ಒಂದು ಪೋನ್ ಕರೆಗೆ ಓಗೊಟ್ಟು ಬಹುಭಾಷಾ ಕವಿಗೋಷ್ಠಿಯಲ್ಲಿ ಭಾಗವಹಿಸಲು ದೂರದ ಚಿರುಪುಳದ ಪ್ರಾಪೊಯಿಲ್ ಎನ್ನುವ ಊರಿಗೆ ಹೋಗಬೇಕಾಯಿತು. ಹಾಗೆ ಅವತ್ತು ಬಹಳ ಬೇಗ ಎದ್ದು ಆರೂಮುವತ್ತಕ್ಕೆ ನನ್ನ ಬೈಕ್ ಹತ್ತಿ ನೇರ ಕುಂಬಳೆ ರೈಲ್ವೇ ನಿಲ್ದಾಣಕ್ಕೆ ಬಂದೆ. ಸೀತಂಗೋಳಿಯಿಂದ ಆತ್ಮೀಯರಾದ ಸುಂದರ ಬಾರಡ್ಕ ಮತ್ತು ವನಜಾಕ್ಷಿ ಚಂಬ್ರಕಾನ ನನ್ನ ಜತೆಗೂಡಿದರು. ನೇರ ಟಿಕೇಟ್ ಕೌಂಟರಿಗೆ ಹೋಗಿ ರೈಲು ಬರುವ ಸಮಯ ಖಚಿತಪಡಿಸಿಕೊಂಡು ಮೂವರಿಗೂ ಟಿಕೇಟ್ ಪಡೆದು ಅಲ್ಲೇ ಇರುವ ಅಸನದಲ್ಲಿ ಸ್ವಲ್ಪ ವಿಶ್ರಾಂತಿ ಪಡೆಯುದರೊಳಗೆ ತನ್ನ ಸೀಟಿ ಹೊಡೆಯುತ್ತಾ ಸುಮಾರು ಸಮಯ ಏಳು ಐವತ್ತೈದಕ್ಕೆ ರೈಲು ಬಂದೇಬಿಟ್ಟಿತು. ನಾವು ಮೂವರು ರೈಲು ಹತ್ತಿ ಆಸನವನ್ನು ಸ್ವೀಕರಿಸಿ ಸುಮಾರು ಒಂದು ಗಂಟೆಯ ಸಮಯದಲ್ಲಿ ತಲುಪಬೇಕಾದ ಸ್ಥಳ ಪಯ್ಯನೂರಿಗೆ ತಲುಪಿದೆವು. ಅಷ್ಟರಲ್ಲೇ ನಮ್ಮ ಬಳಿ ಕಾರೊಂದು ಬಂದು ನಿಂತಿತು. ಪರಿಚಯವಿಲ್ಲದಿದ್ದರು ನಮ್ಮ ಪೋಟೋ ಮೊದಲೇ ಕಳಿಸಿದ್ದುದರಿಂದ ಬಹುಶಃ ತಮ್ಮ ಆತಿಥ್ಯಕ್ಕಾಗಿ ಕರೆಮಾಡಿದ ಪ್ರಾಪೊಯಿಲ್ ನಾರಾಯಣ ಮಾಸ್ಟರ್ ಇವರೇ ಆಗಿರಬಹುದು ಅಂದುಕೊಳ್ಳುವಷ್ಟರಲ್ಲಿ ಅವರೇ ನಮ್ಮನ್ನು ಗುರುತಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಅದೇ ಸಮಯಕ್ಕೆ ನಮ್ಮ ಇನ್ನೊಬ್ಬ ಗೆಳೆಯ ಬರಹಗಾರ ರವೀಂದ್ರನ್ ಪಾಡಿಯವರು ನಮ್ಮ ಜೊತೆ ಸೇರಿಕೊಂಡರು. ಎಲ್ಲರೂ ಕಾರಿನೊಳಗೆ ಸೇರಿಕೊಂಡು ಪ್ರಾಪೊಯಿಲ್ ನಾರಾಯಣ್ ಅವರ ಪರಿಚಯ ವಿನಿಮಯ ಮಾಡಿಕೊಳ್ಳುವುದರೊಂದಿಗೆ ಕಾರು ನಿಧಾನವಾಗಿ ಪೇಟೆ ಬಿಟ್ಟು ಹಳ್ಳಿಯ ಕಡೆ ಸಾಗುತ್ತಾ ಒಂದು ಬೃಹತ್ ಹೊಟೇಲ್ ಪಕ್ಕದಲ್ಲಿ ನಿಂತಿತು. ಬೆಳಗ್ಗಿನ ಉಪಾಹಾರ ಮನೆಯಲ್ಲಿ ಸರಿಯಾಗಿ ಆಗದಿರುವುದರಿಂದ ಅಲ್ಲಿ ಹೊಟ್ಟೆ ತುಂಬಾ ತಿಂಡಿ ತಿಂದು ನಮ್ಮ ಪಯಣವನ್ನು ಮುಂದುವರಿಸಿದೆವು.


