ಬೆಂಗಳೂರು : ಖ್ಯಾತ ‘ಕಲಾನಿಧಿ ಆರ್ಟ್ಸ್ ಅಕಾಡೆಮಿ’ಯ ನೃತ್ಯಗುರು ವಿದುಷಿ ಪವಿತ್ರ ಶ್ರೀಧರ್ ಇವರ ಶಿಷ್ಯೆ ಕುಮಾರಿ ಪ್ರಿಯಾಂಕ ವಿ. ‘ಹರಿ ಭಕ್ತಿ ಸುಧಾ’ – ವಸ್ತು ಆಧಾರಿತ ಭರತನಾಟ್ಯ ರಂಗಪ್ರವೇಶವನ್ನು ದಿನಾಂಕ 27 ಜೂನ್ 2026ರ ಶನಿವಾರ ಸಂಜೆ 6-00 ಗಂಟೆಗೆ ಬೆಂಗಳೂರಿನ ಯಲಹಂಕ ಉಪನಗರ (ನ್ಯೂ ಟೌನ್), ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ವಿದ್ಯುಕ್ತವಾಗಿ ನೆರವೇರಿಸಿಕೊಳ್ಳಲಿದ್ದಾಳೆ. ಅವಳ ನೃತ್ಯ ವೈಭವವನ್ನು ಕಣ್ತುಂಬಿಕೊಳ್ಳಲು ಎಲ್ಲ ಕಲಾರಸಿಕರಿಗೂ ಆದರದ ಸುಸ್ವಾಗತ.

ವಿಶಿಷ್ಟ ನೃತ್ಯ ಸಂಯೋಜನೆಗಳಿಗೆ ಮತ್ತು ಕಲಾತ್ಮಕ ನಾಟ್ಯ ಶಿಕ್ಷಣಕ್ಕೆ ಹೆಸರಾದ ಗುರು ಪವಿತ್ರಾ ಇವರಲ್ಲಿ ಭರತನಾಟ್ಯದಲ್ಲಿ 10 ವರ್ಷಗಳ ಕಾಲ ಕಠಿಣ ತರಬೇತಿಯನ್ನು ಪಡೆದಿರುವ, ಅತ್ಯಂತ ಶ್ರದ್ಧೆ ಹಾಗೂ ನಿಷ್ಠಾವಂತ ವಿದ್ಯಾರ್ಥಿನಿ ಎನಿಸಿಕೊಂಡಿರುವ ಕುಮಾರಿ ಪ್ರಿಯಾಂಕ ಚೊಚ್ಚಲ ಏಕವ್ಯಕ್ತಿ ಪ್ರದರ್ಶನವು ಅವಳ ಕಲಾತ್ಮಕ ಪಯಣದಲ್ಲಿ ಒಂದು ಮಹತ್ವದ ಮೈಲಿಗಲ್ಲಾಗಿದೆ. ‘ಹರಿ ಭಕ್ತಿ ಸುಧಾ’ ಎಂಬ ವಿಶೇಷ ಶೀರ್ಷಿಕೆಯಲ್ಲಿ ಭಕ್ತಿ ತಾದತ್ಮ್ಯತೆಯ ಇವಳ ಪ್ರದರ್ಶನ ಇವಳ ನೃತ್ಯದ ವೈಶಿಷ್ಟ್ಯ. ಶ್ರೀಹರಿಗೆ ಅರ್ಪಿಸುವ ಒಂಭತ್ತು ವಿಧದ ಭಕ್ತಿ ಮಾರ್ಗಗಳಾದ ‘ನವವಿಧ ಭಕ್ತಿ’ಯ ಪರಿಕಲ್ಪನೆಯನ್ನು ಆಧರಿಸಿದ ವಿಶಿಷ್ಟ ಭರತನಾಟ್ಯ ರಂಗಪ್ರವೇಶ ಇದಾಗಿದೆ. ಸಂಗೀತ, ನೃತ್ಯ ಮತ್ತು ಸುಂದರ ಸಂಚಾರಿ ಕಥಾನಕಗಳ ಶ್ರೀಮಂತ ಸಂಗಮದ ಮೂಲಕ ಭಕ್ತಿಯ ವಿವಿಧ ಆಯಾಮಗಳನ್ನು ಈ ಪ್ರಸ್ತುತಿಯು ಸುಂದರವಾಗಿ ಅನಾವರಣಗೊಳಿಸುತ್ತದೆ. ಇದು ಪ್ರೇಕ್ಷಕರನ್ನು ದೈವಿಕ ಪ್ರೀತಿ, ಶರಣಾಗತಿ ಮತ್ತು ಆಧ್ಯಾತ್ಮಿಕ ಆನಂದದ ಪಯಣಕ್ಕೆ ಕರೆದೊಯ್ಯುವುದರಲ್ಲಿ ಅನುಮಾನವಿಲ್ಲ.
ಶ್ರೀಮತಿ ಸುಧಾ ಮತ್ತು ಶ್ರೀ ಆರ್. ವೆಂಕಟಾಚಾರಿ ಅವರ ಪುತ್ರಿಯಾದ ಪ್ರಿಯಾಂಕಳಿಗೆ ನೃತ್ಯ ಬಾಲ್ಯದ ಒಲವು. ಅವಳು ತನ್ನ ಅತ್ಯಂತ ಕಿರಿಯ ವಯಸ್ಸಿನಲ್ಲಿ ಅಂದರೆ, ಕೇವಲ ಮೂರರ ಬಾಲೆ ಭರತನಾಟ್ಯ ಕಲಿಕೆಯನ್ನು ಆರಂಭಿಸಿ ಅಡವುಗಳನ್ನು ಹಾಕುತ್ತ ತನ್ನ ಸತತ ಬದ್ಧತೆಯ ಅಭ್ಯಾಸದಿಂದ, ಕಲೆಯ ಬಗೆಗಿನ ಅತೀವ ಪ್ರೀತಿ-ಆಸಕ್ತಿಯಿಂದ ತಮ್ಮ ಗುರು ಪವಿತ್ರಾ ಅವರ ಮೌಲ್ಯಯುತವಾದ ಮಾರ್ಗದರ್ಶನದಲ್ಲಿ ನಿಷ್ಠೆಯಿಂದ ಕಲಿಯುತ್ತ ನಾಡಿನ ಅನೇಕ ದೇವಾಲಯಗಳಲ್ಲಿ ನೃತ್ಯ ಪ್ರದರ್ಶನ ನೀಡಿದ್ದಾಳೆ. ತನ್ನ ನಾಟ್ಯಶಾಲೆಯ ಅನೇಕ ನೃತ್ಯರೂಪಕಗಳಲ್ಲಿ ಪಾಲ್ಗೊಂಡಿದ್ದಾಳೆ. ಅವಳ ಇಷ್ಟು ವರ್ಷಗಳ ತರಬೇತಿಯು ಅವಳಲ್ಲಿ ನೃತ್ಯದ ಲಾಸ್ಯ, ಶಿಸ್ತು, ಕಲಾತ್ಮಕ ಸಂವೇದನೆ ಹಾಗೂ ಭರತನಾಟ್ಯದ ಸಂಪ್ರದಾಯಗಳ ಬಗ್ಗೆ ಆಳವಾದ ಗೌರವವನ್ನು ಮೂಡಿಸಿದೆ. ಯಲಹಂಕದ ವಿಶ್ವ ವಿದ್ಯಾಪೀಠದಲ್ಲಿ ಹತ್ತನೆಯ ತರಗತಿಯಲ್ಲಿ ಓದುತ್ತಿರುವ ಈ ಬಾಲೆ ಉತ್ತಮ ವಿದ್ಯಾರ್ಥಿನಿಯಾಗಿದ್ದು, ಕಲೆ ಮತ್ತು ಕ್ರೀಡೆಗಳ ಜೊತೆ ಯೋಗಭ್ಯಾಸವನ್ನು ರೂಢಿಸಿಕೊಂಡಿದ್ದು, ನೃತ್ಯರಂಗದಲ್ಲಿ ಸಾಧನೆ ಮಾಡುವ ಕನಸನ್ನು ಹೊಂದಿದ್ದಾಳೆ.




