ಕುಂದಾಪುರ : ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷರು ಹಾಗೂ ಖ್ಯಾತ ಜಾನಪದ ಕಲಾವಿದರಾದ ಡಾ. ಗಣೇಶ್ ಗಂಗೊಳ್ಳಿ (64) ಇವರು ದಿನಾಂಕ 07 ಏಪ್ರಿಲ್ 2026ರಂದು ವಿಧಿವಶರಾದರು. ಆಕಾಶವಾಣಿ ಜಾನಪದ ಕಲಾವಿದರಾಗಿದ್ದ ಗಣೇಶ್ ಗಂಗೊಳ್ಳಿ, ಶಾಲಾ ಕಾಲೇಜು ಕಾರ್ಯಕ್ರಮಗಳಲ್ಲಿ ಹಾಡುತ್ತಿದ್ದರು. ಸಾಹಿತ್ಯ ಸಮ್ಮೇಳನಗಳಲ್ಲಿ ನಾಡ ಗೀತೆ, ಕುಂದಾಪ್ರ ಕನ್ನಡ ಗೀತೆಗಳನ್ನು ಹಾಡುತ್ತಿದ್ದರು. ಭಾವಗೀತೆ, ಜಾನಪದ ಗೀತೆಗಳನ್ನು ಇವರ ಕಂಠದಲ್ಲಿ ಕೇಳುವುದೇ ಒಂದು ವಿಶೇಷ ಅನುಭವ.
ಗಣೇಶ್ ಗಂಗೊಳ್ಳಿ ಉಡುಪಿ ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷರಾಗಿ ಉತ್ತಮ ಸಂಘಟಕರಾಗಿದ್ದರು. ಜಿಲ್ಲೆಯಾದ್ಯಂತ ಹಿರಿ-ಕಿರಿ ಜಾನಪದ ಕಲಾವಿದರನ್ನು ಒಗ್ಗೂಡಿಸುವಲ್ಲಿ ಶ್ರಮಿಸಿದ್ದರು. ಸಧ್ಯದಲ್ಲೇ ಉಡುಪಿಯಲ್ಲಿ ರಾಜ್ಯಮಟ್ಟದ ಜಾನಪದ ಸಮ್ಮೇಳನವೊಂದನ್ನು ನಡೆಸುವ ಬಗ್ಗೆ ತಯಾರಿ ನಡೆಸಿದ್ದರು. ಸುಮಾರು ಮೂರು ದಶಕ ಗಳಿಗೂ ಹೆಚ್ಚು ಕಾಲ ಜಾನಪದ ಸಂಗೀತ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಗಣೇಶರಿಗೆ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ, ಗೌರವ ಡಾಕ್ಟರೇಟ್ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ. ಇವರ ಅಗಲಿಕೆ ಸಾಂಸ್ಕೃತಿಕ ಲೋಕಕ್ಕೊಂದು ದೊಡ್ಡ ನಷ್ಟ. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
