ಮುಳ್ಳೇರಿಯ : ಕುಂಟಾರು ಎಯುಪಿ ಶಾಲೆ ಮತ್ತು ಕನ್ನಡ ಸಂಶೋಧನಾ ಕೇಂದ್ರ ಕಾಸರಗೋಡು ಇದರ ನೇತೃತ್ವದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಕಾಸರಗೋಡು ಗಡಿನಾಡ ಘಟಕ, ಹಳೆ ವಿದ್ಯಾರ್ಥಿಗಳ ಸಂಘ ಎಯುಪಿ ಶಾಲೆ ಕುಂಟಾರು ಇವುಗಳ ಸಹಕಾರದೊಂದಿಗೆ ‘ಕುಂಟಾರು ಸಾಹಿತ್ಯೋತ್ಸವ – 2026’ವು ದಿನಾಂಕ 15 ಮಾರ್ಚ್ 2026ರಂದು ಕುಂಟಾರು ಶಾಲೆಯಲ್ಲಿ ಜರಗಿತು.
ದಿ. ಮಾಟೆಡ್ಕ ಪುರುಷೋತ್ತಮ ರಾವ್ ದ್ವಾರವನ್ನು ಎಂ.ನಾ. ಚಂಬಲ್ತಿಮಾರ್ ಉದ್ಘಾಟಿಸಿದರು. ಬಳಿಕ ವಾದ್ಯಮೇಳದೊಂದಿಗೆ ಮೆರವಣಿಗೆ ಮೂಲಕ ಸಾಹಿತ್ಯೋತ್ಸವ ನಡೆಯುವ ವೇದಿಕೆಗೆ ಬರಲಾಯಿತು. ಮುಂಬೈ ವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ. ತಾಳ್ತಜೆ ವಸಂತ ಕುಮಾರ ಸಾಹಿತ್ಯೋತ್ಸವ ಉದ್ಘಾಟಿಸಿ, ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ, “ಗ್ರಾಮೀಣ ಪ್ರದೇಶದ ಜನರ ಹೃದಯ ಮುಟ್ಟಿಸುವಲ್ಲಿ ಕುಂಟಾರು ಸಾಹಿತ್ಯೋತ್ಸವ ಕಾರ್ಯಕ್ರಮದಿಂದ ಸಾಧ್ಯ. ಕನ್ನಡದಲ್ಲಿ ಕೆಲವು ಪದಗಳೇ ಕಾಣೆಯಾಗುತ್ತಿವೆ, ಅದರ ವೇಗ ಹೆಚ್ಚುತ್ತಿದೆ. ಈ ಹಿನ್ನೆಲೆ ನಮ್ಮ ಪ್ರದೇಶಗಳಲ್ಲಿ ಬಳಕೆಯಲ್ಲಿರುವ ಕೆಲವು ಪದಗಳ ಅಧ್ಯಯನ ನಡೆಯಬೇಕೆಂದರು. ಉದಾಹರಣೆಗೆ ಮಹೋತಾಭಾರೆಂಬ ಪದ ಅರೇಬಿಕ್ ನ ಮಹತಬರ್ ಪದವಾಗಿದೆ. ಅದು ಸಂಸ್ಕೃತ ಪದವಲ್ಲ. ನಮ್ಮ ಓದು ನಮ್ಮೊಳಗೆ ಪ್ರಶ್ನೆಗಳ ಹುಟ್ಟಿಸಬೇಕು. ನಾವೇ ಅದರ ಉತ್ತರ ಕಂಡುಕೊಳ್ಳಬೇಕು” ಎಂದರು.

