ಬೆಂಗಳೂರು : ದೃಶ್ಯ (ರಿ.) ರಂಗತಂಡ ಪ್ರಯೋಗಿಸುತ್ತಿರುವ ದಾಕ್ಷಾಯಿಣಿ ಭಟ್ ಎ. ಇವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ‘ಮೃಚ್ಛಕಟಿಕ’ ನಾಟಕ ಪ್ರದರ್ಶನವನ್ನು ದಿನಾಂಕ 15 ಮಾರ್ಚ್ 2026ರಂದು ಸಂಜೆ 7-00 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ನಾಟಕವನ್ನು ಶೂದ್ರಕ ಇವರು ರಚಿಸಿದ್ದು, ಬನ್ನಂಜೆ ಗೋವಿಂದಾಚಾರ್ಯ ಇವರು ಕನ್ನಡಕ್ಕೆ ಅನುವಾದಿಸಿದ್ದು ಗಜಾನನ ಟಿ. ನಾಯ್ಕ್ ಸಂಗೀತ ನೀಡಿರುತ್ತಾರೆ.

ಶೂದ್ರಕ :
ಶೂದ್ರಕ ಒಬ್ಬ ಪ್ರಾಚೀನ ಭಾರತೀಯ ನಾಟಕಕಾರ ಮತ್ತು ಕವಿ. ಉಳಿದ ಸಂಸ್ಕೃತ ನಾಟಕಕಾರರಂತೆ ಶೂದ್ರಕನ ಬಗ್ಗೆ ಹೆಚ್ಚು ಮಾಹಿತಿ ದೊರೆಯದಿದ್ದರೂ ಕೆಲವು ಸೂತ್ರಗಳ ಅನುಸಾರ ಈತ 110 ವರ್ಷಗಳ ಕಾಲ ಬದುಕಿದ್ದ ಎಂದು ಹೇಳಲಾಗುತ್ತದೆ. ಈತನ ಮೃಚ್ಛಕಟಿಕ ಹಲವಾರು ಭಾಷೆಗಳಿಗೆ ಅನುವಾದವಾಗಿ, ರೂಪಾಂತರಗೊಂಡು, ಇಂದಿಗೂ ಪರಿಣಾಮಕಾರಿ ಪ್ರದರ್ಶನಗಳನ್ನು ನೀಡುತ್ತಿರುವುದು ಈತನ ಬರವಣಿಗೆಯ ಚತುರತೆ ಹಾಗೂ ಸಮಾಜವನ್ನು ಅರ್ಥೈಸಿಕೊಂಡ ಬಗೆಯನ್ನು ತೋರಿಸುತ್ತದೆ. ರಾಜನಾದ ಈತ ‘ಶೂದ್ರಕ’ ಎಂಬ ಕಾವ್ಯನಾಮದಲ್ಲಿ ಮೃಚ್ಛಕಣಕವನ್ನು ರಚಿಸಿದ ಎಂಬ ನಂಬಿಕೆ ಒಂದೆಡೆಯಾದರೆ, ಈತನ ಕಾಲಮಾನ ಸ್ಪಷ್ಟವಾಗಿ ದೊರೆಯದೇ ಇರುವುದು ಇನ್ನೊಂದೆಡೆ, ಗುಪ್ತ ಸಾಮ್ರಾಜ್ಯದ ಸಾಹಿತ್ಯಿಕ ಉತ್ಕರ್ಷಗಳ ರೂಪುರೇಷೆಗಳನ್ನು ಸ್ಪಷ್ಟವಾಗಿ ಗುರುತಿಸಲು ಸಾಧ್ಯವಾದ ಮೃಚ್ಚಕಣಕ ಕೃತಿ ದೊರೆತಿರುವುದು 5ನೇ ಶತಮಾನದ ಆಸುಪಾಸಿನಲ್ಲಿ.
