ಮಂಗಳೂರು : ತುಳು ಭಾಷೆಗೆ ಅನುವಾದಿಸಲಾದ ಸಂತ ಶ್ರೇಷ್ಠ ಕನಕದಾಸರ ಕಾವ್ಯ – ಕೀರ್ತನೆಯ ಕುರಿತು ಸಂವಾದ ಹಾಗೂ ಕಾವ್ಯ ವಾಚನ ಕಾರ್ಯಕ್ರಮವನ್ನು ದಿನಾಂಕ 13 ಜೂನ್ 2026ರ ಮಧ್ಯಾಹ್ನ 3-00 ಗಂಟೆಗೆ ಮಂಗಳೂರು ಉರ್ವಸ್ಟೋರ್ನಲ್ಲಿರುವ ತುಳು ಭವನದ ಸಿರಿ ಚಾವಡಿಯಲ್ಲಿ ಹಮ್ಮಿಕೊಳ್ಳಲಾಗಿದೆ. ರಾಜ್ಯ ಸರಕಾರದ ಸಂತ ಕನಕದಾಸ ಮತ್ತು ತತ್ತ್ವ ಪದಕಾರರ ಅಧ್ಯಯನ ಕೇಂದ್ರ ಕನಕದಾಸರ ಸಮಗ್ರ ಸಾಹಿತ್ಯವನ್ನು ತುಳು ಸೇರಿದಂತೆ ಒಟ್ಟು ಹದಿನಾಲ್ಕು ಭಾಷೆಗೆ ಅನುವಾದಿಸಿ ಇತ್ತೀಚೆಗೆ ಬಿಡುಗಡೆ ಮಾಡಿತ್ತು.
ತುಳು ಅನುವಾದ ಸಂಪುಟದ ಸಂಪಾದಕರಾಗಿ ಕಾರ್ಯನಿರ್ವಹಿಸಿದ ವಿದ್ವಾಂಸ ಪ್ರೊ. ಎ.ವಿ. ನಾವಡ ಇವರು ಈ ವಿಚಾರ ಸಂಕಿರಣವನ್ನು ಉದ್ಘಾಟಿಸಲಿದ್ದು, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ತಾರಾನಾಥ ಗಟ್ಟಿ ಕಾಪಿಕಾಡ್ ಅಧ್ಯಕ್ಷತೆ ವಹಿಸಲಿದ್ದಾರೆ. ಕನ್ನಡ ತುಳು ವಿದ್ವಾಂಸ ಪ್ರೊ. ಬಿ. ಶಿವರಾಮ ಶೆಟ್ಟಿ ಕೃತಿ ಅವಲೋಕನ ಮಾಡಲಿದ್ದು, ನಿವೃತ್ತ ಪ್ರಾಂಶುಪಾಲ ಪ್ರೊ. ಕೃಷ್ಣಮೂರ್ತಿ, ಕೆನರಾ ಪಿ.ಯು. ಕಾಲೇಜಿನ ಉಪನ್ಯಾಸಕ ರಘು ಇಡ್ಕಿದು, ಆಳ್ವಾಸ್ ಕಾಲೇಜಿನ ಕನ್ನಡ ಉಪನ್ಯಾಸಕಿ ಡಾ. ಸುಧಾರಾಣಿ ಪ್ರತಿಕ್ರಿಯೆ ನೀಡಲಿದ್ದಾರೆ.
ಕೃತಿಯ ಅನುವಾದಕರಾದ ಆತ್ರಾಡಿ ಅಮೃತಾ ಶೆಟ್ಟಿ, ಮುದ್ದು ಮೂಡುಬೆಳ್ಳೆ, ಭಾಸ್ಕರ್ ರೈ ಕುಕ್ಕುವಳ್ಳಿ, ಡಾ. ಕಾತ್ಯಾಯಿನಿ ಕುಂಜಿಬೆಟ್ಟು, ಪ್ರೊ. ಟಿ.ಎ.ಎನ್. ಖಂಡಿಗೆ, ಡಾ. ವಸಂತ ಕುಮಾರ್ ಪೆರ್ಲ ಕಾರ್ಯಕ್ರಮದಲ್ಲಿ ಗೌರವ ಅತಿಥಿಗಳಾಗಿ ಉಪಸ್ಥಿತರಿರುವರು. ಸಂವಾದ ಕಾರ್ಯಕ್ರಮದ ಆರಂಭದಲ್ಲಿ ಗಾಯಕ ನಾದಾ ಮಣಿನಾಲ್ಕೂರು ಇವರಿಂದ ಕನಕದಾಸರ ತುಳುವಿಗೆ ಅನುವಾದಗೊಂಡ ಕಾವ್ಯಗಳ ಗಾಯನ ಕಾರ್ಯಕ್ರಮ ನಡೆಯಲಿದೆ.