ವಿಶ್ರಾಂತ ಪ್ರಾಧ್ಯಾಪಕ ಡಾ. ಕೆ. ಕಮಲಾಕ್ಷ ಕಾಸರಗೋಡು ಅಧ್ಯಕ್ಷತೆ ವಹಿಸಿ ಪುಸ್ತಕ ಪ್ರದರ್ಶನವನ್ನು ಉದ್ಘಾಟಿಸಿದರು. ವಸ್ತು ಪ್ರದರ್ಶನವನ್ನು ಕಾರಡ್ಕ ಗ್ರಾ.ಪಂ. ಅಧ್ಯಕ್ಷೆ ಜನನಿ ಎಂ. ಉದ್ಘಾಟಿಸಿದರು. ಚಿತ್ರ -ವ್ಯಂಗ್ಯ ಚಿತ್ರ ಪ್ರದರ್ಶನವನ್ನು ಹಿರಿಯ ವ್ಯಂಗ್ಯಚಿತ್ರಗಾರ ಎಚ್.ಎಸ್. ವಿಶ್ವನಾಥ್ ಬೆಂಗಳೂರು ಉದ್ಘಾಟಿಸಿದರು. ಡಾ. ಮೋಹನ ಕುಂಟಾರ್ ಮಾತನಾಡಿ “ಕುಂಟಾರಿಗೆ ಸಾಂಸ್ಕೃತಿಕ ಹಿನ್ನೆಲೆ ಇದ್ದರೂ, ಸಾಹಿತ್ಯಕ ಹಿನ್ನೆಲೆ ಕೊರತೆ ಇದೆ. ಅದು ನೀಗಬೇಕು. ಹೊಸ ಪೀಳಿಗೆ ಮೂಡಬೇಕೆಂಬ ಸಂಕಲ್ಪದಿಂದಲೇ ಸಾಹಿತ್ಯೋತ್ಸವ ಆಯೋಜಿಸಲಾಗಿದೆ” ಎಂದರು. ಗ್ರಾ.ಪಂ. ಸದಸ್ಯೆ ಬೇಬಿ ಕಟ್ಟತ್ತಬಯಲು, ಮುಖ್ಯ ಶಿಕ್ಷಕಿ ದಾಕ್ಷಾಯಣಿ ಉಪಸ್ಥಿತರಿದ್ದರು. ಸಾಹಿತ್ಯೋತ್ಸವ ಸಮಿತಿ ಕಾರ್ಯದರ್ಶಿ ಪ್ರಕಾಶ್ ಮಾಸ್ತರ್ ಸ್ವಾಗತಿಸಿ, ಉಪಾಧ್ಯಕ್ಷ ಜಗದೀಶ ಮಾಸ್ತರ್ ವಂದಿಸಿದರು. ಡಾ. ಯತೀಶ್ ಕುಮಾರ್ ರೈ ನಿರೂಪಿಸಿದರು.

ಬಳಿಕ ನಡೆದ 1ನೇ ಗೋಷ್ಠಿಯಲ್ಲಿ ‘ಪಂಪನ ವಿಕ್ರಮಾರ್ಜುನ ವಿಜಯ’ ವಿಷಯವಾಗಿ ಪ್ರಾಧ್ಯಾಪಕ ಡಾ. ರತ್ನಾಕರ ಮಲ್ಲಮೂಲೆ, ‘ರಾಘವಾಂಕನ ಹರಿಶ್ಚಂದ್ರ ಕಾವ್ಯ’ ವಿಷಯವಾಗಿ ಡಾ. ಮೀನಾಕ್ಷಿ ರಾಮಚಂದ್ರ ಮಂಗಳೂರು, ‘ವಚನ ಸಾಹಿತ್ಯ’ ವಿಷಯವಾಗಿ ಡಾ. ಟಿ.ಎ.ಎನ್. ಖಂಡಿಗೆ ಮೂಡುಬಿದಿರೆ ಮಾತನಾಡಿದರು. 2ನೇ ಗೋಷ್ಠಿಯಲ್ಲಿ ‘ವ್ಯಕ್ತಿತ್ವ ವಿಕಸನ ಮತ್ತು ಸಾಹಿತ್ಯ’ ವಿಷಯವಾಗಿ ಡಾ. ವರದರಾಜ ಚಂದ್ರಗಿರಿ ಪುತ್ತೂರು, ‘ಕೃಷಿಕ ಮಹಿಳೆ ಮತ್ತು ಸಾಹಿತ್ಯ’ ವಿಷಯವಾಗಿ ಸಹನಾ ಕಾಂತಬೈಲು ಸಂಪಾಜೆ, ‘ಜಾನಪದ ಸಾಹಿತ್ಯ’ ವಿಷಯ ಡಾ. ಸುಂದರ ಕೇನಾಜೆ ಸುಳ್ಯ ಮಾತನಾಡಿದರು. ಮಧ್ಯಾಹ್ನ 2-00 ಗಂಟೆಗೆ ನಡೆದ 3ನೇ ಗೋಷ್ಠಿಯಲ್ಲಿ ‘ಕುವೆಂಪು ಕವಿತೆಗಳು’ ವಿಷಯವಾಗಿ ಡಾ. ಸುಧಾರಾಣಿ ಮೂಡುಬಿದಿರೆ, ‘ಕೀರ್ತನ ಸಾಹಿತ್ಯ’ ವಿಷಯವಾಗಿ ಡಾ. ಬೇಸೀ ಗೋಪಾಲಕೃಷ್ಣ ಭಟ್ ಬದಿಯಡ್ಕ, ‘ಸಣ್ಣಕತೆ, ಕಾದಂಬರಿ’ ವಿಷಯವಾಗಿ ಡಾ. ರಾಧಾಕೃಷ್ಣ ಬೆಳ್ಳೂರು ಮಾತನಾಡಿದರು.