ವಿವಿಧ ಭಾಷಾಪ್ರೇಮಿಯಾದ ಪ್ರಿಯಾಂಕಗೆ ಹಲವಾರು ಭಾಷೆಗಳನ್ನು ಕಲಿಯುವುದರಲ್ಲಿ ತುಂಬಾ ಆಸಕ್ತಿ. ನೃತ್ಯದ ಆಚೆಗೂ ಪ್ರಿಯಾಂಕ ಜಿಜ್ಞಾಸೆ ಮತ್ತು ಚಿಂತನಾಶೀಲ ಮನಸ್ಸನ್ನು ಹೊಂದಿದ್ದು, ಸಮುದ್ರದ ಅಲೆಗಳು ಹಾಗೂ ಕಡಲ ಪರಿಶೋಧನೆಯ ಬಗ್ಗೆ ಅಪಾರ ಆಕರ್ಷಣೆ ಹೊಂದಿರುವುದಲ್ಲದೆ, ಕಡಲಿನ ರಹಸ್ಯಗಳನ್ನು ಅರ್ಥಮಾಡಿಕೊಳ್ಳುವ ಮತ್ತು ಅನ್ವೇಷಿಸುವ ಮಹದಾಸೆಯೊಂದಿಗೆ ‘ಸಮುದ್ರಶಾಸ್ತ್ರಜ್ಞ’ಳಾಗಲು (Oceanographer) ಬಯಸುತ್ತಾಳೆ. ಸೂಕ್ಷ್ಮ ವೀಕ್ಷಣೆ ಮತ್ತು ಪ್ರಯೋಗಗಳ ಮೂಲಕ ಕಲಿಯುವುದನ್ನು ಇಷ್ಟಪಡುವ ಇವಳಲ್ಲಿ ಪರಿಶೋಧನೆ ಹಾಗೂ ಹೊಸ ಆವಿಷ್ಕಾರಗಳ ಉತ್ಸಾಹ ಎದ್ದು ಕಾಣುತ್ತದೆ. ಈ ಉದಯೋನ್ಮುಖ ನೃತ್ಯ ಕಲಾವಿದೆಗೆ ಅವಳ ಏಕವ್ಯಕ್ತಿ ನೃತ್ಯ ಪ್ರದರ್ಶನದ ಶುಭ ಸಂದರ್ಭದಲ್ಲಿ ಸರ್ವ ಶುಭಾಶಯಗಳು.


*** ವೈ.ಕೆ. ಸಂಧ್ಯಾ ಶರ್ಮ
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.
