ಬೆಳಗಾವಿ : ರಂಗಸಂಪದ (ರಿ.) ಬೆಳಗಾವಿ ಇವರ ಆಶ್ರಯದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ’, ‘ರಂಗಸಖ ಪ್ರಶಸ್ತಿ 2026’ ಪ್ರದಾನ ಮತ್ತು ಮೂರು ದಿನಗಳ ‘ಚೈತ್ರ ನಾಟಕೋತ್ಸವ’ ಕಾರ್ಯಕ್ರಮವನ್ನು ದಿನಾಂಕ 27ರಿಂದ 29 ಮಾರ್ಚ್ 2026ರವರೆಗೆ ಬೆಳಗಾವಿಯ ಕೊನವಾಳ ಗಲ್ಲಿಯ ಲೋಕಮಾನ್ಯ ರಂಗ ಮಂದಿರದಲ್ಲಿ ಆಯೋಜಿಸಲಾಗಿದೆ.
ದಿನಾಂಕ 27 ಮಾರ್ಚ್ 2026ರಂದು ಸಂಜೆ ಗಂಟೆ 5-30ಕ್ಕೆ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮ ನಡೆಯಲಿದ್ದು, ಸಾಹಿತಿ ಡಾ. ಸರಜೂ ಕಾಟಕರ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಯಾಗಿ ಭಾರತೀಯ ಜೀವ ವಿಮೆ ನಿಗಮದ ಬೆಳಗಾವಿ ವಿಭಾಗದ ಹಿರಿಯ ಅಧಿಕಾರಿ ಬಿ.ಪಿ. ರವಿ ಭಾಗವಹಿಸಲಿದ್ದಾರೆ. ಕಲಾವಿದ ವಿನಯ ಕುಲಕರ್ಣಿ ಇವರಿಗೆ ‘ರಂಗಸಖ’ ಪ್ರಶಸ್ತಿ ಪ್ರದಾನ ಹಾಗೂ ರಾಜೇಂದ್ರ ಸೈ ಬಣ್ಣ ವರ ಮತ್ತು ದೇವಪ್ಪ ನಾಯಕ ಇವರಿಗೆ ವಿಶೇಷ ಗೌರವ ಸನ್ಮಾನ ಮಾಡಲಾಗುವುದು. ಸಭಾ ಕಾರ್ಯಕ್ರಮ ಬಳಿಕ ಬೆಂಗಳೂರಿನ ಕಾಜಾಣ ತಂಡದಿಂದ ಡಾ. ಎಸ್.ಎಲ್.ಎನ್. ಸ್ವಾಮಿ ಇವರ ನಿರ್ದೇಶನದಲ್ಲಿ ‘ಪಂಚಗವ್ಯ’ ಏಕವ್ಯಕ್ತಿ ಪ್ರದರ್ಶನ ನಡೆಯಲಿದೆ.
ದಿನಾಂಕ 28 ಮಾರ್ಚ್ 2026ರಂದು ಸಂಜೆ ಗಂಟೆ 6-30ಕ್ಕೆ ಬೆಳಗಾವಿಯ ರಂಗಸಂಪದ ತಂಡದಿಂದ ಡಾ. ಅರವಿಂದ ಕುಲಕರ್ಣಿ ಇವರ ನಿರ್ದೇಶನದಲ್ಲಿ ‘ಭಾನುಮತಿ’ ಪೌರಾಣಿಕ ನಾಟಕ ಪ್ರದರ್ಶನ ಹಾಗೂ ದಿನಾಂಕ 29 ಮಾರ್ಚ್ 2026ರಂದು ಸಂಜೆ ಗಂಟೆ 6-00ಕ್ಕೆ ಹನಿಗವಿ ಎಚ್. ಡುಂಡಿರಾಜ್ ಅವರ ನಾಟಕ ಪುಸ್ತಕ ಬಿಡುಗಡೆ ಮತ್ತು ಸಂವಾದ ಕಾರ್ಯಕ್ರಮವಿದೆ. ನಂತರ ಬೆಳಗಾವಿಯ ರಂಗಸಂಪದ ತಂಡದವರು ‘ಪುಕ್ಕಟೆ ಸಲಹೆ’ ನಾಟಕ ಪ್ರದರ್ಶಿಸುವರು. “ರಂಗಸಂಪದ ಹವ್ಯಾಸಿ ಕಲಾವಿದರ ತಂಡವಾಗಿದ್ದು, 47 ವರ್ಷಗಳ ಇತಿಹಾಸ ಹೊಂದಿದೆ. ಪ್ರತಿ ವರ್ಷ 10ರಿಂದ 12 ನಾಟಕ ಪ್ರದರ್ಶಿಸಲಾಗುತ್ತಿದೆ” ಎಂದು ರಂಗಸಂಪದ ಅಧ್ಯಕ್ಷ ಅರವಿಂದ ಕುಲಕರ್ಣಿ ತಿಳಿಸಿದ್ದಾರೆ.


