ಗೌತಮ ಮತ್ತು ಅಹಲ್ಯೆಯ ಕಥೆ ಯಾರಿಗೆ ತಿಳಿದಿಲ್ಲ. ಆದರೆ ಈ ಯುಗದ ಅಹಲ್ಯೆ ಗೌತಮರದು ಬೇರೆಯದೇ ಕಥೆ. ಅಂದು ಅಹಲ್ಯೆಯನು ಗೌತಮ ಕಲ್ಲಾಗಿಸಿದರೆ ಇಂದು ಕಲ್ಲಾಗಲು ಹೊರಟಿರುವ ಗೌತಮನನ್ನು ಮತ್ತೆ ಮಾನವನನ್ನಗಿಸುವ ಕೆಲಸ ಅಹಲ್ಯೆಯದು. ದೇವರು ನಿಜವಾಗಿಯೂ ಇರುವನೇ? ಇಲ್ಲದಿರೆ ಅವನು ನಮ್ಮೊಂದಿಗೆ ಸದಾ ಇರಲಾಗದೆಂದು ತಾಯಿ, ಹೆಂಡತಿ, ಮಗಳನ್ನು ನೀಡುವನಂತೆ ಎಂದು ಕೇಳಿದ್ದೇವೆ. ಹಾಗಾದರೆ ನಮ್ಮ ಬದುಕಿನ ಆಶಾಕಿರವಾಗಿ ಬರುವ ಅವರು ನಿಜವಾಗಿಯೂ ದೇವರ ಪ್ರತಿರೂಪವೇ? ಹಾಗಾದರೆ ಗಾಡ್ is not ರೀಚಬಲ್ ಅಥವಾ ರೀಚಬಲ್ ಎನ್ನುವುದು ಕಾದಂಬರಿಯ ಶೀರ್ಷಿಕೆಯಂತೆ ಅದ್ಭುತವಾಗಿ ನಮ್ಮನ್ನು ಬೇರೊಂದು ಲೋಕಕ್ಕೆ ಕರೆದೊಯ್ದು ದೇವರ ಅಸ್ಥಿತ್ವ ತೋರಿಸುವ ಕಾರ್ಯವೆನೋ?! ರವೀಂದ್ರ ಮುದ್ದಿಯವರ ಗಾಡ್ is not ರೀಚಬಲ್ ಓದುವ ಖುಷಿ ಈ ಸದ್ಯ ಸಿಕ್ಕಿತು. ಇದುವರೆಗೂ ಕವನ ಸಂಕಲನ, ಎರಡು ಕಥಾ ಸಂಕಲನ ಪ್ರಕಟಿಸಿರುವ ಲೇಖಕರ ಮೊದಲ ಕಾದಂಬರಿ ಇದು.
ಗಂಗೊಳ್ಳಿ, ಕುಂದಾಪುರ, ಮುಂಬಯಿ, ಕಾಶಿ ಹೀಗೆ ಕುಳಿತ್ತಲೇ ನಮ್ಮನ್ನು ಸುತ್ತಾಡಿಸಿ ಅಲ್ಲಿಯ ಪ್ರಕೃತಿ ದರ್ಶನ, ದೇವರ ಭೇಟಿ, ಅಲ್ಲಿಯ ಪದ್ಧತಿ, ವಡಾಪಾವ್, ನೀರುದೋಸೆ ಎಂದು ಅಲ್ಲಿನ ತಿನಿಸುಗಳ ನಿಮಗೆ ತಿನ್ನಿಸಿ, ಬಾಯಲ್ಲಿ ನೀರೂರಿಸುತ್ತಾ ನೀವು ಓದುತ್ತಾ ಸಾಗಿದರೆ ರಸದೌತಣದ ಅನುಭೂತಿ ಸಿಗುತ್ತದೆ. ವಸುಧೇಂದ್ರ ಕೃತಿಯಲ್ಲಿ ಕಾಶಿಯ ಘಾಟ್ ಗಳ ಕಥೆ ಓದಿದಾಗ ಸಿಕ್ಕ ಅಲ್ಲಿನ ಅನುಭವದಂತೆ ಇಲ್ಲಿ ಕೂಡ ಕಾಶಿಯ ಬೀದಿಗಳಲ್ಲಿ ನಮಗೆ ನಡೆದಾಡುವ ಸರದಿ.ಅಲ್ಲಿನ ದೇವರ ದರ್ಶನ ಮಾಡಿಸಿ ಕುಳಿತಲ್ಲೇ ಜ್ಯೋತಿರ್ಲಿಂಗ ದರ್ಶನ ಮಾಡಿಸುವ ಲೇಖಕರು ಅಲ್ಲಿನ ಜೀವನ ಹೀಗೆ ಕಾಶಿಯ ವರ್ಣನೆಯನ್ನು ಮಾಡಿರುವ ಕುರಿತು ವರ್ಣಿಸಲು ಪದಗಳೇ ಸಾಲದೇನೋ!
