ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಇದರ ವತಿಯಿಂದ ದಿನಾಂಕ 26ರಿಂದ 28 ಮಾರ್ಚ್ 2026ರವರೆಗೆ ಬಂಟ್ವಾಳ ಬಿ.ಸಿ. ರೋಡ್ನ ಸ್ಪರ್ಶ ಕಲಾ ಮಂದಿರದಲ್ಲಿ ದಕ್ಷಿಣ ಕನ್ನಡ ಜಿಲ್ಲಾ 28ನೇ ‘ಕನ್ನಡ ಸಾಹಿತ್ಯ ಸಮ್ಮೇಳನ’ವನ್ನು ಹಮ್ಮಿಕೊಳ್ಳಲಾಗಿದೆ.
ಹಿರಿಯ ಬೈಕಂಪಾಡಿ ಪತ್ರಕರ್ತ, ಸಾಹಿತಿ ಚಿದಂಬರ ಬೈಕಂಪಾಡಿ ಸಮ್ಮೇಳನಾಧ್ಯಕ್ಷರಾಗಿದ್ದು, ತಂತ್ರಜ್ಞಾನ, ಸಾಹಿತ್ಯ, ಸಹಬಾಳ್ವೆ ಎಂಬ ಆಶಯದಲ್ಲಿ ರಾಣಿ ಅಬ್ಬಕ್ಕ ವೇದಿಕೆ, ಪಂಜೆ ಮಂಗೇಶರಾಯ ಸಭಾಂಗಣ, ಏರ್ಯ ಲಕ್ಷ್ಮೀನಾರಾಯಣ ಆಳ್ವ ಪುಸ್ತಕ ಮಳಿಗೆ ನಿರಂಜನ ವಸ್ತುಪ್ರದರ್ಶನ ಮಳಿಗೆಗಳಿವೆ. ಸಮ್ಮೇಳನದ ಪ್ರಧಾನ ದ್ವಾರಕ್ಕೆ ಸ್ವಾತಂತ್ರ್ಯ ಹೋರಾಟಗಾರ ಅಮ್ಮೆಂಬಳ ಬಾಳಪ್ಪ ಅವರ ಹೆಸರನ್ನಿಡಲಾಗುವುದು. 30ಕ್ಕೂ ಅಧಿಕ ಪುಸ್ತಕ ಮಳಿಗೆಗಳು, ವಸ್ತು ಸಂಗ್ರಹ ಪ್ರದರ್ಶನ, ಗುಡಿ ಕೈಗಾರಿಕೆ, ಕರಕುಶಲ, ಕೈಮಗ್ಗ, ಆಹಾರ ಸಹಿತ ವಿವಿಧ ಮಳಿಗೆಗಳು, ಪಟ್ಟಾಂಗ ಕಟ್ಟೆ, ಉತ್ತರ ಹೇಳಿ ಪುಸ್ತಕ ಗೆಲ್ಲಿ, ಗ್ರಾಮೀಣ ಪ್ರತಿಭೆಗಳ ನೃತ್ಯವಿರಲಿದೆ ಎಂದು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ತಿಳಿಸಿದ್ದಾರೆ.
ದಿನಾಂಕ 26 ಮಾರ್ಚ್ 2026ರಂದು ಸಂಜೆ ಗಂಟೆ 4-00ಕ್ಕೆ ಬಿ.ಸಿ.ರೋಡ್ ನ ಪೊಳಲಿ ದ್ವಾರದ ಬಳಿ ಕನ್ನಡ ಸಾಂಸ್ಕೃತಿಕ ದಿಬ್ಬಣವನ್ನು ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಪ್ರೊ. ತುಕಾರಾಮ ಪೂಜಾರಿ ಇವರು ಉದ್ಘಾಟಿಸುವರು. ಸಂಜೆ 6-00 ಗಂಟೆಗೆ ‘ಮೂರು ಮುತ್ತು’ ಕನ್ನಡ ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ.
