ಮೈಸೂರು : ನಿರಂತರ ಫೌಂಡೇಶನ್ (ರಿ) ಇದರ ರಂಗ ತಂಡ ಪ್ರಯೋಗಿಸುವ ಮಹೇಶ್ ಎಲಕುಂಚವಾರ್ ಮರಾಠಿಯಲ್ಲಿ ರಚಿಸಿರುವ, ಹಿರಿಯ ರಂಗಕರ್ಮಿ ಪ್ರಸಾದ್ ಕುಂದೂರು ಕನ್ನಡಕ್ಕೆ ಅನುವಾದಿಸಿರುವ ‘ಪಾರ್ಟಿ’ ನಾಟಕ ಪ್ರದರ್ಶನವನ್ನು ದಿನಾಂಕ 3, 4 ಮತ್ತು 5 ಏಪ್ರಿಲ್ 2026ರಂದು ಪ್ರತಿದಿನ ಸಂಜೆ 7-00 ಗಂಟೆಗೆ ಮೈಸೂರಿನ ಕಿರು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು ಇವರ ಸಹಕಾರದೊಂದಿಗೆ ಪ್ರದರ್ಶನ ಗೊಳ್ಳುವ ಈ ನಾಟಕಕ್ಕೆ ಬೆಳಕು : ಜೀವನ್ ಕುಮಾರ್ ಬಿ. ಹೆಗ್ಗೋಡು, ರ೦ಗ ಸಜ್ಜಿಕೆ : ಮಧು ಎನ್.ಎಸ್.ಡಿ., ಸಂಗೀತ: ಕಿರಣ್ ಬಿ.ಕೆ. ಹಾಗೂ ಚಿದಂಬರರಾವ್ ಜಂಬೆ ಇವರು ನಿರ್ದೇಶನ ಮಾಡಿರುತ್ತಾರೆ. ಹೆಚ್ಚಿನ ಮಾಹಿತಿಗೆ 99802 73167 ಹಾಗೂ 96110 74424 ಸಂಖ್ಯೆಯನ್ನು ಸಂಪರ್ಕಿಸಿರಿ.

ನಿರಂತರ ಫೌಂಡೇಶನ್ (ರಿ.) ಮೈಸೂರು : ಕರ್ನಾಟಕದ ಪ್ರಮುಖ ರಂಗತಂಡಗಳಲ್ಲಿ ಒಂದಾದ ನಿರಂತರ ಫೌಂಡೇಶನ್ (ರಿ.) ಮೈಸೂರು ಕಳೆದ ಮೂರು ದಶಕಗಳಿಂದ ಕನ್ನಡ ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಚಿಂತನಾ ಪ್ರಧಾನ ಸಾಂಸ್ಕೃತಿಕ ವೇದಿಕೆ. ಸಮಾನತೆ, ಜನಪರಚಿಂತನೆ ಮತ್ತು ಸಾಂಸ್ಕೃತಿಕ ಹೊಣೆಗಾರಿಕೆಯನ್ನು ಆಧಾರವಾಗಿಟ್ಟುಕೊಂಡು, ರಂಗಭೂಮಿಯನ್ನು ಸಮಾಜದೊಂದಿಗೆ ಸಂವಾದ ನಡೆಸುವ ಜೀವಂತ ಕ್ಷೇತ್ರವಾಗಿ ರೂಪಿಸುವ ದಿಕ್ಕಿನಲ್ಲಿ ನಿರಂತರ ಕಾರ್ಯನಿರ್ವಹಿಸುತ್ತಿದೆ. ಚಾಮಲಾಪುರ ಉಷ್ಣ ವಿದ್ಯುತ್ ಸ್ಥಾವರ ಯೋಜನೆಯ ಪರಿಣಾಮಗಳ ಕುರಿತು ಬೀದಿ ನಾಟಕಗಳು ಮತ್ತು