ಮಂಗಳೂರು : ಶಂಕರನಾರಾಯಣ ದೂಜ ಪೂಜಾರಿ (ಡಾ. ಎಸ್.ಎನ್.ಡಿ. ಪೂಜಾರಿ) ಇವರು ಬರೆದಿರುವ ಪತ್ರಕರ್ತ, ಸಾಹಿತಿ, ಜಾನಪದ ತಜ್ಞ ಮುದ್ದು ಮೂಡುಬೆಳ್ಳೆಯವರ ಜೀವನ ಕಥನ ‘ಎ ಬಯೊಗ್ರಾಫಿಕಲ್ ಸ್ಕೆಚ್ ಆಫ್ ಮುದ್ದು ಮೂಡುಬೆಳ್ಳೆ’ ಎಂಬ ಆಂಗ್ಲ ಕೃತಿ ಬಿಡುಗಡೆ ಕಾರ್ಯಕ್ರಮವು ದಿನಾಂಕ 19 ಜೂನ್ 2026ರಂದು ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ನಡೆಯಿತು.
ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ವಿಶ್ರಾಂತ ಕುಲಪತಿ, ತುಳು ಕನ್ನಡ ವಿದ್ವಾಂಸ ಪ್ರೊ. ಬಿ.ಎ. ವಿವೇಕ ರೈ “ಸಾಹಿತ್ಯ ಏಕಾಏಕಿ ಸೃಷ್ಟಿ ಯಾಗುವುದಿಲ್ಲ. ಅದರ ಹಿಂದೆ ಅಪಾರ ಅನುಭವ ಇರುತ್ತದೆ. ಅದೆಲ್ಲದರ ಕೊನೆಯಲ್ಲಿ ಸಿಗುವ ಉತ್ಪನ್ನ ಸಾಹಿತ್ಯ. ಬಹುತ್ವ ಅನ್ನುವುದು ಶೋಕೇಸ್ನಲ್ಲಿಟ್ಟ ಅವಯವಗಳಲ್ಲ. ಅದು ವಿವಿಧ ಜಾತಿ, ಧರ್ಮ, ಸಮುದಾಯ, ಭಾಷೆ ಇವೆಲ್ಲವೂ ಒಂದರ ಜತೆ ಇನ್ನೊಂದು ಸೇರಿ ಬದುಕುವುದಾಗಿದೆ. ಲೇಖಕರಾಗಿ, ಸಾಹಿತಿಯಾಗಿ ಬಹುತ್ವವನ್ನು ಪ್ರತಿನಿಧಿಸುವ ಕಾರ್ಯವನ್ನು ಮುದ್ದು ಮೂಡುಬೆಳ್ಳೆಯವರು ಮಾಡಿದ್ದಾರೆ. ಮುದ್ದು ಮೂಡುಬೆಳ್ಳೆಯವರು ಕನ್ನಡ, ತುಳು, ಇಂಗ್ಲೀಷ್, ಕೊಂಕಣಿ ಭಾಷೆಯಲ್ಲಿ ಸಾಹಿತ್ಯ ಬರೆದಿದ್ದಾರೆ. ಕರಾವಳಿಯನ್ನು ಬಹುಭಾಷೆಯ ಆಡೊಂಬಲ ಎಂದು ಕರೆಯುತ್ತೇವೆ. ಬಹುತ್ವ ಎನ್ನುವುದು ಕೇವಲ ಪ್ರದರ್ಶನವಲ್ಲ. ಸಾಹಿತ್ಯದಲ್ಲಿಯೂ ಬಹುತ್ವವು ಬೆರೆತುಕೊಂಡಾಗ ಅದು ನಿಜವಾದ ಸಾಹಿತ್ಯದ ಸಮನ್ವಯವಾಗುತ್ತದೆ. ಅಂತಹ ಸಮನ್ವಯವನ್ನು ಯಾವುದೇ ದೊಡ್ಡ ಮಾತುಗಳಿಲ್ಲದೆ ಮುದ್ದು ಮೂಡುಬೆಳ್ಳೆ ಬರೆದಿದ್ದಾರೆ. 1954ರಲ್ಲಿ ಹುಟ್ಟಿದ ಮುದ್ದು ಮೂಡುಬೆಳ್ಳೆಗೆ 72 ವರ್ಷ ಆಗಿದೆ. ಹಿಂದೆಲ್ಲಾ 60 ವರ್ಷ ಆದ ಮೇಲೆ ಮನೆಯಿಂದ ಹೊರ ಬರುವ ಕ್ರಮ ಇರಲಿಲ್ಲ. ಮನೆಯೊಳಗಿರುವ ವೃದ್ಧರಿಗೆ ಮನೆಯ ಮಕ್ಕಳು, ಮೊಮ್ಮಕ್ಕಳು ಸಹಕರಿಸುವುದಿತ್ತು. ಆದರೆ ಈಗ 80 ವರ್ಷ ಆದರೂ ಯಾರೂ ಕ್ಯಾರೇ ಮಾಡುವುದಿಲ್ಲ. ಮುದ್ದು ಮೂಡು ಬೆಳ್ಳೆಯವರು ಅನೇಕ ಕೆಲಸಗಳನ್ನು ಮಾಡಿದ್ದಾರೆ. ವಿವಿಧ ವೃತ್ತಿಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅದೆಲ್ಲವೂ ಜೀವನ ನಿರ್ವಹಣೆಗೆ ಕಂಡುಕೊಂಡ ದಾರಿಗಳು. ಯಾವ ವೃತ್ತಿಯನ್ನೂ ಯಾವುದೇ ಕೆಲಸ ಮಾಡುವವರನ್ನೂ ನಿಕೃಷ್ಟವಾಗಿ ಕಾಣಬಾರದು. ವಾಸ್ತವದಿಂದ ಕಾಣುವ ಕಣ್ಣು ತೆರೆದು ಜಗತ್ತನ್ನು ವೀಕ್ಷಿಸಬೇಕು. ದಕ್ಷಿಣ ಕನ್ನಡ ಜಿಲ್ಲೆಯ ಶಕ್ತಿಯಾದ ಬಹು ಸಂಸ್ಕೃತಿಯನ್ನು ಗೌರವಿಸಬೇಕು. ವಿವಿಧ ಭಾಷೆಗಳನ್ನು ಪ್ರೀತಿಸಿದರೆ ಆ ಭಾಷೆಯ ಜನರನ್ನೂ ಪ್ರೀತಿಸಲು ಸಾಧ್ಯವಾಗುತ್ತದೆ” ಎಂದು ಅಭಿಪ್ರಾಯಪಟ್ಟರು.