ಬನ್ನಂಜೆ ಗೋವಿಂದಾಚಾರ್ಯರು (1936-2020)
ಬನ್ನಂಜೆ ಗೋವಿಂದಾಚಾರ್ಯರು ಮದ್ವ ತತ್ತ್ವದ ಪ್ರಮುಖ ಪಂಡಿತರು, ಚಿಂತಕರು ಮತ್ತು ಪ್ರಸಿದ್ಧ ಪ್ರವಚನಕಾರರಾಗಿದ್ದರು. 1936ರಲ್ಲಿ ಉಡುಪಿ ಜಿಲ್ಲೆಯ ಅಂಬಲಪಾಡಿಯಲ್ಲಿ ಜನಿಸಿದ ಇವರು, ಶ್ರೀ ಮಧ್ವಾಚಾರ್ಯರ ದೈತ ತತ್ತ್ವದಲ್ಲಿ ಅಪಾರ ಪಾಂಡಿತ್ಯವನ್ನು ಗಳಿಸಿದರು. ಅವರು ಸಂಸ್ಕೃತ ಹಾಗೂ ಕನ್ನಡದಲ್ಲಿ ಅನೇಕ ಧಾರ್ಮಿಕ ಮತ್ತು ತಾತ್ವಿಕ ಕೃತಿಗಳನ್ನು ರಚಿಸಿದರು. ಅವರ ಪ್ರಮುಖ ಕೃತಿಗಳಲ್ಲಿ ಭಗವದ್ಗೀತೆ ಭಾಷ್ಯ, ಬ್ರಹ್ಮಸೂತ್ರ ಭಾಷ್ಯ, ಉಪನಿಷತ್ತುಗಳ ವಿವರಣೆಗಳು, ಮಹಾಭಾರತದ ಟಿಪ್ಪಣಿಗಳು ಮತ್ತು ವಿಷ್ಣುಸಹಸ್ರನಾಮ ತಾತ್ಪರ್ಯ ಪ್ರಮುಖವಾಗಿವೆ. ಧಾರ್ಮಿಕ ಸಾಹಿತ್ಯದ ಜೊತೆಗೆ ಅವರು ಅನೇಕ ಸಂಸ್ಕೃತ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸುವ ಮೂಲಕ ಸಾಹಿತ್ಯದ ಕ್ಷೇತ್ರದಲ್ಲಿಯೂ ಅಮೂಲ್ಯ ಕೊಡುಗೆ ನೀಡಿದ್ದಾರೆ. ಅವುಗಳಲ್ಲಿ ಬಾಣಭಟ್ಟನ ಕಾದಂಬರಿ, ಕಾಳಿದಾಸನ ಶಾಕುಂತಲಾ, ಶೂದ್ರಕನ ಮೃಚ್ಛಕಣಕ” ಮೊದಲಾದ ಚಾರಿತ್ರಿಕ ಕೃತಿಗಳು ಪ್ರಮುಖವಾಗಿವೆ. ಅವರ ಸೇವೆಯನ್ನು ಗುರುತಿಸಿ ಭಾರತ ಸರ್ಕಾರ 2009ರಲ್ಲಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿತು. ಅವರು 13 ಡಿಸೆಂಬರ್ 2020ರಂದು ವಿಧಿವಶರಾದರು.
ನಾಟಕದ ಬಗ್ಗೆ : ಮೃಚ್ಛಕಟಿಕ (ಮೃತ್ = ಆವೆಯ ಮಣ್ಣು, ಶಕಟಿಕಾ = ಆಟದ ಬಂಡಿ)