ಕಾರು ಸಾಗುತ್ತ ಸಾಗುತ್ತ ಕಿರಿದಾದ ರಸ್ತೆಯಲ್ಲಿ ಬೆಟ್ಟ ಏರುತ್ತ ಒಂದು ಬೃಹತ್ ಬಂಡೆಗೆ ಸುತ್ತು ಬಂದು ನಿಂತಿತು. ಎಲ್ಲರೂ ಕಾರಿನಿಂದ ಇಳಿದೆವು. ನಮ್ಮನ್ನು ಸ್ವಾಗತಿಸಲು ಅಲ್ಲೇ ಇದ್ದ ಮನೆಯವರು ಹಿರಿಯರು ಕಿರಿಯರು ಎಲ್ಲರೂ ಬಂದು ಸೇರಿದರು. ನಮ್ಮನ್ನು ನೋಡಿದ ಅವರಿಗೆ ನಾವು ಕಾಸರಗೋಡಿಂದ ಬಂದವರು ಎನ್ನುವಾಗ ಏನೋ ಒಂದು ಬಗೆಯ ನಂಟಿನ ಸಂಭ್ರಮ. ನಮಗೂ ಖುಷಿ. ಅವರು ನೀಡಿದ ಲಘು ಪಾನೀಯ ಸ್ವೀಕರಿಸಿದ ನಾವು ಒಂದಷ್ಟು ಹೊತ್ತು ಅಲ್ಲೇ ಸುತ್ತಾಡುವುದಕ್ಕೆ ಹೊರಟೆವು.

ಅದೊಂದು ಪುಟ್ಟ ಕಟ್ಟಡ. ಅದನ್ನು ಒಂದಷ್ಟು ವಿನ್ಯಾಸಗಳೊಂದಿಗೆ ನಿರ್ಮಿಸಿದ್ದರು. ಅದರ ಸುತ್ತಲು ಸಣ್ಣ ಸಣ್ಣ ಹಣತೆಗಳು. ಬಹುದಿನಗಳ ಹಿಂದೆಯೇ ಅವುಗಳನ್ನು ಉರಿಸಿದ್ದ ಕುರುಹುಗಳು ಅಲ್ಲಿ ಕಾಣುತ್ತಿದ್ದವು. ಪಕ್ಕದಲ್ಲೊಂದು ಆಳೆತ್ತರದ ಕಗ್ಗಲ್ಲಿನ ದೀಪ, ಇನ್ನೂ ಎಡಬದಿಗೆ ತಿರುಗಿದರೆ ಒಂದು ಪುಟ್ಟಗುಡಿ. ಅದರೊಳಗೆ ಮಲಯಾಳದ ಆದಿಕವಿ ಕುಂಜತ್ತ್ ರಾಮಾನುಜನ್ ಎಳ್ತಚ್ಚನ್ ಅವರ ವಿಗ್ರಹ. ನೆಲದ ಮೇಲೆ ಕುಳಿತು ಏನೋ ಬರೆಯುವ ಭಂಗಿಯಲ್ಲಿ ಇತ್ತು ಅದು. ಅಲ್ಲಿಂದ ಮತ್ತೆ ಮೊದಲೇ ಹೇಳಿದ ಕಟ್ಟಡದ ಒಳಗೆ ಕಾಲಿಟ್ಟೆವು. ಅಲ್ಲೊಂದು ಬೃಹತ್ ಕಾಂಕ್ರೀಟ್ ದೀಪ ನಮ್ಮನ್ನು ಸ್ವಾಗತಿಸಿತು. ಅಲ್ಲಿ ನೂರಾರು ಪುಸ್ತಕಗಳನ್ನು ಓದುಗರಿಗಾಗಿ ಕಪಾಟಿನಲ್ಲಿ ಜೋಡಿಸಿ ಇಡಲಾಗಿತ್ತು. ಬಹುತೇಕ ಅಲ್ಲಿ ಮಲಯಾಳಂ ಪುಸ್ತಕಗಳೇ ಇದ್ದವು. ಒಳಬಂದ ದಿಕ್ಕಿನ ವಿರುದ್ಧ ಭಾಗದಲ್ಲಿ ಇನ್ನೊಂದು ಬಾಗಿಲಿತ್ತು. ಪಕ್ಕದಲ್ಲಿ ಒಂದು ಕಬ್ಬಿಣದ ಏಣಿ ಅಳವಡಿಸಿ ಇಟ್ಟಿದ್ದರು. ಇಣುಕಿ ನೋಡಿದರೆ ಹೌದು, ನಾವು ಸುತ್ತು ಬಂದ ಅದೇ ಬಂಡೆಗಲ್ಲಿನ ಮೇಲೆ ಇತ್ತು. ನಮ್ಮ ಕುತೂಹಲ ಹೆಚ್ಚಾಯಿತು. ಏಣಿಯನ್ನು ಏರಿ ನೋಡಲು ಅವರ ಅನುಮತಿ ಪಡೆದು ಏರಿದೆವು. ಅದರ ಮೇಲೂ ಒಂದು ಗುಡಿ ಇತ್ತು. ಆ ಗುಡಿಯ ಒಳಗೆ ಒಂದು ಪುಸ್ತಕದ ಪ್ರತಿಮೆ ಇತ್ತು. ಅದರಲ್ಲಿ ಮಲಯಾಳ ಭಾಷೆಯಲ್ಲಿ ವೈಜ್ಞಾನಿಕತೆಯೇ ದೇವರು, ವಿಶಾಲ ಚಿಂತನೆ ಚಿಕಿತ್ಸಕ ಪ್ರಜ್ಞೆಗಳೇ ಮತ, ವಿನಯಪೂರ್ಣ ವಿವೇಕವೇ ಮಾರ್ಗ ಎಂದು ಬರೆಯಲಾಗಿತ್ತು.

ಇದೊಂದು ಗ್ರಂಥ ಪ್ರತಿಷ್ಠಾಪನೆಯಾಗಿದ್ದು, ಭಾರತದಲ್ಲಿ ಬೇರೆಲ್ಲಿಯು ಕಾಣಲು ಅಸಾಧ್ಯ ಎಂದು ನಾರಾಯಣ್ ಹೇಳಿದರು. ಅದಕ್ಕೆ ಒಂದೆರಡು ಪುಸ್ತಕವನ್ನೂ ಆನಿಸಿ ಇಡಲಾಗಿತ್ತು. ಅಲ್ಲಿಂದ ಇಳಿದು ಮುಂದೆ ಬಲದ ಬದಿಗೆ ಕೆಂಪುಕಲ್ಲಿನ ಮೆಟ್ಟಲುಗಳು ಕೆಳಗೆ ಇಳಿದಿದ್ದವು. ಮೆಟ್ಟಲುಗಳನ್ನು ಇಳಿಯುತ್ತ ಅಲ್ಲೊಂದು ಪುಟ್ಟ ದೇಗುಲವನ್ನು ಕಂಡೆವು. ಬಂಡೆಕಲ್ಲಿನ ಅಡಿಭಾಗದಲ್ಲಿ ಇತ್ತು ಅದು. ಅದರೊಳಗೆ ಧ್ಯಾನಸ್ಥ ಬುದ್ಧನ ವಿಗ್ರಹ. ಪಕ್ಕದಲ್ಲೇ ಕುಳಿತುಕೊಳ್ಳಲು ಅಸನದ ವ್ಯವಸ್ಥೆ. ಒಂದಷ್ಟು ಹೊತ್ತು ಅಲ್ಲಿ ಮೌನವಾಗಿ ಕುಳಿತೆವು. ಎಲ್ಲೆಡೆಯೂ ಮೌನ. ಶಾಂತ ಮನೋಭಾವ ಒಂದು ರೀತಿಯ ವಿಶೇಷ ಅನುಭವ ಅದು. ಮತ್ತೆ ಕೆಳಗೆ ಬಂದೆವು. ಸಣ್ಣ ಮನೆ. ಮನೆಯೊಳಗೆ ಬೇಕಾದ ಎಲ್ಲಾ ವ್ಯವಸ್ಥೆಗಳು. ಮೇಲೆ ಬೆಟ್ಟದ ಕಡೆಗೆ ನೋಡಿದರೆ ಅಲ್ಲಲ್ಲಿ ಸಣ್ಣಸಣ್ಣ ಮನೆಗಳು. ನಮ್ಮ ಕುತೂಹಲ ಹೆಚ್ಚಾಗಿ ನಾವು ನಾರಾಯಣ್ ಅವರಲ್ಲಿ ಈ ಮನೆಗಳ ಬಗ್ಗೆ ವಿಚಾರಿಸಿದಾಗ, ಸಾಹಿತ್ಯಾಕ್ತರಾಗಿ ಬರುವರಿಗೆ ಒಂದೋ ಎರಡೋ ದಿವಸ ವಸತಿ ವ್ಯವಸ್ಥೆಯನ್ನು ಅಲ್ಲಿ ಉಚಿತವಾಗಿ ಕೊಡುತ್ತೇವೆ ಎಂದರು.

