ಪಡುಬೆಳ್ಳೆ : ಶ್ರೀ ನಾರಾಯಣ ಗುರು ಶಿಕ್ಷಣ ಸಂಸ್ಥೆಗಳು ಪಡುಬೆಳ್ಳೆ ಇದರ ವತಿಯಿಂದ ಕೃತಿ ಲೋಕಾರ್ಪಣೆ ಸಮಾರಂಭವನ್ನು ದಿನಾಂಕ 20 ಜೂನ್ 2026ರಂದು ಪೂರ್ವಾಹ್ನ 10-30 ಗಂಟೆಗೆ ಶಾಲಾ ಸಭಾಭವನದಲ್ಲಿ ಆಯೋಜಿಸಲಾಗಿದೆ. ಪ್ರೊ. ಎಸ್.ಎಸ್.ಡಿ. ಪೂಜಾರಿ ಇವರು ರಚಿಸಿರುವ ‘ಎ ಬಯೋಗ್ರಾಫಿಕಲ್ ಸ್ಕೆಚ್ ಆಫ್ ಮುದ್ದು ಮೂಡುಬೆಳ್ಳೆ’ ಕೃತಿ ಲೋಕಾರ್ಪಣೆಗೊಳ್ಳಲಿದೆ.
ಪಡುಬೆಳ್ಳೆ : ಪಡುಬೆಳ್ಳೆ ಶ್ರೀ ನಾರಾಯಣ ಗುರು ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಪಡುಬೆಳ್ಳೆ ಶ್ರೀ ನಾರಾಯಣಗುರು ಆಂಗ್ಲ ಮಾಧ್ಯಮ ಶಾಲಾ ಸಭಾಂಗಣದಲ್ಲಿ ದಿನಾಂಕ 20 ಜೂನ್ 2026ರಂದು ಲೇಖಕ ಪ್ರೊ. ಶಂಕರನಾರಾಯಣ ದೂಜ ಪೂಜಾರಿ (ಎಸ್.ಎನ್.ಡಿ. ಪೂಜಾರಿ) ಮಿರಾ ಮಾರ್ ಗೋವಾ ಇವರು ಆಂಗ್ಲ ಭಾಷೆಯಲ್ಲಿ ಸಂಪಾದಿಸಿದ ‘ಎ ಬಯೋಗ್ರಫಿಕಲ್ ಸ್ಕೆಚ್ ಆಫ್ ಮುದ್ದು ಮೂಡುಬೆಳ್ಳೆ’ ಕೃತಿ ಲೋಕಾರ್ಪಣೆಗೊಂಡಿತು.
ಹಿರಿಯ ಸಾಹಿತಿ, ನಿವೃತ್ತ ಪ್ರಿನ್ಸಿಪಾಲ್, ಸಾಹಿತ್ಯ ವಿಮರ್ಶಕ ಡಾ. ಬಿ. ಜನಾರ್ದನ ಭಟ್ ಬೆಳ್ಮಣ್ಣು ಇವರು ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿ “ತುಳು, ಕನ್ನಡ, ಇಂಗ್ಲೀಷ್ ಮತ್ತು ಕೊಂಕಣಿ ಭಾಷೆಗಳಲ್ಲಿ ಸಾಹಿತ್ಯ ರಚನೆ ಮಾಡಿರುವ ಅಪರೂಪದ ಸಾಹಿತಿ ಕಥೆಗಾರ ಕವಿ ಜಾನಪದ ವಿದ್ವಾಂಸ ಮುದ್ದು ಮೂಡುಬೆಳ್ಳೆಯವರ ಸಾಧನೆ ಅನನ್ಯ. ಜೀವನ ಚರಿತ್ರೆ – ಅದರಲ್ಲಿಯೂ ಸಾಹಿತಿಯೊಬ್ಬರ ಜೀವನ ಚರಿತ್ರೆಯನ್ನು ಬರೆಯುವಲ್ಲಿ ಇದೊಂದು ಮಾದರಿ ಜೀವನ ಚರಿತ್ರೆಯಾಗಿದೆ. ಮೊದಲ ಭಾಗದಲ್ಲಿ ಲೇಖಕರ ಬದುಕನ್ನು ಅನಾವರಣಗೊಳಿಸಿದ ಪೂಜಾರಿಯವರು ಎರಡನೆಯ ಭಾಗದಲ್ಲಿ ಮುದ್ದು ಮೂಡುಬೆಳ್ಳೆ ಅವರ ಸಾಹಿತ್ಯ ಕೃತಿಗಳನ್ನು ಸಮೀಚೀನವಾಗಿ ಅವಲೋಕಿಸಿ, ಮುದ್ದು ಮೂಡುಬೆಳ್ಳೆ ಅವರ ಬಹುಮುಖ ಪ್ರತಿಭೆಗಳು ಹಾಗೂ ಸಾಧನೆಗಳ ಎಲ್ಲ ಅಯಾಮಗಳನ್ನು ತಮ್ಮ ಕೃತಿಯಲ್ಲಿ ಬರೆದಿದ್ದಾರೆ. ಮುದ್ದು ಮೂಡುಬೆಳ್ಳೆಯವರು ಸಣ್ಣ ಕಥೆಗಳನ್ನು ಬರೆಯುವಾಗ ಜೀವನದ ಕಠಿಣತಮ ಮುಖಗಳನ್ನು ಅನಾವರಣಗೊಳಿಸುತ್ತಾರೆ. ಇದು ಇನ್ನಷ್ಟು ಲಘುವಾದ ಧಾಟಿಯಲ್ಲಿ ಬಂದಿದ್ದರೆ ಚೆನ್ನಾಗಿತ್ತು ಎನ್ನುವ ಲೇಖಕರ ಅಭಿಪ್ರಾಯಕ್ಕೆ ಸ್ಪಂದಿಸಿದ ಡಾ. ಭಟ್ ಅವರು ಕರುಣರಸದಲ್ಲಿ ಬರೆಯುವುದರಿಂದ ಅನುಭವಗಳು ಓದುಗರ ಮನಸ್ಸಿನಲ್ಲಿ ಗಾಢವಾಗಿ ಅಸಕ್ತಿ ಉಳಿಯುತ್ತವೆ. ಸಣ್ಣಕಥೆಗಾರರಾಗಿ ಮುದ್ದು ಮೂಡುಬೆಳ್ಳೆಯವರ ಸಾಧನೆ ವಿಶಿಷ್ಟವಾದದ್ದು. ಅವರು ತುಳು ರಂಗಭೂಮಿಯ ಚರಿತ್ರೆಯನ್ನು ದಾಖಲಿಸಿದ್ದಾರೆ. ಕಾಂತಾಬಾರೆ -ಬೂದಬಾರೆ ಇವರ ಐತಿಹ್ಯಗಳನ್ನು ಸಂಗ್ರಹಿಸಿ ಅವರ ಬದುಕನ್ನು ಇತಿಹಾಸದ ನೆಲೆಗಟ್ಟಿನಲ್ಲಿ ಸ್ಥಾಪಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಿದ್ದಾರೆ. ಇಂತಹ ಸಂಗತಿಗಳ ಬಗ್ಗೆ ಚರ್ಚಿಸಿರುವ ಮತ್ತು ಮೂಡುಬೆಳ್ಳೆಯವರ ಎಲ್ಲಾ ಕೃತಿಗಳನ್ನು ಅವಲೋಕಿಸಿರುವ ಎಸ್.ಎನ್.ಡಿ. ಪೂಜಾರಿ ಅವರು ಅಭಿನಂದನಾರ್ಹರು” ಎಂದು ಶ್ಲಾಘಿಸಿದರು.
ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ಪುಂಡಲೀಕ ಮರಾಠ ಮಾತನಾಡಿ, “ಬಹುಮುಖ ಪ್ರತಿಭೆಯ ಮುದ್ದು ಮೂಡುಬೆಳ್ಳೆ ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಗಣನೀಯ ಸಾಧನೆಗಳಿಗಾಗಿ ಕುತ್ಯಾರಿನಲ್ಲಿ ಜರುಗಿದ ಕಾಪು ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿತ್ತು. ‘ಎ ಬಯೋಗ್ರಫಿಕಲ್ ಸ್ಕೆಚ್ ಆಫ್ ಮುದ್ದು ಮೂಡುಬೆಳ್ಳೆ’ ದಾಖಲೆಯಾಗಿ ಉಳಿಯಲಿದ್ದು, ಮುಂದಿನ ಪೀಳಿಗೆಗೆ ಸ್ಫೂರ್ತಿ ತುಂಬಲಿದೆ” ಎಂದರು.

ಶಾಲಾ ಆಡಳಿತ ಮಂಡಳಿ ಸದಸ್ಯ, ಬೆಳ್ಳೆ ಸಿಎ ಬ್ಯಾಂಕ್ ಅಧ್ಯಕ್ಷ ಶಿವಾಜಿ ಎಸ್. ಸುವರ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, “ಬಹುಮುಖ ಪ್ರತಿಭಾ ಸಂಪನ್ನರಾದ ಮುದ್ದು ಮೂಡುಬೆಳ್ಳೆಯವರು ನಮ್ಮ ಊರಿನವರು. ಅವರ ಸಾಹಿತ್ಯ ಸೇವೆ ನಿರಂತರ ಮುಂದುವರಿಯಲಿ” ಎಂದು ಹಾರೈಸಿದರು. ಮುದ್ದು ಮೂಡುಬೆಳ್ಳೆ ಮತ್ತು ಕೃತಿ ರಚನಾಕಾರ ಎಸ್.ಎನ್.ಡಿ. ಪೂಜಾರಿ ಇವರನ್ನು ಸನ್ಮಾನಿಸಲಾಯಿತು. ಶಾಲಾ ಆಡಳಿತ ಮಂಡಳಿ ಸದಸ್ಯರಾದ ಗೀತಾ ವಾಗ್ಲೆ, ಪ್ರಕಾಶ್ ಪಾಲಮೆ, ಜೋಯ್ ಕ್ವಾಡ್ರಸ್ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕ ರಾಘವೇಂದ್ರ ಸಾಲಿಯಾನ್ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿ, ಸುಕನ್ಯಾ ಸನ್ಮಾನ ಪತ್ರ ವಾಚಿಸಿದರು. ಕನ್ನಡ ಮಾಧ್ಯಮ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಉಷಾ ಎಸ್. ವಂದಿಸಿ, ಸುಜಾತಾ ಸುವರ್ಣ ಮೂಡುಬೆಳ್ಳೆ ಕಾರ್ಯಕ್ರಮ ನಿರೂಪಿಸಿದರು.
