ವಿಜಯಪುರ : ಕರ್ನಾಟಕ ಗಮಕ ಕಲಾ ಪರಿಷತ್ತು ಬೆಂಗಳೂರು ಹಾಗೂ ವಿಜಯಪುರ ಶಾಖೆ ಇವರ ಆಶ್ರಯದಲ್ಲಿ ವಿಜಯಪುರ ನಗರದ ಪಂಚಾಕ್ಷರಿ ಗಾಯನ ಸಂಸ್ಥೆಯ ‘ಗಾನಬನ’ದಲ್ಲಿ ದಿನಾಂಕ 02 ಮೇ 2026ರಂದು ಗಮಕ ಕಾರ್ಯಕ್ರಮವು ನಡೆಯಿತು.

ಈ ಕಾರ್ಯಕ್ರಮದಲ್ಲಿ ಅತಿಥಿ ಸ್ಥಾನದಿಂದ ಮಾತನಾಡಿದ ಸಾಹಿತಿ ಶ್ರೀ ದಾನೇಶ್ ಅವಟಿ “ಕರ್ನಾಟಕ ಗಮಕ ಕಲಾ ಪರಿಷತ್ತು ಬೆಂಗಳೂರು ಹಾಗೂ ವಿಜಯಪುರ ಶಾಖೆ ಇವುಗಳಿಂದ ವಿಜಯಪುರ ಜಿಲ್ಲೆಯಲ್ಲಿ ಗಮಕ ಕಲೆಯು ಉಳಿದು ಬೆಳೆದಿದೆ. ವಿಜಯಪುರ ಜಿಲ್ಲೆಯಲ್ಲಿ ಗಮಕ ಕಲಾ ಪರಿಷತ್ತಿನಿಂದ ಸತತವಾಗಿ ಶಾಲೆ-ಕಾಲೇಜು, ಸಂಘ-ಸಂಸ್ಥೆಗಳಲ್ಲಿ ಗಮಕ ವಾಚನ-ವ್ಯಾಖ್ಯಾನ ಕಾರ್ಯಕ್ರಮಗಳು ಕಳೆದ 20 ವರ್ಷಗಳಿಂದ ನಡೆಯುತ್ತಿವೆ. ಇದಕ್ಕೆ ಮುಖ್ಯ ಕಾರಣೀಕರ್ತರೆಂದರೆ ಶ್ರೀಮತಿ ಶಾಂತಾ ಕೌತಾಳ್ ಹಾಗೂ ಗಮಕ ಪರಿಷತ್ ತಂಡದವರು. ವಯೋವೃದ್ಧರಾದ ಶ್ರೀ ಬಿ.ಎಮ್. ಪಾಟೀಲ್ ಇವರುಗಳು ಅನೇಕ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿರುವುದು ಗಮಕ ಕಲೆ ಬೆಳೆಯಲು ತುಂಬಾ ಸಹಾಯವಾಗಿದೆ. ಇದು ಒಂದು ಸತತ ಪ್ರಕ್ರಿಯೆ. ಹಳಗನ್ನಡ, ನಡುಗನ್ನಡ ಕಾವ್ಯವಾಚನ ಹಾಗೂ ವ್ಯಾಖ್ಯಾನಗಳ ಮೂಲಕ ಜನರಲ್ಲಿ ಆಸಕ್ತಿ ಮೂಡಿಸಲು ಪರಿಷತ್ತು ಯಶಸ್ವಿಯಾಗಿದೆ. ಈ ಕಾರ್ಯಕ್ರಮದಿಂದ 14ನೇ ಶತಮಾನದಲ್ಲಿ ಬಸವ ಪುರಾಣ ರಚಿಸಿದ ಭೀಮಕವಿ ಇಂದಿಗೂ ಜೀವಂತವಾಗಿದ್ದಾರೆ” ಎಂದು ಅಭಿಪ್ರಾಯಪಟ್ಟರು.
