ಉಡುಪಿ : ಬೈಲೂರಿನ ಶ್ರೀ ಮಹಿಷಮರ್ದಿನಿ ದೇವಸ್ಥಾನದ ವತಿಯಿಂದ ನಡೆಯುವ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ, ದಿನಾಂಕ 26 ಜೂನ್ 2026ರಂದು ದೇವಸ್ಥಾನದ ರಂಗವೇದಿಕೆಯಲ್ಲಿ ಶ್ರೀ ವೀರ ನಾಟ್ಯ ನಿಕೇತನ ಸಂಸ್ಥೆಯ ವಿದ್ಯಾರ್ಥಿಗಳಿಂದ ಅತ್ಯಂತ ಆಕರ್ಷಕ ನೃತ್ಯ ಕಾರ್ಯಕ್ರಮ ಪ್ರಸ್ತುತಿಗೊಂಡಿತು.

ಸಂಸ್ಥೆಯ ನಿರ್ದೇಶಕಿ ಡಾ. ಮೇಘನಾ ಶೆಟ್ಟಿಗಾರ್ ಅವರು ಕಳೆದ ನಾಲ್ಕು ವರ್ಷಗಳಿಂದ ಹಲವು ವಿದ್ಯಾರ್ಥಿಗಳಿಗೆ ಭರತನಾಟ್ಯದ ನೃತ್ತ-ನೃತ್ಯಗಳನ್ನು ಕಲಿಸುತ್ತಿದ್ದು, ಇವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಶ್ರೀ ಮಹಿಷಮರ್ದಿನಿ ದೇವಿಯ ಸನ್ನಿಧಿಯಲ್ಲಿ ಒಂದು ಗಂಟೆಯ ಕಾಲ ಮನಮೋಹಕ ನೃತ್ಯ ಸೇವೆ ನಡೆಸಿದರು.

ವಿದುಷಿ ಮೇಘನಾ ಇವರ ನಿರ್ದೇಶನದಲ್ಲಿ ಮೂಡಿಬಂದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಈ ಕೆಳಗಿನ ಕೃತಿಗಳಿಗೆ ಹೆಜ್ಜೆ ಹಾಕಿ ಸಭಿಕರನ್ನು ಮಂತ್ರಮುಗ್ಧರನ್ನಾಗಿಸಿದರು. ಪುಷ್ಪಾಂಜಲಿ ಮತ್ತು ಅಲರಿಪು, ಶ್ಲೋಕ ಅಭಿನಯ, ಪಾಹಿಮಾಂ ರಾಜರಾಜೇಶ್ವರಿ (ಕೃತಿ), ಬಾರೋ ಕೃಷ್ಣಯ್ಯ ಮತ್ತು ಭಾಗ್ಯದ ಲಕ್ಷ್ಮೀ ಬಾರಮ್ಮ (ದೇವರನಾಮಗಳು). ಕಾರ್ಯಕ್ರಮದ ಯಶಸ್ಸಿಗೆ ಹಿಮ್ಮೇಳದ ಕಲಾವಿದರ ಸಹಕಾರ ಗಣನೀಯವಾಗಿತ್ತು. ನಟುವಾಂಗದಲ್ಲಿ ವಿದುಷಿ ಡಾ. ಮೇಘನಾ ಶೆಟ್ಟಿಗಾರ್, ಹಾಡುಗಾರಿಕೆಯಲ್ಲಿ ಡಾ. ಪ್ರಸಿದ್ಧಿ ಮಯ್ಯ ಮತ್ತು ಕುಮಾರಿ ಕೃತಿ ಭಟ್, ಮೃದಂಗದಲ್ಲಿ ವಿದ್ವಾನ್ ನಾರಾಯಣ ಬಳಕ್ಕುರಾಯ ಹಾಗೂ ಪಿಟೀಲು ಪ್ರಣೀತ್ ಬಳಕ್ಕುರಾಯ ಸಹಕರಿಸಿದರು.

ಗಣ್ಯರ ಉಪಸ್ಥಿತಿ ದೇವಸ್ಥಾನದ ಆಡಳಿತ ಮಂಡಳಿಯ ಪರವಾಗಿ ಗುರು ರಾಮಕೃಷ್ಣ ಕೊಡಂಚ ಅವರು ಎಲ್ಲರನ್ನೂ ಸ್ವಾಗತಿಸಿದರು. ಹಿರಿಯ ಕಲಾಶ್ರೀ ಮಧೂರು ಬಾಲಸುಬ್ರಹ್ಮಣ್ಯಮ್ ಅವರು ಆಶೀರ್ವಚನ ನೀಡಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದ ಕೊನೆಯಲ್ಲಿ ಸಂಸ್ಥೆಯ ನಿರ್ದೇಶಕಿ ವಿದುಷಿ ಡಾ. ಮೇಘನಾ ಶೆಟ್ಟಿಗಾರ್ ಧನ್ಯವಾದ ಸಮರ್ಪಣೆ ಮಾಡಿದರು. ನೆರೆದಿದ್ದ ನೂರಾರು ಭಕ್ತಾದಿಗಳು ಸಾಕ್ಷಿಯಾಗಿ ಕರತಾಡನ ಮಾಡುವ ಮೂಲಕ ಕಲಾವಿದರನ್ನು ಪ್ರೋತ್ಸಾಹಿಸಿ, ಸಂತೋಷ ವ್ಯಕ್ತಪಡಿಸಿದರು.