ದಿನಾಂಕ 27 ಮಾರ್ಚ್ 2026ರಂದು ಬೆಳಗ್ಗೆ 8-00 ಗಂಟೆಗೆ ರಾಜೇಶ್ ಪೊಳಲಿ ಮತ್ತು ಬಳಗದವರಿಂದ ವಾದ್ಯ ಸಂಗೀತ, ಗಂಟೆ 9-00ರಿಂದ ರಾಷ್ಟ್ರ, ಪರಿಷತ್ ಹಾಗೂ ಸಮ್ಮೇಳನ ಧ್ವಜಾರೋಹಣ ನಡೆಯಲಿದೆ. ಬೆಳಗ್ಗೆ 9-45ಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಸಮ್ಮೇಳನ ಉದ್ಘಾಟಿಸಲಿದ್ದು, ಚಿದಂಬರ ಬೈಕಂಪಾಡಿ ಸಮ್ಮೇಳನಾಧ್ಯಕ್ಷತೆ ವಹಿಸುವರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಸಾಹಿತಿ ಡಾ. ಪ್ರಭಾಕರ ಶಿಶಿಲ ಭಾಗವಹಿಸುವರು. ಸ್ಮರಣ ಸಂಚಿಕೆಯನ್ನು ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಬಿಡುಗಡೆ ಮಾಡಲಿರುವರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಚಿವ ದಿನೇಶ್ ಗುಂಡೂರಾವ್, ವಸ್ತು ಪ್ರದರ್ಶನವನ್ನು ಸಂಸದ ಕ್ಯಾ, ಬ್ರಿಜೇಶ್ ಚೌಟ, ಪುಸ್ತಕ ಮಳಿಗೆಯನ್ನು ಶಾಸಕ ರಾಜೇಶ್ ನ್ಯಾಕ್ ಉದ್ಘಾಟಿಸುವರು. ಗಣ್ಯರು ಭಾಗವಹಿಸುವರು. ಮಧ್ಯಾಹ್ನ 12-00 ಗಂಟೆಗೆ ನಡೆಯುವ ಗೋಷ್ಠಿ 1ರಲ್ಲಿ ‘ದಕ್ಷಿಣ ಕನ್ನಡ ಜಿಲ್ಲೆಯ ಭಾಷಾ ಸಾಮರಸ್ಯ’ ಎಂಬ ವಿಷಯದ ಕುರಿತು ವಿಷಯ ಮಂಡನೆಯನ್ನು ತಾರಾನಾಥ ಗಟ್ಟಿ, ಜೋಕಿಂ ಸ್ಟ್ಯಾನಿ ಅಲ್ವಾರಿಸ್, ಉಮರ್ ಯು.ಹೆಚ್. ಮತ್ತು ಸದಾನಂದ ಮಾವಜಿ ಇವರುಗಳು ಮಾಡಲಿದ್ದಾರೆ. ಮಧ್ಯಾಹ್ನ 2-00 ಗಂಟೆಗೆ ನೂತನ 12 ಕೃತಿಗಳನ್ನು ವಿಶ್ರಾಂತ ಕುಲಪತಿ ಹಾಗೂ ವಿದ್ವಾಂಸ ಪ್ರೊ. ಕೆ. ಚಿನ್ನಪ್ಪ ಗೌಡ ಬಿಡುಗಡೆಗೊಳಿಸುವರು. ಮಧ್ಯಾಹ್ನ 2-30ರಿಂದ ವಿಶೇಷ ಉಪನ್ಯಾಸ -1ರಲ್ಲಿ ‘ಡಿ.ವಿ.ಜಿ.ಯವರ ಕಗ್ಗ ರಸಧಾರೆ’ ಎಂಬ ವಿಷಯದ ಬಗ್ಗೆ ಡಾ. ಪ್ರದೀಪ್ ಆಟಿಕುಕ್ಕೆ ನಾವೂರು ಉಪನ್ಯಾಸ ನೀಡಲಿದ್ದಾರೆ. ಗೋಷ್ಠಿ 2ರಲ್ಲಿ ‘ದಕ್ಷಿಣ ಕನ್ನಡ ಜಿಲ್ಲೆಯ ಸಾಹಿತ್ಯ ಸಂಸ್ಕೃತಿ’ ಎಂಬ ವಿಷಯದ ಬಗ್ಗೆ ಡಾ. ಅನುರಾಧಾ ಕುರುಂಜಿ ಮತ್ತು ಕೆ.ಎಂ. ಅಬೂಬಕ್ಕರ್ ಸಿದ್ದೀಕ್ ಮೊಂಟುಗೋಳಿ ಇವರು ವಿಷಯ ಮಂಡನೆ ಮಾಡಲಿದ್ದಾರೆ. ಗೋಷ್ಠಿ 3ರಲ್ಲಿ ಕವಿಗೋಷ್ಠಿ ವಾಚನ ಗಾಯನ ಕುಂಚ ಪ್ರಸ್ತುತಗೊಳ್ಳಲಿದೆ. ಸಂಜೆ 5-30 ಗಂಟೆಗೆ ಅಗಲಿದ ಗಣ್ಯರಿಗೆ ನುಡಿನಮನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ದಿನಾಂಕ 28 ಮಾರ್ಚ್ 2026ರಂದು ಬೆಳಗ್ಗೆ ಗಂಟೆ 8-00ರಿಂದ ಡಾ. ಎಂ.