ವಿಜಯಪುರ ಜಿಲ್ಲಾ ಗಮಕ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಬಿ.ಎಮ್. ಪಾಟೀಲ್ ಇವರುಗಳು ಕರ್ನಾಟಕ ಗಮಕ ಕಲಾ ಪರಿಷತ್ತು ಬೆಳೆದು ಬಂದ ಬಗೆಯನ್ನು ಪ್ರಾಸ್ತಾವಿಕವಾಗಿ ತಮ್ಮ ಭಾಷಣದಲ್ಲಿ ತಿಳಿಸಿದರು. ಈ ಸಂದರ್ಭದಲ್ಲಿ ಭೀಮಕವಿಯ ಬಸವಪುರಾಣದ ‘ಶರಣ ಮೋಳಿಗೆ ಮಾರಯ್ಯ’ ಪ್ರಸಂಗದ ಗಮಕ ವಾಚನ-ವ್ಯಾಖ್ಯಾನ ಜರುಗಿತು. ಹಿರಿಯ ಹಿಂದುಸ್ತಾನಿ ಸಂಗೀತ ಹಾಗೂ ಗಮಕ ವಾಚಕರಾದ ಶ್ರೀಮತಿ ಶಾಂತಾ ಕೌತಾಳ್ ಇವರುಗಳು ಕಥಾ ಪ್ರಸಂಗದಲ್ಲಿ ಬಂದ ಮೋಳಿಗೆ ಮಾರಯ್ಯನ ಮನೆಯಲ್ಲಿ ಊಟ ಮಾಡಿದ ಬಸವಣ್ಣನ ಆನಂದವನ್ನು ತುಂಬಾ ಭಾವಪೂರ್ಣವಾಗಿ ಹಾಗೂ ಅರ್ಥಪೂರ್ಣವಾಗಿ ‘ಈ ಸದನವಂ ನೋಡಿದಾತನ ದೋಷವೆಲ್ಲಂ ಕೆಟ್ಟುಹೋಗದೇ. ಈ ಸದನದೊತ್ತಿನಲಿ ಚರಿಸುವವಂ ಕೃತಾರ್ಥನಲಾ, ಈ ಗೃಹರೇಣು ಪಡೆದವಂಗಹುದು ಮುಕ್ತಿ’ ಎಂದು ಕಾವ್ಯವಾಚನ ಮಾಡಿದಾಗ ಕೇಳುಗರು ರೋಮಾಂಚಿತರಾದರು. ವ್ಯಾಖ್ಯಾನವನ್ನು ಮಾಡಿದ ಕಲ್ಯಾಣರಾವ್ ದೇಶಪಾಂಡೆಯವರು ಬಸವಣ್ಣನವರ ಕಾಯಕ ತತ್ವ, ದಾಸೋಹ, ವಿನಯ, ತಪ್ಪಾದಾಗ ಕ್ಷಮೆ ಕೇಳುವಂತಹ ಗುಣ ಇವುಗಳನ್ನು ವಿಮರ್ಶಿಸಿ ಕಲ್ಯಾಣ ನಾಡಿನ ಬಸವ ಯುಗವನ್ನು ಕೇಳುಗರ ಮುಂದೆ ನಿಲ್ಲಿಸಿದರು. ಕಾರ್ಯಕ್ರಮದ ಕೊನೆಗೆ ಕಥಾ ಭಾಗದ ಬಗ್ಗೆ ಗಮಕಿಗಳು ಕೇಳಿದ 10 ಪ್ರಶ್ನೆಗಳಲ್ಲಿ 9 ಪ್ರಶ್ನೆಗಳಿಗೆ ಹಿರಿಯ ಕೇಳುಗರು ಹಾಗೂ ಗಾನಬನದ ಚಿಕ್ಕಮಕ್ಕಳು ಸರಿಯಾಗಿ ಉತ್ತರ ಹೇಳಿ ಕೇಳುಗರ ಪ್ರಶಂಸೆಗೊಳಗಾದರು.

ಸಮಾರಂಭದಲ್ಲಿ ಗಾನಬನದ ಅಧ್ಯಕ್ಷರಾದ ಶ್ರೀ ಶಿರೋಳಮಠ ಗುರುಗಳು ಸಾನಿಧ್ಯ ವಹಿಸಿದ್ದರು. ಅಧ್ಯಕ್ಷತೆ ವಹಿಸಿದ್ದ ಶ್ರೀ ಸುಭಾಸ್ ಯಾದವಾಡ ಇವರು “ಗಮಕ ಕಾರ್ಯಕ್ರಮದಲ್ಲಿ ಗಮಕಿಗಳು ಕಲ್ಯಾಣ ನಾಡಿನ ಬಸವ ಯುಗದ ಚಾರಿತ್ರಿಕ ಚಿತ್ರಣವನ್ನು ಚೆನ್ನಾಗಿ ಮೂಡಿಸಿದ್ದಾರೆ” ಎಂದು ಹೇಳಿದರು. ಶ್ರೀ ಬಸವರಾಜ ಕೆ. ಗೋಟ್ಯಾಳ ಇವರುಗಳು ಕಾರ್ಯಕ್ರಮ ನಿರೂಪಣೆ ಮಾಡಿದರು. ಶ್ರೀ ಚಿದಾನಂದ ಜಡಿಮಠ ಇವರು ವಂದನಾರ್ಪಣೆ ಮಾಡಿದರು. ಸಮಾರಂಭದಲ್ಲಿ ಮಠದ ಅಭಿಮಾನಿ ಭಕ್ತರು ಹಾಗೂ ಚಿಕ್ಕಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಶೋಭೆಯನ್ನು ತಂದರು.
