ಕಾಸರಗೋಡು ಜಿಲ್ಲೆಯ ಸಾಂಸ್ಕೃತಿಕ ನಗರಿ ಪೆರ್ಲದಲ್ಲಿ 2016ರ ಸೆಪ್ಟೆಂಬರ್ ತಿಂಗಳಲ್ಲಿ ಹುಟ್ಟಿ ಬೆಳೆದ ‘ಸವಿ ಹೃದಯದ ಕವಿ ಮಿತ್ರರು ವೇದಿಕೆ’ಯು ಕೇರಳ ಮತ್ತು ಕರ್ನಾಟಕದ ವಿವಿದೆಡೆಗಳಲ್ಲಿ ಸಾಹಿತ್ಯಕ, ಸಾಂಸ್ಕೃತಿಕ, ಕಾರ್ಯಕ್ರಮಗಳನ್ನು ನೀಡುತ್ತಾ ಜನಪ್ರಿಯವಾಗಿದೆ. ನವದೆಹಲಿಯ ಕರ್ನಾಟಕ ಭವನದಲ್ಲೂ ಕನ್ನಡ ಡಿಂಡಿಮವನ್ನು ಬಾರಿಸಿದೆ. ಸಮಾನ ಮನಸ್ಕ ಕವಿಗಳಿಂದ ರೂಪುಗೊಂಡ ಈ ವೇದಿಕೆಯು ಕರ್ನಾಟಕದಿಂದ ಕೈತಪ್ಪಿ ಕೇರಳಕ್ಕೆ ಸೇರಿ ಹೋಗುವ ಗಡಿನಾಡಿನಲ್ಲಿ ಕನ್ನಡವನ್ನು ಉಳಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸುತ್ತಾ ಬಂದಿದೆ. ಪ್ರಾಯದ ವ್ಯತ್ಯಾಸವಿಲ್ಲದೆ ಕನ್ನಡಿಗರ ಸೃಜನಶೀಲ ಅಭಿವ್ಯಕ್ತಿಗೆ ವೇದಿಕೆಯನ್ನು ಕಲ್ಪಿಸಿ ಪ್ರೋತ್ಸಾಹಿಸುತ್ತದೆ. ಈ ವೇದಿಕೆಯ ಮೂಲಕ ನೂರಾರು ಮಕ್ಕಳು ಪ್ರತಿಭೆಗಳನ್ನು ಪ್ರದರ್ಶಿಸಿ, ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದಾರೆ. ಯುವಕರು ಮಾತ್ರವಲ್ಲದೆ, ಹಿರಿಯರು ಕೂಡಾ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಸವಿ ಹೃದಯ ಕವಿ ಮಿತ್ರರು ವೇದಿಕೆ ವತಿಯಿಂದ ಪ್ರಥಮ ಕೃತಿ 2019ರಲ್ಲಿ ’ಭಾವತರಂಗ’ ಎನ್ನುವ ಸಂಪಾದಿತ ಕವನ ಸಂಕಲನವನ್ನು ಸಾಹಿತ್ಯ ಲೋಕಕ್ಕೆ ಸಮರ್ಪಿಸಿದೆ. 25 ಮಂದಿ ಹಿರಿಯ ಕಿರಿಯ ಕವಿಗಳ ರಚನೆಗಳು ಅದರಲ್ಲಿವೆ. ದ್ವಿತೀಯದಾಗಿ ‘ಕಥಾ ದೀಪ್ತಿ’ ಶೀರ್ಷಿಕೆಯಲ್ಲಿ ಸಂಪಾದಿತ ಕಥಾ ಸಂಕಲನವನ್ನು ಬೆಳಕಿಗೆ ತಂದಿದೆ. ಇದೀಗ ನಮ್ಮ ವೇದಿಕೆಯ ಮೂರನೇ ಕೃತಿ ಕುಮಾರಿ ಹರ್ಷಿತಾ ಪೆರ್ಲರ ‘ಚಿಗುರು’ ಕವನ ಸಂಕಲನ ಬಿಡುಗಡೆ ಮಾಡಿ ಸೈ ಎನಿಸಿಕೊಡಿದೆ. ಅಲ್ಲದೆ ವೇದಿಕೆಯ ಆಶ್ರಯದಲ್ಲಿ ಹಲವಾರು ‘ಸಾಹಿತ್ಯಕ, ಸಾಂಸ್ಕೃತಿಕ’ ಕಾರ್ಯಕ್ರಮಗಳು ಜರುಗಿವೆ. ಕವಿಗೋಷ್ಠಿ, ಕಥಾ ಗೋಷ್ಠಿ, ವಿಚಾರ ಸಂಕಿರಣ, ಕೃತಿ ಬಿಡುಗಡೆ, ಅವಲೋಕನ, ಮಕ್ಕಳ ದಿನಾಚರಣೆಯ ದಿನದಂದು ಮಕ್ಕಳಿಗೆ ಹಿರಿಯ ಕವಿಗಳನ್ನು ಭೇಟಿ ಮಾಡಿಸಿ ಅವರ ಮಾರ್ಗದರ್ಶನ, ಸಂದರ್ಶನ ಮತ್ತು ಸಂದರ್ಶನ ಪ್ರವಾಸ ಮಾತ್ರವಲ್ಲದೆ ಕಲಾ ಕಾರ್ಯಕ್ರಮಗಳು ಚಂದನ ವಾಹಿನಿಯಲ್ಲಿ ಪ್ರಸಾರವಾಗುವ ತಟ್ ಎನ್ನುವ ಕಾರ್ಯಕ್ರಮದಲ್ಲಿ ಅವಕಾಶ ಮಾಡಿಕೊಟ್ಟಿದೆ.


