ಬೆಂಗಳೂರಿನ ಹನಿಮಳೆಯ ತಂಪು ಸಂಜೆ. ಒಳಗೆ- ಬೆಂಗಳೂರು ಗಾಯನ ಸಮಾಜದ ವೇದಿಕೆಯ ಮೇಲೆ ‘ಮಾನಸ ಭರತನಾಟ್ಯ ಶಾಲೆ’ಯ ಕಲಾಸಂಭ್ರಮ. ನೃತ್ಯಗುರು ವಿದುಷಿ ಮಾನಸ ಶಂಕರ್ ಅಪೂರ್ವವಾಗಿ ಸಂಯೋಜಿಸಿದ ಕಲಾ ವೈವಿಧ್ಯದ ಮನತಣಿಸಿದ ವರ್ಣರಂಜಿತ ಕಾರ್ಯಕ್ರಮಗಳು ಒಂದೇ ಎರಡೇ? ಕಣ್ಮನ ಸೂರೆಗೊಂಡ ಪ್ರತಿಯೊಂದು ನೃತ್ಯಪುಷ್ಪವೂ ಚೆಂದವೋ ಚೆಂದ. ಇದು ಅತಿಶಯೋಕ್ತಿ ಖಂಡಿತಾ ಅಲ್ಲ. ಮೊದಾಲಿನಿಂದ ಕಡೆಯವರೆಗೂ ಕುತೂಹಲ- ಆಸಕ್ತಿ ಕೆರಳಿಸುತ್ತ ಸಾಗಿದ ನೃತ್ಯಾವಳಿಗಳನ್ನು ಪ್ರಸ್ತುತಪಡಿಸಿದ ಉದಯೋನ್ಮುಖ ನೃತ್ಯ ಕಲಾವಿದರ ಪ್ರತಿಭೆಯ ಅನಾವರಣವಾಯಿತು.

ಹೆಚ್ಚೇನು, ನಂದನಲೋಕದ ಬಣ್ಣ ಬಣ್ಣದ ಸುಂದರ ಹೂವುಗಳು ಪ್ರಫುಲ್ಲ ನಲಿಯುತ್ತ ನೃತ್ಯದ ಆಮೋದದಲ್ಲಿ ಕುಣಿದಾಡಿದ ದೃಶ್ಯ ನಿಜಕ್ಕೂ ಸ್ಮರಣೀಯ. ತಾವು ಕಲಿತ ನೃತ್ಯ ಕಲೆಯ ಅಪೂರ್ವ ಪ್ರದರ್ಶನ ಮಾಡಿ ಮಿಂಚಿದ ಪುಟಾಣಿ ತಾರೆಗಳ ಗುಂಪು, ಆಕರ್ಷಕ ವೇಷಭೂಷಣಗಳಲ್ಲಿ ಶೋಭಿಸುತ್ತ, ಸಾಂಪ್ರದಾಯಕ ಶಾಸ್ತ್ರೀಯ ದೈವೀಕ ಕೃತಿಗಳಿಂದ ಹಿಡಿದು ಜಾನಪದ ನೃತ್ಯದ ಸೊಗಡನ್ನು ಉಣಿಸಿ, ರಮಣೀಯ ದೇವರನಾಮಗಳನ್ನು ಸಾಕ್ಷಾತ್ಕರಿಸಿ, ಮನಮೋಹಕ ‘ಪುಣ್ಯಕೋಟಿ’ ಹಸುವಿನ ಮನೋಜ್ಞ ನೃತ್ಯರೂಪಕವನ್ನು ಮನಮುಟ್ಟುವಂತೆ ಪ್ರಸ್ತುತಪಡಿಸಿದರು. ಜೊತೆಗೆ ಕುಣಿತದ ಲಯದ ಕಣ್ಮನ ಸೂರೆಗೊಂಡ ಕಂಸಾಳೆ ಜಾನಪದ ನೃತ್ಯದ ಜ್ಹೆಂಕಾರವನ್ನು ರಂಗದ ತುಂಬ ಪಸರಿಸಿ ಸಂಭ್ರಮಿಸಿ, ಕೊನೆಯಲ್ಲಿ ‘ವೈವಿಧ್ಯತೆಯಲ್ಲಿ ಏಕತೆ’ ಎಂಬ ಮನನೀಯ ಸಂದೇಶವನ್ನು ಸಾರಿದ, ದೇಶದ ಸಮಗ್ರ ಕಲೆಗಳ ಸೊಬಗನ್ನು ಏಳು ರಾಜ್ಯಗಳ ನೃತ್ಯದ ಸೊಗಡನ್ನು ಉಣಬಡಿಸಿ, ಒಂದೇ ಹರವಿನಲ್ಲಿ ಅದ್ಭುತವಾಗಿ ಅನಾವರಣಗೊಳಿಸಿದ ‘ಮಾನಸ ಭರತನಾಟ್ಯ ಶಾಲೆ’ಯ ಶಿಷ್ಯರು ಪ್ರಥಮ ವಾರ್ಷಿಕೋತ್ಸವದ ಸಾರ್ಥಕ ಕಲಾ ಸಂಭ್ರಮದಲ್ಲಿ ಕಲಾರಸಿಕರನ್ನು ಭರಪೂರ ಮನರಂಜಿಸಿದರು ಎಂದರೆ ಅತಿಶಯೋಕ್ತಿಯಲ್ಲ.

