ಬಂಟ್ವಾಳ : ಕಲಾದೀಪ ಎಂದೇ ಕಲಾಕ್ಷೇತ್ರದಲ್ಲಿ ಪ್ರಖ್ಯಾತರಾದ ನೃತ್ಯದಂಪತಿ ವಿದ್ವಾನ್ ದೀಪಕ್ ಕುಮಾರ್ ಮತ್ತು ವಿದುಷಿ ಪ್ರೀತಿಕಲಾ ಪುತ್ತೂರು ಇವರ ವಿಭಿನ್ನ ಯೋಜನೆ ರಾಮನವಮಿಯ ಪ್ರಯುಕ್ತ ‘ಸಂಪೂರ್ಣ ರಾಮಾಯಣ ನೃತ್ಯ ಸಪ್ತಾಹ’ ಇದರ ಪ್ರಾರಂಭ ದಿನದ ಕಾರ್ಯಕ್ರಮವು ಬಿ.ಸಿ. ರೋಡಿನ ಸಂಚಯಗಿರಿಯ ಶ್ರೀ ಶ್ಯಾಂ ಪ್ರಸಾದ್ ಪಾರೆ ಮತ್ತು ಶ್ರೀಮತಿ ಪಲ್ಲವಿ ಸಾವಿತ್ರಿ ದಂಪತಿಗಳ ಸ್ವಗೃಹ ‘ಗಣೇಶ ಕೃಪಾ’ದಲ್ಲಿ ದಿನಾಂಕ 24 ಮಾರ್ಚ್ 2026ರಂದು ನಡೆಯಿತು.

ಈ ಕಾರ್ಯಕ್ರಮವನ್ನು ಅಬ್ಬಕ್ಕ ರಾಣಿ ತುಳು ಅಧ್ಯಯನ ಕೇಂದ್ರದ ಶ್ರೀ ತುಕಾರಾಮ್ ಪೂಜಾರಿಯವರು ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಕಾರ್ಯಕ್ರಮದ ಪ್ರಾಮುಖ್ಯತೆಯ ಬಗ್ಗೆ ಹಾಗೂ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ಇದರ ಬೇರೆ ಬೇರೆ ಪರಿಸರ ಸ್ನೇಹಿ ಯೋಜನೆಗಳ ಬಗ್ಗೆ ವಿದುಷಿ ವಸುಧಾ ಇವರು ವಿವರಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಕುಮಾರಿ ದಿಯಾ ಪ್ರವೀಣ್ ನಡೆಸಿಕೊಟ್ಟರು.


ವಿದ್ವಾನ್ ಗಿರೀಶ್ ಕುಮಾರ್ ಶಂಖನಾದ, ಕುಮಾರಿ ಮಾತಂಗಿ ಇವರು ಓಂಕಾರ, ಕುಮಾರಿ ಸನ್ನಿಧಿ ಇವರು ಪ್ರಾರ್ಥನೆ, ಕುಮಾರಿ ಅನುಧ್ಯಾ ಇವರು ಪಂಚಾಂಗ ಪಠಣ ನಡೆಸಿಕೊಟ್ಟರು. ಅಭ್ಯಾಗತರದ ಡಾಕ್ಟರ್ ತುಕಾರಾಮ ಪೂಜಾರಿ ಇವರ ಪರಿಚಯವನ್ನು ಕುಮಾರಿ ಸಿಂಚನ, ಗುರುಗಳಾದ ವಿದ್ವಾನ್ ದೀಪಕ್ ಕುಮಾರ್ ಹಾಗೂ ವಿದುಷಿ ಪ್ರೀತಿಕಲಾ ಇವರ ಪರಿಚಯವನ್ನು ಕುಮಾರಿ ಆರಾಧ್ಯ ಇವರು ನಡೆಸಿಕೊಟ್ಟರು. ನಂತರ ಕಲಾದೀಪ ದಂಪತಿಗಳಿಗೆ ಸಂಪೂರ್ಣ ರಾಮಾಯಣ ರೂಪಕ ಅದ್ಭುತವಾಗಿ ಮೂಡಿಬಂತು. ಕಾರ್ಯಕ್ರಮದ ಕೊನೆಯಲ್ಲಿ ಡಾಕ್ಟರ್ ತುಕಾರಾಮ ಪೂಜಾರಿ ಇವರು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.

ನಿವೃತ್ತ ಉಪನ್ಯಾಸಕರಾದ ಶ್ರೀ ರಾಜಮಣಿ ರಾಮಕುಂಜ ಇವರು ಕಾರ್ಯಕ್ರಮದ ವಿಮರ್ಶೆಯನ್ನು ಬಹಳ ಚೆನ್ನಾಗಿ ಮಾಡಿದರು. ಗುರುಗಳಾದ ವಿದ್ವಾನ್ ದೀಪಕ್ ಕುಮಾರ್ ಹಾಗೂ ವಿದುಷಿ ಪ್ರೀತಿಕಲಾ ಇವರು ಕಾರ್ಯಕ್ರಮದ ಬಗ್ಗೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಕೊನೆಯಲ್ಲಿ ಶ್ಯಾಮ್ ಪ್ರಸಾದ್ ಇವರು ವಂದನಾರ್ಪಣೆಯನ್ನು ಮಾಡಿದರು.


