ವಿಜಯಪುರ : ನಾದಮಣಿ ಬಿರುದಾಂಕಿತ ದಿ. ಪಂಡಿತ್ ಬಸಪ್ಪ ಎಮ್. ಹೆರಕಲ್ ಗುರುಗಳ 34ನೆಯ ಪುಣ್ಯಸ್ಮರಣೆಯ ನಿಮಿತ್ತ ದಿನಾಂಕ 01 ಮಾರ್ಚ್ 2026ರ ರವಿವಾರ ಕಾಳಿಕಾ ದೇವಸ್ಥಾನದಲ್ಲಿ ಸಂಗೀತ ಕಾರ್ಯಕ್ರಮ ಜರುಗಿತು. ಪಂಡಿತ್ ಬಸಪ್ಪ ಇವರ ಶಿಷ್ಯರು ಕಾರ್ಯಕ್ರಮ ಏರ್ಪಡಿಸಿದ್ದರು. ತೆಲಂಗಾಣ ಸರ್ಕಾರದಿಂದ `ಸಂಗೀತ ರತ್ನ’ ಪ್ರಶಸ್ತಿ ಪಡೆದ ಆದವಾನಿಯ ಸೌ. ರಾಜಶ್ರೀ ಕುಲಕರ್ಣಿ (ದೇಸಾಯಿ) ಅವರು ಗಜಾನನ ಸ್ತುತಿಯನ್ನು ಹಾಡಿ, ಈ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಯುವ ಕಲಾವಿದ ವಿಶಾಲ್ ಕಟ್ಟಿಯವರು `ಜಯ ಜಗದೀಶ್ವರಿ’ ಎಂಬ ಹಾಡಿನಿಂದ ಸರಸ್ವತಿ ವಂದನೆ ಮಾಡಿದರು. ಕಾರ್ಯಕ್ರಮದ ನಿರೂಪಕಿಯಾದ ಶ್ರೀಮತಿ ನಂದಾ ಮಿರ್ಜಿಯವರು ದಿ. ಬಸಪ್ಪ ಮಾಸ್ತರ್ ಹೆರಕಲ್ ಗುರುಗಳ ಸಂಗೀತ ನಿಷ್ಠೆಯನ್ನು ಕುರಿತು ಮಾತನಾಡಿದರು.

ಆಮೇಲೆ ಕಲ್ಯಾಣ ಕರ್ನಾಟಕ ಭಾಗದ ಪ್ರಸಾರ ಭಾರತಿ ಆಕಾಶವಾಣಿ ‘ಎ-ಟಾಪ್’ ಉನ್ನತ ಶ್ರೇಣಿಗೆ ಭಾಜನರಾದ ಏಕಮೇವ ಕಲಾವಿದರಾದ ಪಂಡಿತ್ ಸಾತಲಿಂಗಪ್ಪ ದೇಸಾಯಿ ಕಲ್ಲೂರ ಹಾಗೂ ಅವರ ಪರಿವಾರದವರಿಂದ ನಡೆದ ತಬಲಾ ತ್ರಿಗಲಬಂದಿ ಕಾರ್ಯಕ್ರಮ ಕೇಳುಗರಿಗೆ ರೋಮಾಂಚನ ಉಂಟು ಮಾಡಿತು. ಸಾತಲಿಂಗಪ್ಪ ಅವರ ಮಕ್ಕಳಾದ ಶ್ರೀ ಮಳೆಮಲ್ಲೇಶ್ ಹಾಗೂ ಶ್ರೀ ರಘುನಂದನ್ ಗೋಪಾಲ ತಂದೆಯೊಂದಿಗೆ ಕಾರ್ಯಕ್ರಮ ನೀಡಿದರು. ಸಾತಲಿಂಗಪ್ಪ ಅವರ ಪುತ್ರಿ ಕುಮಾರಿ ಭಾಗ್ಯಶ್ರೀ ಸಂವಾದಿನಿಯಾಗಿ ಲೆಹರಾ ಸಾಥ್ ನೀಡಿದರು. ಈ ಕಲಾವಿದರನ್ನು ವಿಜಯಪುರ ನಗರದ ತಬಲಾ ಕಲಾವಿದರಾದ ಶ್ರೀಪಾದ್ ಅಟ್ಲೆ, ಶ್ರೀಧರ್ ಹರಿದಾಸ್, ಟಿ. ರವಿಕುಮಾರ್ (ವಯೋಲಿನ್), ಶ್ರೀಮತಿ ಲತಾ ಜಹಾಗೀರದಾರ್ (ಹಿಂದುಸ್ತಾನಿ ಸಂಗೀತ) ಇವರುಗಳು ಸತ್ಕರಿಸಿ ಅಭಿನಂದಿಸಿದರು.