ಮೃಚ್ಛಕಟಿಕ, ಕೇಳಲು ಎಷ್ಟು ರೋಚಕವೋ ಅಷ್ಟೇ ಪ್ರಸಿದ್ಧವಾದ ಹೆಸರು. ಈ ನಾಟಕದ ಕಥಾಹಂದರದ ಹರವು ದೊಡ್ಡದು. ಉಜ್ಜಯಿನಿ ನಗರವನ್ನು ಕೇಂದ್ರವಾಗಿಸಿಕೊಂಡು ಅಲ್ಲಿನ ಪ್ರಸಿದ್ಧ ವ್ಯಾಪಾರಿ ಚಾರುದತ್ತ ಹಾಗೂ ಶ್ರೀಮಂತ ವೇಶ್ಯ ವಸಂತಸೇನೆಯ ನಿಷ್ಕಲ್ಮಶ ಪ್ರೇಮವನ್ನು ಎತ್ತಿ ತೋರಿಸುವುದೇ ಕಥೆಯ ಮೂಲದ್ರವ್ಯ, ಅದರ ಸುತ್ತಮುತ್ತಲಿನ ಸಾಮಾಜಿಕ ಜೀವನದ ಎಲ್ಲ ಓರೆಕೋರೆಗಳನ್ನು ಪೋಣಿಸಿ ಕಥೆಯನ್ನು ಪಡೆಯಲಾಗಿದೆ. ಹೆಣ್ಣಿನ ಮೇಲೆ ಹಾಗೂ ಅಶಕ್ತರ ಮೇಲೆ ಇಂದಿಗೂ ನಡೆಯುತ್ತಿರುವ ದೌರ್ಜನ್ಯ, ರಾಜನ ಪೂರ್ವಾಶ್ರಮದ ಎಡಬಿಡಂಗಿತನ, ನೈತಿಕ ಅಧಃಪಥನ, ರಾಜಕೀಯ ಹಸ್ತಕ್ಷೇಪ, ರಾಜ್ಯಾಂಗಕ್ಕೆ ಹೆದರಿ ನಡೆಯುವ ಕಾರ್ಯಾಂಗ, ಸಣ್ಣವರ ಹಿರಿತನ, ಅರಸೊತ್ತಿಗೆಯ ಪತನ, ದೊಲ್ಲರ ಹುಡಗನೊಬ್ಬ ರಾಜ್ಯ ಗೆಲ್ಲುವುದು, ಅಧಿಕಾರ ದರ್ಪದಿಂದ ನಡೆವ ದುಷ್ಕೃತ್ಯಗಳತ್ತ ತನ್ನ ದೃಷ್ಟಿಯನ್ನು ಪಸರಿಸುವ ಕಥಯ ಅಯಾಮ ಶ್ಲಾಘನೀಯವಾದುದು. ಇದೆಲ್ಲ ಕಾರಣಗಳಿಂದ ಮೃಚ್ಛಕಟಿಕ ಅದೆಷ್ಟೋ ಶತಮಾನಗಳ ಹಳೆಯ ಕೃತಿಯಾದರೂ ಇಂದಿನ ಆದು ಹೋಗುಗಳಿಗೆ ಕನ್ನಡಿ ಹಿಡಿದಂತಿದೆ.
ದೃಶ್ಯ ರಂಗತಂಡ : ಮುಖ್ಯವಾಗಿ ವಿದ್ಯಾರ್ಥಿಗಳನ್ನು ಹಾಗೂ ಯುವಜನರನ್ನು ಗಮನದಲ್ಲಿಟ್ಟುಕೊಂಡು ರೂಪಿತವಾದ ರಂಗತಂಡ ದೃಶ್ಯ. ಸ್ವಾವಲಂಬಿ ಬದುಕಿನ ಇರವು ಮತ್ತು ಅರಿವಿನ ವಿವೇಕವನ್ನು ರಂಗಭೂಮಿಯ ಲೋಕದೃಷ್ಟಿಯಿಂದ ಪಡೆದುಕೊಳ್ಳುವ ಹಂಬಲದಿಂದ ಕಳೆದ 20 ವರ್ಷಗಳಿಂದ ಈ ತಂಡ ಹಲವಾರು ರಂದ ಚಟುವಣಕೆಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ವಿದ್ಯಾರ್ಥಿಗಳು ಹಾಗೂ ಪರಿಣಿತ ರಂಗ ನಟ, ನಟಿಯರನ್ನು ಒಟ್ಟಿಗೆ ಸೇರಿಸುತ್ತ, ಹಲವು ರಂಗಶಿಬಿರಗಳನ್ನು ನಡೆಸುತ್ತ, ಹಲವು ಪ್ರದರ್ಶನಗಳನ್ನು ಸಂಘಟಿಸುತ್ತ ಬಂದ ತಂಡವು ಇದುವರೆಗೂ 25ಕ್ಕೂ ಹೆಚ್ಚು ನಾಟಕಗಳನ್ನು ಸಿದ್ಧಪಡಿಸಿದೆ.
