ಬೆಂಗಳೂರು : ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ವತಿಯಿಂದ ಸಿ.ಜಿ. ಕೃಷ್ಣಸ್ವಾಮಿ 75ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ದಿನಾಂಕ 27 ಜೂನ್ 2026ರಂದು ಮಧ್ಯಾಹ್ನ 3-30 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ.
ಮಧ್ಯಾಹ್ನ 3-30 ಗಂಟೆಗೆ ಡಾ. ಟಿ.ಹೆಚ್. ಲವಕುಮಾರ್ ಇವರ ನಿರ್ದೇಶನದಲ್ಲಿ ಬೆಂಗಳೂರಿನ ಹಶ್ಮಿ ಥಿಯೇಟರ್ ತಂಡದಿಂದ ‘ಬೆಲ್ಚಿ’, ಲಕ್ಷ್ ಇವರ ನಿರ್ದೇಶನದಲ್ಲಿ ಬೆಂಗಳೂರಿನ ಅಭಿನಯತರಂಗ ತಂಡದಿಂದ ‘ಸೆನ್ಸ್’ ಮತ್ತು ಗುರುವ ಶೇಷಗಿರಿ ಇವರ ನಿರ್ದೇಶನದಲ್ಲಿ ಬೆಂಗಳೂರಿನ ರೇವಾ ವಿಶ್ವವಿದ್ಯಾಲಯ ತಂಡದಿಂದ ‘ಆಪರೇಷನ್ ಸಿಂಧೂರ’ ಬೀದಿ ನಾಟಕಗಳ ಪ್ರದರ್ಶನ ಹಾಗೂ ಚಂಕರ ತಂಡ ಆಕಾಶವಾಣಿ ಬೆಂಗಳೂರು ಮತ್ತು ನಾಟಕ ಬೆಂಗಳೂರು ತಂಡಗಳಿಂದ ರಂಗ ಗೀತೆಗಳ ಗಾಯನ ನಡೆಯಲಿದೆ. ಸಿ.ಜಿ.ಕೆ. 75 ಚಿಂತನ ಮಂಥನ ಉದ್ಘಾಟನಾ ಸಮಾರಂಭದ ಉದ್ಘಾಟನೆಯನ್ನು ಪ್ರಸಿದ್ಧ ಹಿರಿಯ ವಿದ್ವಾಂಸರಾದ ಡಾ. ಬರಗೂರು ರಾಮಚಂದ್ರಪ್ಪ ಇವರು ಮಾಡಲಿದ್ದು, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾದ ಡಾ. ಕೆ.ವಿ. ನಾಗರಾಜಮೂರ್ತಿ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಸಿ.ಜಿ.ಕೆ.ಯವರ ಧರ್ಮಪತ್ನಿ ಶ್ರೀಮತಿ ಜಯಲಕ್ಷ್ಮಿ ಸಿ.ಜಿ.ಕೆ., ವಿಶ್ರಾಂತ ಕುಲಪತಿಗಳಾದ ಪ್ರೊ. ನಾಗೇಶ್ ವಿ. ಬೆಟ್ಟಕೋಟೆ, ಹಿರಿಯ ಪತ್ರಕರ್ತರಾದ ಜಿ.ಎನ್. ಮೋಹನ್ ಹಾಗೂ ರಂಗಭೂಮಿ ಕಲಾವಿದರಾದ ಮುರುಡಯ್ಯ ಮತ್ತು ವಿಠ್ಠಲ ರಾವ್ ಇವರಿಗೆ ರಂಗ ಗೌರವ ನೀಡಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಶಿವಮೊಗ್ಗ ರಂಗಾಯಣ ಪ್ರಸ್ತುತ ಪಡಿಸುವ ‘ಸ್ವಾತಂತ್ರ್ಯದ ಓಟ’ ನಾಟಕ ಪ್ರದರ್ಶನ ನಡೆಯಲಿದೆ.

