ಸಾಲಿಗ್ರಾಮ : ಹೊಸ ತಲೆಮಾರಿನ ಅರ್ಥದಾರಿಗಳ ಪರಿಶೋಧ ಕಾರ್ಯಕ್ರಮದಡಿಯಲ್ಲಿ ನಿರಂತರ ‘ಅರ್ಥಾಂಕುರ’ ಸರಣಿ ತಾಳಮದ್ದಳೆ ಕಾರ್ಯಕ್ರಮವನ್ನು ಬೇರೆ ಬೇರೆ ದೇಗುಲಗಳ ಸಹಕಾರದೊಂದಿಗೆ ಆಯೋಜಿಸುತ್ತಾ, ದಿನಾಂಕ 30 ಮೇ 2026ರಂದು ಸಂಜೆ ಗಂಟೆ 4-00ಕ್ಕೆ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದಲ್ಲಿ ಅದ್ದೂರಿಯಾಗಿ ಉದ್ಘಾಟನೆಗೊಳ್ಳಲಿದೆ. ಕಾರ್ಯಕ್ರಮವನ್ನು ದೇಗುಲದ ನೂತನ ಅಧ್ಯಕ್ಷರಾದ ಪ್ರಕಾಶ್ ಕಾರಂತ್ ಉದ್ಘಾಟಿಸಲಿದ್ದು, ಪಿ. ಕಿಶನ್ ಹೆಗ್ಡೆ, ಕೆ. ತಾರಾನಾಥ ಹೊಳ್ಳ, ಸಿ. ಚಂದ್ರಶೇಖರ ಉಪಾಧ್ಯ, ಮಲ್ಯಾಡಿ ಸೀತಾರಾಮ ಶೆಟ್ಟಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಯಶಸ್ವಿ ಕಲಾವೃಂದ ಕೊಮೆ ತೆಕ್ಕಟ್ಟೆ ಹಾಗೂ ಯಕ್ಷ ನುಡಿಸಿರಿ ಬಳಗ ಸಿದ್ಧಾಪುರ ಉಭಯ ಸಂಸ್ಥೆಗಳು ಹಾಗೂ ಶ್ರೀ ಗುರು ನರಸಿಂಹ ದೇವಸ್ಥಾನದ ಸಹಯೋಗದೊಂದಿಗೆ ಅನೇಕ ಹೊಸ ಅರ್ಥದಾರಿಗಳನ್ನು ರಂಗಕ್ಕೆ ತಯಾರಿ ಮಾಡುವ ಸಂಕಲ್ಪದೊಂದಿಗೆ ಈ ಕಾರ್ಯಕ್ರಮ ಈಗಾಗಲೆ ಯಶಸ್ಸು ಕಂಡಿದ್ದು, ಸಾಲಿಗ್ರಾಮದಲ್ಲಿ ಪ್ರಸಿದ್ಧ ಅರ್ಥದಾರಿಗಳಾದ ಡಾ. ಪ್ರಭಾಕರ ಜೋಶಿ, ಸುಣ್ಣಂಬಳ ವಿಶ್ವೇಶ್ವರ ಭಟ್, ವಾಸುದೇವ ರಂಗ ಭಟ್, ಡಾ. ವೈಕುಂಠ ಹೇರ್ಳೆ ಇವರೊಂದಿಗೆ ಹೊಸ ತಲೆಮಾರಿನ ಅರ್ಥದಾರಿಗಳಾಗಿ ರಾಘವೇಂದ್ರ ತುಂಗ ಕೋಟ, ಸುಧಾ ಮಣೂರು, ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಪಾತ್ರವಾಗಿ ರಂಗದಲ್ಲಿ ಒದಗಲಿದ್ದಾರೆ. ಹಿಮ್ಮೇಳದಲ್ಲಿ ಪ್ರಸಿದ್ಧ ಭಾಗವತರಾದ ಗಣೇಶ್ ಕುಮಾರ್ ಹೆಬ್ರಿ, ಪಂಚಮಿ ವೈದ್ಯ, ಎನ್.ಜಿ. ಹೆಗಡೆ ಯಲ್ಲಾಪುರ, ವಾಗ್ವಿಲಾಸ ಭಟ್ ಕಾಣಿಸಿಕೊಳ್ಳಲಿದ್ದಾರೆ. ‘ಇಂದ್ರಜಿತು ಕಾಳಗ’ ಯಕ್ಷಗಾನ ತಾಳಮದ್ದಳೆಯ ಸುಂದರ ಆಖ್ಯಾನದಲ್ಲಿ ಪ್ರಸಿದ್ಧ ಕಲಾವಿದರೊಂದಿಗೆ ಹೊಸ ತಲೆಮಾರಿನ ಅರ್ಥದಾರಿಗಳೂ ಭಾಗವಹಿಸಲಿದ್ದಾರೆ ಎಂದು ಪ್ರಸಿದ್ಧ ಸಂಘಟಕ ಡಾ. ಜಗದೀಶ್ ಶೆಟ್ಟಿ ತಿಳಿಸಿದ್ದಾರೆ.

