ಬೈಂದೂರು : ಲಾವಣ್ಯ (ರಿ.) ಬೈಂದೂರು ಇದರ 49ನೇ ವಾರ್ಷಿಕೋತ್ಸವ ಹಾಗೂ ಲಾವಣ್ಯದ ಸ್ಥಾಪಕಾಧ್ಯಕ್ಷ ದಿ. ಉಪ್ಪುಂದ ಶ್ರೀನಿವಾಸ ಪ್ರಭು ಸ್ಮರಣಾರ್ಥ ‘ರಂಗಶ್ರೀ-ರಂಗಹಬ್ಬ’ ಕಾರ್ಯಕ್ರಮವು ದಿನಾಂಕ 04 ಮಾರ್ಚ್ 2026ರಂದು ಬೈಂದೂರು ಶ್ರೀ ಶಾರದಾ ವೇದಿಕೆಯಲ್ಲಿ ಉದ್ಘಾಟನೆಗೊಂಡಿತು.

ಈ ಕಾರ್ಯಕ್ರಮ ಉದ್ಘಾಟಿಸಿದ ನೃಪತುಂಗ ಹೋಟೆಲ್ಸ್ ಪ್ರೈ.ಲಿ. ರಾಯಚೂರು ಮಾಲಕರಾದ ಯು. ರಾಮಚಂದ್ರ ಪ್ರಭು ಇವರು ಮಾತನಾಡಿ “ರಂಗಭೂಮಿ ಕ್ಷೇತ್ರದಲ್ಲಿ ಲಾವಣ್ಯ ತನ್ನ ಪರಿಪೂರ್ಣ ಸಾಧನೆಯ ಮೂಲಕ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದೆ. ಇಂದಿನ ಕಾಲಘಟ್ಟಕ್ಕೆ ತಕ್ಕಂತೆ ಅನೇಕ ಬದಲಾವಣೆಗಳಿಗೆ ಒಗ್ಗಿಕೊಂಡು ಅಭಿನಯ, ನಾಟಕದ ಆಯ್ಕೆ ಜತೆಗೆ ಹೊಸ ಪ್ರಸ್ತುತಿಗಳನ್ನು ರಂಗಭೂಮಿಗೆ ನೀಡುತ್ತಿರುವುದು ಸಂಸ್ಥೆಯ ಹೆಗ್ಗಳಿಕೆಯಾಗಿದೆ. ಲಾವಣ್ಯ ಸಂಸ್ಥೆ ಬೈಂದೂರಿನ ಸಾಂಸ್ಕೃತಿಕ ಹಿರಿಮೆಯನ್ನು ಜಗದಗಲ ಪನ್ನರಿಸಿದ ಸಾಧನೆ ಹೊಂದಿದೆ ಹಾಗೂ ಬೈಂದೂರಿನಂತಹ ಗ್ರಾಮೀಣ ಭಾಗದಲ್ಲಿ ಲಾವಣ್ಯ ಸಂಸ್ಥೆ ಕಲಾಭೂಮಿಯನ್ನು ಬೆಳೆಸಿದ ಹಿರಿಮೆ ಬೈಂದೂರಿನ ಹೆಮ್ಮೆಯಾಗಿದೆ” ಎಂದು ಹೇಳಿದರು.


ಲಾವಣ್ಯ ಸಂಸ್ಥೆಯ ಅಧ್ಯಕ್ಷರಾದ ನರಸಿಂಹ ಬಿ. ನಾಯಕ್ ಇವರು ಅಧ್ಯಕ್ಷತೆ ವಹಿಸಿದ್ದು, ಮುಖ್ಯ ಅತಿಥಿಗಳಾಗಿ ಖ.ರೈ.ಸೇ.ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ, ಉಡುಪಿ ಭಾರತೀಯ ಜೀವ ವಿಮಾ ನಿಗಮದ ವಿಭಾಗೀಯ ಪ್ರಬಂಧಕ ದಿನೇಶ ಪ್ರಭು, ಉದ್ಯಮಿ ಪ್ರಸಾದ ಪ್ರಭು, ಡಾ. ಪ್ರತಿಭಾ ರೈ ಬೈಂದೂರು, ಎಸ್.ಬಿ.ಐ. ಲೈಪ್ ಇನ್ಸುರೆನ್ಸ್ ಉಡುಪಿ ಸಹಾಯಕ ಪ್ರಬಂಧಕ ಪ್ರವೀಣ್ ಎಸ್. ಪ್ರಭು ಇವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಬೈಂದೂರು ರಿಥಂ ನೃತ್ಯ ಶಾಲೆಯ ಸ್ಥಾಪಕರಾದ ನಾಗೇಂದ್ರ ಕುಮಾರ್ ಬಂಕೇಶ್ವರರವರನ್ನು ಸಂಸ್ಥೆಯ ವತಿಯಿಂದ ಸಮ್ಮಾನಿಸಲಾಯಿತು.



ಮಾಜಿ ಅಧ್ಯಕ್ಷ ಉದಯ ಆಚಾರ್ಯ ಹರಗೋಡು ಸ್ವಾಗತಿಸಿ, ಮಾಜಿ ಅಧ್ಯಕ್ಷ ಗಣಪತಿ ಎಸ್. ಪ್ರಾಸ್ತಾವಿಕ ಮಾತುಗಳನ್ನಾಡಿದರು. ಲಾವಣ್ಯದ ಕಾರ್ಯದರ್ಶಿ ವಿಶ್ವನಾಥ ಆಚಾರ್ಯ ಸಂಸ್ಥೆಯ ಕಾರ್ಯಕ್ರಮದ ವರದಿ ವಾಚಿಸಿದರು. ಓಂ ಗಣೇಶ ಉಪ್ಪುಂದ ಕಾರ್ಯಕ್ರಮ ನಿರೂಪಿಸಿ, ಸುರೇಶ ಹುದಾರ್ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಬಿ. ಗಣೇಶ ಕಾರಂತ ಇವರ ನಿರ್ದೇಶನದಲ್ಲಿ ಲಾವಣ್ಯ (ರಿ.) ಬೈಂದೂರು ಇವರಿಂದ ‘ಸಂಜೆ ಹಾಡು’ ನಾಟಕ ಪ್ರದರ್ಶನಗೊಂಡಿತು.

