ಶಿವಮೊಗ್ಗ : ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು, ಶಿವಮೊಗ್ಗ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಸೋಮಿನಕೊಪ್ಪ ಆಲದಹಳ್ಳಿ ಗ್ರಾಮದಲ್ಲಿ ಶ್ರೀ ರಾಮಾಂಜನೇಯ ದೇವಸ್ಥಾನಸ್ ಆವರಣದಲ್ಲಿ ದಿನಾಂಕ 21 ಮಾರ್ಚ್ 2026ರ ಶನಿವಾರ ಸಂಜೆ 5-00 ಗಂಟೆಗೆ ಶಿವಮೊಗ್ಗ ಜಿಲ್ಲಾ ಮಟ್ಟದ 7ನೇ ಜಾನಪದ ಸಮ್ಮೇಳನ ಏರ್ಪಡಿಸಲಾಗಿದ್ದು, ಸರ್ವಾಧ್ಯಕ್ಷರಾಗಿ ಜಾನಪದ ಕೋಗಿಲೆ ಕೆ. ಯುವರಾಜ್ ಇವರನ್ನು ಆಯ್ಕೆ ಮಾಡಲಾಗಿದೆ.
ಯುಗಾದಿ ಸಂಭ್ರಮದ ಜೊತೆಗೆ ಜಾನಪದ ಸಂಭ್ರಮ ಏರ್ಪಡಿಸಲಾಗಿದ್ದು, ಕರ್ನಾಟಕ ಜಾನಪದ ಪರಿಷತ್ತಿನ ಮೂಲಕ ಪ್ರತಿ ವರ್ಷ ಮಾರ್ಚ್ ತಿಂಗಳಲ್ಲಿ ಜಿಲ್ಲೆಯ ಜನಪದ ಕಲಾವಿದರನ್ನು ಒಂದು ವೇದಿಕೆಗೆ ತಂದು ನಮ್ಮ ಜಿಲ್ಲೆಯ ಕಲೆ, ಕಲಾವಿದರ ಆನಾವರಣದ ಪ್ರಯತ್ನ ಮಾಡುತ್ತಾ ಬಂದಿದ್ದೇವೆ. ಕ.ಜಾ.ಪ. ಸಂಸ್ಥಾಪಕರು ಹಿರಿಯ ಸಾಹಿತಿಗಳಾದ ನಾಡೋಜ ಡಾ. ಎಚ್.ಎಲ್. ನಾಗೇಗೌಡರ ಆಶಯದಂತೆ ಜಿಲ್ಲೆಯಲ್ಲಿ ಜನಪದ ಕಲೆಯನ್ನು ಉಳಿಸಿ ಬೆಳಸುವ ಪ್ರಯತ್ನ ನಡೆದಿದೆ. ಎಲ್ಲಾ ತಾಲೂಕು ಸಮಿತಿಗಳು ಅದಕ್ಕೆ ಪೂರಕವಾಗಿ ಕೆಲಸ ಮಾಡುತ್ತಿವೆ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಡಿ. ಮಂಜುನಾಥ ವಿವರಿಸಿದರು.
7ನೇ ಜಿಲ್ಲಾ ಜಾನಪದ ಸಮ್ಮೇಳನದಲ್ಲಿ ಆಯ್ದ 22 ತಂಡಗಳು ಭಾಗವಹಿಸಲಿದ್ದು, ಸೋಮಿನಕೊಪ್ಪ ಊರಬಾಗಿಲಿನಿಂದ ಸಮ್ಮೇಳನ ಸರ್ವಾಧ್ಯಕ್ಷರಾದ ಕೆ. ಯುವರಾಜ್ ಇವರನ್ನು ಎತ್ತಿನ ಬಂಡಿಯ ಮೂಲಕ ಜನಪದ ಕಲಾ ತಂಡಗಳ ಜೊತೆಯಲ್ಲಿ ಅತಿಥಿಗಳು, ಗ್ರಾಮದ ಮುಖಂಡರು, ಸಂಘ ಸಂಸ್ಥೆಗಳು, ಗ್ರಾಮಸ್ಥರ ಜೊತೆಯಲ್ಲಿ ಕನ್ನಡ ಮನಸ್ಸುಗಳ ಒಡಗೂಡಿ ಜಾನಪದ ನಡಿಗೆ ನಡೆಯಲಿದೆ. ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕರಾದ ಶಾರದಾ ಪೂರ್ಯಾನಾಯ್ಕ ಜಾನಪದ ನಡಿಗೆಗೆ ಚಾಲನೆ ನೀಡಲಿದ್ದಾರೆ. ಶೀ ರಾಮಾಂಜನೇಯ ಸೇವಾ ಸಮಿತಿ ಅಧ್ಯಕ್ಷರಾದ ಕಾಂತರಾಜ್ ಅಲ್ಲಿ ಉಪಸ್ಥಿತರಿರುತ್ತಾರೆ.
