ಮಂಗಳೂರು : ಜಯ ಅಭ್ಯುದಯ ಮಹಿಳಾ ಮಂಡಳಿ (ರಿ.) ಹಾಗೂ ಮಾರ್ಕಂಡೇಯ ಚಿಣ್ಣರ ಹಾಗೂ ಯುವಶಕ್ತಿ ಇವರ ಜಂಟಿ ಆಶ್ರಯದಲ್ಲಿ ದಿನಾಂಕ 16 ಫೆಬ್ರವರಿ 2026ರಂದು ಅಡ್ಯಾರ್ ನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದ ‘ತ್ರಿನೇತ್ರ’ ವೇದಿಕೆಯಲ್ಲಿ ಜಯಲಕ್ಷ್ಮಿ ಎಸ್. ಹೆಗ್ಡೆ ಸಭಾಂಗಣದಲ್ಲಿ ಗಣ್ಯರ ಸಮ್ಮುಖದಲ್ಲಿ ‘ನ್ಯಗ್ರೋಧ’ ಕೃತಿ ಬಿಡುಗಡೆ ಸಮಾರಂಭ ವಿಜೃಂಭಣೆಯಿಂದ ನೆರವೇರಿತು.
ಶ್ರೀಯುತ ಯು.ಟಿ. ಖಾದರ್ ಸಭಾಧ್ಯಕ್ಷರು ಕರ್ನಾಟಕ ರಾಜ್ಯ ಸರ್ಕಾರ ಇವರು ಕೃತಿ ಅನಾವರಣಗೊಳಿಸಿ ಮಾತನಾಡಿದ “ಜಯಲಕ್ಷ್ಮಿಯವರು ನಮಗೆಲ್ಲ ಮಾದರಿಯಾದವರು. ಅವರು ಯಾವುದೇ ಜಾತಿ, ಧರ್ಮ, ಮತಗಳ ಬೇಧವಿಲ್ಲದೆ ಮಹಿಳೆಯರ, ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಶ್ರಮಪಟ್ಟವರು. ಅವರ ಜೀವನ ಆಧಾರಿತ ಈ ಕೃತಿಯು ಕೇವಲ ಇಂದಿನ ಪೀಳಿಗೆಗೆ ಮಾತ್ರವಲ್ಲ ಮುಂದಿನ ಪೀಳಿಗೆಗೂ ಮಾರ್ಗದರ್ಶನವಾಗಲಿದೆ” ಎಂದು ಹೇಳಿದರು.
ಸಮಾರಂಭದಲ್ಲಿ ಉಪಸ್ಥಿತರಿದ್ದ ಮಾಜಿ ಸಂಸದ ಶ್ರೀಯುತ ನಳಿನ್ ಕುಮಾರ್ ಕಟೀಲ್ ಮಾತನಾಡಿ “ಜಯಲಕ್ಷ್ಮಿಯವರು ಕೇವಲ ಅವರ ಮಕ್ಕಳಿಗೆ ಮಾತ್ರವಲ್ಲ ಎಲ್ಲರಿಗೂ ತಾಯಿ ಪ್ರೀತಿ ನೀಡಿದವರು. ಅಂತ ಒಬ್ಬ ತಾಯಿಯನ್ನು ಪಡೆದ ಅವರ ಮಕ್ಕಳು ಧನ್ಯರು” ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶ್ರೀಯುತ ವೈ. ಭರತ್ ಶೆಟ್ಟಿ ಮಾತನಾಡಿ “ಜಯಲಕ್ಷ್ಮಿ ಹೆಗ್ಡೆಯವರು ನಮಗೆಲ್ಲ ಒಬ್ಬ ರಾಜಕಾರಣಿ ಹೇಗಿರಬೇಕು ಎಂಬುದಕ್ಕೆ ನಿದರ್ಶನ ಕೊಟ್ಟವರು” ಎಂದು ಹೇಳಿದರು. ದೇವಸ್ಥಾನದ ತಂತ್ರಿಗಳಾದ ಬ್ರಹ್ಮಶ್ರೀ ವಾಮಂಜೂರ್ ಅನಂತ ಉಪಾಧ್ಯಾಯರವರು ಆಶೀರ್ವಚನ ನೀಡಿದರು. ಡೈಜಿ ವರ್ಲ್ಡ್ ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ವಾಲ್ಟಾರ್ ನಂದಳಿಕೆ ಮಾತನಾಡಿ “ಜಯಲಕ್ಷ್ಮಿ ಹೆಗ್ಡೆಯವರು ಜೀವನದಲ್ಲಿ ಯಾವುದೇ ಅತೀ ಆಕಾಂಕ್ಷೆ ಇಲ್ಲದೆ ಸಂತೃಪ್ತಿ ಕಂಡುಕೊಂಡವರು” ಎಂದು ಹೇಳಿದರು.