ಸಾಕ್ಷ್ಯಚಿತ್ರಗಳ ಮೂಲಕ ಜನಜಾಗೃತಿ ಮೂಡಿಸಲಾಗಿದೆ. ಜಲ ಜಾಥಾ ಮೂಲಕ ಜಲ ಸಂರಕ್ಷಣೆಯ ಕುರಿತು ಸಾಂಸ್ಕೃತಿಕ ಚಟುವಟಿಕೆಗಳನ್ನು ರೂಪಿಸಲಾಗಿದೆ. ಬಸವಣ್ಣನ ವಚನಗಳನ್ನು ಆಧರಿಸಿದ ಕೂಡಲ ಸಂಗಮ ಹಾಗೂ ರಸ್ತೆ ನಕ್ಷತ್ರದಂತಹ ಕೃತಿಗಳು ಸಮಾಜದ ಅಂಚಿನ ಬದುಕನ್ನು ರಂಗಭೂಮಿಗೆ ತಂದಿವೆ. ನೂರಕ್ಕೂ ಹೆಚ್ಚು ನಾಟಕಗಳನ್ನು ನಿರ್ಮಿಸಿ ಪ್ರದರ್ಶಿಸಿರುವ ನಿರಂತರ, ಬರ ಅಂದ್ರೆ ಎಲ್ಲರಿಗೂ ಇಷ್ಟ, ಭೋಮಾ, ಮೆರವಣಿಗೆ, ನೋ ಮ್ಯಾನ್ಸ್ ಲ್ಯಾಂಡ್, ಕೃಷ್ಣ ಪಕ್ಷ, ಸ್ತ್ರೀ ಭಾರತಂ, ಜುಂಜಪ್ಪ ಸೇರಿದಂತೆ ಅನೇಕ ಕೃತಿಗಳ ಮೂಲಕ ಸಾಮಾಜಿಕ ಮತ್ತು ಮಾನವೀಯ ಪ್ರಶ್ನೆಗಳನ್ನು ತೀಕ್ಷ್ಣವಾಗಿ ಮುಂದಿಟ್ಟಿದೆ. ಟೀ ಹೌಸ್ ಮತ್ತು ಶಿವರಾತ್ರಿ ನಾಟಕಗಳ ಪ್ರದರ್ಶನಗಳು ರಂಗಪ್ರಯೋಗಗಳ ವ್ಯಾಪ್ತಿಯನ್ನು ವಿಸ್ತರಿಸಿವೆ. ‘ನಿರಂತರ ರಂಗ ಉತ್ಸವ’ ಮತ್ತು ‘ಸಹಜರಂಗ’ ಕಾರ್ಯಾಗಾರಗಳ ಮೂಲಕ ಯುವಪೀಳಿಗೆಯೊಂದಿಗೆ ಸಂವಾದವನ್ನು ನಿರಂತರವಾಗಿ ಮುಂದುವರಿಸುತ್ತಾ, ಕರ್ನಾಟಕದ ಜೀವಂತ ಸಾಂಸ್ಕೃತಿಕ ಚಳುವಳಿಯ ಭಾಗವಾಗಿ ತನ್ನದೇ ಆದ ಗುರುತನ್ನು ಕಟ್ಟಿಕೊಂಡಿದೆ.

ಪಾರ್ಟಿ ನಾಟಕದ ಬಗ್ಗೆ : ಒಂದು ಸಂಜೆಯ ಸಂಭ್ರಮ, ವಿಚಾರ ವಿನಿಮಯ ಮತ್ತು ಸಂಸ್ಕೃತಿಯ ಹೆಸರಿನಲ್ಲಿ ಜರುಗುವ ಪಾರ್ಟಿಯನ್ನು ಆಧಾರವಾಗಿಸಿಕೊಂಡು ಸಾಗುವ ಈ ನಾಟಕ, ಬೌದ್ಧಿಕ ವರ್ಗದ ಒಳಹೊರಗಿನ ವೈರುಧ್ಯಗಳನ್ನು ತೀಕ್ಷ್ಣವಾಗಿ ಅನಾವರಣಗೊಳಿಸುತ್ತದೆ. ಮೇರು ಸಾಹಿತಿ, ಯುವ ಸಾಹಿತಿ, ರಾಜಕೀಯ ವ್ಯಕ್ತಿತ್ವಗಳು, ಸಮಾಜದ ಅತ್ಯುನ್ನತ ಸ್ಥಾನದಲ್ಲಿರುವ ಪ್ರಭಾವಶಾಲಿಗಳು