ನಂತರ ಕಿರಾಣಾ ಘರಾಣೆಯ ಸಮರ್ಥ ವಾರಸುದಾರರಾದ ಪಂಡಿತ್ ಜಯತೀರ್ಥ ಮೇವುಂಡಿಯವರು ತಮ್ಮ ಸಂಗೀತ ಸಭೆ ಆರಂಭಿಸಿದರು. ಅವರು ರಾಗ್ ಜೋಗ್ದಲ್ಲಿ ‘ಓ ಬಲಮಾ’ ಎಂಬ ಖ್ಯಾಲನ್ನು, ಮಧ್ಯಲಯ ರೂಪಕ ತಾಳದಲ್ಲಿ, ‘ಸಾಜನ ಮೋರೆ ಘರ್ ಆ’ ಎಂಬ ಪ್ರಸಿದ್ಧ ಬಂದಿಶ್ನ್ನು ಪ್ರಸ್ತುತ ಪಡಿಸಿದ ರೀತಿಯು ಶ್ರೋತೃ ವೃಂದವನ್ನು, ಮಂತ್ರ ಮುಗ್ಧಗೊಳಿಸಿತು. ಮುಂದೆ ರಾಗ ಸೋಹನಿಯಲ್ಲಿ ‘ರಂಗ ನ ಡಾಲೊ ಶ್ಯಾಮ್ಜಿ’ ಎಂಬ ಚೀಜ್ ಹಾಗೂ ತರಾನಾ ತುಂಬ ಮನಮೋಹಕವಾಗಿತ್ತು. ಆಮೇಲೆ ಕೇಳುಗರ ಅಪೇಕ್ಷೆ ಮೇರೆಗೆ ‘ಹೇ ಸುರಾನ್ನೋ ಚಂದ್ರ ವ್ಹಾ’ ಎಂಬ ಮರಾಠಿ ಅಭಂಗ, ‘ನಿನ್ನ ಪೂಜೆಯೋ ರಾಮಾ’ ಎಂಬ ಪುರಂದರದಾಸರ ಕೃತಿ, ‘ತಟಿತ್ಕೋಟಿನಿಭಿಕಾಯ ಜಗನ್ನಾಥ ವಿಠಲಯ್ಯಾ’ ಎಂಬ ಜಗನ್ನಾಥ ದಾಸರ ಕೃತಿಯನ್ನು ‘ಮಾಝೆ ಮಾಹೇರ ಪಂಢರಿ’ ಎಂಬ ಅಭಂಗವನ್ನು ಹಾಡಿದ ಮೇವುಂಡಿಯವರು ವಾತಾವರಣದಲ್ಲಿ ಭಕ್ತಿರಸದ ಮಹಾಪೂರವನ್ನೇ ಹರಿಸಿದರು. ಸಹಗಾಯನದಲ್ಲಿ ಕುಮಾರ್ ಲಲಿತ್ ಮೇವುಂಡಿ ಹಾಗೂ ವಿಶಾಲ್ ಕಟ್ಟಿ ಇವರುಗಳು ಭಾಗವಹಿಸಿದ್ದರು. ಈ ಅತ್ಯಂತ ವೈಭವದ ಪಂಡಿತ್ ಮೇವುಂಡಿಯವರ ಶ್ರೀಮಂತ ಗಾಯನವು ಅಷ್ಟೇ ಗಂಭೀರ-ಶಾಂತ ರೀತಿಯಿಂದ ರಂಗೇರುವಂತೆ ಮಾಡಿದ್ದು, ಇನ್ನೂ ಇಬ್ಬರು ಶ್ರೇಷ್ಠ ಕಲಾವಿದರು ಪ್ರೌಢ ಸಂಯಮದ ತಬಲಾದ ಶ್ರೀ ಗೋಪಾಲ್ ಗುಡಿಬಂಡಿಯವರು ಹಾಗೂ ಸಮೃದ್ಧ ಸಂವಾದಿನಿಯಲ್ಲಿ (ಹಾರ್ಮೋನಿಯಂ) ಶ್ರೀಪಾದದಾಸ್ ರಾಯಚೂರು ಇವರು. ಕಾರ್ತಿಕ್ ಜಂಗಿನಮಠ್ ಇವರ ತಾಳ ಸಹಕಾರ ಮನಸ್ಸನ್ನು ಪುಳಕಿತಗೊಳಿಸಿತು.

