ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ, ಅಕಾಡೆಮಿ ಸಭಾಂಗಣದಲ್ಲಿ ದಿನಾಂಕ 09 ಮೇ 2026ರಂದು ‘ಕಾವ್ಯಾಂ ವ್ಹಾಳೊ-14’ ಶೀರ್ಷಿಕೆಯಡಿ ಕವಿಗೋಷ್ಠಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಕಾಡೆಮಿ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್ರವರು ಪ್ರಾಸ್ತಾವಿಕವಾಗಿ ಮಾತಾನಾಡಿ, “ಕೊಂಕಣಿ ಭಾಷೆಯು ಜಾತಿ, ಮತ ಬೇಧವಿಲ್ಲದೆ ಎಲ್ಲಾ ಚೌಕಟ್ಟುಗಳನ್ನು ಮೀರಿ ಬೆಳೆದಿದೆ. ಎಲ್ಲಾ ಕೊಂಕಣಿಗರು ಅಕಾಡೆಮಿಯ ಜೊತೆ ನಿಕಟ ಸಂಪರ್ಕವನ್ನು ಇಟ್ಟುಕೊಳ್ಳಬೇಕು” ಎಂದು ಕರೆ ಕೊಟ್ಟರು ಹಾಗೂ ಹಾಜರಿರುವ ಎಲ್ಲರನ್ನೂ ಸ್ವಾಗತಿಸಿದರು.

ಮುಖ್ಯ ಅತಿಥಿಗಳಾದ ‘ಪರಿಚಯ’ ಪಾಂಬೂರು ಇದರ ಕಾರ್ಯದರ್ಶಿಗಳಾದ ಶ್ರೀ ಪ್ರಕಾಶ್ ನೊರೊನ್ಹಾರವರು ಮಾತಾನಾಡಿ, “ಕೊಂಕಣಿ ಒಂದು ಮಹಾನ್ ಭಾಷೆ. ಕರ್ನಾಟಕದ ಪ್ರಮುಖ ಧರ್ಮಗಳಾದ ಹಿಂದು, ಮುಸ್ಲಿಂ, ಕೈಸ್ತ ಸಮದಾಯಗಳ ಜನರು ಮಾತಾನಾಡುವ ಭಾಷೆ. ಯಾವುದೇ ಭಾಷೆ ಉಳಿಯಬೇಕಾದರೆ ಭಾಷೆಯ ಬಂಧನವಿಲ್ಲದೆ ಕಾಲಕಾಲಕ್ಕೆ ಬಲಾವಣೆಗಳನ್ನು ಸೇರಿಸಿಕೊಂಡು ಮುಂದೆ ಹೋಗಬೇಕು. ಬೇರೆ ಭಾಷೆಗಳ ಶಬ್ದಗಳನ್ನು ಬಳಸಿ, ನಮ್ಮ ಭಾಷೆಯನ್ನು ಶುದ್ಧವಾಗಿ ಮಾತಾನಾಡಲು ಪ್ರಯತ್ನಿಸಿದರೆ, ಭಾಷೆಯ ಬೆಳವಣಿಗೆಯಾಗುತ್ತದೆ. ಕೊಂಕಣಿ ಭಾಷೆ ವಿಸ್ತಾರವಾಗಿ ಖಾರ್ವಿ, ಸಿದ್ದಿ, ಕುಡುಬಿ, ಕಥೋಲಿಕರು ಹೀಗೆ ವಿವಿಧ ಸಮುದಾಯಗಳಲ್ಲಿ ಹರಡಿಕೊಂಡಿದೆ. ಎಲ್ಲ ಕೊಂಕಣಿ ಸಮುದಾಯಗಳು ಕೊಂಕಣಿ ಭಾಷೆಯ ಐಕ್ಯತೆಯನ್ನು ಗೌರವಿಸಿದರೆ, ಕೊಂಕಣಿ ತಾಯಿಯ ಆಶೀರ್ವಾದ ಖಂಡಿತ ನಮ್ಮೆಲ್ಲರ ಮೇಲೆ ಇರುತ್ತದೆ. ಈ ನಿಟ್ಟಿನಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಭಾಷಾ ಬೆಳವಣಿಗೆಯ ಅನೇಕ ಕಾರ್ಯಕ್ರಮಗಳನ್ನು ಮಾಡುತ್ತಿದೆ” ಎಂದು ಅಕಾಡೆಮಿಯ ಅಧ್ಯಕ್ಷರನ್ನು ಹಾಗೂ ಸದಸ್ಯರನ್ನು ಅಭಿನಂದಿಸಿದರು.

ಕೊಂಕಣಿ ಭಾಷೆಯ ಕುಡುಬಿ ಸಮುದಾಯದ ಹಿರಿಯ ಕಲಾವಿದರಾದ ಶ್ರೀ ಕೆ. ಸುಂದರ ಗೌಡ ಇವರನ್ನು ಸನ್ಮಾನಿಲಾಯಿತು. ಖ್ಯಾತ ಕವಿಗಳಾದ ಶ್ರೀ ಡಾ. ವೆಂಕಟೇಶ್ ನಾಯಕ್ ಇವರು ಕವಿಗೋಷ್ಠಿಯನ್ನು ನಡೆಸಿ, ಕವಿ, ಕವಿತೆಗಳ ಬಗ್ಗೆ ಸವಿಸ್ತಾರ ವಿವರಗಳನ್ನು ನೀಡಿದರು. ಅವಿಲ್ ರಸ್ಕಿನ್ಹಾ, ಕುಸುಮ ಕಾಮತ್, ಸಂಜನಾ ಮಥಾಯಸ್, ಜೆರಿ ಬೊಂದೆಲ್, ಸುಮಾ ವಸಂತ್, ಪ್ರವೀಣ್ ತಾವ್ರೊ, ವಿಸ್ಮಯಾ ಲೋಬೊ, ಡಾ. ಸುಮತಿ ಕಾರ್ಕಳ ಇವರು ತಮ್ಮ ಕವಿತೆಗಳನ್ನು ವಾಚಿಸಿದರು. ಅಕಾಡೆಮಿ ಸದಸ್ಯರಾದ ಶ್ರೀ ರೊನಾಲ್ಡ್ ಕ್ರಾಸ್ತಾರವರು ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು. ಸದಸ್ಯರಾದ ಶ್ರೀ ನವೀನ್ ಲೋಬೊ ಉಪಸ್ಥಿತರಿದ್ದರು.

