ಬೆಂಗಳೂರು : ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಇವರ ವತಿಯಿಂದ ‘ಮಕ್ಕಳ ರಂಗ ಹಬ್ಬ’ ಚಿಣ್ಣರ ನಾಟಕಗಳ ದೊಡ್ಡ ಪ್ರದರ್ಶನವನ್ನು ದಿನಾಂಕ 08 ಮೇ 2026ರಂದು ಬೆಳಿಗ್ಗೆ 10-30 ಗಂಟೆಗೆ ಬೆಂಗಳೂರಿನ ಜೆ.ಸಿ. ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾದ ಡಾ. ಕೆ.ವಿ. ನಾಗರಾಜ ಮೂರ್ತಿ ಇವರು ವಹಿಸಲಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಡಾ. ಬಿ.ಎಸ್. ಮಂಜುನಾಥಸ್ವಾಮಿ ಇವರು ಉದ್ಘಾಟನೆ ಮಾಡಲಿದ್ದಾರೆ. ಶ್ರೀಮತಿ ಶೋಭಾ ವೆಂಕಟೇಶ್ ಮತ್ತು ಶ್ರೀಮತಿ ಎಸ್. ಮಂಗಳ ರಂಗಾಯಣ ಇವರಿಗೆ ರಂಗ ಗೌರವ ನೀಡಿ ಸನ್ಮಾನಿಸಲಾಗುವುದು.
ಬೆಂಗಳೂರಿನ ರಂಗಸಂಗ್ರಹ ತಂಡದವರು ವಿಶ್ವನಾಥ ಮಂದಿ ಇವರ ನಿರ್ದೇಶನದಲ್ಲಿ ‘ಹನುಮಾಯನ’, ಜಕ್ಕೂರು ಮಡಿಲು – ದಿ ಲ್ಯಾಪ್ ಆಫ್ ಲರ್ನಿಂಗ್ ಟ್ರಸ್ಟ್ ತಂಡದವರು ರಾಹುಲ್ ಕೆ.ಎಂ. ಇವರ ನಿರ್ದೇಶನದಲ್ಲಿ ‘ಗೊಂಬೆ ರಾವಣ’, ಮಾತಾ ನ್ಯಾಷನಲ್ ಪಬ್ಲಿಕ್ ಸ್ಕೂಲ್ ತಂಡದವರು ಯುವರಾಜ್ ನಾಯ್ಕ್ ಇವರ ನಿರ್ದೇಶನದಲ್ಲಿ ‘ರಾತ್ರಿಯ ಗುಮ್ಮ’, ಕೋಲಾರದ ಮಾತೃಭೂಮಿ ಸಂಸ್ಥೆ ತಂಡದವರು ಶಿವಕುಮಾರ ಮೈಸೂರು ಇವರ ನಿರ್ದೇಶನದಲ್ಲಿ ‘ಅಜ್ಜನ ಹೆಜ್ಜೆ ಜಾಡು’, ಬೆಂಗಳೂರಿನ ರಾಜರಾಜೇಶ್ವರಿ ಸೇವಾ ಟ್ರಸ್ಟ್ ತಂಡದವರು ಎಂ.ಎಸ್. ಮಂಜುಳ ಇವರ ನಿರ್ದೇಶನದಲ್ಲಿ ‘ತಿರುಕನ ಕನಸು’, ಮಂಡ್ಯ ಅಕ್ಕಿ ಹೆಬ್ಬಾಳು ಲೋಕಾಯನ ಕಲ್ಚರಲ್ ಫೌಂಡೇಶನ್ ತಂಡದವರು ಗಿರೀಶ್ ರಂಗಾಯಣ ಇವರ ನಿರ್ದೇಶನದಲ್ಲಿ ‘ಚಿಕ್ ಮಾರಿ ದೊಡ್ ಮಾರಿ’, ಟಿ. ದಾಸರಹಳ್ಳಿ ಬುಡ್ಡಿ ದೀಪ ತಂಡದವರು ಅಂಜಲಿ ಇವರ ನಿರ್ದೇಶನದಲ್ಲಿ ‘ಹಕ್ಕಿ ಹಾಡು’, ಉ.ಕ. ದೇವರಕಲ್ಲಳ್ಳಿ ಸಿದ್ಧಿ ಟ್ರಸ್ಟ್ (ರಿ.) ತಂಡದವರು ಕುಮಾರಿ ಪನ್ನಿಕಾ ಸಿದ್ಧಿ ಇವರ ನಿರ್ದೇಶನದಲ್ಲಿ ‘ಸವಣ್ಯಾಚಿ ಗಾಣಿ’, ರಾಜರಾಜೇಶ್ವರಿ ನಗರ ಶ್ರೀ ಶಾರದಾಂಬ ವಿದ್ಯಾನಿಕೇತನ ಶಾಲೆಯ ತಂಡದವರು ವಿನಯ್ ಮೈಸೂರು ಇವರ ನಿರ್ದೇಶನದಲ್ಲಿ ‘ಅಲ್ಲಾವುದ್ದೀನ್ ಮತ್ತು ಅದ್ಭುತ ದೀಪ’ ಮತ್ತು ವಿಭಾ ನಿಧಿ ಶಿವಂ ಇವರ ನಿರ್ದೇಶನದಲ್ಲಿ ‘ಸತ್ಯವಂತ’ ನಾಟಕ ಪ್ರದರ್ಶನ ನೀಡಲಿದ್ದಾರೆ.