ಮತ್ತೆ ಅಲ್ಲಿಂದ ಅವರ ಮನೆಯತ್ತ ನಡೆದೆವು. ಬಹಳ ಅಂದವಾಗಿ ಜೋಡಿಸಿದ ಕೆಂಪುಕಲ್ಲಿನ ಮೆಟ್ಟಲುಗಳ ಇಕ್ಕಡೆಗಳಲ್ಲಿ ವಿವಿಧ ತರದ ಹೂವಿನ ಗಿಡಗಳು, ಆಲಂಕಾರಿಕ ಗಿಡಗಳು, ಸಣ್ಣ ಕೆರೆಗಳು. ಅದರಲ್ಲಿ ಅರಳಿದ ತಾವರೆಗಳು. ಪಕ್ಕದಲ್ಲಿ ಕಾಂಕ್ರೀಟ್ ಕೊಕ್ಕರೆಗಳು ಇವನ್ನೆಲ್ಲ ನೋಡುತ್ತ ಕವಿಗೋಷ್ಠಿಯ ವೇದಿಕೆಗೆ ಬಂದೆವು. ವೇದಿಕೆಯ ಮೇಲೆ ಒಮ್ಮೆ ಕಣ್ಣಾಡಿಸಿದೆ. ಪರದೆಯ ಮೇಲೆ ಒಂದು ಬ್ಯಾನರ್ ಅಳವಡಿಸಲಾಗಿತ್ತು. ಆ ಬ್ಯಾನರ್ ನಲ್ಲಿ ಮಲಯಾಳದಲ್ಲಿ ದಪ್ಪ ಅಕ್ಷರದಲ್ಲಿ ಮತಾತೀತ ದೇವಾಲಯ ನವಪುರಂ ಎಂದು ಬರೆದಿತ್ತು. ಹಾಗೆಯೇ ಕವಿಗೋಷ್ಠಿಯಲ್ಲಿ ಭಾಗವಹಿಸಲು ಒಂದಷ್ಟು ಕವಿಗಳು, ಅತಿಥಿಗಳು ಬಂದು ಸೇರಿದ್ದರು. ಗೋಷ್ಠಿಯ ಅಧ್ಯಕ್ಷ ಸ್ಥಾನವನ್ನು ಕಣ್ಣೂರು ಕೈರಳಿ ಬುಕ್ ಸೆಂಟರ್ನ ಸಂಪಾದಕ ಸುಕುಮಾರನ್ ಪೆರಿಯಚ್ಚೂರು ವಹಿಸಿದ್ಧರು. ಉದ್ಘಾಟಕರಾಗಿ ಕೇಂದ್ರೀಯ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಎಂ. ಮುರಳೀಧರನ್ ನಂಬ್ಯಾರ್ ನೆರವೇರಿಸಿ ದ್ರಾವಿಡ ಭಾಷೆಗಳ ಸಾಹಿತ್ಯದ ಕೊಡುಗೆ ಎಂಬ ವಿಷಯದ ಬಗ್ಗೆ ಸುದೀರ್ಘವಾಗಿ ಮಾತನಾಡಿದರು. ಕಾಸರಗೋಡಿನ ಬದಿಯಡ್ಕ ಸಮೀಪದ ಸುಂದರ ಬಾರಡ್ಕ ಇವರು ಕನ್ನಡ ಕವನ ಓದುವ ಮೂಲಕ ಗೋಷ್ಠಿಗೆ ಚಾಲನೆ ನೀಡಿದರು. ರವಿಚಂದ್ರನ್ ಪಾಡಿ ತುಳುನಾಡು ಮತ್ತು ದ್ರಾವಿಡ ಭಾಷೆಯ ಕುರಿತು ಮಾತನಾಡಿ ಸ್ವರಚಿತ ಮಲಯಾಳಂ ಕವನ ವಾಚಿಸಿದರು.