ಅಂದು ಸಂಜೆ 5-00 ಗಂಟೆಗೆ ಸೋಮಿನಕೊಪ್ಪದ ಶ್ರೀ ರಾಮಾಂಜನೇಯ ದೇವಸ್ಥಾನದ ಮುಂಭಾಗದಲ್ಲಿ ನಿರ್ಮಿಸಲಾದ ವಿಶಾಲ ವೇದಿಕೆಯಲ್ಲಿ, ಲೋಕಸಭಾ ಸದಸ್ಯರಾದ ಬಿ.ವೈ. ರಾಘವೇಂದ್ರ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಕರ್ನಾಟಕ ಜಾನಪದ ಪರಿಷತ್ತಿನ ರಾಜ್ಯಧ್ಯಕ್ಷ ಡಾ. ಹಿ.ಚಿ. ಬೋರಲಿಂಗಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ಅಧ್ಯಕ್ಷರಾದ ಡಿ. ಮಂಜುನಾಥ ಆಶಯ ಮಾತುಗಳನ್ನಾಡಲಿದ್ದಾರೆ.
ಇದೇ ಸಂದರ್ಭದಲ್ಲಿ ಮಲೆನಾಡಿನ ದೀವರ ಸಂಸ್ಕೃತಿಯ ಅನಾವರಣದ ಹಸೆ ಚಿತ್ತಾರ ಪುಸ್ತಕವನ್ನು ಬೆಂಗಳೂರಿನ ಗೀತಾ ಭಟ್ ಇವರು ಪ್ರಕಟಿಸಲಿದ್ದಾರೆ. ಖ್ಯಾತ ಜಾನಪದ ತಜ್ಞ ಡಾ. ಅಪ್ಪಗೆರೆ ತಿಮ್ಮರಾಜ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ನಿಕಟಪೂರ್ವ ಸಮ್ಮೇಳನ ಸರ್ವಾಧ್ಯಕ್ಷರಾಗಿದ ಕಣ್ಣೂರು ಟಾಕಪ್ಪ, ಕಾಂತರಾಜ್ ಸೋಮಿನಕೊಪ್ಪ, ಕ.ಜಾ.ಪ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ ಹಿಳ್ಳೋಡಿ, ಯು. ಮಧುಸೂದನ್ ಐತಾಳ್. ಡಾ. ಕೆ.ಜಿ. ವೆಂಕಟೇಶ್, ಕೆ.ಎಚ್. ರಂಗಪ್ಪ, ಕೆ.ಜಿ. ಪ್ರಮೋದ್, ನಾಗರಾಜ್ ಕೆ.ಹೆಚ್. ಸೇರಿದಂತೆ ಗ್ರಾಮದ ಪ್ರಮುಖರು ಉಪಸ್ಥಿತರಿರಲಿದ್ದಾರೆ. ಕ.ಜಾ.ಪ. ತಾಲ್ಲೂಕು ಅಧ್ಯಕ್ಷರು ಪದಾಧಿಕಾರಿಗಳಾದ ಶಿಕಾರಿಪುರದ ಬಿ. ಪಾಪಯ್ಯ, ವಕೀಲರಾದ ಎಂ.ಹೆಚ್. ಸತ್ಯನಾರಾಯಣ, ಸಾಗರದ ಸತ್ಯನಾರಾಯಣ ಸಿರಿವಂತೆ, ಹೊಸನಗರ ಎಂ. ಎಂ. ಪರಮೇಶ್, ವಿಜೇಂದ್ರಶೇಟ್, ಸೊರಬ ಪ್ರಜ್ವಲ್ ಚಂದ್ರಗುತ್ತಿ, ತೀರ್ಥಹಳ್ಳಿ ಲೀಲಾವತಿ ಜಯಶೀಲಾ, ಭದ್ರಾವತಿ ರೇವಣಪ್ಪ, ಜಿಲ್ಲಾ ಸಮಿತಿಯ ಸೋಮಿನಕಟ್ಟಿ, ಬಾಲರಾಜ್ ಚುರ್ಚುಗುಂಡಿ, ಪರಶುರಾಮ ಮಟ್ಟೇರ, ಬಿ.ಆರ್. ರವಿ, ಕೆ.ಎಸ್. ಶಶಿಕಲಾ, ಡಾ. ಅಣ್ಣಪ್ಪ ಮಳೀಮಠ, ಪ್ರತಿಮಾ ಡಾಕಪ್ಪ ಗೌಡರು, ಮಮತಾ ಶೀವಣ್ಣ ಭಾಗವಹಿಸಲಿದ್ದಾರೆ.
