ಮೈಸೂರಿನ ಖ್ಯಾತ ಹಿಂದುಸ್ತಾನಿ ಗಾಯಕ ಪಂಡಿತ್ ವೀರಭದ್ರಯ್ಯ ಹಿರೇಮಠರವರ 60 ತುಂಬಿದ ಸಂದರ್ಭದ ಅಭಿನಂದನಾ ಕೃತಿ ಈ ‘ಸ್ವರ ಸೃಷ್ಟಿ’. ಡಾ. ಎಂ.ಸಿ. ಮನೋಹರರವರ ಸಂಪಾದಕತ್ವದಲ್ಲಿ ಇತ್ತೀಚೆಗೆ ಹೊರಬಂದ ಈ ಕೃತಿ ಚಿಕ್ಕದಾಗಿ ಚೊಕ್ಕದಾಗಿ ಹಾಗೂ ಹೇಳಬೇಕಾದದ್ದನ್ನು ಸಮರ್ಪಕವಾಗಿ ಹೇಳಿದ ಕೃತಿ. ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಯರಗಲ್ ಪ್ರದೇಶದಲ್ಲಿ ಹುಟ್ಟಿ ನಂತರ ಗದಗಿನ ಶ್ರೀ ವೀರೇಶ್ವರ ಆಶ್ರಮದಲ್ಲಿ ಪಂಡಿತ್ ಪುಟ್ಟರಾಜ ಗವಾಯಿಗಳ ಮಾರ್ಗದರ್ಶನದಲ್ಲಿ ಹತ್ತು ವರ್ಷಗಳ ಸಂಗೀತಾಭ್ಯಾಸ ಮಾಡಿ, 1993ರಲ್ಲಿ ಮೈಸೂರು ನಗರಕ್ಕೆ ಬಂದು ಇಲ್ಲಿ ಹಿಂದುಸ್ತಾನಿ ಸಂಗೀತ ಪರಂಪರೆಯನ್ನು ಕಟ್ಟಿ ಬೆಳೆಸಿದ ಪಂಡಿತ್ ವೀರಭದ್ರಯ್ಯ ಹಿರೇಮಠರವನ್ನು ಅವರ ಆಪ್ತ ಬಳಗ ಗುರುತಿಸಿಕೊಂಡ ಹಲವು ವಿಷಯಗಳನ್ನು ದಾಖಲಿಸಿದ ಕೃತಿ ಇದು. ಇಲ್ಲಿ ಹಿರೇಮಠರ ಪ್ರಭಾವಲಯದಲ್ಲಿ ಗುರುತಿಸಿಕೊಂಡ ಸುಮಾರು ಮೂವತ್ಕಾಲ್ಕು ಹಿರಿಯ ಕಿರಿಯ ಸಹೃದಯರ ಬರಹಗಳಿವೆ. ಎಲ್ಲ ಬರಹಗಳು ಭಿನ್ನವಾಗಿದ್ದು ಪಂ. ಹಿರೇಮಠರನ್ನು ಹತ್ತಿರದಿಂದ ನೋಡಿದ ಅವರ ಬದುಕಿನ ಸಾಧನೆಗಳ ಒಳಹೊರಗನ್ನು ಗಮನಿಸಿದ ಬರಹಗಳಾಗಿವೆ.
ಪಂಡಿತ್ ಹಿರೇಮಠರ ಬದುಕಿನ ಆರಂಭ ಬಡತನದ್ದಾದರೂ ತುಂಬು ಕುಟುಂಬದೊಳಗಿನ ಖುಷಿಗೆ ಕೊರತೆ ಇಲ್ಲದಂತದ್ದು. ತನ್ನ ಏಳನೇ ತರಗತಿಯ ಶಾಲಾ ಶಿಕ್ಷಣ ಮುಗಿಸಿದ ನಂತರ ಹೊರಳಿದ ಸಂಗೀತದ ದಾರಿ, ಅದನ್ನವರು ಬಳಸಿಕೊಂಡ ರೀತಿ, ಅಲ್ಲಿಂದ ಮೈಸೂರಿನಲ್ಲಿ ಸಂಗೀತ ಶಿಕ್ಷಕರಾಗಿ ತೊಡಗಿಕೊಂಡ ಹೊಸ ಬದುಕು, ಮೈಸೂರಿನಲ್ಲಿ ಹಿಂದುಸ್ತಾನಿ ಸಂಗೀತಾಭಿಮಾನವನ್ನು ಬೆಳೆಸಿದ ಪರಿ ಹೀಗೆ ಎಲ್ಲವನ್ನೂ ಒಂದಲ್ಲ ಒಂದು ಲೇಖನಗಳು ದಾಖಲಿಸಿವೆ. ಜೊತೆಗೆ ಪಂ. ಹಿರೇಮಠರ ವೈಯಕ್ತಿಕ ಬದುಕು, ಬದ್ದತೆ ಮತ್ತು ಗೌರವಾದರಗಳನ್ನೂ ಈ ಕೃತಿಯಲ್ಲಿ ಬರೆದ ಲೇಖಕರು ಬಿಚ್ಚಿಟ್ಟಿದ್ದಾರೆ.
