ಕುಂದಾಪುರ : ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಮತ್ತು ಸಮುದಾಯ ಕುಂದಾಪುರ ಸಹಬಾಗಿತ್ವದಲ್ಲಿ ವಿಶ್ವ ರಂಗಭೂಮಿ ದಿನಾಚರಣೆಯ ಪ್ರಯುಕ್ತ ಕುಂದಾಪುರ ಹಂಚು ಕಾರ್ಮಿಕರ ಸಭಾ ಭವನದಲ್ಲಿ ದಿನಾಂಕ 27 ಮಾರ್ಚ್ 2026ರಂದು ಆಯೋಜಿಸಿದ್ದ ವಿಚಾರಗೋಷ್ಠಿ ಕಾರ್ಯಕ್ರಮ ಮತ್ತು ನಾಟಕ ಪ್ರದರ್ಶನ ನಡೆಯಿತು.
ವಿಚಾರಗೋಷ್ಠಿಯಲ್ಲಿ ‘ಕನ್ನಡ ರಂಗಭೂಮಿ ಮತ್ತು ವರ್ತಮಾನದ ತಲ್ಲಣಗಳು’ ಎಂಬ ವಿಷಯದ ಬಗ್ಗೆ ಪ್ರಧಾನ ಉಪನ್ಯಾಸ ನೀಡಿ ಮಾತನಾಡಿದ “ಸಾಮಾಜಿಕ ವ್ಯವಸ್ಥೆಯ ಜೊತೆಗೆ ಸದಾ ಮುಖಾಮುಖಿಯಾಗಿ ಕನ್ನಡ ರಂಗಭೂಮಿಯು ತನ್ನ ನೆಲೆಗಳನ್ನು ವಿಸ್ತರಿಸುತ್ತಾ ಬಂದಿದೆ. ವರ್ತಮಾನದ ತಲ್ಲಣಗಳನ್ನು ಸವಾಲಾಗಿ ಸ್ವೀಕರಿಸಿ ರಂಗ ಕೃತಿಗಳನ್ನಾಗಿಸಿ ರಂಗಭೂಮಿ ಸಂವಾದಿಸುತ್ತಾ ಬಂದಿದೆ. ಕನ್ನಡ ರಂಗಭೂಮಿ ಪ್ರಭಾವಯುತವಾಗಿ ಬದ್ಧತೆಯಿಂದ ದುಡಿದವರನ್ನು ನೆನಪು ಮಾಡುವುದು ಅಗತ್ಯ” ಎಂದು ಗೋವಿಂದ ದಾಸ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಕೃಷ್ಣಮೂರ್ತಿ ನುಡಿದರು.
ಕರಾವಳಿ ರಂಗಭೂಮಿಯ ವಿವಿಧ ಕಾಲಘಟ್ಟಗಳ ಪ್ರವೃತ್ತಿಗಳನ್ನು ತಿಳಿಸಿ ಮಾಧವ ತಿಂಗಳಾಯ, ನಿರಂಜನ, ಶಿವರಾಮ ಕಾರಂತರ ಸಾಮಾಜಿಕ ಸುಧಾರಣೇ ಹಿನ್ನಲೆಯಲ್ಲಿ ಪ್ರದರ್ಶನಗೊಂಡ ನಾಟಕಗಳು ಜನಸಮುದಾಯದ ಮೇಲೆ ಪ್ರಭಾವ ಬೀರಿವೆ ಎಂದರು. ಬ್ರಹ್ಮಾವರ ಎಸ್.ಎಂ.ಎಸ್. ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲೆ ಅಭಿಲಾಷಾ ಎಸ್. ಮತ್ತು ರಂಗ ನಿರ್ದೇಶಕ ಸತ್ಯಾನಾ ಕೊಡೇರಿ ಸಂವಾದದಲ್ಲಿ ಪಾಲ್ಗೊಂಡು ಅಭಿಪ್ರಾಯಗಳನ್ನು ವ್ಯಕ್ತ ಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ನಾಟಕ ಅಕಾಡೆಮಿಯ ಉಡುಪಿ ಜಿಲ್ಲಾ ಸಂಘಟಕ ಹಾಗೂ ರಂಗ ನಿರ್ದೇಶಕ ಸಂತೋಷ್ ನಾಯಕ್ ಪಟ್ಲ ಅಧ್ಯಕ್ಷತೆ ವಹಿಸಿ ಮಾತನಾಡಿ ಜನಾಶ್ರಯದಲ್ಲಿ ಬೆಳೆದ ಕನ್ನಡ ರಂಗಭೂಮಿ ಪ್ರಭುತ್ವವನ್ನು ಪ್ರಶ್ನೆ ಮಾಡುತ್ತಲೇ ವರ್ತಮಾನದ ಘಟನೆಗಳಿಗೆ ಸ್ಪಂದಿಸಿದೆ. ಬದ್ಧತೆಯ ರಂಗ ತಂಡಗಳು ವಿಭಿನ್ನ ಕಥನಗಳನ್ನು ರಂಗಕ್ಕೆ ತಂದಿವೆ” ಎಂದರು.

ಸಮುದಾಯ ಕುಂದಾಪುರದ ಅಧ್ಯಕ್ಷ ಡಾ. ಸದಾನಂದ ಬೈಂದೂರು ಪ್ರಾಸ್ತವಿಕ ನುಡಿಗಳನ್ನಾಡಿದರು. ಚಿನ್ನಾ ವಿ. ಗಂಗೇರ ವಿಶ್ವ ರಂಗ ಭೂಮಿ ಸಂದೇಶ ವಾಚಿಸಿದರು. ಗಣೇಶ ಶೆಟ್ಟಿ ವಂದಿಸಿ, ಸಮುದಾಯದ ಕಾರ್ಯದರ್ಶಿ ರವಿ ವಿ.ಎಂ. ಕಾರ್ಯಕ್ರಮ ನಿರೂಪಿಸಿದರು. ಸಮುದಾಯ ಕುಂದಾಪುರದ ಕಲಾವಿದರಿಂದ ಡಾ. ಸದಾನಂದ ಬೈಂದೂರು ನಿರ್ದೇಶನದಲ್ಲಿ ‘ಇದೊಂದು ಯುದ್ಧ ಮುಗಿದ ಮೇಲೆ’ ನಾಟಕ ನಡೆಯಿತು. ಭೂಮಿಗೀತ ಸಾಂಸ್ಕೃತಿಕ ವೇದಿಕೆ ಪಟ್ಲ ತಂಡವು ಎಡ್ವರ್ಡ್ ಗ್ಯಾಲಿಯಾನೋ ರಚಿತ ಕೆ.ಪಿ. ಸುರೇಶ್ ಕನ್ನಡಕ್ಕೆ ಅನುವಾದಿಸಿದ ‘ದಿ ಫೈಯರ್’ ನಾಟಕವನ್ನು ಸಂತೋಷ್ ನಾಯಕ್ ಪಟ್ಲ ನಿರ್ದೇಶನದಲ್ಲಿ ಅಭಿನಯಿಸಿತು.
