ್ಯಕ್ತಿಯು ಪ್ರೇಕ್ಷಕರ ಕಣ್ಮನಗಳನ್ನು ತಟ್ಟಿದ್ದು, ಹಲವರ ಕಣ್ಣಲ್ಲಿ ಅರಿವಿಲ್ಲದಂತೆ ಭಾವೋದ್ರೇಕದ ಕಣ್ಣೀರು ಜಿನುಗುವಂತೆ ಮಾಡಿತು.

ನಾಟಕಕ್ಕೆ ಸಿದ್ಧೇಶ್ವರ ಬದನವಾಳು ಅವರ ಸಂಗೀತವು ಭಾವಗಳಿಗೆ ಮತ್ತಷ್ಟು ಭಾವವನ್ನು ತುಂಬಿತು, ಬೆಳಕಿನ ವಿನ್ಯಾಸವು ಪ್ರತಿಯೊಂದು ದೃಶ್ಯದ ಮನೋಭಾವವನ್ನು ಪರಿಣಾಮಕಾರಿಯಾಗಿ ಮೂಡಿಸಿ, ಕಲಾವಿದೆಯ ಭಾವನೆಗಳನ್ನು ನೇರವಾಗಿ ಪ್ರೇಕ್ಷಕರ ಹೃದಯಕ್ಕೆ ತಲುಪಿಸುವಲ್ಲಿ ಯಶಸ್ವಿಯಾಯಿತು. ರಂಗರೂಪ ಹಾಗೂ ನಿರ್ದೇಶನದಲ್ಲಿ ಅರಸೀಕೆರೆ ಯೋಗಾನಂದ ಅವರ ಪರಿಶ್ರಮ ಪ್ರತಿಯೊಂದು ಕ್ಷಣದಲ್ಲೂ ಎದ್ದು ಕಾಣುತ್ತಿದ್ದು, ನಾಟಕದ ಯಶಸ್ಸಿಗೆ ಪ್ರಮುಖ ಕಾರಣವಾಯಿತು.
ಕಾರ್ಯಕ್ರಮದಲ್ಲಿ ಪ್ರಗತಿಪರ ಚಿಂತಕರಾದ ನಾ. ದಿವಾಕರ್, ಹಿರಿಯ ರಂಗ ನಿರ್ದೇಶಕ ಶ್ರೀನಿವಾಸ್ ಪಾಲಹಳ್ಳಿ, ರಂಗ ನಿರ್ದೇಶಕಿ ಶೀಲಾ ಕುಮಾರಿ, ಸಾಹಿತಿ ಉಷಾ ನರಸಿಂಹನ್ ಸೇರಿದಂತೆ ಹಲವಾರು ಸಾಹಿತಿಗಳು, ರಂಗಕರ್ಮಿಗಳು ಹಾಗೂ ರಂಗಾಭಿಮಾನಿಗಳು ಭಾಗವಹಿಸಿ ನಾಟಕವನ್ನು ಆಸ್ವಾದಿಸಿದರು. ಅಕ್ಕ ನಾಗಲಾಂಬಿಕೆಯ ಆದರ್ಶ ಬದುಕು, ಸಮಾನತೆಯ ಸಂದೇಶ ಹಾಗೂ ಶರಣ ಸಂಸ್ಕೃತಿಯ ಮೌಲ್ಯಗಳನ್ನು ಜೀವಂತವಾಗಿ ಬಿಂಬಿಸಿದ ಈ ಏಕವ್ಯಕ್ತಿ ನಾಟಕವು ಪ್ರೇಕ್ಷಕರ ಮನಸ್ಸಿನಲ್ಲಿ ದೀರ್ಘಕಾಲ ಉಳಿಯುವಂತಹ ಕಲಾನುಭವವನ್ನು ನೀಡಿತು.
