ಕಾಸರಗೋಡು : ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಆಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ಕಾಸರಗೋಡು, ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘ, ಕೀರಿಕ್ಕಾಡು ಸ್ಮಾರಕ ಸಾಂಸ್ಕೃತಿಕ ಅಧ್ಯಯನ ಕೇಂದ್ರ ದೇಲಂಪಾಡಿ, ಗಿಳಿವಿಂಡು ಮಂಜೇಶ್ವರ ಕಾಲೇಜು, ಸ್ನೇಹರಂಗ ಕಾಸರಗೋಡು ಸರಕಾರೀ ಕಾಲೇಜು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ದಿನಾಂಕ 31 ಮೇ 2026ರಂದು ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯ ಸಭಾಭವನದಲ್ಲಿ ಕನ್ನಡದ ಹಿರಿಯ ಸಾಹಿತಿ, ಡಾ. ರಮಾನಂದ ಬನಾರಿ 85ರ ಅಭಿನಂದನಾ ಪೂರ್ವ ‘ಮಂಜೇಶ್ವರದ ಮುತ್ತು’ ಸಾಕ್ಷ್ಯ ಚಿತ್ರದ ಬಿಡುಗಡೆ, ಕುಟ್ಟಿಯಾನ ಮುಹಮ್ಮದ್ ಅವರ ಕನಸುಗಳ ಭೂಮಿಗೆ ಯಾತ್ರೆ, ಕನ್ನಡಿಯಲ್ಲಿ ಕನ್ನಡಿಗ ಕೃತಿ ಸರಣಿಯ 7ನೇ ಸಂಚಿಕೆ ಬಿಡುಗಡೆ ಮತ್ತು ಕನ್ನಡ ಸಾಹಿತ್ಯ ಸಂಸ್ಕೃತಿ ಸಮ್ಮೇಳನ ನಡೆಯಲಿದೆ.
ಅಂದು ಬೆಳಗ್ಗೆ 9-00 ಗಂಟೆಗೆ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಇವರು ಕಾರ್ಯಕ್ರಮ ಉದ್ಘಾಟಿಸುವರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಇವರು ‘ಮಂಜೇಶ್ವರದ ಮುತ್ತು’ ಸಾಕ್ಷ್ಯ ಚಿತ್ರವನ್ನು ಲೋಕಾರ್ಪಣೆ ಮಾಡುವರು. ಕರ್ನಾಟಕ ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್ ಇವರು ಕುಟ್ಟಿಯಾನ ಮುಹಮ್ಮದ್ ಇವರ ‘ಕನಸುಗಳ ಭೂಮಿಗೆ ಯಾತ್ರೆ’ ಕೃತಿಯನ್ನು ಬಿಡುಗಡೆಗೊಳಿಸುವರು.
ಖ್ಯಾತ ಸಾಹಿತಿ ಡಾ. ಮೋಹನ ಕುಂಟಾರು ಅಧ್ಯಕ್ಷತೆ ವಹಿಸಲಿದ್ದು, ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತೀಹಳ್ಳಿ, ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯ ಪ್ರಬಂಧಕ ಜಯದೇವ ಖಂಡಿಗೆ, ಕ.ಸಾ.ಪ. ಕೇರಳ ಗಡಿನಾಡ ಘಟಕದ ಅಧ್ಯಕ್ಷರಾದ ಡಾ. ಜಯಪ್ರಕಾಶ್ ನಾರಾಯಣ ತೊಟ್ಟಿತ್ತೋಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಕಾಸರಗೋಡು ಸರಕಾರಿ ಕಾಲೇಜಿನ ಪ್ರಾಧ್ಯಾಪಕ ಡಾ. ರಾಧಾಕೃಷ್ಣ ಬೆಳ್ಳೂರು ಅಭಿನಂದನಾ ಭಾಷಣ ಮಾಡುವರು. ಆಕಾಶವಾಣಿ ವಿಶ್ರಾಂತ ಕಾರ್ಯಕ್ರಮ ನಿರ್ದೇಶಕ ಡಾ. ವಸಂತಕುಮಾರ ಪೆರ್ಲ ಪ್ರಾಸ್ತಾವಿಕ ಭಾಷಣ ಮಾಡುವರು. ಮಂಜೇಶ್ವರದ ಮುತ್ತು ಸಾಕ್ಷ ಚಿತ್ರದ ನಿರ್ದೇಶಕ ಡಾ. ಪ್ರವೀಣರಾಜ್ ಎಸ್.ರಾವ್ ಇವರನ್ನು ಈ ಸಂದರ್ಭ ಗೌರವಿಸಲಾಗುವುದು. ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಎ.ಆರ್ನ. ಸುಬ್ಬಯ್ಯ ಕಟ್ಟಿ ಸಾಹಿತಿಗಳಾದ ವಿಜಯಲಕ್ಷ್ಮಿ ಶಾನುಭೋಗ್, ಡಾ. ಮಹೇಶ್ವರಿ ಯು. ಉಪಸ್ಥಿತರಿರುವರು.
ಬಳಿಕ ನಡೆಯುವ ಉಪನ್ಯಾಸ ಕಾರ್ಯಕ್ರಮದಲ್ಲಿ ವಿಶ್ರಾಂತ ಪ್ರಾಂಶುಪಾಲ ಡಾ. ವರದರಾಜ ಚಂದ್ರಗಿರಿ ಇವರು ‘ಕಾಸರಗೋಡಿನ ಸಾಹಿತ್ಯದ ಸ್ಥೂಲ ಅವಲೋಕನ’ ಮಾಡುವರು. ಕಾಸರಗೋಡು ಸರಕಾರಿ ಕಾಲೇಜಿನ ಪ್ರಾಧ್ಯಾಪಕ ಡಾ. ರತ್ನಾಕರ ಮಲ್ಲಮೂಲೆ ಕಾಸರಗೋಡಿನ ಸಮಗ್ರ ಸಂಸ್ಕೃತಿ ಬಗ್ಗೆ ವಿಷಯ ಮಂಡಿಸುವರು.