ಸಮಾರಂಭದಲ್ಲಿ ಆರ್.ಕೆ. ಗ್ರೂಪ್ ನ ಅಡ್ಯಾರ್ ದಿವಾಕರ್ ನಾಯ್ಕ್, ದೇವಸ್ಥಾನದ ಮ್ಯಾನೇಜಿಂಗ್ ಟ್ರಸ್ಟಿಗಳಾದ ಶ್ರೀಯುತ ದಿವಾಕರ್ ಮಲ್ಲಿ, ಬೈದ್ಯಾವು ಗುತ್ತಿನ ಶ್ರೀಮತಿ ಡಾಲಿ ರೈ, ರಾಣಿ ಅಬ್ಬಕ್ಕ ಅಧ್ಯಯನ ಪೀಠದ ಶ್ರೀಮತಿ ಧನಲಕ್ಷ್ಮಿ ಗಟ್ಟಿ ಮುಂತಾದ ಗಣ್ಯರು ಹಾಜರಿದ್ದರು. ಧನಲಕ್ಷ್ಮೀ ಗಟ್ಟಿಯವರು ಜಯಲಕ್ಷ್ಮಿ ಹೆಗಡೆಯವರ ಬಗ್ಗೆ ಮಾತನಾಡುತ್ತಾ, ಅವರನ್ನು ಭಕ್ತಿಪೂರ್ವಕವಾಗಿ ನೆನೆಯುತ್ತಾ ಅವರ ಜೊತೆಯಲ್ಲಿ ಕಳೆದ ಸಮಯ ಹಾಗೂ ಜಯಲಕ್ಷ್ಮಿ ಹೆಗ್ಡೆಯವರೊಂದಿಗಿನ ಒಡನಾಟದ ಬಗ್ಗೆ ಮಾತನಾಡಿದರು. ಸಂಸ್ಕಾರ ಭಾರತಿ ಅಧ್ಯಕ್ಷರಾದ ಶ್ರೀ ಪುರುಷೋತಮ್ ಭಂಡಾರಿಯವರು ಕೃತಿ ಪರಿಚಯ ಮಾಡಿದರು. ಸಮಾರಂಭದಲ್ಲಿ ‘ನ್ಯಗ್ರೋಧ’ ಕೃತಿಯ ಸಂಪಾದಕ ಮಂಡಳಿಯ ಮುಖ್ಯ ಸಂಪಾದಕರು ಹಾಗೂ ಮಂಗಳೂರು ವಿಶ್ವ ವಿದ್ಯಾಲಯದ ನಿವೃತ್ತ ಉಪ ಕುಲಪತಿ ಪ್ರಭಾಕರ್ ನೀರುಮಾರ್ಗ ಇವರನ್ನು ಹಾಗೂ ಮಹಿಳಾ ಮಂಡಲಕ್ಕೆ ತಮ್ಮ ಅಪೂರ್ವ ಸೇವೆ ನೀಡಿದ ಸದಸ್ಯರನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಸಂಪಾದಕ ಮಂಡಳಿಯ ಸದಸ್ಯರಾದ ಅಮಿತಾ ಹೆಗ್ಡೆ, ಸ್ವಾತಿ ಹೆಗ್ಡೆ, ಲಾವಣ್ಯ ವಿಜಯ್ ಹಾಗೂ ವಿಕ್ರಾಂತ್ ಕಂಬಳಿ ಉಪಸ್ಥಿತರಿದ್ದರು. ಸುಮಲತಾ ಎಸ್. ಕಂಬಳಿ ಸ್ವಾಗಟಿಸಿ, ದೀಪಕ್ ರವರು ನಿರೂಪಿಸಿ, ವಂದಿಸಿದರು. ನಂತರ ಮಾರ್ಕಂಡೇಯ ಚಿಣ್ಣರ ಶಕ್ತಿಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