60ರ ಹುಟ್ಟುಹಬ್ಬದ ನೆಪವಾಗಿಟ್ಟುಕೊಂಡು ಪಂ. ವೀರಭದ್ರಯ್ಯ ಹಿರೇಮಠರವರು ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅವರು ನಿಷ್ಪುರ್ಹವಾಗಿ ಕಟ್ಟಿ ಬೆಳೆಸಿದ ಸಂಗೀತ ಸಂಸ್ಥೆ, ಪ್ರೇರೇಪಿಸಿ ಬೆಳೆಸಿದ ಶಿಷ್ಯವೃಂದ, ಇವರು ಅಬಾರಿಯಾಗಿ ತಲೆಬಾಗಬೇಕಾದ ಪಂ. ಪುಟ್ಟರಾಜ ಗವಾಯಿಗಳು, ಪಂ. ಇಂದೂಧರ ನಿರೋಡಿ ಹೀಗೆ ನೆನಸುವ ಕಾರ್ಯವೂ ಈ ಪುಟ್ಟ ಕೃತಿಯ ಮೂಲಕ ಅತ್ಯಂತ ಪ್ರಂಜಲವಾಗಿ ನಡೆದಿದೆ. ಒಟ್ಟಿನಲ್ಲಿ ಪುಟಗಳ ಮಿತಿಯನ್ನು ಮೀರಿ ಹೇಗೆ ಪ್ರಾಮಾಣಿಕ ವ್ಯಕ್ತಿತ್ವವೊಂದಕ್ಕೆ ಅಷ್ಟೇ ಪ್ರಾಮಾಣಿಕವಾಗಿ ಬರಹದ ಮೂಲಕ ಅತ್ಮೀಯ ಅಭಿನಂದನೆ ಸಲ್ಲಿಸಬಹುದು ಎನ್ನುವುದಕ್ಕೆ ಈ ಕೃತಿ ಸಾಕ್ಷಿಯಾಗಿದೆ. ಇದರ ಜೊತೆಗೆ ಕೃತಿ ಅರ್ಪಣಾ ಕಾರ್ಯಕ್ರಮದಲ್ಲಿ ‘ಕನ್ನಡಿ ಕ್ರಿಯೇಷನ್’ನ ಸಯೋಗದಲ್ಲಿ ಸುಮಾರು ಹದಿನೈದು ನಿಮಿಷಗಳ ಸಾಕ್ಷ್ಯಚಿತ್ರವನ್ನೂ ಡಾ. ಎಂ.ಸಿ. ಮನೋಹರರವರು ನಿರ್ದೇಶಿಸಿ ಅರ್ಪಿಸಿದ್ದಾರೆ. ಎರಡು ಮಹತ್ವದ ದಾಖಲೆ ಹಾಗೂ ಪಂ. ಹಿರೇಮಠರ ಅಭಿಮಾನಿ ಬಳಗವನ್ನು ಒಟ್ಟು ಸೇರಿಸುವ ಮೂಲಕ ಅರವತ್ತರ ನಂತರವೂ ಪಂ. ಹಿರೇಮಠರ ಕೆಲಸಕ್ಕೆ ಉತ್ಸಾಹ ತಂಬಿದ ಅಭಿನಂದನಾ ಸಮಿತಿ ಹಾಗೂ ಅವರ ಆಪ್ತೇಷ್ಟರು ಕೂಡ ಅಭಿನಂದನಾರ್ಹರು.
ಡಾ. ಸುಂದರ ಕೇನಾಜೆ
