ಮಂಗಳೂರು : ಮಂಗಳೂರಿನ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆಶ್ರಯದಲ್ಲಿ ದಿನಾಂಕ 23 ಮಾರ್ಚ್ 2026ರಂದು ಯುಗಾದಿ ಉತ್ಸವದ ಪಂಚಮಿ ದಿನದಂದು ಕ್ಷೇತ್ರದ ಆವರಣದಲ್ಲಿ ವಿಶ್ವಕರ್ಮ ಕಲಾ ಪರಿಷತ್ (ರಿ.) ಮಂಗಳೂರು ಹಮ್ಮಿಕೊಂಡ ‘ಸಮರ್ಪಣಂ ಕಲೋತ್ಸವ – 2026’ ಕಾರ್ಯಕ್ರಮವು ನಡೆಯಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀಮಜ್ಜಗದ್ಗುರು ಆನೆಗುಂದಿ ಮಹಾಸಂಸ್ಥಾನದ ಪರಮಪೂಜ್ಯ ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿಗಳು ದೀಪ ಪ್ರಜ್ವಲಿಸಿ ಆಶೀರ್ವಚನ ನೀಡುತ್ತಾ, “ಸ್ವಾರ್ಥಿಯಾಗುವುದಕ್ಕಿಂತ ಸಾರಥಿಯಾಗು ಅನ್ನುವ ಮಾತಿನಂತೆ ಎಲ್ಲಾ ಸದಸ್ಯರ ಸಕ್ರಿಯ ಸಹಕಾರದಿಂದ ವಿಶ್ವಕರ್ಮ ಕಲಾ ಪರಿಷತ್ತು ಸಾರಥಿಯ ರೀತಿಯಲ್ಲಿ ಸಮಾಜದ ಕಲಾವಿದರನ್ನು ಮುನ್ನಡೆಸುತ್ತಿದೆ, ಗೃಹ ಕೈಗಾರಿಕೆಯಿಂದ ಬೃಹತ್ ಕೈಗಾರಿಕೆಯೆಡೆಗೆ ಕುಲಕಸುಬನ್ನು ಕೊಂಡೊಯ್ಯುವಲ್ಲಿ ವಿಶ್ವಕರ್ಮ ಸಮುದಾಯ ವೃತ್ತಿಪರರು ಪ್ರಯತ್ನಶೀಲರಾಗಬೇಕು” ಎಂದರು.


ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ (ನಿ.) ಇದರ ಅಧ್ಯಕ್ಷರಾದ ಶ್ರೀ ಸುಜ್ಞಾನ ಮೂರ್ತಿಯವರು ಕಲೋತ್ಸವಕ್ಕೆ ಚಾಲನೆಯನ್ನು ನೀಡಿ ಮಾತನಾಡುತ್ತಾ, “ವಿಶ್ವಕರ್ಮ ಸಮುದಾಯದವರು ಪಾರಂಪರಿಕ ವಿಧಾನದ ಜೊತೆಗೆ ತಂತ್ರಜ್ಞಾನ ಮತ್ತು ಸರಕಾರದಿಂದ ಸಿಗುವ ಸವಲತ್ತುಗಳನ್ನು ಬಳಸಿಕೊಂಡು ತಮ್ಮ ಕುಲಕಸುಬಿನಲ್ಲಿ ಉದ್ಯಮಶೀಲರಾಗಬೇಕು, ಇದಕ್ಕಾಗಿ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದಿಂದ ಬೇಕಾದ ನೆರವು ನೀಡುತ್ತೇನೆ” ಎಂದು ಭರವಸೆ ನೀಡುತ್ತಾ, ನಿಗಮದಿಂದ ಸಮುದಾಯದ ವಿದ್ಯಾರ್ಥಿಗಳಿಗೆ, ಕುಶಲಕರ್ಮಿಗಳಿಗೆ ಹಾಗೂ ಮಹಿಳೆಯರಿಗೆ ಸಿಗುವ ವಿಶೇಷ ಸವಲತ್ತುಗಳ ಕುರಿತಾಗಿ ಮಾಹಿತಿ ನೀಡಿದರು.