ಬಳಿಕ ನಡೆದ ಬಹುಭಾಷಾ ಕವಿಗೋಷ್ಠಿಯಲ್ಲಿ ಕವಿ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಅಧ್ಯಕ್ಷತೆ ವಹಿಸಿದ್ದರು. ದಿವ್ಯಗಂಗಾ (ಕನ್ನಡ), ದಿಲೀಪ್ ನಾಯರ್ (ಮಲೆಯಾಳಂ), ರೇಣುಕಾ ಸುಧೀರ್ ಅರಶಿನಮಕ್ಕಿ (ಕನ್ನಡ), ವಿರಾಜ್ ಅಡೂರು (ಕನ್ನಡ), ರಾಮ ಭಟ್ ಚೆನ್ನಂಗೋಡು (ಕರಾಡ), ದಯಾನಂದ ರೈ ಕಳುವಾಜೆ (ಕನ್ನಡ), ರವೀಂದ್ರನ್ ಪಾಡಿ (ಮಲೆಯಾಳಂ), ಚಂದ್ರಿಕಾ ಶೆಣೈ ಮುಳ್ಳೇರಿಯ (ಕೊಂಕಣಿ), ಕೃಷ್ಣೋಜಿ ಮಾಸ್ತರ್ (ಕನ್ನಡ) ಕವನಗಳನ್ನು ವಾಚಿಸಿದರು.

ಸಮಾರೋಪದಲ್ಲಿ ಡಾ. ಮೋಹನ ಕುಂಟಾರ್ ಅಧ್ಯಕ್ಷತೆ ವಹಿಸಿದ್ದು, ಕನ್ನಡ ವಿ.ವಿ. ಹಂಪಿ ಪ್ರಾಧ್ಯಾಪಕ ಡಾ. ವೆಂಕಟಗಿರಿ ದಳವಾಯಿ ಸಮಾರೋಪ ಭಾಷಣ ಮಾಡಿದರು. ಆಯಿಷಾ ಪೆರ್ಲ ಅತಿಥಿಯಾಗಿದ್ದರು. ಕ.ಸಾ.ಪ. ಕಾಸರಗೋಡು ಜಿಲ್ಲಾ ಘಟಕ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಕಾರಡ್ಕ ಗ್ರಾ.ಪಂ. ಉಪಾಧ್ಯಕ್ಷ ದಾಮೋದರ ಎಂ., ರವೀಶ ತಂತ್ರಿ ಕುಂಟಾರು, ಕುಂಟಾರು ಎಯುಪಿ ಶಾಲೆ ವ್ಯವಸ್ಥಾಪಕ ವಿಷ್ಣು ಪ್ರಸಾದ್ ಭಾಗವಹಿಸಿದ್ದರು. ಸಂಜೆ ಡಾ. ವಾಣಿಶ್ರೀ ಕಾಸರಗೋಡು ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯಿಂದ ಭಾವಗಾನಾಮೃತ, ಕುಂಟಾರು ಶಾಲೆ ಮಕ್ಕಳಿಂದ ಯಕ್ಷಗಾನ ತಾಳಮದ್ದಳೆ ನಡೆಯಿತು.