ಗಣೇಶೋತ್ಸವ ಸಂಧರ್ಭದಲ್ಲಿ ಕೇರಳದ ಕೊಚ್ಚಿ ಕನ್ನಡ ಸಂಘದ ವತಿಯಿಂದ ಎರ್ನಾಕುಲಮಿನಲ್ಲಿ ನಡೆದ ಕವಿಗೋಷ್ಠಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವೇದಿಕೆಯ ಸದಸ್ಯರು ಭಾಗವಹಿಸಿ, ಪ್ರತಿಭಾ ಪ್ರದರ್ಶನ ನೀಡಿದ್ದಾರೆ. ಹಾಸನದಲ್ಲಿ ಜರಗಿದ ಅಖಿಲ ಭಾರತ ಮಕ್ಕಳ ಸಾಹಿತ್ಯ ಸಮ್ಮೇಳನ, ಕಾಸರಗೋಡಿನಲ್ಲಿ ಜರಗಿದ ಕೇರಳ ರಾಜ್ಯ ಪ್ರಥಮ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ವೇದಿಕೆಯ ಮಕ್ಕಳು ಭಾಗವಹಿಸಿ ಪ್ರತಿಷ್ಠಿತ ಸ್ಥಾನಮಾನ ಪಡೆದಿದ್ದಾರೆ. ನವಪುರಂ ಪುಸ್ತಕ ದೇವಾಲಯದಲ್ಲಿ ನಡೆದ ಪುಸ್ತಕೋತ್ಸವ, ಕವಿಗೋಷ್ಠಿ, ವಿಚಾರ ಸಂಕಿರಣ, ದ್ರಾವಿಡ ಭಾಷಾ ಸಾಹಿತ್ಯ ಪ್ರಶಸ್ತಿ ಪ್ರಧಾನ ಸಂಧರ್ಭದಲ್ಲಿ ಸವಿ ಹೃದಯ ಕವಿ ಮಿತ್ರರು ಸತತ ಮೂರು ವರ್ಷಗಳ ಕಾಲ ಭಾಗವಹಿಸಿದ್ದಾರೆ. ತೇಜಸ್ವಿನಿ ನದಿಯಲ್ಲಿ ದಿನ ಪೂರ್ತಿ ‘ಸಲಿಲ ಅಕ್ಷರ ಪಯಣ’, ಶೃಂಗೇರಿ ಸಾಹಿತ್ಯ ದರ್ಶನ, ಪೊಸಡಿಗುಂಪೆ ಚಾರಣ ಸಾಹಿತ್ಯ ಯಾನ ಮೊದಲಾದ ಅಪೂರ್ವ ಕಾರ್ಯಕ್ರಮಗಳನ್ನು ಆಯೋಜಿಸಿ ವೇದಿಕೆಯ ಸದಸ್ಯರು ಮತ್ತು ಅವರ ಕುಟುಂಬ ಬಾಂಧವರಿಗೆ ಅದರಲ್ಲಿ ಭಾಗವಹಿಸಿ ಪ್ರತಿಭಾ ಪ್ರದರ್ಶನ ನೀಡಲು ಅವಕಾಶ ಕಲ್ಪಿಸಲಾಗಿದೆ. ಇತರ ಸಂಘ ಸಂಸ್ಥೆಗಳೊಂದಿಗೆ ಸೇರಿ, ಹಬ್ಬ ಹರಿದಿನಗಳನ್ನು ಆಚರಿಸಲಾಗಿದೆ.
ಸುಭಾಷ್ ಪೆರ್ಲ, ಪ್ರಧಾನ ಸಂಚಾಲಕರು,
ಸವಿ ಹೃದಯದ ಕವಿ ಮಿತ್ರರು ವೇದಿಕೆ ಪೆರ್ಲ ಕಾಸರಗೋಡು -671552
ಚಲನವಾಣಿ : 9446530421
ಪ್ರಸ್ತುತ ಈ ವೇದಿಕೆಯ ಪ್ರಧಾನ ಸಂಚಾಲಕರಾಗಿ ಸುಭಾಷ್ ಪೆರ್ಲ, ಸಂಚಾಲಕನಾಗಿ ಬಾಲಕೃಷ್ಣ ನಾಯ್ಕ ಏಳ್ಕಾನ, ಗೌರವ ಸಲಹೆಗಾರರಾಗಿ ಸಾಹಿತಿ, ಹಿರಿಯ ಪತ್ರಕರ್ತರು ಗಡಿನಾಡ ಚೇತನ ಪ್ರಶಸ್ತಿ ಪುರಸ್ಕೃರಾದ ರಾಧಾಕೃಷ್ಣ ಕೆ. ಉಳಿಯತಡ್ಕ, ಸಲಹೆಗಾರರಾಗಿ ವ್ಯಂಗ್ಯ ಚಿತ್ರಗಾರರು ವೆಂಕಟ ಭಟ್ ಎಡನೀರು, ಹರೀಶ್ ಪೆರ್ಲ ಹಾಗೂ ಸಹಾಯಕರಾಗಿ ನಿರ್ಮಲಾ ಸೇಸಪ್ಪ ಖಂಡಿಗೆ, ದಿವ್ಯಗಟ್ಟಿ ಪರಕ್ಕಿಲ, ಉದಯಕುಮಾರ್ ಮುಡೋಡು, ಐತಪ್ಪ ನಾಯ್ಕ ಪರಪ್ಪಕಾರ್ಯ ಮೊದಲಾದವರಿರುತ್ತಾರೆ.