ವಿಶ್ವಕರ್ಮ ಕಲಾ ಪರಿಷತ್ತಿನ ನೂತನ ವೆಬ್ ಸೈಟ್ ಗೆ ಚಾಲನೆ ನೀಡಿ ಮಾತನಾಡಿದ ಲೆಕ್ಕ ಪರಿಶೋಧಕರಾದ ಎಸ್.ಎಸ್ ನಾಯಕ್, “ಕೇವಲ ಮೂರು ವರ್ಷದಲ್ಲೇ ತನ್ನ ವಿಶಿಷ್ಟ ಕಾರ್ಯಚಟುವಟಿಕೆಗಳ ಮೂಲಕ ಕಲಾ ಪರಿಷತ್ ಎಲ್ಲರ ಗಮನ ಸೆಳೆದಿದೆ, ಸಮಾನ ಮನಸ್ಕರು ಒಗ್ಗೂಡಿ ಕೆಲಸ ಮಾಡಿದರೆ ಯಶಸ್ಸು ಸಾಧ್ಯ, ಉತ್ತಮ ಸಾಧಕರನ್ನು ಗುರುತಿಸಿ ಸನ್ಮಾನಿಸುವ ಮೂಲಕ ಕಲಾ ಪರಿಷತ್ ಯೋಗ್ಯ ಕೆಲಸವನ್ನು ಮಾಡುತ್ತಿದೆ” ಎಂದು ಪರಿಷತ್ ಕಾರ್ಯವೈಖರಿ ಬಗ್ಗೆ ಶ್ಲಾಘಿಸುತ್ತಾ, “ನಮ್ಮ ಸುತ್ತಮುತ್ತಲು ಅವಕಾಶಗಳು ವಿಫುಲವಾಗಿವೆ, ಅದರಲ್ಲಿ ನಮಗೆ ಯಾವುದು ಸರಿ ಹೊಂದುತ್ತದೋ ಅದನ್ನು ಬಳಸಿಕೊಳ್ಳಬೇಕು” ಎಂದು ಕಿವಿಮಾತು ಹೇಳಿದರು.


ಇದೇ ಸಂದರ್ಭದಲ್ಲಿ ಶ್ರೇಷ್ಠ ರಥಶಿಲ್ಪಿ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಲ್ಪಗುರು ಶಿಲ್ಪಿ ಶ್ರೀ ಲಕ್ಷ್ಮೀನಾರಾಯಣ ಆಚಾರ್ಯ ಕೋಟೇಶ್ವರ ಇವರಿಗೆ ‘ವಿಶ್ವಕರ್ಮ ಕುಲತಿಲಕ’ ಬಿರುದು ಸಹಿತ ಭೌವನ ವಿಶ್ವಕರ್ಮ ಕಲಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹಿರಿಯ ಕಲಾಸಾಧಕರಾದ ಶ್ರೀ ಎಸ್.ವಿ. ಆಚಾರ್, ಶ್ರಿಲ್ಪಿ ಶ್ರೀ ಎಸ್. ಮಂಜುನಾಥ ಆಚಾರ್ಯ, ಶಿಲ್ಪಿ ಶ್ರೀ ದಾಮೋದರ ಆಚಾರ್ಯ, ಶ್ರೀ ಬಿ. ರವಿಶಂಕರ್, ಶ್ರೀಮತಿ ಗುಲಾಬಿ ಪಟ್ಟಾಭಿರಾಮ ಇವರಿಗೆ ಡಾ. ಎಸ್.ಪಿ. ಗುರುದಾಸ್ ಮತ್ತು ಎಸ್.ಪಿ. ಹರಿದಾಸ್ ಪ್ರಾಯೋಜಕತ್ವದಲ್ಲಿ ದಿ. ಶಿವಪುರ ಪದ್ಮನಾಭ ಆಚಾರ್ಯ ಪುರಸ್ಕಾರ, ವಿಶಿಷ್ಠ ಕಲಾ ಸಾಧಕರಾದ ಶಿಲ್ಪಿ ಶ್ರೀ ದಿವಾಕರ ಆಚಾರ್ಯ ಕೋಟೆಕಾರು, ಕಲ್ಲಮುಂಡ್ಕೂರು ಶಿಲ್ಪಿ ಶ್ರೀ ಹರೀಶ್ ಆಚಾರ್ಯ, ಶಿಲ್ಪಿ ಶ್ರೀ ಪ್ರಮೋದ್ ಸಿ.