ತಡರಾತ್ರಿವರೆಗೆ ನಡೆಯುವ ಜಾನಪದ ಸಮ್ಮೇಳನದಲ್ಲಿ ಕೆ. ಯುವರಾಜ್, ಡಾ. ಅಪ್ಪಗೆರೆ ತಿಮ್ಮರಾಜ್, ರೇವಣಪ್ಪ ಮತ್ತು ತಂಡದಿಂದ ಜನಪದ ಗೀತೆಗಳ ಗಾಯನ, ನಾಗರಕೊಡಿಗೆ ತ್ರಿಣಿವೆ ಕಲಾನಾಥೇಶ್ವರ ಯುವತಿ ಮಂಡಳಿಯಿಂದ ಸೋಬಾನೆ, ಕುಟ್ಟುವ, ಬೀಸುವ ಪದ ಹಾಡಲಿದ್ದಾರೆ. ತೀರ್ಥಹಳ್ಳಿ ಯಲ್ಲಪ್ಪ ಭಾಗವತರ ದೇವಿ ಕುಣಿತ. ಈಸೂರಿನ ಬೇಗೂರು ಶಿವಪ್ಪ ಇವರಿಂದ ಲಾವಣಿ, ಬಟ್ಟೆಮಲ್ಲಪ್ಪದ ಆಂಜನೇಯ ಜೋಗಿ ತಂಡದಿಂದ ತತ್ವಪದ, ಚೆನ್ನಮ್ಮಾಜಿ ಹೊಸೂರಿನ ತಿಮ್ಮಪ್ಪ ಮತ್ತು ತಂಡ ಸುಗ್ಗಿ ಕುಣಿತ, ಜಾನಪದ ಲೋಕದ ಜಾನಪದ ಶ್ರೀ ಪ್ರಶಸ್ತಿ ಪುರಸ್ಕೃತ ಹೊಸೂರು ಗುಡ್ಡಪ್ಪಜೋಗಿ ತಂಡದ ಜೋಗಿಪದ, ರಾಮನಗರ ಜಾನಪದ ಲೋಕದ ಈ ಲೋಕೋತ್ಸವ ಪ್ರಶಸ್ತಿ ಪುರಸ್ಕೃತರಾದ ಭದ್ರಾವತಿ ಲಕ್ಷ್ಮಣ ರಾವ್ ಮತ್ತು ತಂಡ ಚೌಡಿಕೆ ಪದ ಹಾಡಿ ರಂಜಿಸಲಿದ್ದಾರೆ.
ಸೊರಬ ಗೆಂಡ್ಡೆಹೊಸೂರು ಶಿವರುದ್ರಪ್ಪ ಎನ್. ಜೋಗಿ ಅವರ ಗೀಗಿಪದ, ಮಾದಾಪುರದ ಕುಮಾರ್ ಮತ್ತು ತಂಡದ ಡೊಳ್ಳು ಕುಣಿತ, ಸಾಗರ ತಾ. ಕ.ಜಾ.ಪ. ಜನಪದ ತಂಡದಿಂದ ಹಾಡು, ಶಿವಮೊಗ್ಗ ತಾ. ವೀರಣ್ಣ ಮತ್ತು ತಂಡದವರ ಪುರವಂತಿಕೆ, ಜಯಪ್ಪ ನಾಗತಂಡದ ಪ ಅವರ ತಂಡದ ಜೋಗತಿನೃತ್ಯ, ಸಹ್ಯಾದ್ರಿ ಕಲಾ ತಂಡದ ಪೂಜಾ ಕುಣಿತ, ತೀರ್ಥಹಳ್ಳಿ ಶಕುಂತಲಾ ಮತ್ತು ತಂಡದ ಅಂಟಿಗೆ ಪಂಟಿಗೆ, ಚುರ್ಚುಗುಂಡಿಯ ಜಗದೀಶ್ ಮತ್ತು ತಂಡದ ತಮಟೆ ಮೇಳ, ನಿಲ್ಸ್ ಕಲ್ಲು ಅಮ್ಮನ ಮಡಿಲಿನ ಪವಿತ್ರ ಡೆಮೆಲೋ ತಂಡದ ಕಂಸಾಳೆ, ಹೊಳೆಹೊನ್ನೂರು ಪ್ರಭಯ್ಯ ಮತ್ತು ತಂಡದ ಕರ್ಪಾಳ ಮೇಳ, ದೂರದರ್ಶನ ಕಲಾವಿದ ನಾಗರಾಜ್ ತೋಂಬ್ರಿ ಮತ್ತು ತಂಡದಿಂದ ಜನಪದ ಗೀತೆ, ಆಡಿನಕೊಟ್ಟಿಗೆಯ ವಿನಾಯಕ ಮತ್ತು ತಂಡದಿಂದ ಕೋಲಾಟ, ದಿನೇಶ್ ಮತ್ತು ತಂಡದಿಂದ ಲಂಬಾಣಿ ನೃತ್ಯ ಕಾರ್ಯಕ್ರಮ ನಡೆಯಲಿದೆ.