ಎಸ್. ಭಟ್, ಎಂ.ಎನ್. ಮಹೇಶ ಮತ್ತು ಬಳಗದ ಶಾಸ್ತ್ರೀಯ ಸಂಗೀತ ‘ಉದಯರಾಗ’, 9-00 ಗಂಟೆಗೆ ಗೋಷ್ಠಿ 4ರಲ್ಲಿ ‘ಸಾಹಿತ್ಯ : ಹೊಸ ತಲೆಮಾರು’ ಎಂಬ ವಿಷಯದ ಬಗ್ಗೆ ಪ್ರೊ. ಸುಬ್ಬಪ್ಪ ಕೈಕಂಬ ಮತ್ತು ಪ್ರೊ. ಗಿರೀಶ್ ಭಟ್ ಅಜಕ್ಕಳ ಇವರಿಂದ ವಿಷಯ ಮಂಡನೆ, ವಿಶೇಷ ಉಪನ್ಯಾಸ -2ರಲ್ಲಿ ‘ತಂತ್ರಜ್ಞಾನ-ಸಾಹಿತ್ಯ-ಸಹಬಾಳ್ವೆ’ ಎಂಬ ವಿಷಯದ ಬಗ್ಗೆ ಡಾ. ಪ್ರಭಾತ್ ಬಲ್ನಾಡ್ ಉಪನ್ಯಾಸ ನೀಡಲಿದ್ದಾರೆ. 10-00 ಗಂಟೆಗೆ ಭಿಡೆ ಸಹೋದರಿಯರಿಂದ ಭರತನಾಟ್ಯ ಪ್ರಸ್ತುತಿ, 11-00 ಗಂಟೆಗೆ ವಿಶೇಷ ಉಪನ್ಯಾಸ -3ರಲ್ಲಿ ‘ಕನ್ನಡ ಭಾಷೆಯಲ್ಲಿ ವೈದ್ಯ ವಿಜ್ಞಾನ ಮತ್ತು ವೈದ್ಯಕೀಯ ಕಲಿಕೆ’ ಕುರಿತು ಪ್ರೊ. ಆನಂದ್ ಬಂಗೇರ ಇವರಿಂದ ವಿಚಾರ ಮಂಡನೆ, ಬೆಳಗ್ಗೆ 11-30 ಗಂಟೆಗೆ ವಿಶೇಷ ಉಪನ್ಯಾಸ -4ರಲ್ಲಿ ‘ದ.ಕ. ಜಿಲ್ಲೆಯ ರಂಗಭೂಮಿ ಮತ್ತು ಬದುಕು : ಅವಲೋಕನ’ ಶಶಿರಾಜ್ ಕಾವೂರು ಇವರಿಂದ ವಿಚಾರ ಮಂಡನೆ ನಡೆಯಲಿದೆ. ಗಂಟೆ 12-15ಕ್ಕೆ ವಿಶೇಷ ಉಪನ್ಯಾಸ -5ರಲ್ಲಿ ‘ಕನ್ನಡ ಮಾಧ್ಯಮ ಶಾಲೆಗಳ ವಾಸ್ತವ ಮತ್ತು ಭವಿಷ್ಯ’ ಕುರಿತು ವಿಚಾರ ಮಂಡನೆ ಡಾ. ಚಂದ್ರಶೇಖರ ದಾಮ್ಲೆ ಇವರಿಂದ, ಗಂಟೆ 12-45ರಿಂದ ‘ಶ್ರೀಕೃಷ್ಣ ಭಕ್ತಿ’ ಎಂಬ ಗಮಕ ಪ್ರಸ್ತುತಿ, 2-00 ಗಂಟೆಗೆ ವಿಶೇಷ ಉಪನ್ಯಾಸ -6ರಲ್ಲಿ ‘ಹಳೆಗನ್ನಡ ಸಾಹಿತ್ಯದ ರಸಧಾರೆ’ ಕುರಿತು ಪ್ರೊ. ಎಂ. ಬಾಲಕೃಷ್ಣ ಶೆಟ್ಟಿ ಇವರಿಂದ ವಿಚಾರ ಮಂಡನೆ, ಮಧ್ಯಾಹ್ನ 2-30ರಿಂದ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ ಹಾಗೂ 3-00 ಗಂಟೆಗೆ ಬಹಿರಂಗ ಅಧಿವೇಶನ ನಡೆಯಲಿದೆ. ಸಂಜೆ 4-00ರಿಂದ ಸಮಾರೋಪ ಸಮಾರಂಭ ನಡೆಯಲಿರುವುದು. ಸಂಜೆ ಗಂಟೆ 5-30ರಿಂದ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಜೀವನ್ ರಾಂ ಸುಳ್ಯ ತಂಡದಿಂದ ‘ಕನ್ನಡ ಗಾನ ಗುಚ್ಛ’, ವಿದುಷಿ ಶ್ರದ್ಧಾ ಕಲ್ಲಡ್ಕ ಮತ್ತು ಬಳಗದವರಿಂದ ‘ನೃತ್ಯವೈಭವ’ ಮತ್ತು ‘ಶರಸೇತುಬಂಧ’ ಯಕ್ಷಗಾನ ತಾಳಮದ್ದಲೆ ನಡೆಯಲಿದೆ.
