ಮಂಗಳೂರು : ತುಳು ಕೂಟ (ರಿ.) ಕುಡ್ಲ ಇದರ ವತಿಯಿಂದ ‘ಬಂಗಾರ್ ಪರ್ಬೊದ ಸಬಿ ನೆಂಪು 2026’ ಕಾರ್ಯಕ್ರಮವು ದಿನಾಂಕ 09 ಮಾರ್ಚ್ 2026ರಂದು ಪಿ.ವಿ.ಎಸ್. ವೃತ್ತದ ಬಳಿಯಿರುವ ಮಂಗಳೂರು ಥಿಯೋಸೋಫಿಕಲ್ ಸೊಸೈಟಿಯಲ್ಲಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಂಗಳೂರು ಥಿಯೋಸೋಫಿಕಲ್ ಸೊಸೈಟಿಯ ಅಧ್ಯಕ್ಷರಾದ ವಿದ್ವಾನ್ ತುಪ್ಪೆಕಲ್ಲು ನರಸಿಂಹ ಶೆಟ್ಟಿ ಮಾತನಾಡಿ “ಬಹಳ ವಿಸ್ತೀರ್ಣದವರೆಗೆ ಹರಡಿಕೊಂಡಿದೆ ನಮ್ಮ ತುಳುನಾಡು, ಅಲ್ಲದೇ ಆ ಪ್ರದೇಶ ಮಾತ್ರವಲ್ಲದೇ ವಿಶ್ವದಲ್ಲೆಡೆ ನಮ್ಮ ಹೆಮ್ಮೆಯ ತುಳು ಭಾಷೆ ಹರಡಿಕೊಂಡಿದೆ. ಎಂತಹ ಸಂಘರ್ಷಗಳ ಮಧ್ಯೆಯೂ ತನ್ನ ಹೊಳಹನ್ನು ಹಾಗೆಯೇ ಉಳಿಸಿಕೊಂಡ ತುಳುಭಾಷೆ ತುಳುನಾಡಿನ ಕೀರ್ತಿಯನ್ನು ಮೆರೆಸುತ್ತಿದೆ. ಇದು ಈ ಮಣ್ಣಿನ ವಿಶೇಷತೆ. ಇದರ ಉಳಿವಿಗಾಗಿ ತುಳುಕೂಟ ಕುಡ್ಲ ಕಳೆದ ಐವತ್ತಾರು ವರ್ಷಗಳಿಂದ ಶ್ರಮಿಸುತ್ತಿದೆ. ಈ ಕಾರ್ಯಕ್ಕೆ ತುಳುವರೆಲ್ಲರ ಬೆಂಬಲ ಇರಲಿ.” ಎಂದು ಹೇಳಿದರು.

“ತುಳುವಿಗಾಗಿ ಅನೇಕ ಹೋರಾಟಗಳು ನಡೆದರೂ ನಮಗಿನ್ನೂ ಶಾಸನಬದ್ಧವಾಗಿ ತುಳುವನ್ನು ಬೆಳೆಸಲಾಗಲಿಲ್ಲ. ಅದನ್ನು ನಡೆಸಲು ತುಳುವರೆಲ್ಲರೂ ನಮಗೆ ಸಹಕರಿಸಿ” ಎಂದು ಕುಡ್ಲ ತುಳುಕೂಟದ ಅಧ್ಯಕ್ಷೆ ಶ್ರೀಮತಿ ಹೇಮಾ ದಾಮೋದರ ನಿಸರ್ಗ ಅಧ್ಯಕ್ಷೀಯ ಮಾತುಗಳನ್ನಾಡಿದರು.
ವೇದಾಂತ ಟವರ್ಸ್ ನ ಮಾಲಕಿ, ಕುದ್ರೋಳಿ ಗೋಕರ್ಣನಾಥ ದೇವಳದ ಅಭಿವೃದ್ಧಿ ಸಮಿತಿ ಸದಸ್ಯೆಯಾದ ಶ್ರೀಮತಿ ಪಿ.ಕೆ. ಗೌರವಿ ರಾಜಶೇಖರ್ ರವರು ಕಾರ್ಯಕ್ರಮವನ್ನು ದೀಪಪ್ರಜ್ವಲನೆಯ ಮೂಲಕ ಉದ್ಘಾಟಿಸಿದರು. ವಿನಾಯಕ ಗಾರ್ಮೆಂಟ್ಸ್ ನ ಮಾಲಕಿ ಶ್ರೀಮತಿ ಕುಸುಮಾ ಎಚ್. ದೇವಾಡಿಗರವರು ಮುಖ್ಯ ಅತಿಥಿಯಾಗಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಪ್ರದಾನ ಕಾರ್ಯದರ್ಶಿ ವರ್ಕಾಡಿ ರವಿ ಅಲೆವೂರಾಯ ನಿರೂಪಿಸಿದರು. ದಯಾಮಣಿ ವಿ. ಕೋಟ್ಯಾನ್ ಹಾಗೂ ಸುನಂದಾ ಎ. ಬೋಳಾರ್ ರವರು ಪ್ರಾರ್ಥನೆಗೈದರು. ಉಪಾಧ್ಯಕ್ಷ ರೊ. ಜೆ.ವಿ. ಶೆಟ್ಟಿಯವರು ಪ್ರಸ್ತಾವನೆ ಸ್ವಾಗತ ಕೋರಿದರು. ಖಚಾಂಚಿ ನಾರಾಯಣ ಬಿ.ಡಿ. ಯವರು ಧನ್ಯವಾದವಿತ್ತರು. ಬಂಗಾರ್ ಪರ್ಬೊದ ಸಬಿ ನೆಂಪು ಸಭಾ ಕಾರ್ಯಕ್ರಮದ ಬಳಿಕ ಕದ್ರಿ ನಾಗೇಶ್ ದೇವಾಡಿಗ, ಜಯಲಕ್ಷೀ ಟೀಚರ್ ಹಾಗೂ ಟೈಲರ್ಸ್ ಅಸೋಸಿಯೇಶನ್ ಬಳಗದವರಿಂದ ತುಳು ಸಾಂಸ್ಕೃತಿಕ ಕಾರ್ಯಕ್ರಮ, ಕಿರು ರೂಪಕಗಳು ನಡೆದವು.