ವನಜಾಕ್ಷಿ ಚಂಬ್ರಕಾನ (ಕನ್ನಡ), ಸುಭಾಷ್ ಪೆರ್ಲ (ಮರಾಠಿ), ರಿಯಾಸ್ ಅಶ್ರಫ್ (ಬ್ಯಾರಿ), ಪ್ರೇಮಚಂದ್ರನ್ ಚೋಂಬಾಲ, ಅನಂತಕೃಷ್ಣನ್ ಎಡಚ್ಚೇರಿ, ರಾಜಾಮಣಿ ಕುಞ್ಞಿಮಂಗಳಂ, ಜಿತೇಶ್ ಕಂಬಲ್ಲೂರ್, ಕುಞ್ಞಪ್ಪನ್ ತ್ರಿಕ್ಕರಿಪುರ, ಪಡವಿಲ್ ಸಂಪತ್, ಪ್ರಸನ್ನನ್ ಚೆರುವಳ್ಳಿಲ್, ಆರ್ ಪಲೇರಿ ಮುಂತಾದವರು ಮಲಯಾಳಂ ಕವನ ವಾಚಿಸಿದರು. ಕಾರ್ಯಕ್ರಮ ಕೊನೆಗೆ ಕಾರ್ಯಕ್ರಮದ ರೂವಾರಿ ಪ್ರಾಪೊಯಿಲ್ ನಾರಾಯಣನ್ ಗೋಷ್ಠಿಯಲ್ಲಿ ಭಾಗವಹಿಸಿದ ಕವಿಗಳಿಗೆ ಪ್ರಶಂಶಾ ಪತ್ರ ನೀಡುವುದರ ಮೂಲಕ ಗೋಷ್ಠಿಯು ಕೊನೆಗೊಂಡಿತು. ಊಟದ ಸಮಯವಾದ್ಧರಿಂದ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಶುಚಿರುಚಿಯಾದ ವಿವಿಧ ಬಗೆಯ ಖಾಧ್ಯದೊಂದಿಗೆ ಊಟಮುಗಿಸಿದಾಗ ಸಮಯ ಸಂಜೆ ನಾಲ್ಕು ಗಂಟೆ ದಾಟಿತ್ತು. ಊರಿಗೆ ಹಿಂದಿರುಗಲು ದೂರ ಪ್ರಯಾಣಿಸಬೇಕಿದ್ದುದರಿಂದ ಪ್ರಾಪೊಯಿಲ್ ನಾರಾಯಣ್ ಅವರ ಅನುಮತಿ ಪಡೆದು ಧನ್ಯತಾಭಾವದಿಂದ ಹೊರಟು ನಿಂತೆವು. ನಮ್ಮ ಪ್ರಯಾಣಕ್ಕೆ ಅವರ ಕಾರು ಮತ್ತೆ ಬಂದು ನಿಂತಿತು.
ಬರಹ : ಸುಭಾಷ್ ಪೆರ್ಲ
