ಮುಂಬೈ : ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಹಾಗೂ ಮೈಸೂರು ಅಸೋಸಿಯೇಷನ್ ಮುಂಬೈ ಸಂಯುಕ್ತ ಆಶ್ರಯದಲ್ಲಿ ಮಾತುಂಗದಲ್ಲಿರುವ ಮೈಸೂರು ಅಸೋಸಿಯೇಷನ್ ಸಭಾಂಗಣದಲ್ಲಿ ದಿನಾಂಕ 14 ಮಾರ್ಚ್ 2026 ಶನಿವಾರ ಸಂಜೆ ನಡೆದ “ಬಂಗಾರ ಹಬ್ಬದ ದತ್ತಿ ಉಪನ್ಯಾಸ ಮಾಲಿಕೆ–2026” ಮೊದಲ ದಿನದ ಕಾರ್ಯಕ್ರಮ ನಡೆಯಿತು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ದಾಸ ಸಾಹಿತ್ಯದ ಖ್ಯಾತ ಸಂಶೋಧಕರು ಮತ್ತು ಕನಕಶ್ರೀ ಪ್ರಶಸ್ತಿ ಪುರಸ್ಕೃತರಾದ ಹಿರಿಯ ವಿದ್ವಾಂಸರು ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ ಇವರು ‘ಪುರಂದರ ದಾಸರ ಮತ್ತೊಂದು ಮುಖ’ ಎಂಬ ವಿಷಯದ ಕುರಿತು ಮಾತನಾಡಿ “ಪುರಂದರದಾಸರು ಜನತೆಗೆ ಆದರ್ಶ ಹಾಗೂ ಅನುಕರಣೀಯ ವ್ಯಕ್ತಿತ್ವ, ಸರಳವಾಗಿ ಗೆಜ್ಜೆ ಕಟ್ಟಿ, ಚಿಟಿಕೆ ಬಾರಿಸುತ್ತಾ ತಂಬೂರಿ ನುಡಿಸುತ್ತಾ ಕೀರ್ತನೆಗಳನ್ನು ಹಾಡುವ ಮೂಲಕ ಜನರನ್ನು ತಮ್ಮತ್ತ ಆಕರ್ಷಿಸಿದರು. ಅವರ ಭಕ್ತಿ, ಸರಳತೆ ಮತ್ತು ಸಂಗೀತದ ಮೂಲಕ ಜನಮನಗಳನ್ನು ಗೆದ್ದರು. ‘ಮಾನವ ಜನ್ಮ ದೊಡ್ಡದು ಇದು, ಹಾನಿ ಮಾಡಲಿ ಬೇಡಿ ಹುಚ್ಚಪ್ಪಗಳಿರಾ…’ ಎಂದು ಹೇಳಿದ ಪುರಂದರ ದಾಸರ ಇನ್ನೂ ಅನೇಕ ಅರ್ಥಪೂರ್ಣ ಸಾಲುಗಳನ್ನು ಉಲ್ಲೇಖಿಸುತ್ತಾ ದಾಸರ ವಿಭಿನ್ನಮುಖವನ್ನು ಅನಾವರಣಗೊಳಿಸಿದರು. ದಾಸ ಸಾಹಿತ್ಯ ಪರಂಪರೆಯಲ್ಲಿ ಮಹತ್ವದ ಸ್ಥಾನ ಪಡೆದ ಸಂಗೀತ ಪಿತಾಮಹ ಪುರಂದರ ದಾಸರ ಕೀರ್ತನೆಗಳಲ್ಲಿ ಜೀವನದ ನಿಷ್ಠೆ, ಧೈರ್ಯ ಮತ್ತು ಭಕ್ತಿಯ ಸಂದೇಶ ಸ್ಪಷ್ಟವಾಗಿ ಎದ್ದು ಕಾಣುತ್ತದೆ. ಜೀವನದಲ್ಲಿ ಏನೇ ಸಂಕಷ್ಟಗಳು ಬಂದರೂ ಬೆನ್ನು ತೋರಿಸದೆ ಧೈರ್ಯದಿಂದ ಎದುರಿಸಬೇಕು ಎಂಬ ಬೋಧನೆಯನ್ನು ಅವರ ರಚನೆಗಳು ನೀಡುತ್ತವೆ. ಶಿವಶರಣರು, ಹರಿದಾಸ ಪರಂಪರೆಯವರು ದಟ್ಟ ಅರಣ್ಯದಲ್ಲಿ ಅರಳಿದ ಪುಷ್ಪದಂತೆ ಯಾರನ್ನೂ ಮೆಚ್ಚಿಸಲು ಅಲ್ಲ, ತಮ್ಮ ಅಂತರಂಗದ ತುಡಿತದಿಂದ ವಚನಗಳನ್ನು, ಕೀರ್ತನೆಗಳನ್ನು ರಚಿಸಿದವರು. ದಾಸ ಸಾಹಿತ್ಯವು ಯಾವುದೇ ಒಂದು ಮತ, ಕುಲ ಅಥವಾ ತತ್ವಕ್ಕೆ ಸೀಮಿತವಾಗದೆ ಜನರಿಂದ, ಜನರ ನಡುವೆ, ಜನರಿಗಾಗಿಯೇ ಬೆಳೆಯುವ ಜನಪರ ಸಾಹಿತ್ಯವಾಗಿದೆ. ಆದರೆ ಇತ್ತೀಚೆಗೆ ಕೇವಲ ಒಂದು ಮತದವರಿಗೆ ಸೀಮಿತವಾಗಿ ಅಂಟಿರುವುದು ವಿಷಾದನೀಯ. ಹರಿ ದಾಸರು, ಸಾಹಿತ್ಯ ಮತ್ತು ಸಂಗೀತದ ಸಮನ್ವಯದಿಂದ ಕೂಡಿದ ಈ ಕೀರ್ತನೆಗಳು ಕೇವಲ ಮನರಂಜನೆಗಷ್ಟೇ ಸೀಮಿತವಾಗದೆ ಮನಸ್ಸಿನ ಮತ್ತು ಅಂತರಂಗದ ಶುದ್ಧಿಯನ್ನುಂಟು ಮಾಡುವ ಕಾರ್ಯ ಮಾಡಿವೆ” ಎಂದು ಅವರು ಅಭಿಪ್ರಾಯಪಟ್ಟರು.
ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗದ, ಮುಖ್ಯಸ್ಥರು, ಹಿರಿಯ ಪ್ರಾಧ್ಯಾಪಕರಾದ ಡಾ. ಜಿ.ಎನ್. ಉಪಾಧ್ಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿ “ಮೈಸೂರು ಅಸೋಸಿಯೇಷನ್ ಮತ್ತು ಕನ್ನಡ ವಿಭಾಗ ಕಳೆದ 44 ವರ್ಷಗಳಿಂದ ಉಪನ್ಯಾಸ ಮಾಲಿಕೆಯನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದು, ಕನ್ನಡದ ಅನೇಕ ಗಣ್ಯರು ಉಪನ್ಯಾಸ ನೀಡುವ ಮೂಲಕ ಮುಂಬೈ ಕನ್ನಡ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದ್ದಾರೆ. ಕನ್ನಡತನವನ್ನು ಬೆಳೆಸುವ ಕಾರ್ಯದಲ್ಲಿ ಈ ಸಂಸ್ಥೆಯು ಮುಂಚೂಣಿಯಲ್ಲಿದ್ದು, ಕನ್ನಡ ವಿಭಾಗ ಬೆಳವಣಿಗೆಯಲ್ಲಿ ಮಹತ್ವದ ಪಾತ್ರವಹಿಸಿದೆ. ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿಯವರು ಚಿರಚೇತನರಾಗಿದ್ದುಕೊಂಡು ನಾಮಾಂಕಿತ ಸಂಶೋಧಕರಾಗಿ, ಸಾಹಿತಿಯಾಗಿ ನಾಡಿಗೆ ಮಾದರಿಯಾಗಿದ್ದಾರೆ. 1960ರ ದಶಕದಲ್ಲಿ ಮುಂಬೈಯಲ್ಲಿ ಕೆಲಸ ಮಾಡಿದ್ದ ಅವರು ಕನ್ನಡವನ್ನು ಕಟ್ಟಿ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸಿದವರು ಎಂದು ಪರಿಚಯಿಸಿಕೊಟ್ಟರು. ಪುತಿನ ಅವರ ಲೇಖನವನ್ನು ಉಲ್ಲೇಖಿಸಿ ಪುರಂದರ ದಾಸರು ತಮ್ಮ ಕೀರ್ತನೆಗಳಲ್ಲಿ ದಶಾವತಾರವನ್ನು ಬಣ್ಣಿಸಿ ಜನಸಾಮಾನ್ಯರ ಬದುಕಿನ ವಿಚಾರಗಳನ್ನು ಹೇಗೆ ಅಭಿವ್ಯಕ್ತಿಸಿದ್ದಾರೆ” ಎಂಬುದನ್ನು ವಿವರಿಸಿದರು.

ಕಾರ್ಯಕ್ರಮದಲ್ಲಿ ಹಂಪಿ ವಿಶ್ವವಿದ್ಯಾಲಯದ ಪ್ರೊ. ರವೀಂದ್ರನಾಥ್, ವಿಮರ್ಶಕ ಡಾ. ಗುರುಪಾದ ಮರಿಗುದ್ದಿ, ಮೈಸೂರು ಅಸೋಸಿಯೇಷನ್ ಅಧ್ಯಕ್ಷರಾದ ಕೆ. ಕಮಲಾ ಅವರು, ಸದಸ್ಯರು, ಸಾಹಿತ್ಯಾಸಕ್ತರು ಹಾಗೂ ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಆರಂಭದಲ್ಲಿ ಕನ್ನಡ ವಿಭಾಗದ ಸಂಶೋಧನ ವಿದ್ಯಾರ್ಥಿ ಕಲಾ ಭಾಗ್ವತ್ ಅವರು ಕನಕದಾಸರ ಕೀರ್ತನೆಯನ್ನು ಹಾಡಿದರು. ಮುಂಬೈ ವಿಶ್ವವಿದ್ಯಾಲಯ, ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಪೂರ್ಣಿಮಾ ಶೆಟ್ಟಿಯವರು ಕಾರ್ಯಕ್ರಮವನ್ನು ಸಂಯೋಜಿಸಿ, ನಿರೂಪಿಸಿದರು.
