ಕಾಸರಗೋಡು : ಅನಂತಪುರ ಕ್ಷೇತ್ರದ ಅನಂತಶ್ರೀ ಸಭಾಭವನದಲ್ಲಿ ದಿನಾಂಕ 12 ಏಪ್ರಿಲ್ 2026ರಂದು ಹಿರಿಯ ಮೃದಂಗ ವಾದಕ ದಿ. ಸದಾಶಿವ ಅನಂತಪುರ ಇವರ ‘ಪಂಚಮ ಸ್ಮೃತಿ’ ಸಮಾರಂಭ ಜರಗಿತು.
ಈ ಸಮಾರಂಭದಲ್ಲಿ ಸತ್ಯಶಂಕರ ಅನಂತಪುರ ಇವರ ‘ಬದುಕು-ಭಾವ-ಜೀವ’ ಚೊಚ್ಚಲ ಕವನ ಸಂಕಲನ ಬಿಡುಗಡೆಗೊಳಿಸಿದ ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ. ಕೆ. ಚಿನ್ನಪ್ಪ ಗೌಡ ಇವರು ಮಾತನಾಡಿ “ಮನುಷ್ಯ ಸಂಬಂಧಗಳನ್ನು ಎತ್ತಿ ಹಿಡಿಯುವ ಪ್ರಯತ್ನ ಇಂದಿನ ಕಾಲ ಘಟ್ಟದ ಅವಶ್ಯಕತೆಯಾಗಿದೆ. ಸತ್ಯಶಂಕರ ಅನಂತಪುರ ಇವರ ಕವನಗಳಲ್ಲಿ ಇಂತಹ ಪ್ರಯತ್ನವನ್ನು ಗುರುತಿಸಬಹುದು. ಭಾವ ಜಗತ್ತು ಮತ್ತು ವೈಚಾರಿಕತೆ ಎರಡೂ ಸಂತುಲಿತ ಪ್ರಮಾಣದಲ್ಲಿ ಇದ್ದಾಗ ಒಳ್ಳೆಯ ಜೀವನ ಸಾಧ್ಯವಾಗುತ್ತದೆ. ಸತ್ಯಶಂಕರ ಅವರ ಕವಿತೆಗಳು ಅವರ ಕುಟುಂಬದ ಮೂರು ತಲೆಮಾರುಗಳ ಜನರ ಬದುಕಿನಿಂದ ಪ್ರಭಾವಿತವಾಗಿವೆ. ಇತರ ಪ್ರಕಾರಗಳಿಗೆ ಹೋಲಿಸಿದರೆ ಕಾವ್ಯ ಅತ್ಯಂತ ಪ್ರಭಾವಶಾಲಿ ಮಾಧ್ಯಮ, ಕನಿಷ್ಠ ಪದಗಳು, ರೂಪಕಗಳ ಮೂಲಕ ಪರಿಣಾಮಕಾರಿ ಸಂವಹನ ಇಲ್ಲಿ ಸಾಧ್ಯ. ಅಲ್ಲದೆ ಕವನಗಳ ಮೂಲಕ ಕವಿಯೂ ಕೆಲವೆಡೆ ಪ್ರಕಟಗೊಳ್ಳುವುದನ್ನು ಗಮನಿಸಬಹುದು” ಎಂದು ಅಭಿಪ್ರಾಯಪಟ್ಟರು.

ಹಿರಿಯ ಮೃದಂಗ ವಾದಕ ದಿ. ಸದಾಶಿವ ಅನಂತಪುರ ಪಂಚಮ ಸ್ಮೃತಿ ಪುರಸ್ಕಾರಕ್ಕೆ ಹಿರಿಯ ಚರ್ಮ ವಾದ್ಯ ತಯಾರಕ ಕೆ. ಸದಾನಂದ ರಾವ್ ಕೂಡ್ಲು ಇವರು ಆಯ್ಕೆಯಾಗಿದ್ದಾರೆ ಎಂದು ಸಂಘಟಕರು ಪ್ರಕಟಿಸಿದರು. ಹಿರಿಯ ಕವಿಗಳಾದ ಶ್ರೀಕೃಷ್ಣಯ್ಯ ಅನಂತಪುರ ಇವರು ಅಧ್ಯಕ್ಷತೆ ವಹಿಸಿದ್ದು, ಕೃತಿ ಪರಿಚಯಿಸಿದ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಇವರು, “ಸಮಕಾಲೀನತೆಯನ್ನು ಸೃಜನಶೀಲತೆಗೆ ಒಗ್ಗಿಸಿಕೊಂಡ ಸತ್ಯಶಂಕರ ಇವರು ಗಡಿನಾಡಿನ ಸಂವೇದನಾಶೀಲ ಕವಿ ಎಂಬುದನ್ನು ತನ್ನ ರಚನೆಗಳ ಮೂಲಕ ಸಾಬೀತುಪಡಿಸಿದ್ದಾರೆ” ಎಂದರು.
ಅನಂತಪುರ ಕ್ಷೇತ್ರ ಅರ್ಚಕ ವೇದಮೂರ್ತಿ ಸುಬ್ರಹ್ಮಣ್ಯ ಭಟ್ ಕಾರ್ಯಕ್ರಮ ಉದ್ಘಾಟಿಸಿದರು. ಪದ್ಮಶ್ರೀ ಸತ್ಯನಾರಾಯಣ ಬೆಳೇರಿ, ಡಾ. ಟಿ.ಕೆ. ಯರೋದಾ ಡಾ. ಬೇ.ಸಿ. ಗೋಪಾಲಕೃಷ್ಣ ಭಟ್, ಪ್ರಕೃತಿ ಯುವ ತಂಡ ಅಧ್ಯಕ್ಷ ಲೋಕಯ್ಯ ಸಿದ್ದಿಬೈಲು ಅತಿಥಿಗಳಾಗಿದ್ದರು. ಕೀರ್ತನಾ ಎನ್. ರಾವ್ ಪ್ರಸ್ತಾವನೆಗೈದರು. ಚೈತ್ರಾ ಸತ್ಯ ಶಂಕರ್ ಸ್ವಾಗತಿಸಿ, ವಿಜಯ ಕುಮಾರ್ ಆನಂತಪುರ ವಂದಿಸಿ, ಎಂ.ನಾ. ಚಂಬಲ್ತಿಮಾರ್ ನಿರೂಪಿಸಿದರು. ಸದಾಶಿವ ಅನಂತಪುರ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ಪ್ರಕೃತಿ ಯುವ ತಂಡ ಸಹಯೋಗದಲ್ಲಿ ಸಮಾರಂಭ ಆಯೋಜಿಸಲಾಯಿತು.