ಒಂದೇ ಸ್ಥಳದಲ್ಲಿ ಸೇರುವ ಈ ವಾತಾವರಣದಲ್ಲಿ ದಮಯಂತಿ, ಬರ್ವೆ, ಅಘಾಷೆ, ಭರತ್, ವೃಂದಾ, ಸೋನಾ ಮೊದಲಾದ ಪಾತ್ರಗಳು ತಮ್ಮದೇ ಮುಖವಾಡಗಳೊಂದಿಗೆ ಎದುರಾಗುತ್ತವೆ. ಮೇಲ್ನೋಟಕ್ಕೆ ಸಂಭ್ರಮ ಮತ್ತು ಸಂವಾದದಂತೆ ಕಾಣುವ ಈ ಪಾರ್ಟಿ, ಕ್ರಮೇಣ ಸಂಬಂಧಗಳ ಸಂಕೀರ್ಣತೆ, ಅಹಂ, ಸ್ಪರ್ಧೆ ಮತ್ತು ಅಂತರಂಗದ ಬಿಕ್ಕಟ್ಟನ್ನು ಪದರ ಪದರವಾಗಿ ತೆರೆದಿಡುತ್ತದೆ. ನಾಟಕದ ಶಕ್ತಿ ಅದರ ಸಂಭಾಷಣೆಗಳಲ್ಲಷ್ಟೇ ಅಲ್ಲ, ಅವುಗಳ ನಡುವೆ ಮೂಡುವ ಮೌನಗಳಲ್ಲಿ ಮತ್ತು ಅಡಗಿರುವ ಉದ್ವೇಗಗಳಲ್ಲಿ ಇದೆ. ನಿರ್ಲಿಪ್ತ ಸಮಾಜದ ಸ್ವಭಾವ, ಕಾಡದ ಸಾವಿನ ನೋವು, ಸಾಮಾಜಿಕ ಹೋರಾಟದ ಮೇಲ್ಮೈಯ ಮಾತುಗಳು ಮತ್ತು ಒಳಗಿನ ಭಾವಶೂನ್ಯತೆ, ಇವುಗಳೆಲ್ಲ ಪಾತ್ರಗಳ ನಡೆ, ಮಾತು ಮತ್ತು ಪ್ರತಿಕ್ರಿಯೆಗಳ ಮೂಲಕ ನಿಧಾನವಾಗಿ ಅನಾವರಣಗೊಳ್ಳುತ್ತವೆ. ಅಸ್ಪಷ್ಟ ಸಂಬಂಧಗಳು, ಮರೆಮಾಚಿದ ಸತ್ಯಗಳು, ಒಳಜಗತ್ತಿನ ಸಂಘರ್ಷಗಳು ಪ್ರೇಕ್ಷಕರ ಮನಸ್ಸನ್ನು ಅಸ್ವಸ್ಥಗೊಳಿಸುವ ಮಟ್ಟಕ್ಕೆತಲುಪುತ್ತವೆ. ಪಾರ್ಟಿ ಕೇವಲ ಸಂಜೆಯ ಸಂಭ್ರಮವಲ್ಲ; ಅದು ಸಮಾಜ ಮತ್ತು ವ್ಯಕ್ತಿಯ ನಡುವಿನ ಅಂತರವನ್ನು ತೀವ್ರವಾಗಿ ಪ್ರಶ್ನಿಸುವ ರಂಗಕೃತಿ. ಸಂಸ್ಕೃತಿ ಮತ್ತು ಬೌದ್ಧಿಕತೆಯ ಆವರಣದಲ್ಲಿ ಮರೆಮಾಚಿರುವ ನೈತಿಕ ವೈರುಧ್ಯಗಳನ್ನು ನಿರ್ದಯವಾಗಿ ಬಿಚ್ಚಿಡುತ್ತಾ, ವ್ಯಕ್ತಿಯ ನಿಜಸ್ವರೂಪದ ಪ್ರತಿಬಿಂಬ. ಮನರಂಜನೆಯ ಆಚೆಗೆ ಪ್ರೇಕ್ಷಕರನ್ನು ಚಿಂತನೆಗೆದೂಡುವ, ಅಂತರಂಗವನ್ನು ಕದಡುವ ಗಾಢರಂಗಾನುಭವವಾಗಿ ಈ ನಾಟಕ ದೀರ್ಘಕಾಲ ಮನಸ್ಸಿನಲ್ಲಿ ಉಳಿಯುತ್ತದೆ.
