ಮಂಗಳೂರು : ಮಂಗಳೂರು ವಿಶ್ವವಿದ್ಯಾಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ನಡೆಯುತ್ತಿರುವ ವಿವೇಕವಾಣಿ ಸರಣಿ ಉಪನ್ಯಾಸ ಕಾರ್ಯಕ್ರಮದ ಐವತ್ತೈದನೇ ಉಪನ್ಯಾಸ ಕಾರ್ಯಕ್ರಮವು ದಿನಾಂಕ 12 ಮೇ 2026ರಂದು ಮಂಗಳೂರಿನ ಉರ್ವ ಎಸ್.ಸಿ.ಎಸ್. ಪ್ರಥಮ ದರ್ಜೆ ಕಾಲೇಜಿನಲ್ಲಿ ಜರಗಿತು.

ಈ ಕಾರ್ಯಕ್ರಮದಲ್ಲಿ “ಕಾವ್ಯ ಕನ್ನಡಿಯಲ್ಲಿ ಕಂಡ ವಿವೇಕಾನಂದರು” ಎಂಬ ವಿಷಯದ ಕುರಿತು ಮಾತನಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಎಸ್. ವಿ. ಪಿ ಅಧ್ಯಯನ ಸಂಸ್ಥೆ ಇದರ ಸಹ ಪ್ರಾಧ್ಯಾಪಕರಾದ ಡಾ. ಧನಂಜಯ ಕುಂಬ್ಳೆ ಇವರು “ಕಾವ್ಯ ಕನ್ನಡಿಯಲ್ಲಿ ಕಂಡ ವಿವೇಕಾನಂದರು” ಎಂಬ ವಿಷಯವು ಸ್ವಾಮಿ ವಿವೇಕಾನಂದರ ಮಹಾನ್ ವ್ಯಕ್ತಿತ್ವವನ್ನು ಭಾವನಾತ್ಮಕ ಹಾಗೂ ಆದರ್ಶಮಯ ದೃಷ್ಟಿಯಿಂದ ಪರಿಚಯಿಸುತ್ತದೆ. ವಿವೇಕಾನಂದರು ಕೇವಲ ಸಂನ್ಯಾಸಿಯಲ್ಲ; ಅವರು ಜಾಗೃತ ಭಾರತದ ಚೇತನ, ಯುವಶಕ್ತಿಯ ಪ್ರತೀಕ ಹಾಗೂ ಆತ್ಮವಿಶ್ವಾಸದ ಜ್ಯೋತಿಯಾಗಿದ್ದಾರೆ. ಅವರ ಮಾತುಗಳು ಮತ್ತು ಚಿಂತನೆಗಳು ಅನೇಕ ಹೃದಯಗಳಲ್ಲಿ ಸ್ಫೂರ್ತಿಯ ಅಲೆಗಳನ್ನು ಮೂಡಿಸಿ, ಮಾನವನೊಳಗೆ ಅಡಗಿರುವ ಶಕ್ತಿಯನ್ನು ಹೊರತೆಗೆದವು. ವಿವೇಕಾನಂದರ ಜೀವನವು ತ್ಯಾಗ, ಸೇವೆ, ದೇಶಭಕ್ತಿ ಮತ್ತು ಮಾನವೀಯ ಮೌಲ್ಯಗಳ ಪ್ರತಿಬಿಂಬವಾಗಿದೆ. ಕಾವ್ಯದಲ್ಲಿ ಅವರು ಶಕ್ತಿಯ ರೂಪವಾಗಿ, ಧೈರ್ಯದ ಸಂಕೇತವಾಗಿ ಹಾಗೂ ಮಾನವ ಸೇವೆಯನ್ನು ಶಿವ ಸೇವೆಯೆಂದು ಸಾರಿದ ಮಹಾನ್ ಚಿಂತಕರಾಗಿ ಮೂಡಿಬರುತ್ತಾರೆ. ಯುವಜನತೆ ಆತ್ಮವಿಶ್ವಾಸದಿಂದ ಎದ್ದು ನಿಂತು ಸಮಾಜದ ಒಳಿತಿಗಾಗಿ ಕಾರ್ಯನಿರ್ವಹಿಸಬೇಕು ಎಂಬ ಅವರ ಸಂದೇಶ ಇಂದಿಗೂ ಪ್ರತಿಯೊಬ್ಬರಿಗೂ ಪ್ರೇರಣೆಯಾಗಿದೆ. ಸ್ವಾಮಿ ವಿವೇಕಾನಂದರು ಭಾರತ ದೇಶದ ಆತ್ಮವನ್ನು ಜಗತ್ತಿಗೆ ಪರಿಚಯಿಸಿದ ಮಹಾನ್ ಯುಗಪುರುಷರು, ಅವರ ಚಿಂತನೆಗಳು ಕೇವಲ ಆಧ್ಯಾತ್ಮಿಕತೆಯಲ್ಲ, ಜೀವನದ ಪ್ರತಿಯೊಂದು ಕ್ಷೇತ್ರಕ್ಕೂ ದಾರಿದೀಪವಾಗಿದೆ. ಕಾವ್ಯದ ಕನ್ನಡಿಯಲ್ಲಿ ಕಾಣುವ ವಿವೇಕಾನಂದರು ನಮಗೆ ಧೈರ್ಯ, ಸೇವಾಭಾವ, ಮಾನವೀಯತೆ ಮತ್ತು ಉನ್ನತ ಆದರ್ಶಗಳ ಜೀವನದ ಮಹತ್ವವನ್ನು ನೆನಪಿಸುತ್ತಾರೆ” ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಂಗಳೂರಿನ ಉರ್ವ ಎಸ್.ಸಿ.ಎಸ್. ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಹಾರ್ದಿಕ್ ಪಿ. ಚೌಹಾನ್ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಶ್ರೀಮತಿ ಅಶ್ವಿನಿ ಎಸ್. ವಿದ್ಯಾರ್ಥಿ ಕಲ್ಯಾಣಾಧಿಕಾರಿ, ಎಸ್.ಸಿ.ಎಸ್. ಪ್ರಥಮ ದರ್ಜೆ ಕಾಲೇಜು, ಉರ್ವ, ಮಂಗಳೂರು, ಕು. ಚಾಯ್ಸನ್ ಆರ್. ಪಿಂಟೋ ಉಪಾಧ್ಯಕ್ಷರು, ವಿದ್ಯಾರ್ಥಿ ಕಲ್ಯಾಣ ಸಮಿತಿ ಮತ್ತು ಉಪನ್ಯಾಸಕರು ಹಾಗೂ ಪದವಿ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಎಸ್.ಸಿ.ಎಸ್. ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರು ಮತ್ತು ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಸುಚಿತ್ರಾ ಪಿ. ಶೆಟ್ಟಿ ಸ್ವಾಗತಿಸಿ, ಉರ್ವ ಎಸ್.ಸಿ.ಎಸ್. ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಕಲ್ಯಾಣಧಿಕಾರಿ ತಿಲಕ್ ಗೌಡ ವಂದಿಸಿ, ವಿದ್ಯಾರ್ಥಿನಿ ಮೇಘಾ ಕಾರ್ಯಕ್ರಮ ನಿರೂಪಿಸಿದರು.
