ಬೆಂಗಳೂರು : ಭರತನಾಟ್ಯ ಕಲಾವಿದೆಯರಲ್ಲಿ ತಮ್ಮದೇ ಆದ ಅಸ್ಮಿತೆಯನ್ನು ಸಾಬೀತುಗೊಳಿಸಿರುವ ಅಪೂರ್ವ ನೃತ್ಯಕಲಾವಿದೆ- ಆಚಾರ್ಯರು ಮತ್ತು ಸುಮನೋಹರ ನೃತ್ಯ ಸಂಯೋಜನೆಗಳಿಗೆ ಹೆಸರಾದ ವಿದುಷಿ ಭಾನು ಪ್ರಿಯಾ ರಾಕೇಶ್ ಇವರ ಸ್ಥಾನ ನೃತ್ಯ ಜಗತ್ತಿನಲ್ಲಿ ವಿಶಿಷ್ಟವಾದದ್ದು. ಬದ್ಧತೆಗೆ ಹೆಸರಾದ – ಪರಿಪೂರ್ಣ ಕಲಾವಿದೆಯಾಗಿ, ನೂರಾರು ನೃತ್ಯಾಕಾಂಕ್ಷಿಗಳಿಗೆ ಕಾಯಾ-ವಾಚಾ- ಮನಸಾ ವಿದ್ಯಾಧಾರೆ ಎರೆಯುತ್ತಿರುವ ಭಾನು ಪ್ರಿಯಾ ಯಾವಾಗಲೂ ಹೊಸತನಕ್ಕೆ ತುಡಿಯುವವರು, ಪ್ರಯೋಗಾಕಾಂಕ್ಷಿ. ಬೆಂಗಳೂರಿನ ಜೆ.ಪಿ. ನಗರದಲ್ಲಿ ಕಲಾತ್ಮಕ ಚಟುವಟಿಕೆಗಳಿಗಾಗಿಯೇ ಅವರೇ ನಿರ್ಮಿಸಿದ ಅರ್ಕಾ ಥಿಯೇಟರ್ ಮತ್ತು ಆಡಿಟೋರಿಯಂ ಇವರ ಇತ್ತೀಚಿನ ಅನುಪಮ ಕೊಡುಗೆ. ಉತ್ತಮ ಚಾರ್ಟೆಡ್ ಅಕೌಂಟೆಂಟ್ ಆಗಿಯೂ ಹೆಸರಾಂತರಾಗಿರುವ ಭಾನು ಪ್ರಿಯಾ ಇವರ ನುರಿತ ಗರಡಿಯಲ್ಲಿ ರೂಹು ತಳೆದ ಕಲಾಶಿಲ್ಪ ಕುಮಾರಿ ಸ್ಮಿತಾ ರಾಮಣ್ಣ ಬಹುಮುಖ ಪ್ರತಿಭೆ.

ಕುಮಾರಿ ಸ್ಮಿತಾಗೆ ನೃತ್ಯ ಎಂದರೆ ಬಾಲ್ಯದಿಂದಲೂ ಒಲವು. ಮೂಲತಃ ಕುಣಿಗಲ್ ನವರಾದ ಇವರ ಹಿರಿಯರು ಬೆಂಗಳೂರಿನಲ್ಲಿ ನೆಲೆಸಿದ್ದು, ಇವಳ ವಿದ್ಯಾಭ್ಯಾಸವೆಲ್ಲ ಬೆಂಗಳೂರಿನಲ್ಲಿ ನಡೆಯಿತು. ಸ್ಮಿತಾಳ ಮೊದಲ ನೃತ್ಯ ಗುರು ಶ್ರೀ ಅಶೋಕ್ ಕುಮಾರ್. ಅವರ ಸಂಸ್ಥೆಯ ಮೂಲಕ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಕರ್ನಾಟಕ ಸರ್ಕಾರ ನಡೆಸುವ ಜೂನಿಯರ್ ನೃತ್ಯ ಪರೀಕ್ಷೆಯಲ್ಲಿ ಕೂಡ ತೇರ್ಗಡೆಯಾಗಿದ್ದಾಳೆ. ಶಾಲಾ-ಕಾಲೇಜಿನಲ್ಲೂ ಅನೇಕ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸುವುದು ಮತ್ತು ಬಹುಮಾನಗಳನ್ನು ಗೆಲ್ಲುವುದು ಇವಳ ವಿಶೇಷವಾಗಿತ್ತು. ಬಿ.ಕಾಂ. ಪದವೀಧರೆಯಾದ ಇವಳು ಫ್ಯಾಶನ್ ಡಿಪ್ಲೋಮೋ ಕೂಡ ಮಾಡಿಕೊಂಡಿದ್ದಾಳೆ. ಪ್ರಸ್ತುತ ಸ್ಮಿತಾ, ಕಳೆದ ಒಂದು ವರ್ಷದಿಂದ ಗುರು ಭಾನುಪ್ರಿಯ ಅವರಲ್ಲಿ ಆನ್ಲೈನ್ ವಿದ್ಯಾರ್ಥಿನಿಯಾಗಿದ್ದು, ಸತತವಾಗಿ ಅಭ್ಯಾಸ ಮಾಡಿ ರಂಗಪ್ರವೇಶಕ್ಕೆ ತಯಾರಾಗಿದ್ದಾಳೆ. ಸದ್ಯ ಹೈದರಾಬಾದಿನಲ್ಲಿ ನೆಲೆಸಿರುವ ಇವಳು, ಅಲ್ಲಿ ರಂಗಭೂಮಿಯ ಚಟುವಟಿಕೆಗಳಲ್ಲೂ ಕೂಡ ಸಕ್ರಿಯಳಾಗಿದ್ದಾಳೆ. ನೃತ್ಯರಂಗದಲ್ಲಿ ಅಪಾರ ಸಾಧನೆ ಮಾಡುವುದು ಇವಳ ಕನಸು.