ಗೌತಮನ ತಾಯಿ ತನ್ನವರನ್ನೆಲ್ಲ ಕಳೆದುಕೊಂಡು ಉಳಿದ ಗೌತಮನೊಂದಿಗೆ, ಅನಾಥನಾದ ಸುಬ್ರಹ್ಮಣ್ಯನನ್ನು ಕೈಹಿಡಿದು ಕರೆದುಕೊಂಡು ಬಂದು ಅವನನ್ನು ತನ್ನ ಮಗನಂತೆ ಬೆಳೆಸಿದ ಪರಿ, ಬಡತನದಲ್ಲೂ ಅವಳ ಹೃದಯ ಶ್ರೀಮಂತಿಕೆಯನ್ನು ಎತ್ತಿತೋರಿಸುತ್ತದೆ. ಎರಡು ಕಣ್ಣಿನಂತೆ ಅವರನ್ನು ಬೆಳೆಸಿ ಉತ್ತಮ ನಾಗರೀಕನಾಗಿಸಲು ಅವಳು ಪಣತೊಟ್ಟರೆ ಸಾಧ್ಯವಾದೀತೆ? ಮಗ ಡ್ರಗ್ಸ್ ವ್ಯಾಪಾರ ಮಾಡುವ ಕಳ್ಳನಾದರೆ ಇನ್ನೊಬ್ಬ ಮಗ ಪೋಲಿಸ್ ಇದೆಂತಹ ಕಥೆಯಾಯಿತು ಎನಿಸುವಷ್ಟರಲ್ಲಿ ಹಲವು ತಿರುವುಗಳು. ಮುಂಬಯಿಯಿಂದ ಗಂಗೊಳ್ಳಿಯವರೆಗೆ ದೋಣಿಯಲ್ಲಿ ಪಯಣ, ಅವಳನ್ನು ಕೋಟೆಶ್ವರಕ್ಕೆ ಕರೆದುಕೊಂಡು ಹೋಗುವ ಪರಿ, ಹೀಗೆ ಕುಂದಾಪುರದ ಸುತ್ತಲಿನ ಚಿತ್ರಣ ನೀಡುತ್ತಾ ಸಾಗುವ ಲೇಖಕರು ಕುಂದಾಪುರದ ಮೀನಿನ ಘಮಘಮ ಸುವಾಸನೆ ಎಂದು ಬಣ್ಣಿಸುತ್ತಾ ಸಾಗುವರು.
ಕಾಶಿಗೆ ಅಹಲ್ಯೆ ದೇವರನ್ನು ಹುಡುಕಿ ಹೊರಟರೆ ಅವಳಿಗೆ ದೇವರು ಸಿಕ್ಕರೆ? ಸಿಕ್ಕರೆ ಯಾವ ಸ್ಥಿತಿಯಲ್ಲಿ?! ತಂದೆ ತಾಯಿಯನ್ನು ಚಿಕ್ಕಂದಿನಲ್ಲೇ ಕಳೆದುಕೊಂಡು ತನ್ನ ಹೆತ್ತವರ ಬಗ್ಗೆ ಕೇಳಿದಾಗ ಅವಳಿಗೆ ಸಿಕ್ಕ ಉತ್ತರ ಅವರು ದೇವರನ್ನು ನೋಡಲು ಹೋಗಿದ್ದಾರೆ. ಇನ್ನು ಸ್ವಲ್ಪ ಕಾಲದಲ್ಲಿ ಬರುವರು. ದೇವರ ಬಗ್ಗೆ ಅವಳಿಗೆ ಆಗಲಿಂದಲೂ ಕುತೂಹಲ. ಇನ್ನೂ ದೇವರ ಬಗ್ಗೆ ನಾಯಕ ವಿವರಿಸುವ ರೀತಿಯೋ ಅದ್ಭುತ. ಅವರ ಮನೆದೇವರು, ಕೆಂಪು ಬಣ್ಣದ ವಸ್ತ್ರದಲ್ಲಿ ಸುತ್ತಿಟ ಅವರ ಮನೆಯವರು ಪೂಜಿಸಿಕೊಂಡು ಬಂದಿರುವ ಹಾಳೆಗಳು, ಅವನ್ನು ರಕ್ಷಿಸಲು ಬರುವ ನಾಗರಹಾವು ಹೀಗೆ ದೇವರ ಸುತ್ತ ನಮ್ಮನ್ನು ಕಾಡಿಸುತ್ತಾ ಓದಿಸಿಕೊಂಡು ಹೋಗುವ ನಮ್ಮ ಕುತೂಹಲ ಅಹಲ್ಯೆಗೆ ದೇವರು ಕುರಿತು ಇರುವ ಕುತೂಹಲಕ್ಕಿಂತ ದೊಡ್ಡದೇ ಏನೋ?!
