ಮಂಗಳೂರು : ಭರತಾಂಜಲಿ ನೃತ್ಯಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಗಣೇಶಪುರ ದೇವಳದ ವಠಾರದಲ್ಲಿ ಹಮ್ಮಿಕೊಂಡಿರುವ ಗಾನಾಮೃತ ಹಾಗೂ ಭರತನಾಟ್ಯ ವೈಭವ ಕಾರ್ಯಕ್ರಮವು ದಿನಾಂಕ 22 ಏಪ್ರಿಲ್ 2026ರಂದು ನಡೆಯಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾಟಿಪಳ್ಳ ಶ್ರೀ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ನಿಕಟ ಪೂರ್ವ ಅಧ್ಯಕ್ಷ ಧರ್ಮೇಂದ್ರ ಇವರು ಮಾತನಾಡಿ “ಭರತನಾಟ್ಯವು ಕೇವಲ ಒಂದು ನೃತ್ಯ ಪ್ರಕಾರವಲ್ಲ, ಅದೊಂದು ಜೀವನ ವಿಧಾನ ಮತ್ತು ಸಾಂಸ್ಕೃತಿಕ ಪರಂಪರೆಯ ಪ್ರತಿಬಿಂಬವಾಗಿದೆ. ಜೀವನ ಮೌಲ್ಯಗಳನ್ನು ಕಲಿಸುವ, ಶಿಸ್ತು ಮೂಡಿಸುವ ಮತ್ತು ಆತ್ಮಾವಲೋಕನಕ್ಕೆ ಪ್ರೇರೇಪಿಸುವ ಅದ್ಭುತ ಕಲೆಯಾಗಿದೆ. ಭರತಾಂಜಲಿ ಸಂಸ್ಥೆಯ ರೂವಾರಿಗಳಾದ ಶ್ರೀಧರ ಹೊಳ್ಳ ಪ್ರತಿಮಾ ದಂಪತಿಗಳು ಮಹಾಗಣಪತಿ ದೇವಸ್ಥಾನದ ಪ್ರಾರಂಭದಿಂದಲೂ ಕಲಾ ಸೇವೆಯನ್ನು ಮಾಡಿಕೊಂಡು ಬರುತ್ತಿರುವುದು ಶ್ಲಾಘನೀಯ” ಎಂದು ನುಡಿದರು.

ಭರತಾಂಜಲಿಯ ನಿರ್ದೇಶಕ ಗುರು ಶ್ರೀಧರ ಹೊಳ್ಳ ಪ್ರಸ್ತಾವಿಕ ಮಾತುಗಳನ್ನಾಡಿ ಸಂಸ್ಥೆಯು ಬೆಳೆದು ಬಂದ ಬಗ್ಗೆ ವಿವರಿಸಿದರು. ಸಾಂಸ್ಕೃತಿಕ ಸಮಿತಿಯ ಚಂದ್ರಹಾಸ ಶೆಟ್ಟಿಗಾರ್ ಸ್ವಾಗತಿಸಿ, ನಿರೂಪಿಸಿದರು. ವಿದುಷಿ ಪ್ರತಿಮಾ ಶ್ರೀಧರ್ ವಂದಿಸಿದರು. ದೀನನಾಥ ಶೆಟ್ಟಿಗಾರ್, ರಾಮಚಂದ್ರ ಶೆಟ್ಟಿಗಾರ್ ಮೊದಲಾದವರು ಉಪಸ್ಥಿತರಿದ್ದರು. ಬೆಂಗಳೂರಿನ ವಂದನಾ ರಾಣಿ ಇವರಿಂದ ಗಾನಮೃತ ಹಾಗೂ ಸಿದ್ದಿ ವಿನಾಯಕ ನೃತ್ಯ ಶಾಲೆಯ ವಿದ್ಯಾರ್ಥಿಗಳಿಂದ ನೃತ್ಯ ವೈಭವ ಕಾರ್ಯಕ್ರಮ ಸಂಪನ್ನಗೊಂಡಿತು.
