ಮಂಚಿ : ಲಯನ್ಸ್ ಸೇವಾ ಟ್ರಸ್ಟ್ (ರಿ.) ಮಂಚಿ ಹಾಗೂ ಲಯನ್ಸ್ ಕ್ಲಬ್ ಕೊಳ್ನಾಡು – ಸಾಲೆತ್ತೂರು ಇವರ ಸಹಯೋಗದಲ್ಲಿ ವಸುಧಾರಾ ಕಲಾಕೇಂದ್ರ ಬೋಳಂತೂರು – ಮಂಚಿ ವತಿಯಿಂದ ಏರ್ಪಡಿಸಲಾದ ‘ಕಲಾಧಾರಾ – 8’ ನೃತ್ಯ ಕಾರ್ಯಕ್ರಮವು ದಿನಾಂಕ 19 ಏಪ್ರಿಲ್ 2026ರಂದು ಮಂಚಿಯ ಲಯನ್ಸ್ ಸೇವಾ ಮಂದಿರದಲ್ಲಿ ಯಶಸ್ವಿಯಾಗಿ ನೆರವೇರಿತು.


ಕಾರ್ಯಕ್ರಮದಲ್ಲಿ ವಿದುಷಿ ವಸುಧಾ ಜಿ.ಎನ್. ಇವರ ಶಿಷ್ಯೆ ಹಾಗೂ ಗುರು ವಿದ್ವಾನ್ ಬಿ. ದೀಪಕ್ ಕುಮಾರ್ ಅವರ ಮಾರ್ಗದರ್ಶನದಲ್ಲಿಯೂ ತರಬೇತಿ ಪಡೆದ ಕುಮಾರಿ ಸಂಗೀತಾ ಇವರು ತಮ್ಮ ಮೊದಲ ಏಕ ನೃತ್ಯ ಕಾರ್ಯಕ್ರಮವನ್ನು ನೀಡುವ ಮೂಲಕ ಗಮನ ಸೆಳೆದರು. ಇದೇ ಸಂದರ್ಭದಲ್ಲಿ, ವಸುಧಾರಾ ಕಲಾಕೇಂದ್ರದಿಂದ ಈ ಸರಣಿಯಲ್ಲಿ ವೇದಿಕೆಯೇರಿದ ಮೊದಲ ಕಲಾವಿದೆ ಎಂಬ ವಿಶೇಷತೆಯನ್ನೂ ಅವರು ಪಡೆದುಕೊಂಡರು. ಈ ಮೂಲಕ ‘ಕಲಾಧಾರಾ’ ಸರಣಿಯನ್ನು ಆರಂಭಿಸಿದ ಉದ್ದೇಶವೂ ಸಾರ್ಥಕಗೊಂಡಿತು.


ಪುಷ್ಪಾಂಜಲಿ (ಅಮೃತವರ್ಷಿಣಿ ರಾಗ), ವಸಂತ ರಾಗದ ಆದಿತಾಳದಲ್ಲಿ ಜತಿಸ್ವರಂ, ಕಲ್ಯಾಣಿ ರಾಗದ ಆದಿತಾಳದಲ್ಲಿ ದೇವಿ ಪಾರ್ವತಿ ಕುರಿತ ಕೃತಿ, ಖಮಾಚ್ ರಾಗದ ಮಿಶ್ರ ಛಾಪು ತಾಳದ ಜಾವಳಿ ಹಾಗೂ ರಾಗಮಾಲಿಕೆಯ ಆದಿತಾಳದ ತಿಲ್ಲಾನ ಇತ್ಯಾದಿ ವಿನ್ಯಾಸಬದ್ಧ ಪ್ರದರ್ಶನಗಳ ಮೂಲಕ ತಮ್ಮ ನೃತ್ಯ ಕೌಶಲ್ಯವನ್ನು ಸಮರ್ಥವಾಗಿ ಪ್ರದರ್ಶಿಸಿದರು. ಅವರ ಲಯಬದ್ಧತೆ, ಅಂಗಿಕಾಭಿನಯ ಹಾಗೂ ಭಾವವ್ಯಕ್ತತೆ ಕಾರ್ಯಕ್ರಮದ ಮೆರುಗು ಹೆಚ್ಚಿಸಿತು.

ಅಭ್ಯಾಗತರಾಗಿ ಆಗಮಿಸಿದ ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕಿ ಶ್ರೀಮತಿ ಶಾರದಾ ಎಸ್. ರಾವ್ ಇವರು ಕಲಾವಿದೆಯ ಸಾಧನೆಯನ್ನು ಪ್ರಶಂಸಿಸಿ, ಇಂತಹ ವೇದಿಕೆಗಳು ಯುವ ಪ್ರತಿಭೆಗಳಿಗೆ ಪ್ರೇರಣೆಯಾಗುತ್ತವೆ ಎಂದು ಅಭಿಪ್ರಾಯಪಟ್ಟರು. ಇದೇ ವೇಳೆ ಬೆಂಗಳೂರು ಮೂಲದ ಫ್ರೀಲಾನ್ಸರ್ ಶ್ರೀಮತಿ ವಿಜೇತಾ ಎಂ. ಕಾರ್ತಿಕ್ ಇವರು ನೃತ್ಯ ಪ್ರದರ್ಶನದ ಶೈಲಿ, ನೃತ್ಯದ ಆಹಾರ್ಯ ಹಾಗೂ ಶಿಸ್ತಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಹಿಮ್ಮೇಳದಲ್ಲಿ ನಟುವಾಂಗವನ್ನು ವಿದ್ವಾನ್ ಬಿ. ದೀಪಕ್ ಕುಮಾರ್ ಪುತ್ತೂರು ನಿರ್ವಹಿಸಿದರೆ, ಹಾಡುಗಾರಿಕೆಯನ್ನು ವಿದುಷಿ ಪ್ರೀತಿಕಲಾ ಪುತ್ತೂರು, ಮೃದಂಗವನ್ನು ಶ್ರೀಚಂದ್ರಶೇಖರ ಆಚಾರ್ಯ ಗುರುವಾಯನಕೆರೆ ಹಾಗೂ ಪಿಟೀಲನ್ನು ವಿದ್ವಾನ್ ಪ್ರಣೀತ್ ಬಳ್ಳಕುರಾಯ ಉಡುಪಿ ನಿರ್ವಹಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಕಲಾರಸಿಕರು ನೃತ್ಯ ಪ್ರದರ್ಶನವನ್ನು ಮೆಚ್ಚುಗೆ ವ್ಯಕ್ತಪಡಿಸಿದರು.