ಕೆ., ಶಿಲ್ಪಿ ಶ್ರೀಕಾಂತ ಆಚಾರ್ಯ ಕಲ್ಚಪ್ರ, ಶ್ರೀಮತಿ ಶಾಂತಲಾ ಸೀತಾರಾಮ ಆಚಾರ್ಯ ಇವರಿಗೆ ಪಿ.ಎನ್. ಆಚಾರ್ಯ ಅಭಿಮಾನಿ ಬಳಗ ಉಡುಪಿ ಇವರ ಪ್ರಾಯೋಜಕತ್ವದಲ್ಲಿ ಪಿ.ಎನ್. ಆಚಾರ್ಯ ಪುರಸ್ಕಾರ ಸಹಿತ ವಿಶ್ವಕರ್ಮ ಕಲಾ ಪ್ರಶಸ್ತಿ,ಯುವ ಸಾಧಕರಾದ ಕುಮಾರಿ ವಾರುಣಿ ನಾಗರಾಜ್, ಶ್ರೀ ಮನೋಜ್ಞ ಟಿ. ಆಚಾರ್ಯ, ಕುಮಾರಿ ಬಿಂದು ಕೆ. ಮಂಗಳೂರು, ಶ್ರೀ ಆಶ್ಲೇಷ್ ಆಚಾರ್ಯ ಎ.ಎಸ್., ಕುಮಾರಿ ಗಾಯತ್ರಿ ಕೆ. ಆಚಾರ್ಯ ಕೊಂಡೆವೂರು ಇವರಿಗೆ ಓಂಗುರೂಜೀ ಜ್ವುವೆಲ್ ವರ್ಕ್ಸ್ ಮಂಗಳೂರು ಇದರ ಮಾಲಕರಾದ ಶ್ರೀ ರಾಜಗೋಪಾಲ ಆಚಾರ್ಯ ಇವರ ಪ್ರಾಯೋಜಕತ್ವದಲ್ಲಿ ಶ್ರೀಮತಿ ಶಾಂತಾ ಸುಬ್ರಾಯ ಆಚಾರ್ಯ ಸ್ಮಾರಕ ಪುರಸ್ಕಾರ ಸಹಿತ ವಿಶ್ವಕರ್ಮ ಕಲಾ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ವಿಶ್ವದಾಖಲೆ ನಿರ್ಮಿಸಿದ ಕಲಾವಿದೆ ಶ್ರೀಮತಿ ಕವಿತಾ ಸಂದೀಪ್ ಪಾಲ್ಕೆ ಇವರನ್ನು ಅಭಿನಂದಿಸಲಾಯಿತು.
ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆಡಳಿತಾಧಿಕಾರಿ ಶ್ರೀ ಕೆ. ಉಮೇಶ್ ಆಚಾರ್ಯ ಶುಭಾಶಂಸನೆಗೈದರು. ಕಲಾ ಪರಿಷತಗತಿನ ಅಧ್ಯಕ್ಷರಾದ ಡಾ. ಎಸ್.ಪಿ. ಗುರುದಾಸ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಶ್ರೀ ರಮಾನಾಥ ರೈ, ಶ್ರೀ ಲೋಕೇಶ್ ಎಂ.ಬಿ. ಆಚಾರ್, ಶ್ರೀಮತಿ ಸಂಧ್ಯಾ ಲಕ್ಷ್ಮಣ ಆಚಾರ್ಯ, ಶ್ರೀ ಪಿ.ಎನ್. ಆಚಾರ್ಯ, ಶ್ರೀ ಹರಿದಾಸ್ ಎಸ್.ಪಿ. ಆಚಾರ್ಯ, ಪ್ರೊ. ಜಿ. ಯಶವಂತ ಆಚಾರ್ಯ, ಶ್ರೀ ಸುಂದರ ಆಚಾರ್ಯ ಬೆಳುವಾಯಿ, ಶ್ರೀ ಅಲೆವೂರು ಯೋಗೀಶ್ ಆಚಾರ್ಯ, ಶ್ರೀ ಜಗದೀಶ್ ಆಚಾರ್ಯ, ಶ್ರೀ ಪಿ. ಉಪೇಂದ್ರ ಆಚಾರ್ಯ, ಶ್ರೀ ದಿನೇಶ್ ಟಿ. ಶಕ್ತಿನಗರ, ಪುರೋಹಿತ ಶ್ರೀ ಶಶಿಧರ ಆಚಾರ್ಯ, ಶ್ರೀ ಪಿ. ರವೀಂದ್ರ ರಾವ್, ಶ್ರೀ ಜಗದೀಶ್ ಆಚಾರ್ಯ ಸಿದ್ದಕಟ್ಟೆ, ಶ್ರೀಮತಿ ಅರುಣಾ ಸುರೇಶ್, ಖಜಾಂಚಿ ಎ.