ಕ.ಸ.ಪಾ. ಜಿಲ್ಲಾಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್, ಸಾಹಿತಿ ಚಂದ್ರಕಲಾ ನಂದಾವರ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಭಾಸ್ಕರ ರೈ ಕುಕ್ಕುವಳ್ಳಿ, ಸುಖಾಲಾಕ್ಷಿ ವೈ. ಸುವರ್ಣ, ಲತೀಶ್ ಪಾಲ್ದನೆ, ಹೆನ್ರಿ ಎಂ. ಪರ್ನಾಲ್, ಗೀತಾ ಲಕ್ಷ್ಮೀಶ್ ಮೊದಲಾದವರಿದ್ದರು. ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್. ಇವರು ಅಧ್ಯಕ್ಷತೆ ವಹಿಸಿದ್ದರು. ಲೇಖಕ ಮುದ್ದು ಮೂಡುಬೆಳ್ಳೆ ಪ್ರಾಸ್ತಾವಿಕವಾಗಿ ಮಾತನಾಡಿ, “ಸಮಾಜಕ್ಕೆ ನಾನು ಏನು ಕೊಟ್ಟಿದ್ದೇನೆ ಎಂಬುದು ಗೊತ್ತಿಲ್ಲ. ಆದರೆ ಸಮಾಜದಿಂದ ನಾನು ಎಲ್ಲವನ್ನೂ ತೆಗೆದುಕೊಂಡು ಬದುಕಿದ್ದೇನೆ. ಹಲವು ಕಡೆಗಳಲ್ಲಿ ಕೆಲಸ ಮಾಡಿರುವ ನನಗೆ ಆಕಾಶವಾಣಿಯೇ ಜೀವ” ಎಂದು ಹೇಳಿದರು.


ಕಾರ್ಯಕ್ರಮದ ಕೊನೆಯಲ್ಲಿ ಮುದ್ದು ಮೂಡುಬೆಳ್ಳೆಯವರು ಹಾಡಿನ ಮೂಲಕ ರಂಜಿಸಿದರು. ಆಕಾಶವಾಣಿ ಉದ್ಘೋಷಕರಾಗಿದ್ದ ಅವರು ಉತ್ತಮ ಪಾಡ್ದನದ ಹಾಡುಗಾರ ಕೂಡ ಆಗಿದ್ದಾರೆ. ಆದ್ದರಿಂದ ಪಾಡ್ದನವೊಂದನ್ನು ಹಾಡುವಂತೆ ಕಾರ್ಯಕ್ರಮದ ಆಯೋಜಕರು ಕೋರಿದ್ದರು. ಪಾಡ್ಡನಕ್ಕೆ ತುಂಬ ಸಮಯ ಬೇಕಾಗುವುದರಿಂದ ಸ್ವರಚಿತ ತುಳು ಕವಿತೆಯೊಂದನ್ನು ಅವರು ಹಾಡಿದರು. ‘ಉಸುಲುದ ಸುಯಿಲವು ಎನ್ನವಾ, ನಿನ್ನವಾ, ಇರೆನವ ಏರೆನವ, ತೆರ್ಯುನೆಂಚ…’ (ಉಸಿರಿನ ಗಾಳಿಯು ನನ್ನದೇ ನಿನ್ನದೇ..? ಅವರದೇ, ಮತ್ತೊಬ್ಬರದೇ.. ತಿಳಿವುದೆಂತು..?) ಎಂದು ಆರಂಭವಾಗುವ ಕವಿತೆಯನ್ನು ಮೋಹಕವಾಗಿ ಪ್ರಸ್ತುತಪಡಿಸಿದರು. ಮೌನೇಶ್ ಕುಮಾರ್ ಚಾವಡಿ ಪ್ರಾರ್ಥನೆ ಹಾಡಿದರು. ಆಕೃತಿ ಆಶಯ ಪಬ್ಲಿಕೇಶನ್ಸ್ ನ ಕಲ್ಲೂರ ನಾಗೇಶ ಕಾರ್ಯಕ್ರಮ ನಿರೂಪಿಸಿದರು.