ಈ ಗುರುಸ್ಮರಣೆಯ ಅವಿಸ್ಮರಣೀಯ ಕಾರ್ಯಕ್ರಮಕ್ಕೆ ಆಧಾರರಾದ ಶ್ರೀ ಕಾಳಿಕಾ ದೇವಸ್ಥಾನದ ಸಮಿತಿಯ ಅಧ್ಯಕ್ಷ ಶ್ರೀ ಜ್ಞಾನೇಶ್ವರ್ ಪಂಡಿತ್, ಶ್ರೀ ಶ್ರೀಕಾಂತ್ ಕುಂದಣಗಾರ್ ಹಾಗೂ ದೇವಸ್ಥಾನ ಸಮಿತಿಯ ಎಲ್ಲ ಸದಸ್ಯರುಗಳಿಗೆ ವಿಶೇಷ ಧನ್ಯವಾದ ಅರ್ಪಿಸಲಾಯಿತು. ಬಸಪ್ಪ ಗುರುಗಳ ಈ ಸ್ಮರಣ ಸಂಗೀತ ಕಾರ್ಯಕ್ರಮದಲ್ಲಿ ಅವರ ಶಿಷ್ಯರಾದ ಲತಾ ಜಹಾಗೀರದಾರ್, ಮಾಧುರಿ ಕುಸುಗಲ್, ನಂದಾ ಮಿರ್ಜಿ, ಸುವರ್ಣಾ ಹಳ್ಳೂರ್, ರಾಜಶ್ರೀ ಟಂಕಸಾಲಿ, ಭಾರತಿ ಕುಂದಣಗಾರ, ರಾಜಶ್ರೀ ಕುಲಕರ್ಣಿ (ದೇಸಾಯಿ) ಮುಂತಾದವರು ಭಾಗವಹಿಸಿದ್ದರು. ಅದಲ್ಲದೇ ಹೆರಕಲ್ ಗುರುಗಳ ಕುಟುಂಬದ ಸದಸ್ಯರು, ಡಾ. ಸತೀಶ್ ಜಿಗಜಿನ್ನಿ ದಂಪತಿಗಳು, ಸುರಸಿಂಗಾರದ ಶ್ರೀ ವಿಶ್ವನಾಥ ಬೀಳಗಿ, ಸಂಗಣ್ಣ ಪಾಟೀಲ್, ರಮೇಶ್ ಚವ್ಹಾಣ್, ಕೃತಿಕಾ ಜಂಗಿನಮಠ್, ಗೀತಾ ಕುಲಕರ್ಣಿ, ಸಂಜೀವ್ ಕುಲಕರ್ಣಿ, ರೂಪಾ ಕುಲಕರ್ಣಿ, ಶ್ರೀರಂಗ್ ಪುರಾಣಿಕ್, ಸ್ಮಿತಾ ಮೂರ್ತಿ, ಕಲ್ಯಾಣರಾವ್ ದೇಶಪಾಂಡೆ ಹಾಗೂ ಇನ್ನೂ ಅನೇಕಾನೇಕ ಗಣ್ಯರ ಉಪಸ್ಥಿತಿಯು ಈ ಕಾರ್ಯಕ್ರಮಕ್ಕೆ ಕಳೆಕಟ್ಟಿತು.