ಜಿ. ಸದಾಶಿವ, ಕಾರ್ಯದರ್ಶಿ ರಮ್ಯ ಲಕ್ಷ್ಮೀಶ್ ಮುಂತಾದವರು ಉಪಸ್ಥಿತರಿದ್ದರು. ಪರಿಷತ್ತಿನ ಉಪಾಧ್ಯಕ್ಷರಾದ ಶ್ರೀಮತಿ ರತ್ನಾವತಿ ಜೆ. ಬೈಕಾಡಿ ವಾರ್ಷಿಕ ವರದಿ ವಾಚಿಸಿದರು. ಯಜ್ಞೇಶ್ವರ ಕೃಷ್ಣಾಪುರ ವಂದನಾರ್ಪಣೆಗೈದರು. ಶ್ರೀ ದಾಮೋದರ ಶರ್ಮ, ಶ್ರೀ ಉದಯಭಾಸ್ಕರ್ ಸುಳ್ಯ, ಕು.ವಾರುಣಿ ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು.


ಕಲೋತ್ಸವಕ್ಕೆ ಚಾಲನೆ ನೀಡುವದಕ್ಕಾಗಿ ಶಿಲ್ಪಿ ದಿವಾಕರ ಆಚಾರ್ಯ ಕೋಟೆಕಾರ್ ತಯಾರಿಸಿದ ವಿಶ್ವಕರ್ಮನ ವಿಗ್ರಹ ಹಾಗೂ ಇದನ್ನು ರಿಮೋಟ್ ತಂತ್ರಜ್ಞಾನದ ಮೂಲಕ ಸ್ವಯಂಚಾಲಿತವಾಗಿ ಮೇಲೆ ಬರುವಂತೆ ಶ್ರೀ ಆಶ್ಲೇಷ್ ಎ.ಎಸ್. ವಿನ್ಯಾಸಗೊಳಿಸಿದ್ದು ವಿಶೇಷವಾಗಿ ಎಲ್ಲರ ಗಮನ ಸೆಳೆಯಿತು. ಶಿಲ್ಪಿ ಡಾ. ಅರುಣ್ ಯೋಗಿರಾಜ್ ಅವರ ಶಿಷ್ಯ ಶ್ರೀ ಪ್ರಮೋದ್ ಸಿ.ಕೆ. ಸ್ಥಳದಲ್ಲೇ ರಚಿಸಿದ ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿಗಳ ಆವೆಮಣ್ಣಿನ ಶಿಲ್ಪ, ಕಲಾವಿದ ಶ್ರೀ ಲಕ್ಷ್ಮೀನಾರಾಯಣ ಆಚಾರ್ಯರು ಸ್ಥಳದಲ್ಲೇ ರಚಿಸಿ ಉಡುಗೊರೆಯಾಗಿ ನೀಡುತ್ತಿದ್ದ ಗಣ್ಯರ ಭಾವಚಿತ್ರ, ಒಂಬತ್ತು ಜನ ಕಲಾವಿದರು ಏಕಕಾಲದಲ್ಲಿ ವೇದಿಕೆಯ ಮೇಲೆ ಪ್ರಸ್ತುತಪಡಿಸಿದ ಕೃಷ್ಣಲೀಲೆ ಅನ್ನುವ ಲೈವ್ ಆರ್ಟ್, ಸಮುದಾಯದ ಕಲಾವಿದರು ತಯಾರಿಸಿದ ವಿವಿಧ ಕಲಾಕೃತಿಗಳ ಪ್ರದರ್ಶನ, ಕಲಾ ಪರಿಷತ್ ನ ಯುವ ಸದಸ್ಯರು ನಡೆಸಿಕೊಟ್ಟ ಭಜನಾ ಸಂಕೀರ್ತನೆ ಮತ್ತು ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮ ವಿಶೇಷ ಆಕರ್ಷಣೆಯಾಗಿತ್ತು.
ವರದಿ – ಉದಯಭಾಸ್ಕರ್ ಸುಳ್ಯ
