ಉಡುಪಿ : ಶ್ರೀ ಅನಂತಪದ್ಮನಾಭ ದೇವಸ್ಥಾನ ಪಣಿಯಾಡಿ ಉಡುಪಿ ದೇವರ ಸನ್ನಿಧಾನದಲ್ಲಿ ಅಧಿಕ ಮಾಸದ ಪರ್ವಕಾಲದ ನಿಮಿತ್ತ ದಿನಾಂಕ 06 ಜೂನ್ 2026 ಶನಿವಾರದಂದು ಹಮ್ಮಿಕೊಳ್ಳಲಾಗಿದ್ದ ವಿಶೇಷ ಧಾರ್ಮಿಕ ಕಾರ್ಯಕ್ರಮದಲ್ಲಿ, ರಾಜ್ಯದ ಪ್ರಸಿದ್ಧ ಹರಿಕಥಾ ಸಂಸ್ಥೆಯಾದ ‘ಹಂಡೆ ಪ್ರತಿಷ್ಠಾನ’ದ ವತಿಯಿಂದ ಪ್ರಪ್ರಥಮ ಬಾರಿಗೆ ಹರಿಕಥಾ ಕಥಾಭಾಗವು ಅತ್ಯಂತ ಯಶಸ್ವಿಯಾಗಿ ಜರುಗಿತು.
ಪ್ರಸಿದ್ಧ ಹರಿಕಥಾ ವಿದುಷಿ ಶ್ರೀಮತಿ ರುಕ್ಮಿಣಿ ಹಂಡೆ ಇವರು ಸುಮಾರು ಒಂದೂಕಾಲು ಗಂಟೆಗಳ ಕಾಲ ‘ಶ್ರೀಕೃಷ್ಣ ಲೀಲೆ’ ಎಂಬ ಸತ್ಸಂಗ ಪ್ರಸಂಗವನ್ನು ಪ್ರಸ್ತುತಪಡಿಸಿದರು. ಕೃಷ್ಣನ ವೇಣುಗಾನಕ್ಕೆ ಮಾರುಹೋಗಿ ಗೋಪಿಕಾ ಸ್ತ್ರೀಯರು ತಮ್ಮ ಮನೆಗೆಲಸಗಳನ್ನೆಲ್ಲ ಮರೆತು ಓಡಿಬಂದ ದೃಶ್ಯ ಹಾಗೂ ಸಾಕ್ಷಾತ್ ಮಹಾಲಕ್ಷ್ಮಿಯೇ ಕೊಳಲಿನ ರೂಪದಲ್ಲಿ ಬಂದು ಕೃಷ್ಣನನ್ನು ಸೇರಿದ ಆಧ್ಯಾತ್ಮಿಕ ರಹಸ್ಯವನ್ನು ಅವರು ಸುಂದರವಾಗಿ ವರ್ಣಿಸಿದರು. ಭಗವನ್ನಾಮ ಸ್ಮರಣೆಯಿಂದ ಲೌಕಿಕ ಚಿಂತೆಗಳು ಮಾತ್ರವಲ್ಲದೆ, ರಕ್ತದೊತ್ತಡದಂತಹ ದೈಹಿಕ ಕಾಯಿಲೆಗಳೂ ದೂರವಾಗುತ್ತವೆ ಎಂಬ ಪ್ರಾಯೋಗಿಕ ಸಂದೇಶವನ್ನು ನೀಡಿದ ಅವರು, ಮಂಗಳ ಗೀತೆಯೊಂದಿಗೆ ಕಥಾಭಾಗವನ್ನು ಸಂಪನ್ನಗೊಳಿಸಿದರು.

ಕಾರ್ಯಕ್ರಮದ ಕೊನೆಯಲ್ಲಿ ಮಠದ ದಿವಾನರಾದ ನಾಗರಾಜ ಆಚಾರ್ಯ ಇವರು ವಿದುಷಿ ರುಕ್ಮಿಣಿ ಹಂಡೆಯವರಿಗೆ ಮಠದ ಪರವಾಗಿ ಗೌರವಾರ್ಪಣೆಯನ್ನು ನೆರವೇರಿಸಿದರು. ನೆರೆದಿದ್ದ ಭಕ್ತವೃಂದ ಹಾಗೂ ಜೀರ್ಣೋದ್ಧಾರ ಸಮಿತಿಯವರು ಚಪ್ಪಾಳೆ ತಟ್ಟುವ ಮೂಲಕ ಕಲಾವಿದರನ್ನು ಅಭಿನಂದಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಕಲಾವಿದರು, ಕಿರಿಯ ವಯಸ್ಸಿನ ಮಕ್ಕಳಲ್ಲಿ ಹರಿಕಥಾ ಕಲೆಯ ಆಸಕ್ತಿ ಮೂಡಿಸುವಲ್ಲಿ ಶ್ರಮಿಸುತ್ತಿರುವ ಗುರುಗಳ ಕೊಡುಗೆಯನ್ನು ಸ್ಮರಿಸಿದರು. ‘ಸುಗುಣ ಶಾಲೆ’ಯ ಪುಟಾಣಿ ಮಕ್ಕಳು ಕಳೆದ ಎರಡು ವರ್ಷಗಳಲ್ಲಿ ಸತತ 18 ದಿನಗಳ ಕಾಲ ನಡೆದ ಭಗವದ್ಗೀತಾ ಹರಿಕಥಾ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದನ್ನು ಶ್ಲಾಘಿಸಿದ ಅವರು, ಮುಂದಿನ ದಿನಗಳಲ್ಲಿ ಇದೇ ಶಾಲೆಯ ವಿದ್ಯಾರ್ಥಿಗಳಿಂದ ಸತತ 7 ದಿನಗಳ ಕಾಲ ವಿಶೇಷ ಹರಿಕಥಾ ಕಾರ್ಯಕ್ರಮವನ್ನು ಶ್ರೀಗಳ ಅನುಮತಿ ಪಡೆದು ಆಯೋಜಿಸುವ ಹಂಬಲವನ್ನು ವ್ಯಕ್ತಪಡಿಸಿದರು. ಹಂಡೆ ದಾಸ ಪ್ರತಿಷ್ಠಾನದ ಮುಂದಿನ ಪ್ರಮುಖ ಧಾರ್ಮಿಕ ಯೋಜನೆಯಾಗಿ, ಸೀಮಿತ ದಿನಗಳಲ್ಲಿ ಮಂತ್ರಾಲಯ ಕ್ಷೇತ್ರದಲ್ಲಿ ಮೂರು ದಿನಗಳ ಕಾಲ ಸಂಸ್ಥೆಯ ದಶಮಾನೋತ್ಸವ ಮಹೋತ್ಸವದ ಅಂಗವಾಗಿ ಅದ್ದೂರಿ ಹರಿಕಥಾ ಉತ್ಸವ ಹಾಗೂ ಸೇವೆಗಳು ಏರ್ಪಾಡಾಗಲಿವೆ ಎಂದು ತಿಳಿಸಿದರು.
