ಮಂಗಳೂರು : ಮಂಗಳೂರಿನ ಭರತಾಂಜಲಿ ನೃತ್ಯ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಹಮ್ಮಿಕೊಂಡಿರುವ ಸಂಸ್ಥೆಯ 30ರ ಸಂಭ್ರಮ ಕಿಂಕಿಣಿ ತ್ರಿಂಶತ್ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಿತು.

ಈ ಸಮಾರಂಭದಲ್ಲಿ ಭಾಗವಹಿಸಿದ ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದಂಗಳವರು “ಭರತನಾಟ್ಯವು ದೇಹ, ಮನಸ್ಸು ಮತ್ತು ಆತ್ಮದ ಸಮ್ಮಿಲನವಾಗಿದ್ದು ಮನುಷ್ಯನನ್ನು ದೈವಿಕ ಸಾಕ್ಷಾತ್ಕಾರದತ್ತ ಕೊಂಡೊಯ್ಯಬಲ್ಲ ಸರ್ವಶ್ರೇಷ್ಠ ಕಲೆ. ಕಳೆದ 30 ವರ್ಷಗಳಿಂದ ಸಮಾಜಮುಖಿ ಚಿಂತನೆಗಳೊಂದಿಗೆ ಕಲಾ ಸೇವೆಯನ್ನು ಮಾಡುತ್ತಿರುವ ಭಾರತಾಂಜಲಿಯ ರೂವಾರಿಗಳಾದ ಹಾಗೂ ಮಠದ ಶಿಷ್ಯರಾದ ಶ್ರೀಧರ ಹೊಳ್ಳ ಪ್ರತಿಮಾ ದಂಪತಿಗಳು ಅಭಿನಂದನಾರ್ಹರು” ಎಂದು ಆಶೀರ್ವದಿಸಿದರು.
“ಭರತನಾಟ್ಯವು ಇನ್ನು ಒಂದು ಕ್ರಿಯಾತ್ಮಕ ರೋಮಾಂಚಕ ಜೀವಂತ ಸಂಪ್ರದಾಯವಾಗಿದ್ದು ಕಲಾವಿದರಿಗೆ ಸೃಜನಶೀಲ ಪರಿಶೋಧನೆಗಳಿಗೆ ಅನಂತ ವ್ಯಾಪ್ತಿಯನ್ನು ನೀಡಲು ಸಹಕಾರಿಯಾಗಿದೆ. ಹಾಗೆಯೇ ಪ್ರತಿಮಾ ಅವರು ಕಲಿಸುವಿಕೆಯೊಂದಿಗೆ ರಾಜಿ ಮಾಡಿಕೊಳ್ಳದೆ ಶಿಸ್ತಿನಿಂದ ಮಕ್ಕಳನ್ನು ಕಲಾ ಪ್ರಪಂಚಕ್ಕೆ ನೀಡುತ್ತಿರುವುದು ಶ್ಲಾಘನೀಯ” ಎಂದು ಮುಖ್ಯ ಅತಿಥಿ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರಾದ ಶಿಬರೂರಿನ ಸುಬ್ರಮಣ್ಯ ಪ್ರಸಾದ್ ಕೋರ್ಯಾರ್ ನುಡಿದರು.


“ಕಲೆಯ ಚೌಕಟ್ಟಿನೊಳಗೆ ಪ್ರಚಾರ ಪ್ರಸಾರ ಮಾಡುತ್ತಿರುವ ತನ್ನ ಶಿಷ್ಯರಾದ ಹೊಳ್ಳ ದಂಪತಿಗಳಿಗೆ ಸದಾ ಆಶೀರ್ವಾದವಿದೆ” ಎಂದು ತನ್ನ ಮತ್ತು ಅವರೊಳಗಿನ ಅವಿನಾಭಾವ ಸಂಬಂಧವನ್ನು ಗುರುಗಳಾದ ನಾಟ್ಯಾಚಾರ್ಯ ಉಳ್ಳಾಲ ಮೋಹನ್ ಕುಮಾರ್ ಹಂಚಿಕೊಂಡರು. ಧರ್ಮದರ್ಶಿ ಹರಿಕೃಷ್ಣ ಪುನರೂರುರವರು ಶುಭ ಹಾರೈಸಿದರು. ಇದೇ ಸಮಯದಲ್ಲಿ ಮಂಗಳೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದ ಸಂಸ್ಥೆಯ ಹಿರಿಯ ವಿದ್ಯಾರ್ಥಿನಿ ಸುಖವಾಣಿ ಶೆಟ್ಟಿ ಹಾಗೂ ರಕ್ಷಣಾ ಸಚಿವರಿಂದ ಡಿಫೆನ್ಸ್ ಮಿನಿಸ್ಟರ್ ಕಮಾಂಡೇಶನ್ ಅವಾರ್ಡ್ ಪಡೆದ ನಿಶಾ ಡಿ. ಸುವರ್ಣ ಇವರನ್ನು ಗೌರವಿಸಲಾಯಿತು.

ಭರತಾಂಜಲಿಯ ನಿರ್ದೇಶಕ ಗುರು ಶ್ರೀಧರ ಹೊಳ್ಳ ಪ್ರಸ್ತಾವಿಕ ಮಾತನಾಡಿ ಗಣ್ಯರನ್ನು ಸ್ವಾಗತಿಸಿದರು. ನೃತ್ಯ ಗುರು- ಪ್ರತಿಮಾ ಶ್ರೀಧರ್ ವಂದಿಸಿ, ಕಾರ್ಯಕ್ರಮವನ್ನು ಶ್ರೀನಿಧಿ ಶೆಟ್ಟಿ ಸುಂದರವಾಗಿ ನಿರೂಪಿಸಿದರು. ಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳು ಸೇರಿ ಗುರುನಮನ ಸಲ್ಲಿಸಿದರು. ಭರತಾಂಜಲಿಯ ಹಿರಿಯ ವಿದ್ಯಾರ್ಥಿಗಳಿಂದ ಸ್ವಾತಿ ತಿರುನಾಳ್ ವಿರಚಿತ ಶ್ರೀ ರಾಮಾಯಣಂ ನೃತ್ಯ ಪ್ರಸ್ತುತಿ ಹಾಗೂ ಬೆಂಗಳೂರಿನ ವಿದುಷಿ ಗೌರಿ ಸಾಗರ್ ಇವರಿಂದ ಹಾಸ್ಯಾಧಾರಿತ ನೃತ್ಯ ಪ್ರದರ್ಶನ ಶ್ರೀ ವಿನೋದ ಪ್ರೇಕ್ಷಕರ ಕರತಾಡನದೊಂದಿಗೆ ಸುಂದರವಾಗಿ ಮೂಡಿಬಂತು.
