ಮಂಗಳೂರು : “ರಂಗಭೂಮಿ ವಿನಯತೆಯನ್ನು ಕಲಿಸುತ್ತದೆ. ವಿನಯತೆಯಿಂದ ಯೋಗ್ಯತೆ ಬರುತ್ತದೆ. ಯೋಗ್ಯತೆ ಕಾರಣ ಧನವನ್ನು ಪಡೆಯುತ್ತಾನೆ. ಧನದಿಂದ ಧರ್ಮ, ಆ ಧರ್ಮದಿಂದ ಸುಖವನ್ನು ಪಡೆಯುತ್ತಾನೆ. ವ್ಯಕ್ತಿತ್ವ ವಿಕಸನಕ್ಕೆ ರಂಗಭೂಮಿ ಪೂರಕ” ಎಂದು ಖ್ಯಾತ ವೈದ್ಯ ಡಾ. ಕುಂಬಳೆ ಅನಂತ ಪ್ರಭು ಹೇಳಿದರು.
ಅವರು ಮಂಗಳೂರಿನ ಖ್ಯಾತ ಸಾಂಸ್ಕೃತಿಕ ಸಂಘಟನೆಯಾದ ‘ಕೊಂಕಣಿ ಸಾಂಸ್ಕೃತಿಕ ಸಂಘ’ ಇವರ ನೇತ್ರತ್ವದಲ್ಲಿ ರಾಜ್ಯ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕ, ರಂಗ ನಟ, ನಿರ್ದೇಶಕ ಕಾಸರಗೋಡು ಚಿನ್ನಾ ಇವರ ಸಮರ್ಥ ನಿರ್ದೇಶನದಲ್ಲಿ ಏರ್ಪಡಿಸಿದ ಕೊಂಕಣಿ ರಂಗಭೂಮಿಯ ಕಾರ್ಯಾಗಾರ ‘ಕೊಂಕಣಿ ರಂಗಾಂತರಂಗ’ವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.



ಮಂಗಳೂರಿನ ವಿ.ಟಿ. ರಸ್ತೆಯಲ್ಲಿರುವ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ಮಾರ್ಚ್ 28 ಹಾಗೂ 29ರಂದು ಜರಗಿದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಶ್ರೀಮತಿ ಪ್ರಭಾ ಭಟ್ ವಹಿಸಿದ್ದರು.



ಮುಖ್ಯ ಅತಿಥಿಯಾಗಿ ಭಾಗವಹಿಸಿದ ಖ್ಯಾತ ಉದ್ಯಮಿ ನರಸಿಂಹ ಭಂಡಾರರ್ಕರ್ ಮಹಿಳೆಯರು ಕೊಂಕಣಿ ರಂಗಭೂಮಿಗೆ ಸಾಕಷ್ಟು ಆಸಕ್ತಿ ವಹಿಸಿಕೊಳ್ಳುವ ಅನಿವಾರ್ಯತೆಯನ್ನು ತಿಳಿಸಿದರು. ಮಂಗಳೂರು ಆಕಾಶವಾಣಿಯ ನಿವೃತ್ತ ಉದ್ಘೋಷಕಿ, ಕವಿಯತ್ರಿ ಶ್ರೀಮತಿ ಶಕುಂತಳಾ ಕಿಣಿ, ಚಲನಚಿತ್ರ ಹಾಗೂ ರಂಗಭೂಮಿ ನಟರಾದ ಹರೇಕಳ ಸತೀಶ್ ನಾಯಕ್, ಪತ್ರಕರ್ತ ವೆಂಕಟೇಶ್ ಬಾಳಿಗಾ, ರಂಗನಟ ಮುರಳೀಧರ ಕಾಮತ್ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.



ಕುಮಾರಿ ಸ್ತುತಿ ಕಿಣಿ ಕೊಂಚಾಡಿ ಪ್ರಾರ್ಥನೆ ಹಾಡಿದರು. ಅಧ್ಯಕ್ಷ ಶ್ರೀಮತಿ ಪ್ರಭಾ ಭಟ್ ಸ್ವಾಗತಿಸಿದರು. ಸಂಸ್ಥೆಯ ಮಾಜಿ ಅಧ್ಯಕ್ಷರಾದ ರತ್ನಾಕರ ಕುಡ್ವಾ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಶ್ರೀಮತಿ ಸುವರ್ಣಿ ಪಡಿಯಾರ್ ವಂದಿಸಿದರು. ಶಿಬಿರದ ನಿರ್ದೇಶಕರಾದ ಕಾಸರಗೋಡು ಚಿನ್ನಾ ಅವರು ಮಾತನಾಡಿ ಕೊಂಕಣಿ ‘ರಂಗಾಂತರಂಗ’ ಸವಿವರಗಳನ್ನು ತಿಳಿಸಿದರು. ಮುಖವರ್ಣಿಕೆ ಬಗ್ಗೆ ಪ್ರಕಾಶ್ ಅರುಣ ನಾಯಕ್, ಭರತನಾಟ್ಯದ ಮುದ್ರೆಗಳ ಕುರಿತಾಗಿ ಶ್ರೀಮತಿ ಶ್ರೀದೇವಿ ಆಚಾರ್ಯ, ಕುಮಾರಿ ಶರಧಿ ಭಟ್, ಧ್ವನಿಯ ಬಗ್ಗೆ ಶ್ರೀಮತಿ ಶಕುಂತಳಾ ಆರ್. ಕಿಣಿ ಅವರು ತರಬೇತಿ ಹಾಗೂ ಮಾಹಿತಿಗಳನ್ನು ನೀಡಿದರು.



ಸಮಾರೋಪ ಸಮಾರಂಭದಲ್ಲಿ ಖ್ಯಾತ ನಿರೂಪಕ ಕುಂಬಳೆ ನರಸಿಂಹ ಪ್ರಭು, ಡಾ. ಮೋಹನ ಪೈ, ಶ್ರೀಮತಿ ಉಷಾ ಮೋಹನ ಪೈ, ಉಳ್ಳಾಲ ರಾಘವೇಂದ್ರ ಕಿಣಿ, ಶ್ರೀಮತಿ ಗೀತಾ ಕಿಣಿ ಮುಂತಾದವರು ಉಪಸ್ಥಿತರಿದ್ದು, ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಿದರು. ಶಿಬಿರ ನಿರ್ದೇಶಕರಾದ ಕಾಸರಗೋಡು ಚಿನ್ನಾ ಅವರನ್ನು ಸಂಸ್ಥೆಯ ಪರವಾಗಿ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಶಿಬಿರಾರ್ಥಿಗಳ ಪರವಾಗಿ ಶ್ರೀಮತಿ ಸುರೇಖಾ ಆರ್. ಭಟ್, ಕೃಷ್ಣ ಕಾಮತ್, ಶ್ರೀಮತಿ ಚಂದ್ರಿಕಾ ಮಲ್ಯ ಮಾತನಾಡಿದರು.


