ಪುತ್ತೂರು : ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು, ವಿವೇಕಾನಂದ ಸ್ನಾತಕೋತ್ತರ ಅಧ್ಯಯನ ಕೇಂದ್ರ ಮತ್ತು ಐಕ್ಯೂಎಸಿ, ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ಸಹಯೋಗದಲ್ಲಿ ದಿನಾಂಕ 06 ಮಾರ್ಚ್ 2026ರಂದು ‘ಪತ್ರಕರ್ತ ಮೇಷ್ಟ್ರು’ ಕಾರ್ಯಾಗಾರ ನಡೆಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಪುತ್ತೂರಿನ ಸುದ್ದಿ ಪತ್ರಿಕೆಯ ವರದಿಗಾರ ರಾಕೇಶ್ ನಾಯ್ಕ್ “ಪತ್ರಿಕೋದ್ಯಮದಲ್ಲಿ ಬಹಳಷ್ಟು ಅವಕಾಶಗಳಿವೆ. ಆದರೆ ಪತ್ರಿಕೋದ್ಯಮದಲ್ಲಿ ಹಿಡಿತ ಸಿಗಬೇಕಾದರೆ ಪತ್ರಿಕೆಯಲ್ಲಿ ಕೆಲಸ ಮಾಡುವುದು ಮುಖ್ಯ. ಪತ್ರಿಕೆಯಲ್ಲಿ ಹಿಡಿತವನ್ನು ಹೊಂದಿದರೆ ಪತ್ರಿಕೋದ್ಯಮ ಎಲ್ಲಾ ಕ್ಷೇತ್ರದಲ್ಲೂ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತದೆ. ಇದರೊಂದಿಗೆ ಇಂದು ಡಿಜಿಟಲ್ ಪರಿಕರಗಳ ಬಳಕೆ ಹೆಚ್ಚಾಗಿರುವುದರಿಂದ ಪತ್ರಿಕೋದ್ಯಮದ ಕೆಲಸಗಳು ಸರಳವಾಗಿದೆ. ಪತ್ರಿಕೋದ್ಯಮ ಸಮಾಜ ಸೇವೆಯಿಂದ ಉದ್ಯಮದತ್ತ ಸಾಗಿದೆ. ಇದನ್ನು ಸಕಾರತ್ಮಕವಾಗಿ ಬಳಸಿಕೊಳ್ಳುವ ಜವಾಬ್ದಾರಿ ಪತ್ರಕರ್ತರ ಮೇಲಿದೆ” ಎಂದು ಹೇಳಿದರು.

ಕಾಲೇಜಿನ ಸ್ನಾತಕೋತ್ತರ ವಿಭಾಗದ ನಿರ್ದೇಶಕಿ ಡಾ. ವಿಜಯ ಸರಸ್ವತಿ ಬಿ. ಮಾತನಾಡಿ, “ಪತ್ರಿಕೋದ್ಯಮ ವಿಭಾಗ ಸಮಾಜದ ಬೇರು ಇದ್ದಂತೆ. ಜಗತ್ತಿನಲ್ಲಿ ನಡೆಯುವ ಪ್ರತಿಯೊಂದು ವಿಚಾರವನ್ನು ಸಮಾಜಕ್ಕೆ ತಲುಪಿಸುವ ಕೆಲಸವನ್ನು ಪತ್ರಿಕೋದ್ಯಮ ಮಾಡುತ್ತದೆ. ಒಬ್ಬ ಪತ್ರಕರ್ತ ಪ್ರತೀ ಹಂತದಲ್ಲೂ ಜಾಗರೂಕತೆಯಿಂದ ಕಾರ್ಯ ನಿರ್ವಹಿಸಬೇಕಾಗುತ್ತದೆ. ಜೊತೆಗೆ ಬದುಕಿನಲ್ಲಿ ಏನೆಲ್ಲಾ ಕಲಿಯಬಹುದು ಎನ್ನುವುದನ್ನು ನಮಗೇ ಪತ್ರಿಕೋದ್ಯಮ ತಿಳಿಸುತ್ತದೆ” ಎಂದರು.
ವೇದಿಕೆಯಲ್ಲಿ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಶ್ವೇತಾ, ಹವ್ಯಶ್ರೀ ಹಾಗೂ ದಿವ್ಯಶ್ರೀ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪ್ರಥಮ ಸ್ನಾತಕೋತ್ತರ ಪತ್ರಿಕೋದ್ಯಮ ವಿದ್ಯಾರ್ಥಿನಿ ಪ್ರಮೀಳಾ ವಂದಿಸಿ, ಹರ್ಷಿತಾ ಸ್ವಾಗತಿಸಿ, ನಿರೂಪಿಸಿದರು. ಕಾರ್ಯಕ್ರಮದ ಬಳಿಕ ಪುಟ ವಿನ್ಯಾಸದ ಕುರಿತು ಪ್ರಾಯೋಗಿಕ ಕಾರ್ಯಾಗಾರ ನಡೆಯಿತು.
