ಪೆರ್ಲ : ಸವಿಹೃದಯದ ಕವಿಮಿತ್ರರು ವೇದಿಕೆ ಪ್ರಕಾಶನ ಇದರ ವತಿಯಿಂದ ‘ಕೃತಿ ಬಿಡುಗಡೆ – ಕವಿ ಕಾವ್ಯ ಸಂವಾದ’ ಕಾರ್ಯಕ್ರಮವು ದಿನಾಂಕ 28 ಫೆಬ್ರವರಿ 2026ರಂದು ಪೆರ್ಲ ವ್ಯಾಪಾರಿ ಭವನದಲ್ಲಿ ನಡೆಯಿತು. ನಳಿನಿ ಐತ್ತಪ್ಪ ನಾಯ್ಕ ಪರಪ್ಪಕರ್ಯ ಇವರ ಪುತ್ರಿ ಹರ್ಷಿತಾ ಪೆರ್ಲ ಇವರ ಚೊಚ್ಚಲ ಕವನ ಸಂಕಲನವಾದ ‘ಚಿಗುರು’ ಎಂಬ ಕೃತಿ ಈ ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೊಂಡಿತು.

ಬದಿಯಡ್ಕ ಶ್ರೀ ಭಾರತಿ ವಿದ್ಯಾಪೀಠದ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಇವರು ಕಾರ್ಯಕ್ರಮ ಉದ್ಘಾಟಿಸಿ, “ಕವಿ ಮನಸ್ಸು ಬೆಳಕಿನಂತೆ ಪ್ರಖರ. ಬಾಲ್ಯಕಾಲದಲ್ಲಿ ಮೂಡಿದ ಆಸಕ್ತಿ ಅಭಿರುಚಿಗಳನ್ನು ಮುಂದುವರಿಸುತ್ತಾ ಹೋದರೆ ಮಾತ್ರ ಸಮಾಜದಲ್ಲಿ ಸಾಧಕನಾಗಲು ಸಾಧ್ಯ” ಎಂದರು.


ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗೋಪಾಲಕೃಷ್ಣ ಶಾಸ್ತ್ರಿ ಕೃತಿ ಬಿಡುಗಡೆಗೊಳಿಸಿ, “ಕವಿತ್ವವನ್ನು ಎಳೆಯದರಲ್ಲಿ ಗುರುತಿಸಿ ಪೋಷಿಸುತ್ತಿರುವುದು ಸ್ತುತ್ಯಾರ್ಹ” ಎಂದರು. ಹಿರಿಯ ಕವಿ, ಪತ್ರಕರ್ತ, ಗಡಿನಾಡ ಚೇತನ ಪ್ರಶಸ್ತಿ ಪುರಸ್ಕೃತ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಇವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ಹಾಗೂ ಲೇಖಕಿ ಪ್ರೇಮಾ ಆರ್. ಶೆಟ್ಟಿ ಮೂಲ್ಕಿ ಇವರು ಕೃತಿ ಪರಿಚಯಿಸಿದರು. ಶಿಕ್ಷಕರಾದ ಗಣೇಶ್ ಆಚಾರ್ಯ ಎಂ. ಇವರು ಅತಿಥಿಯಾಗಿದ್ದರು.

ಕ.ಸಾ.ಪ. ಕೇರಳ ಗಡಿನಾಡ ಘಟಕ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟಿತ್ತೋಡಿ, ಹಿರಿಯ ಸಾಹಿತಿ ಹರೀಶ್ ಪೆರ್ಲ, ಚುಟುಕು ಸಾಹಿತ್ಯ ಪರಿಷತ್ನ ದ.ಕ. ಜಿಲ್ಲಾಧ್ಯಕ್ಷ ಹರೀಶ್ ಸುಲಾಯ ಓಡ್ಡಂಬೆಟ್ಟು, ಹಿರಿಯ ಸಾಹಿತಿ ವ್ಯಂಗಚಿತ್ರಕಾರ ವೆಂಕಟ ಭಟ್ ಎಡನೀರು, ಎಣ್ಮಕಜೆ ಗ್ರಾ.ಪಂ.ಮಾಜಿ ಅಧ್ಯಕ್ಷೆ ಪುಷ್ಪಾ ಅಮೆಕ್ಕಳ, ಸಾಹಿತಿ ಉಪನ್ಯಾಸಕ ಬಾಲಕೃಷ್ಣ ಬೇರಿಕೆ, ಪತ್ರಕರ್ತ ಜಯ ಮಣಿಯಂಪಾರೆ, ಕೃತಿಗಾರ್ತಿ ಹರ್ಷಿತಾ ಪೆರ್ಲ, ಕುಮಾರಿ ಪೃಥ್ವಿ ಕೆ. ಮೊದಲಾದವರು ಉಪಸ್ಥಿತರಿದ್ದರು. ಶಿಕ್ಷಕಿ ಜ್ಯೋತ್ಸಾ ಎಂ. ಕಡಂದೇಲು ಸ್ವಾಗತಿಸಿ, ನಿವೃತ್ತ ಶಿಕ್ಷಕಿ ವಿಜಯ ಕಾನ ವಂದಿಸಿ, ಶಿಕ್ಷಕಿ ಪವಿತ್ರಾ ದಿನೇಶ್ ನಿರೂಪಿಸಿದರು. ಸವಿಹೃದಯದ ಕವಿಮಿತ್ರರು ವೇದಿಕೆ ಸಂಚಾಲಕ ಸುಭಾಷ್ ಪೆರ್ಲ ಪ್ರಸ್ತಾವನೆಗೈದರು. ಸಭಾ ಕಾರ್ಯಕ್ರಮದ ಬಳಿಕ ನಡೆದ ‘ಕವಿ ಕಾವ್ಯ ಸಂವಾದ’ದಲ್ಲಿ ಖ್ಯಾತ ಕವಿಗಳಿಂದ ಸ್ವರಚಿತ ಕವಿತೆಗಳು ಪ್ರಸ್ತುತಗೊಂಡವು. ನಿರ್ಮಲಾ ಸೇಸಪ್ಪ ಖಂಡಿಗೆ ಕಾರ್ಯಕ್ರಮ ನಿರ್ವಹಿಸಿದರು.

ಹರ್ಷಿತಾ ಪೆರ್ಲ ಇವರ ‘ಚಿಗುರು’ ಕವನ ಸಂಕಲನ ಕೃತಿಗಾಗಿ 7592967486 ಸಂಖ್ಯೆಗೆ ಸಂಪರ್ಕಿಸಿರಿ.