ಟೈಲ್ಫ್ತ್ ನೈಟ್, ದೇವರ ಹೆಸರಲ್ಲಿ, ಸ್ವಪ್ನವಾಸವದತ್ತ, ಮರುಗಡಲು, ಪ್ಲೌಟಸ್, ಪೇಯಿಂಗ್ ಗೆಸ್ಟ್, ವರ್ಷಗೀತೆ, ಸಮಾನತೆ, ನಾನು ಮತ್ತು ಹೆಣ್ಣು, ಪುಣ್ಯಕೋಟಿ, ಬಸ್ತಿ, ಚಾಳೇಶ, ಕೆಂಪು ಕಣಗಿಲೆ, ಕಂಬ್ಳೀ ಸೇವೆ, ಅಗ್ನಿವರ್ಣ, ರಕ್ತವರ್ಣಿ, ಅಭಿಯಾನ, ಹಾನೂಶ್, ಪ್ರತಿಜ್ಞಾ-ಯೌಗಂಧರಾಯಣ, ವಿದಿಶೇಯ ವಿದೂಷಕ, ಢಾಣಾ-ಡಂಗುರ, ರಕ್ತ-ಧ್ವಜ, ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್ ಇವು ತಂಡದ ಪ್ರಮುಖ ಪ್ರಯೋಗಗಳಾಗಿವೆ. ತಂಡವ, ನಾಟಕ ಪ್ರದರ್ಶನಗಳನ್ನು ನಾಡಿನ ಎಲ್ಲೆಡೆ ಅಂತೆಯೇ ಹೊರನಾಡುಗಳಲ್ಲಿಯೂ ನೀಡುತ್ತ ಬಂದಿದೆ. ನಾಟಕ ಕಟ್ಟುವುದು ಬದುಕು ಕಟ್ಟುವ ಕಲೆಯ ಮುಂಚಾಚು ಅಂತಲೇ ಪರಿಭಾವಿಸುವ ತಂಡವು, ಸಾಹಿತ್ಯ, ಸಂಸ್ಕೃತಿಯ ಹಲವು ಸಂಗತಿಗಳನ್ನು ರಂಗಬದುಕಿನೊಳಗೆ ಒಳಗೊಳ್ಳುತ್ತಲೇ ಬಂದಿದೆ.
ನಿರ್ದೇಶಕರ ಬಗ್ಗೆ : 2013-2014ನೇ ಸಾಲಿನ ಕೇಂದ್ರ ಸಂಗೀತ ನಾಟಕ ಅಕಾಡಮಿಯ ಉಸ್ತಾದ್ ಬಿಸ್ಮಿಲ್ಲ್ಹಾ ಖಾನ್ ಯುವ ಪುರಸ್ಕಾರ್ ಪ್ರಶಸ್ತಿ ಸಂದಿರುವ ದಾಕ್ಷಾಯಿಣಿ ಭಟ್ ರವರು ನೀನಾಸಂನಲ್ಲಿ ಪದವಿ ಪಡೆದು, ಹಲವು ವರ್ಷಗಳಿಂದ ರಂಗಭೂಮಿಯನ್ನು ಉಸಿರಾಗಿಸಿಕೊಂಡು, ನಿರಂತರ ಹೊಸ ಪ್ರಯೋಗಕ್ಕೆ ಹಾತೊರೆಯುತ್ತಾ, ರಂಗಭೂಮಿಗೆ ಒಡ್ಡಿಕೊಂಡಿದ್ದಾರೆ. ಗುಣಮುಖ, ಎ ಮಿಡ್ ಸಮ್ಮರ್ ನೈಟ್ಸ್ ಕ್ರೀಮ್. ಸ್ವಪ್ನವಾಸವದತ್ತ, ಪೇಯಿಂಗ್ ಗೆಸ್ಟ್, ಪಂಪನಿಗೆ ಬಿದ್ದ ಕನಸುಗಳು, ಕೊಳ್ಳಿ, ಅಮ್ರಪಾಲಿ, ಸ್ಮಶಾನ ಕುರುಕ್ಷೇತ್ರಂ, ಸಾಹೇಬರು ಬರುತ್ತಾರೆ, ನನಗ್ಯಾಕೋ ಡೌಟು. ಹಕ್ಕಿ ಹಾಡು, ಪಂಜರ ಶಾಲೆ, ಅಜ್ಜೀ ಕಥೆ, ಧೂತ ಘಟೋತ್ಕಚ, ಗಂಧವಲ್ಲಿ, ಸಂಸಾರದಲ್ಲಿ ಸನಿದಪ ಹೀಗೆ ಹಲವಾರು ನಾಟಕಗಳನ್ನು ನಿರ್ದೇಶಿಸಿ ಯಶಸ್ವಿ ಪ್ರದರ್ಶನ ನೀಡುವುದರೊಂದಿಗೆ ರಂಗಭೂಮಿಯಲ್ಲಿ ತನ್ನದೇ ಆದ ನಿಲುವನ್ನು ಹೊಂದಿರುವರು. ಮನಸ್ಸಿಗೆ ವೇದ್ಯವಾದ ಸಂಗತಿಗಳು, ದಕ್ಕುವ ಅನುಭವಗಳ ಜೊತೆ. ನಾಟಕ-ಕೃತಿಯನ್ನು ಸಂಸ್ಕೃತಿ ಮತ್ತು ಬದುಕನ್ನು ಬಿಂಬಿಸುವ ರಂಗಕೃತಿಯನ್ನಾಗಿಸುವುದು ಇವರ ವೈಶಿಷ್ಟ್ಯತೆ.
