ಬೈಂದೂರು : ಬೈಂದೂರು ಶಾರದಾ ವೇದಿಕೆಯಲ್ಲಿ ದಿನಾಂಕ 05 ಮಾರ್ಚ್ 2026ರಂದು ನಡೆದ ಲಾವಣ್ಯದ ಸ್ಥಾಪಕಾಧ್ಯಕ್ಷ ದಿ. ಉಪ್ಪುಂದ ಶ್ರೀನಿವಾಸ ಪ್ರಭುರವರ ಸ್ಮರಣಾರ್ಥ ಲಾವಣ್ಯ (ರಿ.) ಬೈಂದೂರು ಇದರ 49ನೇ ವಾರ್ಷಿಕೋತ್ಸವದ ಪ್ರಯುಕ್ತ 2ನೇ ದಿನದ ರಂಗಶ್ರೀ ರಂಗಹಬ್ಬ -2026 ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೋಟರಿ ಜಿಲ್ಲಾ ಸಹಾಯಕ ಗವರ್ನರ ಐ. ನಾರಾಯಣ ಮಾತನಾಡಿ “ನಿಜ ಜೀವನದ ದುಮ್ಮಾನಗಳನ್ನು ಬಿಂಬಿಸುವ ನಾಟಕಗಳು ಬದುಕಿನ ಅರಿವು ಮೂಡಿಸುತ್ತವೆ. ಇಂದಿನ ಮಕ್ಕಳಿಗೆ ಬಾಲ್ಯದಿಂದಲೇ ರಂಗಶಿಕ್ಷಣ ನೀಡುವುದು ಅಗತ್ಯವಾಗಿದೆ. ಭಾರತೀಯ ಕಲೆ ಮತ್ತು ಸಾಹಿತ್ಯಗಳು ಇಂದಿಗೂ ತಮ್ಮ ಅಸ್ತಿತ್ವವನ್ನು ಕಾಯ್ದುಕೊಳ್ಳುವಂತಹ ಗಟ್ಟಿ ಬೇರನ್ನು ಹೊಂದಿದೆ. ರಂಗಭೂಮಿ ಕ್ಷೇತ್ರದಲ್ಲಿ ಲಾವಣ್ಯ ತನ್ನ ಪರಿಪೂರ್ಣ ಸಾಧನೆಯ ಮೂಲಕ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದೆ” ಎಂದು ಹೇಳಿದರು.
ವಕೀಲರಾದ ಮಂಗೇಶ ಶ್ಯಾನುಭಾಗ್ ಶುಭನಂಸನೆಗೈದರು. ಮುಖ್ಯ ಅತಿಥಿಗಳಾಗಿ ಲಾವಣ್ಯ ಸಂಸ್ಥೆಯ ಅಧ್ಯಕ್ಷ ನರಸಿಂಹ ಬಿ. ನಾಯಕ್, ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಶಾರದಾ ಕೆ., ಶಿರೂರು ಡಾಟ್ ಕಾಮ್ ವ್ಯವಸ್ಥಾಪಕ ಗಿರೀಶ್ ಶಿರೂರು, ಬೈಂದೂರು ಸಿಟಿ ಜೆಸಿಐ ಅಧ್ಯಕ್ಷೆ ಚೈತ್ರ ಸತೀಶ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಹವ್ಯಾಸಿ ರಂಗಭೂಮಿ ಕಲಾವಿದ ಶ್ರೀಶ ಭಟ್ ನಾಯ್ಕನಕಟ್ಟೆಯವರನ್ನು ಲಾವಣ್ಯ ಸಂಸ್ಥೆಯ ವತಿಯಿಂದ ಸಮ್ಮಾನಿಸಲಾಯಿತು. ಲಾವಣ್ಯದ ಕಾರ್ಯದರ್ಶಿ ವಿಶ್ವನಾಥ ಆಚಾರ್ಯ ಸ್ವಾಗತಿಸಿ, ಶಿಕ್ಷಕ ಸುಬ್ರಹ್ಮಣ್ಯ ಜಿ. ಉಪ್ಪುಂದ ಕಾರ್ಯಕ್ರಮ ನಿರೂಪಿಸಿ, ಶ್ರೀಧರ ವಸ್ರೆ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಪುನೀತ್ ರಂಗಾಯಣ ಇವರ ನಿರ್ದೇಶನದಲ್ಲಿ ಬೆಂಗಳೂರಿನ ನೆನಪು ಕಲ್ಚರಲ್ ಮತ್ತು ಎಜ್ಯುಕೇಷನಲ್ ಚಾರಿಟೇಬಲ್ ಟ್ರಸ್ಟ್ ತಂಡದವರಿಂದ ‘ಮಾಯಾದ್ವೀಪ’ ನಾಟಕ ಪ್ರದರ್ಶನಗೊಂಡಿತು.
