ಸುರತ್ಕಲ್ : ಮಣಿ ಕೃಷ್ಣಸ್ವಾಮಿ ಅಕಾಡೆಮಿ ಮತ್ತು ನಾಗರಿಕ ಸಲಹಾ ಸಮಿತಿ (ರಿ.) ಸುರತ್ಕಲ್ ಸಹಯೋಗದಲ್ಲಿ ಸುರತ್ಕಲ್ ನ ಶ್ರೀ ವಿಶ್ವೇಶತೀರ್ಥ ಸಭಾಂಗಣದಲ್ಲಿ ದಿನಾಂಕ 15 ಮಾರ್ಚ್ 2026ರಂದು ಆಯೋಜಿಸಿದ್ದ ಕರ್ನಾಟಕ ಸಂಗೀತ ನೃತ್ಯ ಆಕಾಡೆಮಿಯ ‘ಕರ್ನಾಟಕ ಕಲಾ ಶ್ರೀ ಪುರಸ್ಕಾರ’ಕ್ಕೆ ಆಯ್ಕೆಯಾಗಿರುವ ಹಿರಿಯ ನಾದಸ್ವರ ಕಲಾವಿದೆ ವಿದ್ವಾನ್ ನಾಗೇಶ್ ಎ. ಬಪ್ಪನಾಡು ಇವರ ಅಭಿನಂದನೆ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಗೂ ಭರತನಾಟ್ಯ ಕಾರ್ಯಕ್ರಮ ನಡೆಯಿತು
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಹಿರಿಯ ಸಾಂಸ್ಕೃತಿಕ ಸಂಘಟಕ ಬಿ. ಭುಜಬಲಿ ಧರ್ಮಸ್ಥಳ “ಮನೆ ಮನೆಗಳಲ್ಲಿ ಶಾಸ್ತ್ರೀಯ ಸಂಗೀತದ ಸ್ವರ ಕೇಳಿ ಬರಬೇಕಾಗಿದ್ದು, ಇದು ಕಲಾ ಗೌರವವಾಗಿದೆ. ಹಿರಿಯ ಸಂಗೀತ ಕಲಾವಿದ ಅರವಿಂದ ಹೆಬ್ಬಾರ್ ಅಭಿನಂದಿಸಿ ಹಿರಿಯ ತಲೆಮಾರಿನ ಸಂಗೀತ ಸಂಘಟಕರು ಶಾಸ್ತ್ರೀಯ ಸಂಗೀತದ ಪರಂಪರೆಯನ್ನು ರೂಪಿಸಿದ್ದು ಉತ್ತಮ ಸಂಗೀತ ಕಲಾವಿದರು ರೂಪುಗೊಂಡಿದ್ದಾರೆ” ಎಂದು ನುಡಿದರು.

ಮಣಿ ಕೃಷ್ಣಸ್ವಾಮಿ ಅಕಾಡೆಮಿಯ ಗೌರವ ಅಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಅವರ ಉಪಸ್ಥಿತಿಯಲ್ಲಿ ಸಮ್ಮಾನ ಸ್ವೀಕರಿಸಿ ಮಾತನಾಡಿದ ವಿದ್ವಾನ್ ನಾಗೇಶ್ ಎ. ಬಪ್ಪನಾಡು ಇವರು ತಮ್ಮ ಕಲಾ ಪಯಣದಲ್ಲಿ ಪ್ರೋತ್ಸಾಹಿದ ಸಹೃದಯರನ್ನು ಸ್ಮರಿಸಿಕೊಂಡರು. ಮುಖ್ಯ ಅತಿಥಿಯಾದ ಉಡುಪಿಯ ಸ೦ಗಮ ಸಂಗೀತ ವಿದ್ಯಾಲಯದ ವಿದುಷಿ ವಾರಿಜಾಕ್ಷಿ ಆರ್. ಭಟ್ ಶುಭ ಹಾರೈಸಿದರು.
ನಾಗರಿಕ ಸಲಹಾ ಸಮಿತಿಯ ಅಧ್ಯಕ್ಷ ಡಾ. ಕೆ. ರಾಜಮೋಹನ್ ರಾವ್, ಮಣಿ ಕೃಷ್ಣಸ್ವಾಮಿ ಅಕಾಡೆಮಿಯ ವಿಭು ರಾವ್ ಮತ್ತು ಕೃಷ್ಣಕುಮಾರಿ ಉಪಸ್ಥಿತರಿದ್ದರು. ಅಕಾಡೆಮಿಯ ಕಾರ್ಯದರ್ಶಿ ಪಿ. ನಿತ್ಯಾನಂದ ರಾವ್ ಸ್ವಾಗತಿಸಿದರು. ಉಡುಪಿಯ ಪ್ರಜ್ಞಾ ಅಡಿಗ ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಿತು. ವಯಲಿನ್ನಲ್ಲಿ ತನ್ಮಯಿ ಉಪ್ಪಂಗಳ, ಮೃದಂಗದಲ್ಲಿ ಪ್ರಹ್ಲಾದ್ ವರಾಹಸ್ವಾಮಿ ಮತ್ತು ಖಂಜೀರದಲ್ಲಿ ಕಾರ್ತಿಕ್ ಭಟ್ ಇನ್ನಂಜೆ ಸಹಕರಿಸಿದರು. ಬಳಿಕ ಮಂಗಳೂರಿನ ರಶ್ಮಿ ಉಡುಪ ಇವರಿಂದ ಭರತ ನಾಟ್ಯ ಪ್ರದರ್ಶನ ನಡೆಯಿತು.