ಕಳೆದ ಕೆಲವು ವರ್ಷಗಳಿಂದ ಕುಮಾರಿ ಸ್ಮಿತಾ, ಇವರಿಂದ ಪರಿಣತ ನಾಟ್ಯ ಶಿಕ್ಷಣ ಪಡೆಯುತ್ತಾ ತಮ್ಮ ನೃತ್ಯ ನೈಪುಣ್ಯದ ವಿವಿಧ ಆಯಾಮಗಳನ್ನು ಗರಿಗೊಳಿಸಿಕೊಳ್ಳುತ್ತ ವಿಶೇಷವಾಗಿ ಅಭಿನಯದಲ್ಲಿ ಪ್ರಾವೀಣ್ಯ ಪಡೆಯುವತ್ತ ಶ್ರಮಿಸುತ್ತಿದ್ದಾರೆ. ಕರ್ನಾಟಕ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತದಲ್ಲೂ ಪರಿಶ್ರಮಿಸಿರುವ ಸ್ಮಿತಾ ಉತ್ತಮ ಯೋಗ ಪಟು ಕೂಡ. ಸ್ಮಿತಾ, ಸ್ವತಃ ಕೆಲವು ಮಕ್ಕಳಿಗೆ ನೃತ್ಯ ಶಿಕ್ಷಣ ನೀಡುವ ಗುರುವಾಗಿದ್ದಾರಲ್ಲದೆ, ದೇಶದಾದ್ಯಂತವಲ್ಲದೆ, ವಿದೇಶದಲ್ಲೂ ಅನೇಕ ನೃತ್ಯ ಪ್ರದರ್ಶನಗಳನ್ನು ನೀಡಿದ್ದು, ಇದುವರೆಗೂ ಒಟ್ಟೂ 250ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದ ಹೆಮ್ಮೆ ಇವರದು.



ಹೈದರಾಬಾದ್ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ತೆಲುಗು ಮತ್ತು ಇಂಗ್ಲೀಷ್ ಭಾಷೆಯ ಅನೇಕ ನಾಟಕಗಳಲ್ಲಿ ಪಾಲ್ಗೊಂಡಿರುವ ಇವರು ಕೆಲವು ಕಿರುಚಿತ್ರಗಳಲ್ಲೂ ಅಭಿನಯಿಸಿದ ಅಗ್ಗಳಿಕೆ. ಹೀಗೆ ನೃತ್ಯ ಕ್ಷೇತ್ರ – ರಂಗಭೂಮಿ ಕ್ಷೇತ್ರಗಳಲ್ಲಿ ಅನುಭವ ಹೊಂದಿರುವ ಸ್ಮಿತಾ, ಇದೀಗ ತನ್ನ ನೃತ್ಯ ಪ್ರತಿಭಾ ಪ್ರದರ್ಶನವನ್ನು ಪ್ರೇಕ್ಷಕರ ಮುಂದೆ ‘ಮಾರ್ಗಂ’ ಸಂಪ್ರದಾಯದಲ್ಲಿ ಪ್ರಸ್ತುತ ಪಡಿಸಲು ದಿನಾಂಕ 12 ಏಪ್ರಿಲ್ 2026ರ ಭಾನುವಾರ ಸಂಜೆ ಗಂಟೆ 5-30ಕ್ಕೆ ಕೋಣನಕುಂಟೆಯ ಬಳಿ ಇರುವ ‘ಮೀನಾಕ್ಷಿ ರಂಗಮಂಚ ಆಡಿಟೋರಿಯಂ’ನಲ್ಲಿ ವಿದ್ಯುಕ್ತವಾಗಿ ಭರತನಾಟ್ಯ ರಂಗಪ್ರವೇಶ ಮಾಡುತ್ತಿದ್ದಾಳೆ. ಅವಳ ಸುಮನೋಹರ ನೃತ್ಯವಲ್ಲರಿಯನ್ನು ವೀಕ್ಷಿಸಲು ಎಲ್ಲರಿಗೂ ಆದರದ ಸ್ವಾಗತ.




*** ವೈ.ಕೆ. ಸಂಧ್ಯಾ ಶರ್ಮ
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.