ಅಪರಾಹ್ನ ನಡೆಯುವ ವಿಚಾರಗೋಷ್ಠಿಯಲ್ಲಿ ‘ಡಾ. ಬನಾರಿಯವರ ಕಾವ್ಯಗಳ ಕುರಿತು’ ಸಾಹಿತಿ ರಾಧಾಕೃಷ್ಣ ಕೆ. ಉಳಿಯತ್ತಡ್ಕ, ‘ಬನಾರಿಯವರ ಗದ್ಯ ಮತ್ತು ಅರ್ಥಗಾರಿಕೆಯ ಕುರಿತು’ ಪ್ರಾಧ್ಯಾಪಕ ಡಾ. ಧನಂಜಯ ಕುಂಬಳೆ, ‘ಕರ್ನಾಟಕದೊಂದಿಗೆ ಕಾಸರಗೋಡಿನ ಸಾಂಸ್ಕೃತಿಕ ವಿಲೀನೀಕರಣದ ಕುರಿತು’ ಉಪನ್ಯಾಸಕ ಟಿ.ಎ.ಎನ್. ಖಂಡಿಗೆ ಮಾತನಾಡುವರು. ‘ನ್ಯಾಯಾಂಗದ ಮುಂದೆ ಕಾಸರಗೋಡಿನ ಸಮಸ್ಯೆ’ ಎಂಬ ವಿಷಯದ ಕುರಿತು ವಕೀಲ ಎನ್.ಕೆ. ಮೋಹನದಾಸ್, ‘ಕಾಸರಗೋಡಿನ ಕನ್ನಡ ಸಂಘಟನೆಗಳ ಪಾತ್ರದ ಬಗ್ಗೆ’ ಪ್ರಾಧ್ಯಾಪಕ ಡಾ. ಬಾಲಕೃಷ್ಣ ಹೊಸಂಗಡಿ, ‘ಸಾಹಿತ್ಯ, ಸಂಸ್ಕೃತಿಗಳ ಸಂವರ್ಧನೆಯಲ್ಲಿ ವಿದ್ಯಾರ್ಥಿಗಳ ಪಾತ್ರದ ಕುರಿತು’ ಮಂಜೇಶ್ವರ ಗೋವಿಂದ ಪೈ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಶಿವಶಂಕರ ಪಿ. ವಿಷಯ ಮಂಡನೆ ಮಾಡುವರು.
ಸಂಜೆ ನಡೆಯುವ ಸಮಾರೋಪದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಅವರು ‘ಕನ್ನಡಿಯಲ್ಲಿ ಕನ್ನಡಿಗ’ ಕೃತಿ ಸರಣಿಯ 7ನೇ ಸಂಚಿಕೆಯನ್ನು ಬಿಡುಗಡೆಗೊಳಿಸುವರು. ಕ.ಸಾ.ಪ. ಮಾಜಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಮುಖ್ಯ ಅತಿಥಿಗಳಾಗಿರುವರು. ಸಾಹಿತಿ ಡಾ. ಪ್ರಮೀಳಾ ಮಾಧವ್ ಕೃತಿಯ ಕುರಿತು ಮಾತನಾಡುವರು.
ಕರ್ನಾಟಕ ಸಮಿತಿಯ ಅಧ್ಯಕ್ಷರಾದ ಕೆ. ಮುರಳೀಧರ ಬಳ್ಳಕ್ಕುರಾಯ, ದಕ್ಷಿಣ ಕನ್ನಡ ಕ.ಸಾ.ಪ. ಮಾಜಿ ಅಧ್ಯಕ್ಷ ಪ್ರದೀಪಕುಮಾರ್ ಕಲ್ಕೂರ, ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧ್ಯಕ್ಷ ಸುಕೇಶ ಎ., ಪತ್ರಕರ್ತರ ಕ್ಷೇಮಾಭ್ಯುದಯ ಸಂಘದ ಅಧ್ಯಕ್ಷ ರವಿ ನಾಯ್ಕಾಪು, ನಿವೃತ್ತ ಉಪನ್ಯಾಸಕ ಪ್ರೊ. ಎ. ಶ್ರೀನಾಥ್, ಯಕ್ಷಗಾನ ಅಕಾಡೆಮಿ ಸದಸ್ಯ ಸಂಕಬೈಲು ಸತೀಶ ಅಡಪ ಉಪಸ್ಥಿತರಿರುವರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಯೋಗ ಪ್ರದರ್ಶನ, ಕಾಸರಗೋಡಿನ ನಾಟ್ಯ ತರಂಗಿಣಿ ಸಂಸ್ಥೆಯಿಂದ ಮೋಹಿನಿಯಾಟ್ಟಂ, ವಿದುಷಿ ಅನುಪಮಾ ರಾಘವೇಂದ್ರ ಉಡುಪುಮೂಲೆ ಇವರಿಂದ ‘ನಾಟ್ಯ ತರಂಗಿಣಿ’, ಗುರುರಾಜ್ ಕಾಸರಗೋಡು ನೇತೃತ್ವದ ಗಡಿನಾಡ ಸಾಂಸ್ಕೃತಿಕ ಕಲಾವೇದಿಕೆಯಿಂದ ಸಾಂಸ್ಕೃತಿಕ ಕಲಾ ವೈಭವ ಜರಗಲಿದೆ.


