ಮಂಗಳೂರು : ಕರಾವಳಿ ಲೇಖಕಿಯರ ವಾಚಕಿಯರ (ಕಲೇವಾ) ಸಂಘ ನೀಡುವ ಡಾ. ಮಮತಾ ತಿಲಕ್ ರಾವ್ ದತ್ತಿ ನಿಧಿ ಪ್ರಾಯೋಜಿತ ‘ಅಮ್ಮ ಸಾಹಿತ್ಯ ಪ್ರಶಸ್ತಿ’ ಮತ್ತು ‘ಅನನ್ಯ ಸಾಧಕಿ ಪ್ರಶಸ್ತಿ’ ಪ್ರದಾನ ಸಮಾರಂಭವು ದಿನಾಂಕ 29 ಮಾರ್ಚ್ 2026ರಂದು ಮಂಗಳೂರಿನ ಉರ್ವಸ್ಟೋರ್ ಸಾಹಿತ್ಯ ಸದನದಲ್ಲಿ ನಡೆಯಿತು.

ಈ ಸಮಾರಂಭದಲ್ಲಿ ಮಾತನಾಡಿದ ಕೇರಳದ ಕೇಂದ್ರೀಯ ವಿಶ್ವವಿದ್ಯಾಲಯಯ ಕನ್ನಡ ವಿಭಾಗದ ಪ್ರಾಧ್ಯಾಪಕಿ ಸೌಮ್ಯಾ ಹೇರಿಕುದ್ರು “ಪ್ರಾಬಲ್ಯ ಸಾಧಿಸುವ ಮನಸ್ಥಿತಿ ಮತ್ತು ಅಹಂನಿಂದಾಗಿ ಯುದ್ಧ, ಕ್ಷೋಭೆ ಉಂಟಾಗುತ್ತದೆ. ಅದು ಸಮಾಜವನ್ನು ಆತಂಕ, ಅಸುರಕ್ಷಿತ ಪರಿಸ್ಥಿತಿಗೆ ಕೊಂಡೊಯ್ಯುತ್ತದೆ. ಇಂಥ ಸಂದರ್ಭದಲ್ಲಿ ಸ್ತ್ರೀಹೃದಯದ ವ್ಯಕ್ತಿಗಳ ಅಗತ್ಯವಿದೆ. ಸ್ತ್ರೀ ಮನಸ್ಥಿತಿಯವರಿಗೆ ಪ್ರಕೃತಿಯ ಗುಣ ಇರುತ್ತದೆ. ಪ್ರಕೃತಿಗೆ ಪಾಲನೆಯ ಗುಣ ಇರುವುದರಿಂದ ವಿನಾಶದ ಯೋಚನೆ ಮೂಡುವುದಿಲ್ಲ. ಸಾಮ್ರಾಜ್ಯಶಾಹಿಗಳ ಪುರುಷಹಂಕಾರಕ್ಕೆ ಮಹಿಳೆಯರು, ಮಕ್ಕಳು ಬಲಿಯಾಗುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಅಮ್ಮನ ಮನಸ್ಸು ಸಮಾಜದಲ್ಲಿ ಇನ್ನಷ್ಟು ವಿಸ್ತರಣೆ ಆಗಬೇಕು. ಆಕೆ ಸಮಾಜ ಕಟ್ಟಲು ಮುಂದೆ ನಿಲ್ಲಬೇಕು. ನಾವಷ್ಟೇ ಆರಾಮವಾಗಿರಬೇಕು ಎಂಬ ಒಂದು ವರ್ಗದವರ ಹಪಾಹಪಿ ಸಮಸ್ಯೆಗಳನ್ನು ಸೃಷ್ಟಿಸುತ್ತದೆ” ಎಂದು ಅಭಿಪ್ರಾಯಪಟ್ಟರು.

ದತ್ತಿ ನಿಧಿಯ ‘ಅಮ್ಮ ಸಾಹಿತ್ಯ ಪ್ರಶಸ್ತಿ’ಯನ್ನು ಲೇಖಕಿ, ಪ್ರಕಾಶಕಿ ಇಂದಿರಾ ಹಾಲಂಬಿ ಇವರಿಗೆ ಮತ್ತು ‘ಅನನ್ಯ ಸಾಧಕಿ ಪ್ರಶಸ್ತಿ’ಯನ್ನು ಕೊರಗಾಭಿವೃದ್ಧಿ ಸಂಘಗಳ ಒಕ್ಕೂಟದ ಅಧ್ಯಕ್ಷೆ ಸುಶೀಲಾ ನಾಡ ಇವರಿಗೆ ಪ್ರದಾನ ಮಾಡಲಾಯಿತು. ಅಮ್ಮ ಪ್ರಶಸ್ತಿ ರೂ. ಇಪ್ಪತ್ತು ಸಾವಿರ ಜಾಗು ‘ಅನನ್ಯ ಸಾಧಕಿ ಪ್ರಶಸ್ತಿ’ ರೂ. ಹತ್ತು ಸಾವಿರ ನಗದು ಒಳಗೊಂಡಿದೆ. ಚಂದ್ರಭಾಗಿ ರೈ ಪುಸ್ತಕ ಬಹುಮಾನವನ್ನು ಬಾಗಲಕೋಟೆ ಇಳಕಲ್ನ ಕವಯತ್ರಿ ಮರ್ತುಜಾ ಬೇಗಮ್ ಇವರಿಗೆ ನೀಡಲಾಯಿತು. ಮಮತಾ ತಿಲಕ್ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು.


“ಸಾವಯುವ ಸಂಬಂಧಗಳ ಮೂಲಕ ಜಗತ್ತನ್ನು ಉಳಿಸಬಹುದು ಮತ್ತು ಬದುಕಿಸಬಹುದು” ಎಂದು ಪ್ರಶಸ್ತಿ ಪ್ರದಾನ ಮಾಡಿದ ‘ಟೀಚರ್’ ಪತ್ರಿಕೆಯ ಸಂಪಾದಕ ಉದಯ ಗಾಂವ್ಕರ್ ಹೇಳಿದರು. ಕಲೇವಾ ಸಂಘದ ಅಧ್ಯಕ್ಷೆ ಶಕುಂತಳಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು ಲೇಖಕಿ ಚಂದ್ರಕಲಾ ನಂದಾವರ ಇವರ ನಿರ್ವಹಣೆಯಲ್ಲಿ ಇಂದಿರಾ ಹಾಲಂಬಿ ಅವರ ಓದು ಮತ್ತು ಸಂವಾದ ನಡೆಯಿತು. ಸೇಂಟ್ ಆ್ಯಗ್ನೆಸ್, ಬೆಸೆಂಟ್, ದಯಾನಂದ ಪೈ ಮತ್ತು ಸತೀಶ್ ಪೈ ಕಾಲೇಜು, ಬಲ್ಮಠ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಶಾರದಾ ವಿದ್ಯಾಲಯದ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ರತ್ನಾವತಿ ಜೆ. ಬೈಕಾಡಿ ಆಶಯಗೀತೆ ಹಾಡಿದರು. ಸುಧಾರಾಣಿ ಕಾರ್ಯಕ್ರಮ ನಿರೂಪಿಸಿ, ಯಶೋದಾ ಮೋಹನ್ ಸ್ವಾಗತಿಸಿ, ರೂಪಕಲಾ ಆಳ್ವ ವಂದಿಸಿದರು.