ವಿವಿಧ ಕ್ಷೇತ್ರಗಳ ಸಾಧಕರಾದ ಡಾ. ಪಿ. ದಯಾನಂದ ಪೈ, ನಾಡೋಜ ಡಾ. ಜಿ. ಶಂಕರ್, ಡಾ. ಕೆ. ಪ್ರಕಾಶ್ ಶೆಟ್ಟಿ ಬಂಜಾರ, ಕೆ.ಡಿ. ಶೆಟ್ಟಿ, ರವಿಶಂಕರ ಶೆಟ್ಟಿ ಬಡಾಜೆಗುತ್ತು, ಪಟ್ಟ ಸತೀಶ ಶೆಟ್ಟಿ, ಉದಯ ಸುವರ್ಣ, ವಿನೋದ್ ಶೆಣೈ, ಕಿಶೋರ್ ಆಳ್ವ ಇವರನ್ನು ಸಮಾರೋಪ ಸಮಾರಂಭದಲ್ಲಿ ಸನ್ಮಾನಿಸಲಾಗುವುದು. ಜಗನ್ನಾಥ ಚೌಟ ಬದಿಗುಡ್ಡೆ, ಎಸ್.ಆರ್. ಸತೀಶ್ಚಂದ್ರ, ಭುವನೇಶ್ ಪಚ್ಚಿನಡ್ಕ, ಜಗನ್ನಾಥ ಬಂಗೇರ ನಿರ್ಮಾಲ್ ನರಿಕೊಂಬು ಇವರಿಗೆ ‘ಸಾಧಕ ಸಿರಿ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು. ಪದ್ಮನಾಭ ಭಟ್ ಎಕ್ಕಾರು, ಕೆ.ಟಿ. ವಿಶ್ವನಾಥ, ಸದಾನಂದ ನಾರಾವಿ, ಡಾ. ಕೆ.ಎ. ಸಿದ್ದೀಕ್ ಅಡ್ಡೂರು, ಶಾಂತಾರಾಮ ಕುಂದರ್, ಕೆ. ರಾಜಾರಾಮ ಶರ್ಮ ಬೆಳಾಲು, ಪುರಂದರ ಭಟ್, ಕೇಶವ ಎ. ಕೊಯಿಲ, ಡಾ. ರವೀಶ್ ಪಡುಮಲೆ, ಡಾ. ಮುರಳೀಧರ ವೈ.ಕೆ., ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ, ಅಬ್ದುಲ್ ಲತೀಫ್ ಗುರುಪುರ, ಗೋಪಾಲ ಅಂಚನ್, ದೇವಿಪ್ರಸಾದ್ ಬೆಳ್ತಂಗಡಿ, ಶಂಕರ ಐತಾಳ, ಲೂವಿಝಾ ಕುಟನ್ಹೊ ಇವರಿಗೆ ‘ಕನ್ನಡ ಸಿರಿ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು. ಗಡಿನಾಡು ಸೇವೆಗಾಗಿ ಡಾ. ಎಸ್.ಆರ್. ನರಹರಿ ಕಾಸರಗೋಡು ಮತ್ತು ಸಂಸ್ಥೆ-ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ಯಕ್ಷಗಾನ ಮಂಡಳಿಯನ್ನು ಗೌರವಿಸಲಾಗುವುದು.

