ಕಾರ್ಕಳ : ಕನ್ನಡ ಸಂಘ ಕಾಂತಾವರ, ಅಲ್ಲಮಪ್ರಭು ಪೀಠ ಕಾಂತಾವರ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ತಾಲೂಕು ಘಟಕ ಇವುಗಳ ಸಹಭಾಗಿತ್ವದಲ್ಲಿ 2026ರ ವರ್ಷಪೂರ್ತಿ ಪ್ರತೀ ತಿಂಗಳು ನಡೆಯುತ್ತಿರುವ ಮಹಾಭಾರತ ಭಾವದೀಪ ಎಂಬ ಉಪನ್ಯಾಸಮಾಲೆಯ ಷಷ್ಠ ಸೋಪಾನದಲ್ಲಿ ‘ಧರ್ಮನಂದನ’ ಎಂಬ ಕುರಿತಾಗಿ ದಿನಾಂಕ 27 ಜೂನ್ 2026ರಂದು ಕಾರ್ಕಳದ ಪ್ರಕಾಶ್ ಹೋಟೆಲ್ ಇದರ ‘ಸಂಭ್ರಮ’ ಸಭಾಂಗಣದಲ್ಲಿ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಈ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ವಿದ್ವಾಂಸರಾದ ಡಾ. ವಿನಾಯಕ ಭಟ್ ಗಾಳಿಮನೆಯವರು “ಮಹಾಭಾರತದಲ್ಲಿ ಎಲ್ಲ ಪಾತ್ರಗಳೂ ನಾಯಕರಂತೆ ವಿಜೃಂಭಿಸಿ ಧರ್ಮರಾಯ ಮಾತ್ರ ಮೂಲೆಗುಂಪಾಗುವಂತಾದರೂ ವ್ಯಾಸರು ಮಾತ್ರ ಆತನನ್ನು ರಾಜನನ್ನಾಗಿ ಇಟ್ಟುಕೊಂಡು ಧರ್ಮರಾಜನಾಗಿ ನೋಡಿಕೊಂಡರು. ಮಹಾಭಾರತದ ಒಟ್ಟು ಸಾರವಾಗಿ ನಾವು ನೋಡುವುದು ಧರ್ಮವನ್ನೇ ಆಗಿದೆ. ಅಧರ್ಮದಿಂದ ಗಳಿಸುವ ಸಕಲ ಸಂಪತ್ತು, ಕೀರ್ತಿ ಪ್ರತಿಷ್ಠೆಗಳು ಅಶಾಶ್ವತವಾಗಿದ್ದು ಧರ್ಮಮಾರ್ಗದಿಂದ ಗಳಿಸುವಂಥಾದ್ದೇ ಶಾಶ್ವತ ಎಂಬುದನ್ನು ಪ್ರತಿಪಾದಿಸಿದ ಧರ್ಮರಾಯ ಯಾವ ಸಂದರ್ಭದಲ್ಲಿಯೂ ಧರ್ಮಪ್ರಜ್ಞೆಯನ್ನು ಬೀಳಲು ಬಿಡದೆ ಅದನ್ನೇ ಬದುಕಾಗಿಸಿಕೊಂಡು ಪಾಂಡವರ ಏಕಸೂತ್ರತೆಯನ್ನೂ ಕಾಪಾಡಿದ. ಸಂಘರ್ಷವೆಂಬ ಬೆಂಕಿಗೆ ತುಪ್ಪ ಸುರಿಯುವ ಕೆಲಸವನ್ನು ದುರ್ಯೋಧನ ಮಾಡುತ್ತಾ ಬಂದರೆ ಅದಕ್ಕೆ ನೀರು ಸುರಿಯುವ ಕಾರ್ಯವನ್ನು ಧರ್ಮರಾಯ ಮಾಡುತ್ತಾ ಬಂದು ಎತ್ತರದಲ್ಲಿ ನಿಲ್ಲುತ್ತಾನೆ” ಎಂದರು.
ಡಾ. ನಾ. ಮೊಗಸಾಲೆ, ನಿತ್ಯಾನಂದ ಪೈ, ಶ್ರೀಮತಿ ಮಿತ್ರಪ್ರಭಾ ಹೆಗ್ಡೆ, ಏರ್ವೈಸ್ ಮಾರ್ಷೆಲ್ ರಮೇಶ್ ಕಾರ್ಣಿಕ್, ಅಲ್ಲಮಪ್ರಭು ಪೀಠದ ಪ್ರಧಾನ ನಿರ್ದೇಶಕರಾದ ತೆ. ವಿಜಯ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕುಮಾರಿ ಶಾರ್ವರಿ ಪ್ರಾರ್ಥಿಸಿ, ಡಾ. ಮಾಲತಿ ಜಿ. ಪೈ ಕಾರ್ಯಕ್ರಮ ನಿರೂಪಿಸಿ, ಸದಾನಂದ ನಾರಾವಿ ಸ್ವಾಗತಿಸಿ, ಶ್ರೀಮತಿ ಸುಲೋಚನಾ ಬಿ.ವಿ. ವಂದಿಸಿದರು.