ಕಾಶಿಗೆ ಹೋಗುವೆನು ಎಂದು ಪತ್ರ ಬರೆದಿಟ್ಟು ಹೋದ ಅಹಲ್ಯೆ, ಮನೆಯ ಬಿಟ್ಟು ಹೋದ ಅಮ್ಮ ಹೀಗೆ ಇಬ್ಬರೂ ಅವನ್ನು ದೂರ ಮಾಡಿ ಹೋದಾಗ ಅವನಿಗಾಗುವ ನೋವು ಅಷ್ಟಿಷ್ಟಲ್ಲ. ಅಮ್ಮ ಹೋದದ್ದು ಎಲ್ಲಿ ಎಂದು ತಿಳಿದಿದ್ದರೆ ಹುಡುಕುತ್ತಾ ಸಾಗುತ್ತಿದ್ದನೇನೋ! ಅಹಲ್ಯೆ ಬರೆದಿಟ್ಟು ಹೋದಳಲ್ಲ. ಅದಕ್ಕಾಗಿ ಅವಳನ್ನು ಹುಡುಕಿ ನಾಯಕ ಹೊರಟರೆ ನಾಯಕಿಯ ಭೇಟಿಯಾದೀತೇ? ಅಷ್ಟು ಕ್ಲಿಷ್ಟದ ಕಾಶಿ ಪಟ್ಟಣದ ಬೀದಿಗಳಲ್ಲಿ ನಾಯಕಿಗೆ ದೇವರು ಸಿಕ್ಕರೆ? ಹೀಗೆ ನೂರಾರು ಪ್ರಶ್ನೆಗಳಿಗೆ ನೀವು ಕಾದಂಬರಿ ಓದಿದರೆ ಸಿಗುವುದು ಉತ್ತರ.
ಪುಸ್ತಕ : ಗಾಡ್ is not ರೀಚಬಲ್
ಲೇಖಕರು : ರವೀಂದ್ರ ಮುದ್ದಿ
ಬೆಲೆ : 175/-
ಪುಟ : 128+4
ಪ್ರಕಾಶನ : ಮುದ್ದಿ ಮೈಂಡ್ಸ್

ವಿಮರ್ಶಕಿ : ಸಾವಿತ್ರಿ ಶ್ಯಾನುಭಾಗ
ಮಲೆನಾಡಿನ ಸಿರ್ಸಿ ಊರಿನವರಾದ ಸಾವಿತ್ರಿ ಶಾನುಭಾಗ್ ಬೆಂಗಳೂರಿನಲ್ಲಿ ಏಳು ವರುಷ ಸಾಫ್ಟ್ವೇರ್ ಕ್ಷೇತ್ರದಲ್ಲಿ ಕೆಲಸ ಮಾಡಿ ಈಗ ಗೃಹಿಣಿಯಾಗಿ ಓದುವ ಬರೆಯುವ ಹವ್ಯಾಸವನ್ನು ಮುಂದುವರಿದಿದ್ದಾರೆ. ಇದುವರೆಗೂ ಮಹಿಳೆಯರು, ಅವರ ಜೀವನದ ಬಗ್ಗೆ ಬರಹಗಳನ್ನು ಬರೆದು, ಅವುಗಳ ಕಿರುಪರಿಚಯ ಬರೆಯುವ ಹವ್ಯಾಸವನ್ನು ರೂಢಿಸಿಕೊಂಡಿದ್ದಾರೆ. ಮಕ್ಕಳೊಂದಿಗೆ ಕಾಲ ಕಳೆಯುತ್ತಾ ಅವರ ಆಟೋಟಗಳಲ್ಲೇ ಸಮಯ ಕಳೆಯುತ್ತಾ ಅವರ ಕುರಿತು, ಅವರನ್ನು ನಿಭಾಯಿಸುವ ಕುರಿತು ಬರೆಯುವುದೆಂದರೆ ಅವರಿಗೆ ಅಚ್ಚುಮೆಚ್ಚು. ಇವರ ಲೇಖನಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