ಪ್ರದರ್ಶನಕ್ಕೆ ಆರಿಸಿಕೊಂಡ ಕೃತಿಗಳು ವಿಶಿಷ್ಟ ಹಾಗೂ ಆಕರ್ಷಕವಾಗಿದ್ದವು. ಎಲ್ಲದರಲ್ಲೂ ಒಪ್ಪ- ಓರಣ. ಕೇವಲ ನೃತ್ಯ ಪ್ರದರ್ಶನವಲ್ಲ. ಅತಿಥಿಗಳು ದೀಪ ಬೆಳಗಿದ ನಂತರ ‘ಜಯ ಭಾರತ ಜನನಿಯ ತನುಜಾತೆ’ಯ ಗಾಯನದ ಮೂಲಕ ಶುಭಾರಂಭ. ಸಾಂಪ್ರದಾಯಕ ಕೃತಿಗಳಾದ ಪುಷ್ಪಾಂಜಲಿ, ಗಣೇಶ ಪಂಚರತ್ನಂ, ಕಂಜದಳಾಯತಾಕ್ಷಿ ಕಾಮಾಕ್ಷಿಯ ಸ್ತುತಿ, ಶ್ಲೋಕ, ಕಾಳಿ, ಮುರುಗ, ನಟರಾಜ ಕೌತ್ವಂಗಳು, ಶಿವಸ್ತುತಿ, ದೇವರನಾಮಗಳು, ಸೊಗಸಾದ ನೊಟ್ಟು ಸ್ವರ ಶ್ರೀಕೃಷ್ಣನ ರಾಸಲೀಲಾ ಮತ್ತು ತಿಲ್ಲಾನದವರೆಗೂ ಅನೇಕಾನೇಕ ವೈವಿಧ್ಯಪೂರ್ಣ ಕೃತಿಗಳ ಸಾಕ್ಷಾತ್ಕಾರದ ರಸಾನುಭವ ನೀಡಿದ ನರ್ತನವನ್ನು ಕಂಡು ಸುಖಿಸುವ ಭಾಗ್ಯ ಅಂದು ಕಲಾರಸಿಕರದಾಗಿತ್ತು. ಅಚ್ಚುಕಟ್ಟಾಗಿ ಮೂಡಿಬಂದ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನೃತ್ಯಗುರು ಕಾಮಾಕ್ಷಿ, ಲೇಖಕಿ ಹಾಗೂ ಕಲಾ ವಿಮರ್ಶಕಿ ವೈ.ಕೆ. ಸಂಧ್ಯಾ ಶರ್ಮ, ಉದ್ಯಮಿ ಗಣೇಶ ಪ್ರಭು ಮತ್ತು ಗೌರೀ ಪ್ರಭು, ಜೆ.ಎಸ್.ಎಸ್. ಆಡಳಿತ ಸಂಸ್ಥೆಗಳ ತ್ರಿಪುರಾಂತಕ ಮತ್ತು ಲಕ್ಷ್ಮೀ ಪ್ರಸಾದ್ ಆಗಮಿಸಿದ್ದರು.

ಇದು ಪ್ರಥಮ ವರ್ಷದ ವಾರ್ಷಿಕೋತ್ಸವ ಎನಿಸದೆ, ನುರಿತ ಕಲಾ ಪ್ರಪೂರ್ಣ ರಸಗುಚ್ಚ, ನೃತ್ಯ ನೈವೇದ್ಯ ಎನಿಸಲು ಮುಖ್ಯ ಕಾರಣ, ಸೃಜನಶೀಲ, ಪ್ರಯೋಗಶೀಲೆಯಾದ ನೃತ್ಯಗುರು ಮಾನಸಾ ದೇವಿ ಶಂಕರರ ಬದ್ಧತೆಯ ತರಬೇತಿ, ನೃತ್ಯ ಸಂಯೋಜನೆ ಮತ್ತು ಮಾರ್ಗದರ್ಶನ ಅನುಪಮ ಎನಿಸಿಕೊಂಡಿತು. ಇಡೀ ಕಾರ್ಯಕ್ರಮದ ರೂವಾರಿ ಶಂಕರ್ ಅವರ ಕಲಾಪೂರ್ಣ ಆಯೋಜನೆ, ಹಿನ್ನಲೆಯ ಪರದೆಯ ಮೇಲೆ ಮೂಡಿ ಬರುತ್ತಿದ್ದ ಪೂರಕ ಚಿತ್ರಗಳು, ಮಲ್ಟೀ ಮೀಡಿಯಾದ ಸಮರ್ಥ ತಾಂತ್ರಿಕ ಬಳಕೆ, ಪರಿಣಾಮಕಾರಿ ಬೆಳಕಿನ ಜಾಲ ವೃತ್ತಿಪರ ಪಾರಮ್ಯದಲ್ಲಿ ರಸಿಕರೆಲ್ಲರ ಪ್ರಶಂಸೆಗೆ ಪಾತ್ರವಾಯಿತು.

*** ವೈ.ಕೆ. ಸಂಧ್ಯಾ ಶರ್ಮ
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.
